ಕಾಂತಾರ ಸಿನಿಮಾಗೆ ಈಗಾಗ್ಲೇ ನಿರೀಕ್ಷೆ ಮೀರಿದ ಪ್ರಶಂಸೆ ಹಾಗೂ ಪ್ರಶಸ್ತಿಗಳು ಬಂದಾಗಿದೆ. ಆ ಲಿಸ್ಟ್ಗೆ ಇದೀಗ INCA ಅವಾರ್ಡ್ಸ್ ಕೂಡ ಸೇರಿಕೊಳ್ತಿವೆ. ಯೆಸ್.. ಇಂಡಿಯನ್ ನ್ಯಾಷನಲ್ ಸಿನಿ ಅಕಾಡೆಮಿ ನೀಡುವ ಈ ವರ್ಷದ ಪ್ರಶಸ್ತಿ ಪಟ್ಟಿಯಲ್ಲಿ ಕಾಂತಾರ ಒಂದಲ್ಲ ಎರಡಲ್ಲ ಬರೋಬ್ಬರಿ ನಾಲ್ಕು ಪ್ರಶಸ್ತಿಗಳನ್ನ ಮುಡಿಗೇರಿಸಿಕೊಂಡಿದೆ. ರಿಷಬ್ ಶೆಟ್ಟಿ ಜೊತೆ ಹೊಂಬಾಳೆ ಫಿಲಂಸ್ ಕೂಡ ಒಟ್ಟೊಟ್ಟಿಗೆ ಪ್ರಶಸ್ತಿ ಸ್ವೀಕರಿಸುತ್ತಿರೋದು ಹೈಲೈಟ್. ಇದರ ಇಂಟ್ರಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ..
- ಕಾಂತಾರಗೆ INCA ಪ್ರಶಸ್ತಿ ಗರಿ.. ಶೆಟ್ರ ಪೋಸ್ಟ್ನಲ್ಲಿ ಹೊಂಬಾಳೆ
- ಶೆಟ್ರು, ಹೊಂಬಾಳೆ & ರುಕ್ಕುಗೆ ಬರೋಬ್ಬರಿ 4 ಅವಾರ್ಡ್ಗಳು..!
- ಏಪ್ರಿಲ್ 15 ರಂದು ಮುಂಬೈನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ..!
- ಫಂಕ್ಷನ್ನಲ್ಲಿ ರಿಷಬ್-ವಿಜಯ್ ಕಿರಗಂದೂರು ಮುಖಾಮುಖಿ
ಕಾಂತಾರ.. ಕಳೆದ ವರ್ಷ ಭಾರತೀಯ ಚಿತ್ರರಂಗದಲ್ಲಿ ಬಹುದೊಡ್ಡ ಸಂಚಲನ ಮೂಡಿಸಿದ ಸಿನಿಮಾ. 125 ಕೋಟಿ ಬಜೆಟ್ನಲ್ಲಿ ತಯಾರಾದ ಈ ಸಿನಿಮಾ, ಬಾಕ್ಸ್ ಆಫೀಸ್ನಲ್ಲಿ ಬರೋಬ್ಬರಿ 900 ಕೋಟಿ ಗಳಿಸೋ ಮೂಲಕ ಎಲ್ಲರ ಹುಬ್ಬೇರಿಸಿತ್ತು. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಈ ಸಿನಿಮಾಗೆ ಹೊಂಬಾಳೆ ಫಿಲಂಸ್ ಬಂಡವಾಳ ಹೂಡಿತ್ತು. ದೈವಿಕ ಅಂಶಗಳನ್ನ ಒಳಗೊಂಡ ಈ ಸಿನಿಮಾ ಡಿವೈನ್ ಬ್ಲಾಕ್ ಬಸ್ಟರ್ ಹಿಟ್ ಆಗಿ ಎಲ್ಲರ ಕಣ್ಮನ ತಣಿಸಿತ್ತು.
ಈಗಾಗ್ಲೇ ಸಾಕಷ್ಟು ಪ್ರಶಂಸೆ, ಪ್ರತಿಕ್ರಿಯೆ ಹಾಗೂ ಪ್ರಶಸ್ತಿಗಳಿಗೆ ಭಾಜನ ಆಗಿರೋ ಕಾಂತಾರ ಚಾಪ್ಟರ್-1 ಸಿನಿಮಾ ಇದೀಗ ಪ್ರತಿಷ್ಠಿತ INCA ಅವಾರ್ಡ್ಸ್ ಕೂಡ ಮುಡಿಗೇರಿಸಿಕೊಂಡಿದೆ. ಅದೂ ಒಂದಲ್ಲ ಎರಡಲ್ಲ ಬರೋಬ್ಬರಿ ನಾಲ್ಕು. ಹೌದು.. 2025ನೇ ಸಾಲಿನ ಕನ್ನಡದ ಬೆಸ್ಟ್ ಆ್ಯಕ್ಟರ್ ಹಾಗೂ ಬೆಸ್ಟ್ ಡೈರೆಕ್ಟರ್ ಕ್ಯಾಟಗರಿಗಳಲ್ಲಿ ರಿಷಬ್ ಶೆಟ್ಟಿ ಎರಡೆರಡು ಪ್ರಶಸ್ತಿಗಳಿಗೆ ಆಯ್ಕೆ ಆಗಿದ್ರೆ, ಬೆಸ್ಟ್ ಸಿನಿಮಾ ಆಗಿ ಹೊಂಬಾಳೆ ಫಿಲಂಸ್ನ ವಿಜಯ್ ಕಿರಗಂದೂರು ಹಾಗೂ ಚೆಲುವೆ ಗೌಡ ಕೂಡ ಪ್ರಶಸ್ತಿ ಪಡೆಯಲಿದ್ದಾರೆ. ಇನ್ನೂ ಅತ್ಯುತ್ತಮ ನಟಿ ಪ್ರಶಸ್ತಿಯನ್ನ ರುಕ್ಮಿಣಿ ವಸಂತ್ ಪಾಲಾಗಿದೆ.
ಮುಂಬೈನಲ್ಲಿ ಇದೇ ಏಪ್ರಿಲ್ 15ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಅಂದು ಒಂದೇ ವೇದಿಕೆಯಲ್ಲಿ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಂಸ್ನ ವಿಜಯ್ ಕಿರಗಂದೂರು ಮುಖಾಮುಖಿ ಆಗಲಿದ್ದಾರೆ. ಅಂದಹಾಗೆ ಇದನ್ನ ಹೊಸದಾಗಿ ಶುರುವಾಗಿರೋ ಇಂಡಿಯನ್ ನ್ಯಾಷನಲ್ ಸಿನಿ ಅಕಾಡೆಮಿ ನೀಡ್ತಿರೋದು ಇಂಟರೆಸ್ಟಿಂಗ್. ಭಾರತೀಯ ಚಿತ್ರರಂಗದ ಸುಮಾರು 12 ಚಿತ್ರರಂಗಗಳ ಮಂದಿಗೆ ಪ್ರಶಸ್ತಿಗಳನ್ನ ನೀಡಲಾಗುತ್ತಿದ್ದು, 25 ಕ್ಯಾಟಗರಿಗಳಲ್ಲಿ 70ಕ್ಕೂ ಅಧಿಕ ಪ್ರಶಸ್ತಿಗಳನ್ನ ಪ್ರದಾನ ಮಾಡಲಾಗುತ್ತಿದೆ.
ರಿಷಬ್ ಶೆಟ್ಟಿ ಸದ್ಯ ಗ್ಲೋಬಲ್ ಮಾರ್ಕೆಟ್ನಲ್ಲಿ ಬಹುದೊಡ್ಡ ಹೆಸರು ಮಾಡಿದ್ದು, ಜೈ ಹನುಮಾನ್ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತ ನಾಯಕನಟಿ ರುಕ್ಮಿಣಿ ವಸಂತ್ ಕೂಡ ಜೂನಿಯರ್ ಎನ್ಟಿಆರ್ ಹಾಗೂ ಪ್ರಶಾಂತ್ ನೀಲ್ ಕಾಂಬೋನ ಡ್ರ್ಯಾಗನ್ ಹಾಗೂ ಯಶ್ ಟಾಕ್ಸಿಕ್ಗೆ ನಾಯಕಿಯಾಗಿ ಮಿಂಚುತ್ತಿದ್ದಾರೆ. INCA ಸಂಸ್ಥೆ ನಮ್ಮ ಕನ್ನಡ ಚಿತ್ರರಂಗವನ್ನು ಕೂಡ ಪರಿಗಣಿಸಿ, ಕಾಂತಾರ-1 ಚಿತ್ರಕ್ಕೇನೇ ನಾಲ್ಕು ಅವಾರ್ಡ್ಗಳನ್ನ ನೀಡ್ತಿರೋದು ಮತ್ತಷ್ಟು ಸದಭಿರುಚಿಯ ಸಿನಿಮಾಗಳನ್ನ ಮಾಡೋಕೆ ಉತ್ತೇಜನ ನೀಡಿದಂತಾಗಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





