ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ಸಂಭ್ರಮದಲ್ಲೇ ಅಭಿಮಾನಿಗಳಿಗೆ ಒಂದರ ಹಿಂದೆ ಮತ್ತೊಂದು ಸಿನಿಮಾಗಳ ಘೋಷಣೆ ಸರ್ಪ್ರೈಸ್ ನೀಡುತ್ತಿವೆ. ಇದೀಗ ಸುದೀಪ್ ಅಭಿನಯಿಸಲಿರುವ ಮತ್ತೊಂದು ಬಹುನಿರೀಕ್ಷಿತ ಚಿತ್ರ ಘೋಷಣೆಯಾಗಿದ್ದು, ವಿಜಯನಗರ ಸಾಮ್ರಾಜ್ಯದ ಶ್ರೇಷ್ಠ ದೊರೆ ಶ್ರೀಕೃಷ್ಣದೇವರಾಯನ ಜೀವನ ಮತ್ತು ಪರಾಕ್ರಮವನ್ನು ಬೆಳ್ಳಿತೆರೆಗೆ ತರುವ ಪ್ರಯತ್ನಕ್ಕೆ ‘ದೇವರಾಯ’ ಎಂಬ ಶೀರ್ಷಿಕೆ ಇಡಲಾಗಿದೆ. ಈ ಘೋಷಣೆ ಸ್ಯಾಂಡಲ್ವುಡ್ನಲ್ಲಿ ಭಾರೀ ಕುತೂಹಲ ಮೂಡಿಸಿದೆ.
‘ದೇವರಾಯ’ನಾಗಿ ಕಿಚ್ಚ ಸುದೀಪ್
ವಿಶೇಷ ಕಾನ್ಸೆಪ್ಟ್ ಟೀಸರ್ ಮೂಲಕ ‘ದೇವರಾಯ’ ಸಿನಿಮಾವನ್ನು ಘೋಷಿಸಲಾಗಿದೆ. ಸುದೀಪ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಸಿನಿಮಾದ ಕುರಿತ ಪೋಸ್ಟ್ ಹಂಚಿಕೊಂಡಿದ್ದು, ಐತಿಹಾಸಿಕ ಪಾತ್ರವೊಂದನ್ನು ನಿರ್ವಹಿಸುತ್ತಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಶ್ರೀಕೃಷ್ಣದೇವರಾಯನ ಪರಂಪರೆ ಮತ್ತು ಅವರ ಪಯಣದ ಭಾಗವಾಗುತ್ತಿರುವುದಾಗಿ ತಿಳಿಸಿದ್ದಾರೆ.
ಬಿಡುಗಡೆಯಾಗಿರುವ ಕಾನ್ಸೆಪ್ಟ್ ವೀಡಿಯೋದಲ್ಲಿ ವಿಜಯನಗರ ಸಾಮ್ರಾಜ್ಯದ ವೈಭವ, ಭವ್ಯ ದೇವಾಲಯಗಳ ಗೋಪುರಗಳು, ಬೃಹತ್ ಆನೆಗಳ ಪಡೆ, ಯುದ್ಧಭೂಮಿಯ ದೃಶ್ಯಗಳು ಹಾಗೂ ರಾಜನ ಗಾಂಭೀರ್ಯವನ್ನು ಬಿಂಬಿಸಲಾಗಿದೆ. ಇದರ ನಡುವೆ ರಾಜನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಿಚ್ಚ ಸುದೀಪ್ ಅವರ ಲುಕ್ ಅಭಿಮಾನಿಗಳ ಗಮನ ಸೆಳೆದಿದೆ. ವಿಶೇಷವೆಂದರೆ, ಈ ಕಾನ್ಸೆಪ್ಟ್ ವೀಡಿಯೋವನ್ನು ಸಂಪೂರ್ಣವಾಗಿ ಎಐ ತಂತ್ರಜ್ಞಾನ ಬಳಸಿ ರೂಪಿಸಲಾಗಿದೆ.
ಡಾ. ರಾಜ್ಕುಮಾರ್ ಬಳಿಕ ಸುದೀಪ್
ವಿಜಯನಗರ ಸಾಮ್ರಾಜ್ಯದ ಸ್ವರ್ಣಯುಗಕ್ಕೆ ಕಾರಣರಾದ ಪ್ರಮುಖ ದೊರೆಗಳಲ್ಲಿ ಶ್ರೀಕೃಷ್ಣದೇವರಾಯರು ಅಗ್ರಗಣ್ಯರು. ಅವರ ಯುದ್ಧ ಕೌಶಲ, ಆಡಳಿತ ಸಾಮರ್ಥ್ಯ, ರಾಜತಾಂತ್ರಿಕ ನೈಪುಣ್ಯ ಮತ್ತು ಸಾಹಿತ್ಯದ ಮೇಲಿನ ಪ್ರೀತಿಯನ್ನು ಆಧರಿಸಿ ‘ದೇವರಾಯ’ ಸಿನಿಮಾ ರೂಪುಗೊಳ್ಳಲಿದೆ.
ಈ ಹಿಂದೆ ನಟಸಾರ್ವಭೌಮ ಡಾ. ರಾಜ್ಕುಮಾರ್ ಅವರು ಕೃಷ್ಣದೇವರಾಯನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಹಲವು ದಶಕಗಳ ಬಳಿಕ ಕಿಚ್ಚ ಸುದೀಪ್ ಇದೇ ಐತಿಹಾಸಿಕ ಪಾತ್ರವನ್ನು ನಿರ್ವಹಿಸಲಿರುವುದು ಸಹಜವಾಗಿಯೇ ನಿರೀಕ್ಷೆ ಹೆಚ್ಚಿಸಿದೆ. ಆಧುನಿಕ ತಂತ್ರಜ್ಞಾನ, ಅದ್ಧೂರಿ ಸೆಟ್ಗಳು ಮತ್ತು ಅತ್ಯಾಧುನಿಕ ವಿಎಫ್ಎಕ್ಸ್ ಬಳಕೆಯೊಂದಿಗೆ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ನಿರ್ಮಿಸುವ ಯೋಜನೆ ಇದೆ.
ಪ್ರಿಯಾ ಸುದೀಪ್ ಅವರ ಅರ್ಪಣೆಯಲ್ಲಿ ‘ದೇವರಾಯ’ ಸಿನಿಮಾ ಮೂಡಿಬರಲಿದೆ. ಟಿ.ಜಿ. ವಿಶ್ವಪ್ರಸಾದ್ ಮತ್ತು ಕೃತಿ ಪ್ರಸಾದ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ತೆಲುಗು ಚಿತ್ರರಂಗದಲ್ಲಿ ‘ಕಾರ್ತಿಕೇಯ 2’, ‘ಧಮಾಕಾ’, ‘ಬ್ರೋ’ ಸೇರಿದಂತೆ ಹಲವು ಯಶಸ್ವಿ ಚಿತ್ರಗಳನ್ನು ನಿರ್ಮಿಸಿರುವ ಪೀಪಲ್ ಮೀಡಿಯಾ ಫ್ಯಾಕ್ಟರಿ, ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ದೊಡ್ಡ ಮಟ್ಟದಲ್ಲಿ ಪ್ರವೇಶಿಸುತ್ತಿದೆ.
ಸದ್ಯ ಚಿತ್ರದ ನಿರ್ದೇಶಕರ ಹೆಸರನ್ನು ಚಿತ್ರತಂಡ ಬಹಿರಂಗಪಡಿಸಿಲ್ಲ. ಬೃಹತ್ ಸೆಟ್ಗಳು ಮತ್ತು ವಿಎಫ್ಎಕ್ಸ್ ಕೆಲಸಗಳಿಗೆ ಹೆಚ್ಚಿನ ಸಮಯ ಬೇಕಾಗಿರುವ ಹಿನ್ನೆಲೆಯಲ್ಲಿ, ‘ದೇವರಾಯ’ ಚಿತ್ರವನ್ನು 2027ರ ಡಿಸೆಂಬರ್ನಲ್ಲಿ ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ರೂಪಿಸಿದೆ. ಸುದೀಪ್ ಅವರ ವೃತ್ತಿಜೀವನದ ಮತ್ತೊಂದು ಮಹತ್ವಾಕಾಂಕ್ಷೆಯ ಸಿನಿಮಾವಾಗಿ ‘ದೇವರಾಯ’ ಈಗಲೇ ಭಾರೀ ನಿರೀಕ್ಷೆ ಹುಟ್ಟುಹಾಕಿದೆ.





