ಕೆಜಿಎಫ್ ಚಾಚಾ ಖ್ಯಾತಿಯ ಹರೀಶ್ ರಾಯ್ ಕ್ಯಾನ್ಸರ್ ಕುಲುಮೆಯಲ್ಲಿ ನೊಂದು, ಬೆಂದು ಹೋಗಿದ್ದಾರೆ. ಮೂರು ವರ್ಷಗಳ ಹಿಂದೆಯೇ ನಾಲ್ಕನೇ ಸ್ಟೇಜ್ ಎಂದಿದ್ದರು ವೈದ್ಯರು. ಆದ್ರೀಗ ಅವರ ಆರೋಗ್ಯ ಮತ್ತಷ್ಟು ವಿಷಮಿಸಿದೆ. ಸಾವು-ಬದುಕಿನ ನಡುವೆ ಹೋರಾಟ ನಡೆಸ್ತಿರೋ ಹರೀಶ್ ರಾಯ್ರನ್ನ ಸದ್ಯದ ಪರಿಸ್ಥಿತಿಯಲ್ಲಿ ನೋಡೋಕೆ ಬಹಳ ಘಾಸಿ ಆಗುತ್ತೆ. ಸಹಾಯಕ್ಕಾಗಿ ಅಂಗಲಾಚುತ್ತಿರೋ ಹಿರಿಜೀವವನ್ನ ಚಿತ್ರರಂಗ ಉಳಿಸಿಕೊಳ್ಳುತ್ತಾ ಅನ್ನೋದ್ರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.
- ಕ್ಯಾನ್ಸರ್ ಕುಲುಮೆಯಲ್ಲಿ KGF ಚಾಚಾ.. ಸಹಾಯಕ್ಕೆ ಮೊರೆ
- 3 ವರ್ಷಗಳ ಹಿಂದೆಯೇ ಥೈರಾಯ್ಡ್ ಕ್ಯಾನ್ಸರ್ 4ನೇ ಸ್ಟೇಜ್..!
- ಟೈಂ ನೀಡಿದ್ದ ವೈದ್ಯರು.. ಚಿಕಿತ್ಸೆಗೆ ಬೇಕು ಲಕ್ಷ ಲಕ್ಷ ರೂಪಾಯಿ
- ತಿಂಗಳಿಗೆ ಮೂರೂವರೆ ಲಕ್ಷ ಮಾತ್ರೆ.. ಆದ್ರೂ ಇಲ್ಲ ಚೇತರಿಕೆ..!
ಕೆಜಿಎಫ್ ಸಿನಿಮಾದ ಒಂದೊಂದು ಪಾತ್ರ ಕೂಡ ನೋಡುಗರ ಮನದಲ್ಲಿ ಅಚ್ಚಳಿಯದೆ ಉಳಿದುಬಿಟ್ಟಿದೆ. ಚಾಚಾ ಪಾತ್ರದಿಂದ ಪ್ರೇಕ್ಷಕರ ದಿಲ್ ದೋಚಿದ್ದ ಹರೀಶ್ ರಾಯ್, ಕಳೆದ ಮೂರು ವರ್ಷಗಳಿಂದ ಕ್ಯಾನ್ಸರ್ ಕುಲುಮೆಯಲ್ಲಿ ಬೇಯುತ್ತಿದ್ದಾರೆ. ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಬೇಕಾಗಿದ್ದು, ಚಿತ್ರರಂಗದ ಬಹುತೇಕ ಮಂದಿ ಅವ್ರಿಗೆ ಸಾಥ್ ನೀಡಿದ್ರು. ಆದಾಗ್ಯೂ ಕೂಡ ಸದ್ಯದ ಪರಿಸ್ಥಿತಿಯಲ್ಲಿ ಅವ್ರನ್ನ ನೋಡೋಕೆ ಕಷ್ಟವಾಗ್ತಿದೆ.
ಕೆಜಿಎಫ್ನ ಅಧೀರ ಸಂಜಯ್ ದತ್ ಕ್ಯಾನ್ಸರ್ನಿಂದ ಕ್ಯೂರ್ ಆಗಿ ಕೆಜಿಎಫ್ ಅಡ್ಡಾಗೆ ಕಾಲಿಟ್ಟಿದ್ರು. ಹರೀಶ್ ರಾಯ್ ಅನ್ನೋ ಚಿತ್ರರಂಗದ ಹಿರಿಜೀವ, ಗಂಟಲಲ್ಲಿ ಗಡ್ಡೆಯೊಂದನ್ನ ಇಟ್ಟುಕೊಂಡೇ ಕೆಜಿಎಫ್ ಶೂಟಿಂಗ್ ಮಾಡಿದ್ರು ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ. ಹೌದು, ರಾಕಿಭಾಯ್ ಅಚ್ಚುಮೆಚ್ಚಿನ ಚಾಚಾ ಪಾತ್ರದಲ್ಲಿ ಹರೀಶ್ ರಾಯ್, ಸಿನಿಮಾದ ತೂಕ ಹೆಚ್ಚಿಸಿದ್ರು. ಇದೀಗ ಅದೇ ಚಾಚಾ ಪಾತ್ರದಾರಿ ಹರೀಶ್ ರಾಯ್ ಆರೋಗ್ಯ ಕ್ಯಾನ್ಸರ್ನಿಂದಾಗಿ ಮತ್ತಷ್ಟು ವಿಷಮಿಸಿದೆ.
ಓಂ ಸಿನಿಮಾದ ಡಾನ್ ಪಾತ್ರದಿಂದ ಲೈಮ್ಲೈಟ್ಗೆ ಬಂದಂತಹ ಹರೀಶ್ ರಾಯ್, ಅದಾದ ಬಳಿಕ ಕನ್ನಡ ಚಿತ್ರರಂಗದ ನೂರಾರು ಸಿನಿಮಾಗಳಲ್ಲಿ ಖಳನಾಯಕನಾಗಿ, ಪೋಷಕ ಪಾತ್ರದಾರಿಯಾಗಿ ಬಣ್ಣ ಹಚ್ಚಿದ್ರು. ಅವ್ರದ್ದೇ ಆದ ಯುನಿಕ್ ಸ್ಟೈಲ್ನಿಂದ ನೋಡುಗರ ಮನಸ್ಸು ಗೆದ್ದಿದ್ರು. ಅದ್ರಲ್ಲೂ ಕೆಜಿಎಫ್ ಸಿನಿಮಾದ ಚಾಚಾ ಪಾತ್ರ ಅವ್ರ ಕರಿಯರ್ನ ಮಹತ್ವದ ಪಾತ್ರವಾಗಿ ಹೊರಹೊಮ್ಮಿತ್ತು.
ಥೈರಾಯ್ಡ್ನಿಂದ ಬಳಲುತ್ತಿದ್ದ ಅವ್ರು ಗಂಟಲಲ್ಲಿ ಗಡ್ಡೆ ಆಗಿದ್ರೂ ಸಹ, ಒಂದಷ್ಟು ಆರ್ಥಿಕವಾಗಿ ಸದೃಢರಾದ ಬಳಿಕ ಆಪರೇಷನ್ ಮಾಡಿಸಿಕೊಳ್ಳೋದಾಗಿ ಎಡವಟ್ಟು ಮಾಡಿಕೊಂಡಿದ್ದರು. ಕೆಜಿಎಫ್ ಸಿನಿಮಾದ ಶೂಟಿಂಗ್ ಬಳಿಕ ಶಸ್ತ್ರ ಚಿಕಿತ್ಸೆ ನಡೆದಿದ್ದು, ಶ್ವಾಸಕೋಶಕ್ಕೆ ಸೋಂಕು ತಗುಲಿತ್ತು. ಅದು ಮಾರಣಾಂತಿಕ ಕ್ಯಾನ್ಸರ್ಗೆ ತಿರುಗಿ, ನಾಲ್ಕನೇ ಹಂತ ಕೂಡ ತಲುಪಿತ್ತು.
ವೈದ್ಯರು ಇನ್ನು ಮೂರ್ನಾಲ್ಕು ವರ್ಷಗಳು ಚಿಂತಿಸೋ ಅವಶ್ಯಕತೆಯಿಲ್ಲ ಅಂತ ಭರವಸೆ ನೀಡಿದ್ದರು. ಆದ್ರೆ ತಿಂಗಳಿಗೆ ಮೂರೂವರೆಯಿಂದ ನಾಲ್ಕು ಲಕ್ಷ ರೂಪಾಯಿಯಷ್ಟು ಮಾತ್ರೆಯನ್ನ ಸೇವಿಸಬೇಕಿತ್ತು ಹರೀಶ್ ರಾಯ್. ಅದನ್ನ ನಿರಂತರವಾಗಿ ತೆಡಗೆದುಕೊಳ್ಳಬೇಕಿತ್ತು. ಒಂದ್ಕಡೆ ಮಾನಸಿಕ ಒತ್ತಡ, ಮತ್ತೊಂದ್ಕಡೆ ಆರ್ಥಿಕ ದುರ್ಬಲತೆ. ಇವೆರಡರ ಮಧ್ಯೆ ಅಕ್ಷರಶಃ ಕುಗ್ಗಿ ಹೋಗಿದ್ರು.
ಚಿತ್ರರಂಗದಿಂದ ಸಾಕಷ್ಟು ಮಂದಿ ಕಲಾವಿದರು, ತಂತ್ರಜ್ಞರು ಹಾಗೂ ಕರುನಾಡಿನ ಜನತೆ ಅವ್ರಿಗೆ ಆರ್ಥಿಕ ನೆರವು ನೀಡಲು ಮುಂದಾಗಿದ್ರು. ಆದ್ರೆ ಅವ್ರಿಗೆ ಹಣಕಾಸಿನ ಸಹಾಯದ ಜೊತೆಗೆ ನೈತಿಕ ಬೆಂಬಲ ನೀಡಿ, ಧೈರ್ಯ ತುಂಬುವಂತಹ ಮನಸ್ಸುಗಳು ಬೇಕಿತ್ತು. ಕೆಜಿಎಫ್ನ ರಾಕಿಭಾಯ್, ವಿಜಯ್ ಕಿರಗಂದೂರು ಹಾಗೂ ಪ್ರಶಾಂತ್ ನೀಲ್ ಅವರ ಕಷ್ಟಕ್ಕೆ ಸ್ಪಂದಿಸಿದ್ದರು. ಅದ್ರಲ್ಲೂ ನಟ ದರ್ಶನ್ಗೆ ಅತ್ಯಾಪ್ತರಾಗಿದ್ದ ಹರೀಶ್ ರಾಯ್ಗೆ ಅವರು ಕೂಡ ಆರ್ಥಿಕ ನೆರವು ನೀಡಿದ್ರು.
ಇದೀಗ ಸೋಶಿಯಲ್ ಮೀಡಿಯಾದಲ್ಲಿ ಅವ್ರ ವಿಡಿಯೋ ಒಂದು ಹರಿದಾಡ್ತಿದ್ದು, ಚಿಕಿತ್ಸೆಗೆ ಆರ್ಥಿಕ ಸಂಕಷ್ಟ ಎದುರಾಗಿದ್ದು, ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ ಹರೀಶ್ ರಾಯ್. ಅವ್ರ ಕಾಲುಗಳು ಊದಿದ್ದು, ಹೊಟ್ಟೆ ಭಾರವಾಗಿದೆ. ಬಾಡಿ ಸ್ಕಿನ್ ಟೋನ್ ಕೂಡ ಬದಲಾಗಿದ್ದು, ಖಡಕ್ ಖಳನಟನಾಗಿ ಅಬ್ಬರಿಸುತ್ತಿದ್ದ ಹರೀಶ್ ರಾಯ್, ಚಿಕ್ಕ ಮಗುವಿನಂತೆ ಸಹಾಯಕ್ಕೆ ಎದುರು ನೋಡ್ತಿರೋದು ನಿಜಕ್ಕೂ ನೋವಿನ ಸಂಗತಿ. ನಾನು ಮತ್ತೆ ಬಣ್ಣ ಹಚ್ಚಿ ನಟಿಸಬೇಕು. ನನ್ನನ್ನು ಉಳಿಸಿಕೊಳ್ಳಿ ಎಂದು ಕೈ ಮುಗಿದು ಮನವಿ ಮಾಡಿಕೊಂಡಿದ್ದಾರೆ. ಅವ್ರು ಕ್ಯಾನ್ಸರ್ನ ಗೆದ್ದು ಬರಬೇಕು ಅನ್ನೋದು ನಮ್ಮ ನಿಮ್ಮೆಲ್ಲರ ಪ್ರಾರ್ಥನೆ.





