ಧ್ರುವ ಸರ್ಜಾ- ಜೋಗಿ ಪ್ರೇಮ್ ಕೆ.ಡಿ ಕಿಂಗ್ಡಮ್ ಪ್ರೇಕ್ಷಕರಿಗೆ ತೆರೆದುಕೊಳ್ಳುವ ಸಮಯ ಸನಿಹವಾಗಿದೆ. ಹೌದು, ಇಲ್ಲಿಯವರೆಗೂ ಸೈಲೆಂಟ್ ಆಗಿದ್ದ ಕೆಡಿ ಟೀಂ, ಇದೀಗ ಟೀಸರ್ ಲಾಂಚ್ಗೆ ಡೆಡ್ಲೈನ್ ಫಿಕ್ಸ್ ಮಾಡಿದೆ. ಅಂದಹಾಗೆ ಕನ್ನಡಿಗರಿಂದ ತಯಾರಾದ ಕೆಡಿ, ಅದ್ಯಾಕೋ ತಾಯ್ನಾಡನ್ನೇ ಮರೆತು, ಮುಂಬೈನಿಂದ ಪ್ರಮೋಷನ್ಸ್ಗೆ ಮುನ್ನುಡಿ ಬರೆಯುತ್ತಿದೆ.
- ತಾಯ್ನಾಡು ಮರೆತ KD.. ಮುಂಬೈನಿಂದ ಪ್ರಮೋಷನ್ಸ್..?!
- ಜು-10ಕ್ಕೆ ಟೀಸರ್.. ಮೊದಲು ಮುಂಬೈ, ಹೈದ್ರಾಬಾದ್, ಚೆನ್ನೈ
- ಕನ್ನಡಿಗರಿಂದ ತಯಾರಾದ ಪ್ಯಾನ್ ಇಂಡಿಯಾ ಮೂವಿ KD
- ಇದು KVN ಸ್ಟ್ರ್ಯಾಟಜಿನಾ ಇಲ್ಲ ಪ್ರೇಮ್ ಪ್ರಮೋಷನ್ ಗಿಮಿಕ್ಕಾ ?
ಸ್ಯಾಂಡಲ್ವುಡ್ ಅಂಗಳದಿಂದ ಭಾರತೀಯ ಚಿತ್ರರಂಗಕ್ಕೆ ಮತ್ತೊಂದು ಹೈ ವೋಲ್ಟೇಜ್ ಆ್ಯಕ್ಷನ್ ಎಂಟರ್ಟೈನರ್ ಬರ್ತಿದೆ. ಅದೇ ಕೆಡಿ-ದಿ ಡೆವಿಲ್. ಹೌದು, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಜೋಗಿ ಪ್ರೇಮ್ ಕಾಂಬೋನ ಈ ಬಹುಕೋಟಿ ಸಿನಿಮಾಗೆ ಕೆವಿಎನ್ ಪ್ರೊಡಕ್ಷನ್ಸ್ ನೂರಾರು ಕೋಟಿ ಹಣ ಹೂಡಿಕೆ ಮಾಡಿದ್ದಾರೆ. ರೆಟ್ರೋ ಜಾನರ್ನ ಈ ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ.
ಕೆಡಿ ಅಂದ್ರೆ ಕಾಳಿದಾಸ ಎಂದರ್ಥ. ಇಲ್ಲಿ ಧ್ರುವ ಕಾಳಿದಾಸ ಹಾಗೂ ಮಚ್ಚುಲಕ್ಷ್ಮೀ ಪತ್ನಿ ಹೀಗೆ ಎರಡೆರಡು ಪಾತ್ರಗಳಲ್ಲಿ ಕಾಣಸಿಗಲಿದ್ದು, ಸೆಪ್ಟೆಂಬರ್ನಲ್ಲಿ ಪ್ರೇಕ್ಷಕರ ಮುಂದೆ ಬರುವ ಸೂಚನೆ ಸಿಕ್ಕಿದೆ. ಇಲ್ಲಿಯವರೆಗೆ ಸಿಂಗಲ್ ಟೀಸರ್ ಹಾಗೂ ಎರಡು ಸಾಂಗ್ಸ್ನಿಂದ ಟಾಕ್ ಆಫ್ ದಿ ಟೌನ್ ಆಗಿರೋ ಕೆಡಿ, ತಾರಾಗಣದಿಂದ ಎಲ್ಲರ ಹುಬ್ಬೇರಿಸಿದೆ.
ಸಂಜಯ್ ದತ್, ಶಿಲ್ಪಾ ಶೆಟ್ಟಿ, ರಮೇಶ್ ಅರವಿಂದ್, ರವಿಚಂದ್ರನ್, ರೀಷ್ಮಾ ನಾಣಯ್ಯ.. ಹೀಗೆ ದೊಡ್ಡ ತಾರಾ ದಂಡು ಕೆಡಿ ಚಿತ್ರಕ್ಕಿದೆ. ಒಬ್ಬೊಬ್ಬರ ಲುಕ್ ಕೂಡ ಸಿಕ್ಕಾಪಟ್ಟೆ ಕಿಕ್ ಕೊಡ್ತಿದ್ದು, ಅರ್ಜುನ್ ಜನ್ಯ ಸಂಯೋಜನೆಯ ಸಾಂಗ್ಸ್ ಕೋಟ್ಯಂತರ ವೀವ್ಸ್ನಿಂದ ಚಿತ್ರಪ್ರೇಮಿಗಳ ದಿಲ್ ದೋಚಿದೆ. ಅಂದಹಾಗೆ ಈ ಸಿನಿಮಾದ ಡೈರೆಕ್ಟರ್, ಹೀರೋ, ಹೀರೋಯಿನ್, ನಿರ್ಮಾಣ ಸಂಸ್ಥೆ ಎಲ್ಲರೂ ಕನ್ನಡಿಗರೇ. ಆದ್ರೆ ತಾಯ್ನಾಡನ್ನೇ ಮರೆತು, ಇಲ್ಲಿಗಿಂತ ಮೊದಲು ಪರಭಾಷೆಗಳಲ್ಲಿ ಟೀಸರ್ ಲಾಂಚ್ ಮಾಡೋಕೆ ಮುಂದಾಗಿದೆ ಟೀಂ.
ಹೌದು, ಇಲ್ಲಿಯವರೆಗೂ ಕೆಡಿ ಸಿನಿಮಾದ ಗ್ಲಿಂಪ್ಸ್ ಬಿಟ್ಟುಕೊಡದ ಜೋಗಿ ಪ್ರೇಮ್, ಇದೇ ಜುಲೈ 10ಕ್ಕೆ ಕೆಡಿ ಟೀಸರ್ ಲಾಂಚ್ ಮಾಡುವ ಮೂಲಕ ಅದರ ಜಗತ್ತನ್ನ ಅನಾವರಣಗೊಳಿಸೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಮೊದಲಿಗೆ ಜುಲೈ 10ರ ಮಧ್ಯಾಹ್ನ 12.30ಕ್ಕೆ ಮುಂಬೈನಲ್ಲಿ ಕೆಡಿ ಚಿತ್ರದ ಟೀಸರ್ ಲಾಂಚ್ ಆಗಲಿದೆ. ಅದೇ ದಿನ ಸಂಜೆ 6 ಗಂಟೆಗೆ ಹೈದ್ರಾಬಾದ್ನಲ್ಲಿ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೀತಿದೆ. ಜುಲೈ 11ರ ಮಧ್ಯಾಹ್ನ 12.30ಕ್ಕೆ ಚೆನ್ನೈನಲ್ಲಿ ರಿವೀಲ್ ಆಗ್ತಿದ್ದು, ದೇಶಾದ್ಯಂತ ಎಲ್ಲೆಡೆ ಅನಾವರಣಗೊಂಡ ಬಳಿಕ ಕರ್ನಾಟಕದಲ್ಲಿ ರಿಲೀಸ್ ಆಗ್ತಿರೋದು ವಿಪರ್ಯಾಸ.
ಇದು ಕೆವಿಎನ್ ಪ್ರೊಡಕ್ಷನ್ಸ್ನ ಸ್ಟ್ರ್ಯಾಟಜಿಯೋ ಅಥ್ವಾ ಪ್ರೇಮ್ ಪ್ರಮೋಷನ್ಸ್ ಗಿಮಿಕ್ಕೋ ಗೊತ್ತಿಲ್ಲ. ಆದ್ರೆ ಇಲ್ಲಿ ಕನ್ನಡಿಗರಿಂದ ತಯಾರಾದ ಕನ್ನಡ ಸಿನಿಮಾವೊಂದು ಕನ್ನಡ ನೆಲವನ್ನೇ ಮರೆತು, ಅಕ್ಕ ಪಕ್ಕದ ಎಲ್ಲಾ ಚಿತ್ರರಂಗಗಳಲ್ಲಿ ರಿಲೀಸ್ ಬಳಿಕ ಇಲ್ಲಿಗೆ ಬಂದು ಮಾಡ್ತಿರೋದ್ರ ಬಗ್ಗೆ ಬೇಸರವಿದೆ. ಇದನ್ನ ಸ್ವತಃ ಧ್ರುವ ಸರ್ಜಾ ಫ್ಯಾನ್ಸ್ ಸಹ ಮೆಚ್ಚಲ್ಲ. ಈ ತರಹದ ಒಂದು ನಿರ್ಧಾರ ಚಿತ್ರತಂಡ ಯಾಕೆ ತಗೊಂಡಿದೆಯೋ ದೇವರೇ ಬಲ್ಲ.