ನಟಿ ಕಮ್ ರಾಜಕಾರಣಿ ಕಂಗನಾ ರಣಾವತ್ ಅಪಾರ ದೈವ ಭಕ್ತಳು. ಅಯೋಧ್ಯೆ ರಾಮಮಂದಿರ ಉದ್ಘಾಟನಾ ವೇಳೆ ಪೊರಕೆ ಹಿಡಿದು ಆಲಯದಲ್ಲಿ ಸೇವೆ ಕೂಡ ಮಾಡಿದ್ರು. ಇದೀಗ ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರೋ ಶಿವನ ಮೊರೆ ಹೋಗಿದ್ದಾರೆ ಬಾಲಿವುಡ್ ಕ್ವೀನ್.
ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಬಹುದೊಡ್ಡ ಆಸ್ತಿಕಳು. ಸನಾತನಿಯಾಗಿಯೇ ಗುರ್ತಿಸಿಕೊಂಡಿರೋ ಕಂಗನಾ ಒಂಥರಾ ಸೋಲೋ ಹೀರೋ. ಮಹಿಳಾ ಪ್ರಧಾನ ಚಿತ್ರಗಳು, ತನ್ನದೇ ಆದ ಧೋರಣೆಗಳ ಮೂಲಕ ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡಿರೋ ನಟಿ. ಈಕೆ ಸದ್ಯ ಸಂಸದೆಯೂ ಹೌದು. ಪಾರ್ಲಿಮೆಂಟ್ ಮೆಟ್ಟಿಲೇರಿರೋ ಈಕೆ, ರಾಜಕಾರಣ ಹಾಗೂ ಸಿನಿಮಾ ಎರಡನ್ನೂ ಸರಿದೂಗಿಸಿಕೊಂಡು ಹೋಗ್ತಿದ್ದಾರೆ.
ಅಯೋಧ್ಯೆ ರಾಮಮಂದಿರ ಉದ್ಘಾಟನಾ ಸಮಯದಲ್ಲಿ ಸಹ ಪೊರಕೆ ಹಿಡಿದು ಸೇವೆ ಸಲ್ಲಿಸಿದ್ದ ಕಂಗನಾ, ತಾನು ಎಂತಹ ದೈವ ಭಕ್ತಳು ಅನ್ನೋದನ್ನ ಜಗತ್ತಿಗೆ ತೋರಿದ್ದರು. ಇದೀಗ ಬೆಂಗಳೂರಿನ ಓಲ್ಡ್ ಏರ್ಪೋರ್ಟ್ ರೋಡ್ನಲ್ಲಿರೋ ಶಿವೋಹಂ ಶಿವ ಹಾಗೂ ವೈಷ್ಣೋದೇವಿ ಆಲಯಕ್ಕೆ ತೆರಳಿ ಭಕ್ತಿಯ ಪರಾಕಾಷ್ಟೆ ಮೆರೆದಿದ್ದಾರೆ. 65 ಅಡಿ ಎತ್ತರದ ಭವ್ಯ ಶಿವನ ಪ್ರತಿಮೆ ಮುಂದೆ ನಿಂತು ಪ್ರಾರ್ಥನೆ ಸಲ್ಲಿಸಿದ್ದಾರೆ.
ಕಂಗನಾ ಬೆಂಗಳೂರಿನಲ್ಲಿರೋ ಪ್ರಸಿದ್ಧ ಶಿವನ ದೇವಾಲಯಕ್ಕೆ ಭೇಟಿ ನೀಡಿರೋ ಫೋಟೋಸ್ ಸಖತ್ ವೈರಲ್ ಆಗ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ಕಂಗನಾ ಭಕ್ತಿಗೆ ಜೈಕಾರ ಹಾಕ್ತಿದ್ದಾರೆ ಜನ. ಪದ್ಮಶ್ರೀ ಪುರಸ್ಕೃತ ಕಂಗನಾ, ಸದ್ಯ ರಾಜಕಾರಣದ ಜೊತೆ ಸಿನಿಮಾ ಕೂಡ ಮರೆತಿಲ್ಲ. ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾವೊಂದರಲ್ಲಿ ನಟಿಸುತ್ತಿದ್ದು, ಸದ್ಯದಲ್ಲೇ ಅದ್ರ ಟೈಟಲ್ ರಿವೀಲ್ ಮಾಡಲಿದೆಯಂತೆ ಚಿತ್ರತಂಡ.