ಬೆಂಗಳೂರು, ಜ.15: ಕನ್ನಡ ಚಿತ್ರರಂಗದ ನಟಿ ಹಾಗೂ ಮಾಜಿ ಬಿಗ್ ಬಾಸ್ ಸ್ಪರ್ಧಿ ಕಾರುಣ್ಯ ರಾಮ್ (Karunya Ram) ಅವರು ಸ್ವಂತ ತಂಗಿಯ ವಿರುದ್ಧವೇ ವಂಚನೆ ಆರೋಪ ಹೊರಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮೇಕಪ್ ಆರ್ಟಿಸ್ಟ್ ಆಗಿರುವ ಸಹೋದರಿ ಸಮೃದ್ಧಿ ರಾಮ್ (Samrudhi Ram) ಅವರು ಆನ್ಲೈನ್ ಬೆಟ್ಟಿಂಗ್ ವ್ಯಸನಕ್ಕೆ ಬಿದ್ದು, ಸುಮಾರು 25 ಲಕ್ಷ ರೂಪಾಯಿ ಸಾಲ ಮಾಡಿಕೊಂಡು, ಅದನ್ನು ತೀರಿಸಲು ಮನೆಯಲ್ಲಿದ್ದ ಹಣ ಹಾಗೂ ಚಿನ್ನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಕಾರುಣ್ಯ ರಾಮ್ ಗಂಭೀರ ಆರೋಪ ಮಾಡಿದ್ದಾರೆ.
ಈ ಸಂಬಂಧ ಕಾರುಣ್ಯ ರಾಮ್ ಅವರು ಬೆಂಗಳೂರಿನ ಆರ್.ಆರ್ ನಗರ ವ್ಯಾಪ್ತಿಯ ಸಿಸಿಬಿ ಪೊಲೀಸ್ ಠಾಣೆಯಲ್ಲಿ ಸಮೃದ್ಧಿ ರಾಮ್ ಸೇರಿದಂತೆ ಪ್ರತಿಭಾ, ಕಪಿಲ್, ಪ್ರಜ್ವಲ್, ರಕ್ಷಿತ್ ಮತ್ತು ಸಾಗರ್ ಎಂಬವರ ವಿರುದ್ಧ ದೂರು ದಾಖಲಿಸಿದ್ದಾರೆ.
ನಟಿ ಕಾರುಣ್ಯ ರಾಮ್ ನೀಡಿರುವ ದೂರಿನ ಪ್ರಕಾರ, ಸಮೃದ್ಧಿ ರಾಮ್ ಅವರು ಆನ್ಲೈನ್ ಬೆಟ್ಟಿಂಗ್ ಹಾಗೂ ಖಾಸಗಿ ವ್ಯವಹಾರಗಳಲ್ಲಿ ನಿರಂತರ ನಷ್ಟ ಅನುಭವಿಸಿದ್ದರು. ಇದರಿಂದಾಗಿ ಖಾಸಗಿ ವ್ಯಕ್ತಿಗಳಿಂದ ಹೆಚ್ಚಿನ ಬಡ್ಡಿದರದಲ್ಲಿ ಸಾಲ ಪಡೆದು, ಆ ಸಾಲದ ಒತ್ತಡ ತಾಳಲಾರದೆ ಮನೆಯಲ್ಲಿದ್ದ ಚಿನ್ನಾಭರಣಗಳು ಹಾಗೂ ನಗದು ಹಣವನ್ನು ಬಳಸಿ ಸಾಲ ತೀರಿಸಿದ್ದಾರೆ ಎನ್ನಲಾಗಿದೆ. ಈ ವಿಚಾರವನ್ನು ಪ್ರಶ್ನಿಸಿದಾಗ ಸಮೃದ್ಧಿ ರಾಮ್ ತಮ್ಮನ್ನೇ ಮನೆಯಿಂದ ಹೊರಗೆ ಹಾಕಿದ್ದಾರೆ ಎಂದು ಕಾರುಣ್ಯ ಆರೋಪಿಸಿದ್ದಾರೆ.
ಇಷ್ಟೇ ಅಲ್ಲದೆ, ಸಾಲದ ಹಣ ವಾಪಸು ಪಡೆಯಲು ಸಾಲಗಾರರು ಮನೆಗೆ ಬಂದು ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿರುವುದಾಗಿ ಕಾರುಣ್ಯ ರಾಮ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ತನ್ನ ಹಣವನ್ನು ಅನುಮತಿ ಇಲ್ಲದೇ ಬಳಸಿಕೊಂಡಿರುವ ಕುರಿತು ಪ್ರಶ್ನೆ ಮಾಡಿದ ಬಳಿಕ, ಸಮೃದ್ಧಿ ರಾಮ್ ವಾಟ್ಸಪ್ ಮೂಲಕ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ತಮ್ಮ ಫೋಟೋಗಳಿಗೆ ಕೆಟ್ಟದಾಗಿ ಕಾಮೆಂಟ್ ಮಾಡಿ ಸಾರ್ವಜನಿಕವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಮೊದಲು ಕೂಡ ಈ ಸಹೋದರಿಯರ ನಡುವಿನ ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಸಮೃದ್ಧಿ ರಾಮ್ ವಿರುದ್ಧ ಕಾರುಣ್ಯ ರಾಮ್ ಅವರು ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ವೇಳೆ, ಎನ್ಸಿಆರ್ (NCR) ದಾಖಲಾಗಿತ್ತು. ಆದರೆ ಪ್ರಕರಣ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ ಇದೀಗ ಸಿಸಿಬಿಯಲ್ಲಿ ಮತ್ತೊಮ್ಮೆ ದೂರು ದಾಖಲಿಸಲಾಗಿದೆ.
ಕಾರುಣ್ಯ ರಾಮ್ ಅವರು ಕನ್ನಡ ಚಿತ್ರರಂಗದಲ್ಲಿ ‘ಪೆಟ್ರೊಮ್ಯಾಕ್ಸ್’, ‘ವಜ್ರಕಾಯ’, ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’, ‘ಎರಡನೇ ಮದುವೆ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ ಗುರುತಿಸಿಕೊಂಡಿದ್ದಾರೆ. ಜೊತೆಗೆ ಅವರು ಬಿಗ್ ಬಾಸ್ ಕನ್ನಡ ಕಾರ್ಯಕ್ರಮದಲ್ಲೂ ಭಾಗವಹಿಸಿ ಜನಪ್ರಿಯರಾಗಿದ್ದರು. ಇನ್ನು ಅವರ ಸಹೋದರಿ ಸಮೃದ್ಧಿ ರಾಮ್ ಅವರು ‘ರಾಜಾ ರಾಣಿ’ ಹಾಗೂ ‘ಮನೆ ದೇವ್ರು’ ಸೇರಿದಂತೆ ಕೆಲವು ಜನಪ್ರಿಯ ಕನ್ನಡ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.





