ದಿ ವೆಯ್ಟ್ ಈಸ್ ಓವರ್.. ಇಷ್ಟು ದಿನ ಚಿತ್ರಪ್ರೇಮಿಗಳು ಬಹಳ ಕಾತರದಿಂದ ಕಾಯ್ತಿದ್ದಂತಹ ಕೆಡಿ ಡೆವಿಲ್ಸ್ ಕಿಂಗ್ಡಮ್ ಕಥೆ ಕೊನೆಗೂ ಬಯಲಾಗಿದೆ. ಸ್ಯಾಂಡಲ್ವುಡ್ನ ಬಿಗ್ಗೆಸ್ಟ್ ಮಲ್ಟಿಸ್ಟಾರರ್ ಬಿಗ್ ಓಪನಿಂಗ್ ಪಡೆದುಕೊಂಡಿದೆ. ಹಾಗಾದ್ರೆ ಕೆಡಿ ಚಿತ್ರದ ಕಥೆ ಏನು..? ಜೋಗಿ ಪ್ರೇಮ್ ನಿರ್ದೇಶನ & ನಿರೂಪಣೆ ಹೇಗಿದೆ..? ಆರ್ಟಿಸ್ಟ್ಗಳ ಪರ್ಫಾಮೆನ್ಸ್ ನೋಡಿ ಪ್ರೇಕ್ಷಕರು ಏನಂದ್ರು..? ಚಿತ್ರದಲ್ಲಿ ಪ್ಲಸ್ ಏನು ಮೈನಸ್ ಏನು ಅನ್ನೋದ್ರ ಕಂಪ್ಲೀಟ್ ರಿವ್ಯೂ ರಿಪೋರ್ಟ್ ಇಲ್ಲಿದೆ ನೋಡಿ..
- ಜೋಗಿ ಮದರ್ ಸೆಂಟಿಮೆಂಟ್.. KD ಅಣ್ತಮ್ಮ ಸೆಂಟಿಮೆಂಟ್
- ಧ್ರುವ ಮೈ ಮೇಲೆ ಕಾಳಿ.. ದುಷ್ಠ ಸಂಹಾರಕ್ಕೆ ಕಾಲಭೈರವ ಸಾಥ್
- ರೀಷ್ಮಾ ಜೂನಿಯರ್ ಉಮಾಶ್ರೀ.. ಸಂಜಯ್ ದತ್ ಸೆನ್ಸೇಷನ್
- ಕ್ಲೈಮ್ಯಾಕ್ಸ್ ಟ್ವಿಸ್ಟ್ ನೆಕ್ಸ್ಟ್ ಲೆವೆಲ್.. ಪ್ರೇಮ್ ಭರ್ಜರಿ ಕಂಬ್ಯಾಕ್!
ಯೆಸ್.. ಈ ನಾಲ್ಕು ಸಾಲುಗಳಲ್ಲೇ ಇದೆ ನಮ್ಮ ಸ್ಯಾಂಡಲ್ವುಡ್ನ ಈ ವರ್ಷದ ಬಹುನಿರೀಕ್ಷಿತ ಕೆಡಿ ಚಿತ್ರದ ರಿವ್ಯೂ ರಿಪೋರ್ಟ್. ಯಾಕಂದ್ರೆ ಮೂರು ವರ್ಷಗಳ ಕಾಯುವಿಕೆಯ ಹಿಂದೆ ಸಾಕಷ್ಟು ಮಂದಿಯ ಶ್ರಮ, ಪರಿಶ್ರಮವಿದೆ. ಅದ್ರಲ್ಲೂ ಕಾಯುವ ಕುಲುಮೆಯಲ್ಲೊಂದು ಭಾವನಾತ್ಮಕ ಲೋಕ ಕಟ್ಟಿ, ನೋಡುಗರ ಕಣ್ಣಲ್ಲಿ ನೀರು ತರಿಸೋ ಮಹಾನ್ ಮಾಂತ್ರಿಕ ಜೋಗಿ ಪ್ರೇಮ್ ಕೆಡಿಯಿಂದ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಜೋಗಿ ಮದರ್ ಸೆಂಟಿಮೆಂಟ್ ಸಿನಿಮಾ ಆದ್ರೆ, ಈ ಕೆಡಿ ಮಾತ್ರ ಅಣ್ತಮ್ಮ ಸೆಂಟಿಮೆಂಟ್ ಚಿತ್ರವಾಗಿ ಹೊರಹೊಮ್ಮಿದೆ.
ಧ್ರುವ ಸರ್ಜಾ ಅಕ್ಷರಶಃ ಕರಿಯರ್ ಬೆಸ್ಟ್ ಪರ್ಫಾಮೆನ್ಸ್ ನೀಡಿದ್ದು, ಕಾಳಿದಾಸ ಅಕಾ ಕಾಳಿ ಪಾತ್ರಕ್ಕೆ ಪರಕಾಯ ಪ್ರವೇಶವೇ ಮಾಡಿದ್ದಾರೆ. ಡಾಕ್ ದೇವನಾಗಿ ಸಂಜಯ್ ದತ್ ಮನೋಜ್ಞ ಅಭಿನಯ ನೀಡಿದ್ದು, ಧ್ರುವ-ಸಂಜಯ್ ದತ್ರದ್ದು ಸುನಾಮಿ-ಸುಂಟರಗಾಳಿ ಕಾಂಬಿನೇಷನ್ನಂತಿದೆ. ಇನ್ನೂ ರೀಷ್ಮಾ ನಾಣಯ್ಯ ಸಾಮರ್ಥ್ಯ ಮೀರಿ ಪರ್ಫಾಮ್ ಮಾಡಿದ್ದು, ಜೂನಿಯರ್ ಉಮಾಶ್ರೀ ರೀತಿ ಮಾರ್ಕ್ಸ್ ಸ್ಕೋರ್ ಮಾಡಿದ್ದಾರೆ. ಕ್ಲೈಮ್ಯಾಕ್ಸ್ ನೆಕ್ಸ್ಟ್ ಲೆವೆಲ್ಗಿದ್ದು, ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿನಿಮಾದ ಕೌತುಕತೆ ಹೆಚ್ಚಿಸಿದೆ.
ಇಷ್ಟಕ್ಕೂ ಕೆಡಿ ಕಥೆ ಏನು ಗೊತ್ತಾ..?
1975ರಲ್ಲಿ ಬೆಂಗಳೂರಿನಲ್ಲಿ ನಡೆಯೋ ಕಥೆ ಇದು. ದೇಶ ಕಾಯೋಕೆ ಸೈನಿಕರನ್ನ ಹುಟ್ಟಿ ಹಾಕುವ ಗರಡಿ ಮನೆಯಲ್ಲಿ ತನ್ನ ಪಟ್ಟುಗಳಿಂದಲೇ ಫೇಮಸ್ ಆದಂತಹ ಡಾಕ್ ದೇವ ಅನ್ನೋ ಪೈಲ್ವಾನ್, ಅದನ್ನ ರೌಡಿಸಂ ಅಡ್ಡಾ ಆಗಿ ಬದಲಿಸ್ತಾನೆ. ಅಚಾನಕ್ಕಾಗಿ ಡಾಕ್ ದೇವನ ಕಾರಿಗೆ ಬಂದು ಡಿಕ್ಕಿ ಹೊಡೆಯುವ ಕಾಳಿಗೆ ತಾನೇ ತಕ್ತ ಕೊಟ್ಟು ಕಾಪಾಡ್ತಾನೆ ಡಾಕ್ ದೇವ. ಕಾಳಿ ತಾನು ಮದ್ವೆ ಆಗುವ ಹುಡುಗಿ ಮಚ್ಚ್ ಲಕ್ಷ್ಮೀ ಜುಟ್ಟು ಕತ್ತರಿಸೋ ಡಾಕ್ ದೇವನ ಹುಡುಗರ ವಿರುದ್ಧ ನ್ಯಾಯ ಕೇಳೋಕೆ ಹೋಗ್ತಾನೆ. ಆದ್ರೆ 24 ಗಂಟೆಯಲ್ಲಿ ಇಡೀ ಕಾಳಿ ಕುಟುಂಬಸ್ಥರ ತಲೆ ಕತ್ತರಿಸಿ ತನ್ನ ಕಾಲಡಿ ಇಡಲು ಆಜ್ಞಾಪಿಸ್ತಾನೆ. ಅಣ್ಣನೇ ತಂದೆ-ತಾಯಿ, ಸರ್ವಸ್ವ ಅಂತ ಬೆಳೆಯೋ ಕಾಳಿ, ಒಡಹುಟ್ಟಿದ ಸಹೋದರ ಧರ್ಮ, ಅಕ್ಕ ಹಾಗೂ ತಂಗಿಯನ್ನ ಉಳಿಸಿಕೊಳ್ಳೋಕೆ ಏನೆಲ್ಲಾ ಮಾಡ್ತಾನೆ ಅನ್ನೋದೇ ಒನ್ ಲೈನ್ ಸ್ಟೋರಿ.
- ಆರ್ಟಿಸ್ಟ್ ಪರ್ಫಾಮೆನ್ಸ್ ಹೆಂಗದೆ ಬಾಸು..?
- ಮುಗ್ಧ ಕಾಳಿದಾಸ.. ಕಾಳಿಯಾಗಿ ಧ್ರುವ ಕಿಲ್ಲರ್ ಪರ್ಫಾಮೆನ್ಸ್
- ರೀಷ್ಮಾ ಜಡೆ ಜೊತೆ ನಾಲಿಗೆಯೂ ಉದ್ಧ.. ವರ್ಸಟೈಲ್ ನಟಿ
ಗರಡಿ ಮನೆಯ ಅಖಾಡ ಸಿದ್ಧಗೊಳಿಸಿ, ಕುಸ್ತಿಪಟುಗಳಿಗೆ ಹಾಲು ಸರಬರಾಜು ಮಾಡೋದ್ರ ಜೊತೆ ಸೀಮೆ ಎಣ್ಣೆ ಮಾರುವ ಒಬ್ಬ ಸಾಮಾನ್ಯ ಹುಡ್ಗ ಕಾಳಿದಾಸನಾಗಿ ಧ್ರುವ ಸರ್ಜಾ ಪಾತ್ರವನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಡ್ಯಾಶಿಂಗ್ ಡೈಲಾಗ್ಸ್ ಜೊತೆ ಚಿಟಪಟ ಅಂತ ಮಾತಾಡ್ತಾ ಇಡೀ ಏರಿಯಾ ಜನರ ಮನೆ ಮಗನಂತೆ ಕಾಣಸಿಗ್ತಾರೆ. ಡ್ಯಾನ್ಸ್ ಹಾಗೂ ಫೈಟ್ಸ್ ಧ್ರುವ ಸ್ಟ್ರೆಂಥ್. ಇಲ್ಲಿಯೂ ಅದನ್ನ ಹುಬ್ಬೇರಿಸುವಂತೆ ಮಾಡಿರೋದು ವಿಶೇಷ. ಅದ್ರಲ್ಲೂ ಲವ್ವರ್ ಬಾಯ್ ಆಗಿ ಒಮ್ಮೆ ಮುಗ್ಧ ಹಾಗೂ ನಿಷ್ಕಲ್ಮಶ ಕಾಳಿದಾಸನಾದ್ರೆ, ಪರಿಸ್ಥಿತಿಗೆ ತಕ್ಕನಾಗಿ ಮಚ್ಚು ಹಿಡಿದು ಕಾಳಿಯಂತೆ ರೌದ್ರಾವತಾರ ಕೂಡ ತಾಳುತ್ತಾರೆ.
ಮಚ್ಚ್ ಲಕ್ಷ್ಮೀಯಾಗಿ ರೀಷ್ಮಾ ಸಿಕ್ಕಾಪಟ್ಟೆ ಲವಲವಿಕೆಯಿಂದ ಪಾತ್ರ ನಿಭಾಯಿಸಿದ್ದಾರೆ. ನಮಗೆ ರೆಟ್ರೋ ಅಭಿನೇತ್ರಿ ಮಂಜುಳ ಅವ್ರ ಸಂಪತ್ತಿಗೆ ಸವಾಲ್ ಸಿನಿಮಾ ನೆನಪಿಸ್ತಾರೆ. ಅಷ್ಟರ ಮಟ್ಟಿಗೆ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸೆಂಟ್ ಕದಿಯೋ ಸೆಂಟ್ ಕಳ್ಳಿಯಾಗಿ, ಉದ್ದನೆಯ ಜಡೆ ಹೊಂದಿರೋ ಸುಕೋಮಲೆಯಾಗಿ, ಪಟ ಪಟಾ ಅಂತ ಮಾತಾಡುವ ನೆಕ್ಸ್ಟ್ ಡೋರ್ ಗರ್ಲ್ ಆಗಿ ಅಭಿನಯಿಸಿದ್ದಾರೆ. ಡೈಲಾಗ್ ಡೆಲಿವರಿ, ಬಜಾರಿಯ ಗತ್ತು, ಧ್ರುವ ಪ್ರೇಯಸಿಯಾಗಿ, ಡ್ಯಾನ್ಸ್, ಎಮೋಷನಲ್ ಸೀನ್ಗಳಲ್ಲಿ ವ್ಹಾವ್ ಅನಿಸೋ ರೀತಿ ನಟಿಸಿದ್ದಾರೆ.
- ಡಾಕ್ ದೇವ ಸಂಜಯ್ ದತ್.. ಕವಿಯಾಗಿ ಯಶ್ ಶೆಟ್ಟಿ..!!
- ಕ್ರೇಜಿಸ್ಟಾರ್-ರಮೇಶ್ ಅರವಿಂದ್ ಫ್ರೆಂಡ್ಸ್.. ಶಿಲ್ಪಾ ಶೆಟ್ಟಿ ಟ್ವಿಸ್ಟ್
ಸಂಜಯ್ ದತ್ ಕೆಡಿ ಚಿತ್ರದ ಖಳನಾಯಕ. ಡಾಕ್ ದೇವನಾಗಿ ಅಬ್ಬರಿಸಿ, ಆರ್ಭಟಿಸಿದ್ದಾರೆ. ಇಡೀ ಪೊಲೀಸ್ ಡಿಪಾರ್ಟ್ಮೆಂಟ್ಗೆ ತಲೆನೋವಾಗಿದ್ದ ಕುಖ್ಯಾತ ರೌಡಿಯಾಗಿ ರಾರಾಜಿಸಿದ್ದಾರೆ. ಕುಸ್ತಿಪಟುವಾಗಿ, ರೌಡಿಯಾಗಿ, ಪೊಲಿಟಿಷಿಯನ್ ಆಗೋಕೆ ಮಾಡುವ ಕಸರತ್ತು ಜೋರು. ಅದ್ರಲ್ಲೂ ಕಣ್ಣೋಟದಲ್ಲೇ ನೋಡುಗರ ಎದೆ ಝಲ್ ಅನಿಸೋ ಸಂಜುಬಾಬಾ ಕೆಡಿ ಚಿತ್ರದ ಸ್ಪೆಷಲ್ ಅಟ್ರ್ಯಾಕ್ಷನ್.
ಧ್ರುವ ಸರ್ಜಾ ಅಣ್ಣ ಧರ್ಮನಾಗಿ ರಮೇಶ್ ಅರವಿಂದ್ ನಟಿಸಿದ್ದು, ರಿಯಲ್ ಲೈಫ್ನಲ್ಲಿ ಮೋಟಿವೇಷನಲ್ ಸ್ಪೀಕರ್ ಆಗಿರೋ ಇವರು ಅಲ್ಲಿ ಸ್ಕೂಲ್ ಮೇಷ್ಟ್ರಾಗಿ ನೀತಿ ಪಾಠ ಮಾಡ್ತಾರೆ. ಸಮಯಕ್ಕೆ ತಕ್ಕನಾಗಿ ಕುರುಕ್ಷೇತ್ರದ ಶ್ರೀಕೃಷ್ಣನಂತೆಯೂ ವರ್ತಿಸುತ್ತಾರೆ. ಇನ್ನೂ ಅಣ್ಣಯಪ್ಪ ಅನ್ನೋ ಎಂಎಲ್ಎ ಆಗಿ ಕ್ರೇಜಿಸ್ಟಾರ್ ರವಿಚಂದ್ರನ್ ಸ್ಟೈಲಿಶ್ ಲುಕ್ನಲ್ಲಿ ಕಿಕ್ ಕೊಡ್ತಾರೆ. ಇಲ್ಲಿ ರವಿಚಂದ್ರನ್-ರಮೇಶ್ ಫ್ರೆಂಡ್ಶಿಪ್ ಕೂಡ ನೋಡಬಹುದು.
ಸತ್ಯವತಿ ಪಾತ್ರದಲ್ಲಿ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಕ್ರೇಜಿಯಾಗಿ ಕಾಣಸಿಗ್ತಾರೆ. ಡಾಕ್ ದೇವನ ಮನದರಸಿಯಾಗಿ ಸಿನಿಮಾದ ಕ್ಲೈಮ್ಯಾಕ್ಸ್ಗೆ ಮೇಜರ್ ಟ್ವಿಸ್ಟ್ ಕೊಡ್ತಾರೆ. ಉಳಿದಂತೆ ದತ್ತಣ್ಣ, ಮ್ಯೂಟೆಂಟ್ ರಘು, ಆರ್ಮುಗಂ ರವಿಶಂಕರ್.. ಹೀಗೆ ಸಾಕಷ್ಟು ಮಂದಿ ಕಲಾವಿದರು ಅವರವರ ಪಾತ್ರಗಳನ್ನ ನಿಭಾಯಿಸಿದ್ದಾರೆ.
ಕೆಡಿ ಸಿನಿಮಾಗೆ ಪ್ಲಸ್ ಆಗಿರೋದೇನು..?
- ಧ್ರುವ, ರೀಷ್ಮಾ, ಸಂಜಯ್ ದತ್ ನಟನೆ
- ಪ್ರೇಮ್ ಕೂತು ಮಾಡಿಸಿರೋ ಸಂಗೀತ & ಹಿನ್ನೆಲೆ ಸಂಗೀತ
- ವಿಲಿಯಂ ಡೇವಿಡ್ ಸಿನಿಮಾಟೋಗ್ರಫಿ
- ಕಥೆಯಲ್ಲಿರೋ ಟ್ವಿಸ್ಟ್ & ಟರ್ನ್ಸ್
- ವಿಭಿನ್ನ ಅನಿಸೋ ಸಾಹಸ ದೃಶ್ಯಗಳು
- ಕ್ರಾಂತಿ ಡೈಲಾಗ್ಸ್
- ದ್ವಿತಿಯಾರ್ಧ ಹಾಗೂ ಕ್ಲೈಮ್ಯಾಕ್ಸ್ ಟ್ವಿಸ್ಟ್
ಕೆಡಿ ಸಿನಿಮಾದ ಮೈನಸ್ ಪಾಯಿಂಟ್ಸ್ ಏನು..?
- ಮೊದಲ ದೃಶ್ಯದಿಂದ ಕೊನೆಯ ತನಕ ಕಿರುಚಾಟ
- ಬೆಂಕಿಯಂತಹ ದೃಶ್ಯಗಳು ಬಿಟ್ಟು ಸಿನಿಮಾ ತುಂಬಾ ಬೆಂಕಿ
- ಅನಾವಶ್ಯಕ ಸಾಂಗ್ಸ್
- ಸುದೀಪ್ ಗೆಸ್ಟ್ ಅಪಿಯರೆನ್ಸ್ ಮೊಟಕುಗೊಳಿಸಿರುವುದು
- ನೋರಾ ಫತೇಹಿ ಸಾಂಗ್ ನಾಪತ್ತೆ
- ಪಾತ್ರಕ್ಕೆ ಒಗ್ಗುವ ಕಲಾವಿದರ ಆಯ್ಕೆಯಲ್ಲಿ ವಿಫಲ
- ಮೊದಲಾರ್ಧ ಲ್ಯಾಗ್ & ಬೋರಿಂಗ್
- ಜಾತ್ರೆ ಟೈಪ್ ವಿಗ್ಸ್ & ಕಾಸ್ಟ್ಯೂಮ್ಸ್
KDಗೆ ಗ್ಯಾರಂಟಿ ನ್ಯೂಸ್ ರಿವ್ಯೂ ರೇಟಿಂಗ್: 3/5
KD ಚಿತ್ರದ ಫೈನಲ್ ಸ್ಟೇಟ್ಮೆಂಟ್
ಜನನಾಯಗನ್ ಸಿನಿಮಾ ಸೆನ್ಸಾರ್ ಸಂಕಷ್ಟಕ್ಕೆ ಸಿಲುಕಿದ್ರೂ.. ಟಾಕ್ಸಿಕ್ ರಿಲೀಸ್ ಪೋಸ್ಟ್ಪೋನ್ ಆದ್ರೂ.. ಕೆವಿಎನ್ ಪ್ರೊಡಕ್ಷನ್ಸ್ ಮಾತ್ರ ಕೆಡಿ ಸಿನಿಮಾನ ಹೇಳಿದ ಡೇಟ್ಗೆ ರಿಲೀಸ್ ಮಾಡಿದೆ. ಕೋಟ್ಯಂತರ ರೂಪಾಯಿ ಹಣ ಸುರಿದು, ನಿರ್ದೇಶಕನ ಕನಸು ನನಸಾಗಿಸಿದೆ. ಸಾವಿರಾರು ಮಂದಿಗೆ ಅನ್ನದಾತರಾಗಿದ್ದಾರೆ ಕೆ ವೆಂಕಟ್ ನಾರಾಯಣ್. ಅವ್ರ ಸಿನಿಮಾ ಪ್ಯಾಷನ್ ಎಂಥದ್ದು ಅನ್ನೋದಕ್ಕೆ ಈ ಕೆಡಿ ಚಿತ್ರದ ಅದ್ಧೂರಿ ಮೇಕಿಂಗ್ ಸಾಕ್ಷಿ ಆಗಿದೆ. ಅಂದಹಾಗೆ ಜೋಗಿ ಪ್ರೇಮ್ ಒಂದೊಳ್ಳೆ ಕಥೆಯನ್ನ ಸಾವಧಾನವಾಗಿ, ಸಮಾಧಾನವಾಗಿ ನಿರ್ದೇಶಿಸಿ, ನಿರೂಪಿಸುವಲ್ಲಿ ಎಡವಿದ್ದಾರೆ ಅನಿಸ್ತಿದೆ. ಇಡೀ ಸಿನಿಮಾ ಬರೀ ಕಿರುಚಾಟ, ಚೀರಾಟದಿಂದ ಕೂಡಿದೆ. ಅದರಲ್ಲಿ ಎಮೋಷನ್ಸ್ ಕಣ್ಮರೆ ಆಗಿವೆ. ಅತಿಯಾದ ಸಂಭಾಷಣೆ ಚಿತ್ರಕಥೆಗೆ ಮಾರಕವಾಗಿದೆ.
ಅನಾವಶ್ಯಕ ಪಾತ್ರಗಳು, ಅನಗತ್ಯ ಖರ್ಚುಗಳು ಪ್ರತಿ ಫ್ರೇಮ್ನಲ್ಲೂ ಎದ್ದು ಕಾಣುತ್ತವೆ. ಎಳೆ ಚೆನ್ನಾಗಿದೆ. ಆದ್ರೆ ಅದನ್ನ ಮರವಾಗಿಸುವಲ್ಲಿ ಎಡವಿದ್ದು, ಯಾವುದೇ ಸಿನಿಮಾಗಳು ಇಲ್ಲದಿರೋದ್ರಿಂದ ಒಮ್ಮೆ ಕಣ್ತುಂಬಿಕೊಳ್ಳಬಹುದಾದ ಸಿನಿಮಾ ಅನಿಸಿದೆ ಕೆಡಿ. ಮಾಸ್ಪ್ರಿಯರಿಗೆ ಹಾಗೂ ಅಣ್ತಮ್ಮಂದಿರಿಗೆ ಇದು ಇಷ್ಟವಾಗಬಹುದು. ಆದ್ರೆ ಎ ಸರ್ಟಿಫೈಡ್ ಮೂವಿ ಆಗೊರೋದ್ರಿಂದ ಮಕ್ಕಳು ಹಾಗೂ ಮುದುಕರಿಗೆ ಅಲ್ಲವೇ ಅಲ್ಲ. ಆದ್ರೂ ಸಹ, ಐಪಿಎಲ್ ಅಬ್ಬರ, ಬಿಸಿಲ ಬೇಗೆ, ಬೇಸಿಗೆಯ ಮರಣ ಮಳೆ ನಡುವೆ ಒಳ್ಳೆಯ ಓಪನಿಂಗ್ ಪಡೆದಿದೆ ಕೆಡಿ ಸಿನಿಮಾ.
ಪ್ರೇಮ್ ಮೊದಲೇ ಹೇಳಿದಂತೆ ಎಲ್ಲಾ ಪಾತ್ರಗಳು ಹುಟ್ಟುತ್ತವೆ. ಆದ್ರೆ ಕ್ಲೈಮ್ಯಾಕ್ಸ್ ಬಳಿಕ ಮುಂದೆ ಏನು ಅನ್ನೋದನ್ನ ನೋಡುಗನ ವಿವೇಚನೆಗೆ ಬಿಡಲಾಗುತ್ತೆ. ಕೆಡಿ ಭಾಗ-2 ಬರೋ ಮುನ್ಸೂಚನೆ ಕೂಡ ನೀಡಿದ್ದಾರೆ. ಕಾಲಭೈರವನಾಗಿ ಕಿಚ್ಚನ ಎಂಟ್ರಿಯಷ್ಟೇ ಇದೆ. ಆ ಭೈರವನಿಗೂ ಕಾಳಿಗೂ ಏನು ಸಂಬಂಧ..? ಬರೀ ಸ್ಟೈಲಿಶ್ ಬೂಟ್ನಲ್ಲಿ ಕಾಣಿಸೋ ಆ ಮತ್ತೊಬ್ಬ ಖಳನಾಯಕ ಯಾರು..? ವಿಜಯ್ ಸೇತುಪತಿ ಎಂಟ್ರಿ ಕೊಡ್ತಾರಾ ಅನ್ನೋದಕ್ಕೆ ಪ್ರೇಮ್ ಅವರೇ ಉತ್ತರಿಸಬೇಕಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





