ಗುರುಸಾರ್ವಭೌಮ ಮಂತ್ರಾಲಯದ ಮಹಾ ಗುರುಗಳಾದ ಗುರು ರಾಯರ ಭಕ್ತರು ಸಾಕಷ್ಟು ಮಂದಿ ಇದ್ದಾರೆ. ನಟಸಾರ್ವಭೌಮ ಡಾ. ರಾಜ್ಕುಮಾರ್, ಅಪ್ಪು, ರಜನೀಕಾಂತ್, ವಿಷ್ಣುವರ್ಧನ್ ಆದಿಯಾಗಿ ನವರಸ ನಾಯಕ ಜಗ್ಗೇಶ್ ಕೂಡ ಗುರುರಾಯರ ಬಹುದೊಡ್ಡ ಭಕ್ತ. ಸದ್ಯ ಸ್ಯಾಂಡಲ್ವುಡ್ನಲ್ಲಿ ರಘು ಭಟ್ರಿಂದ ರಾಯರ ಹಾಡೊಂದು ತಯಾರಾಗ್ತಿದ್ದು, ರಾಯರೇ ನನ್ನುಸಿರು ಅಂದಿದ್ದಾರೆ ಜಗ್ಗೇಶ್.
ಮಂತ್ರಾಲಯ ಒಂಥರಾ ಪವಾಡ ಕ್ಷೇತ್ರ. ಯಾಕಂದ್ರೆ ಅಲ್ಲಿ ಪವಾಡ ಪುರುಷ, ಗುರುಸಾರ್ವಭೌಮ ನೆಲೆಸಿರೋ ತಾಣ. ನಿತ್ಯ ನಿರಂತರವಾಗಿ ಅವ್ರ ಬೃಂದಾವನಕ್ಕೆ ಪ್ರತಿ ದಿನ ಪೂಜೆ, ಪುನಸ್ಕಾರಗಳು ನಡೆಯುತ್ತಲೇ ಇರುತ್ತವೆ. ಗುರುರಾಯರಿಗೆ ಬಹುದೊಡ್ಡ ಭಕ್ತಗಣವಿದೆ. ಕೋಟ್ಯಂತರ ಮಂದಿ ಭಕ್ತರು ಮಂತ್ರಾಲಯಕ್ಕೆ ತೆರಳಿ ಗುರುರಾಯದ ಬೃಂದಾವನದ ದರ್ಶನ ಪಡೆಯುತ್ತಾರೆ. ಇನ್ನು ಚಿತ್ರರಂಗ ಕೂಡ ಅದ್ರಿಂದ ಹೊರತಾಗಿಲ್ಲ.

ಜಗ್ಗೇಶ್ ಲೈಫೇ ಪವಾಡ..ರಾಯರ ನೆನೆದ ನವರಸನಾಯಕ
TNIT ರಘು ಭಟ್ರಿಂದ ‘ರಾಯರ ದರ್ಶನ’ ಆಲ್ಬಮ್ ಗೀತೆ
ನಟಸಾರ್ವಭೌಮ ಡಾ. ರಾಜ್ಕುಮಾರ್, ರಾಜರತ್ನ ಪುನೀತ್ ರಾಜ್ಕುಮಾರ್, ಸೂಪರ್ ಸ್ಟಾರ್ ರಜನೀಕಾಂತ್, ಸಾಹಸಸಿಂಹ ಡಾ ವಿಷ್ಣುವರ್ಧನ್ ಸೇರಿದಂತೆ ಸಾಕಷ್ಟು ಮಂದಿ ಸ್ಟಾರ್ಗಳು ರಾಯರ ಭಕ್ತರು. ಅದಕ್ಕೆ ಒಂದಷ್ಟು ಸಿನಿಮಾಗಳು, ಹಾಡುಗಳು ಸಾಕ್ಷಿಯಾಗಿವೆ.

ಇದೀಗ TNIT ರಘು ಭಟ್ ಅವರು ಲಕ್ಷ್ಮೀ ಗಣೇಶ ಪ್ರೊಡಕ್ಷನ್ಸ್ ಜೊತೆಗೂಡಿ ರಾಯರ ದರ್ಶನ ಅನ್ನೋ ಹೊಚ್ಚ ಹೊಸ ಆಲ್ಬಮ್ ಸಾಂಗ್ ಮಾಡಲು ಮುಂದಾಗಿದ್ದಾರೆ. ಅದಕ್ಕೆ ಖ್ಯಾತ ಚಿತ್ರಸಾಹಿತಿ ನಾಗಾರ್ಜುನ್ ಶರ್ಮಾ ಸಾಹಿತ್ಯ ಪೋಣಿಸಲಿದ್ದು, ಸಿಆರ್ ಬಾಬಿ ಹಾಗೂ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸ್ತಿದ್ದಾರೆ. ಇದೇ ಡಿಸೆಂಬರ್ 23ರಿಂದ ಸುಮಾರು 7 ದಿನಗಳ ಕಾಲ ಮಂತ್ರಾಲಯದ ರಾಯರ ಮಠದಲ್ಲೇ ಈ ಹಾಡಿನ ಚಿತ್ರೀಕರಣ ನಡೆಯಲಿದ್ದು, ಸುಬುಧೇಂದ್ರ ತೀರ್ಥರು ಅದಕ್ಕೆ ಅನುಮತಿ ಕೂಡ ನೀಡಿದ್ದಾರಂತೆ. ಅದರಲ್ಲಿ ಸಾಕಷ್ಟು ಮಂದಿ ಕನ್ನಡದ ತಾರೆಯರು ಸಹ ಭಾಗಿಯಾಗಲಿದ್ದಾರೆ ಅನ್ನೋದು ವಿಶೇಷ.
ನಾಗಾರ್ಜುನ್ ಶರ್ಮಾ ಸಾಹಿತ್ಯ, ಅಜನೀಶ್-ಬಾಬಿ ಸಂಗೀತ
ಮಂತ್ರಾಲಯ ಮಠದಲ್ಲೇ ಶೂಟಿಂಗ್.. ಸೆಲೆಬ್ರಿಟಿಗಳೂ ಭಾಗಿ..!
ರಾಯರ ಕುರಿತು ಈಗಾಗ್ಲೇ ಸಾಕಷ್ಟು ಗೀತೆಗಳು ಬಂದಿದೆಯಾದರೂ, ಈವರೆಗೆ ಯಾರು ಹೇಳಿರದ ಹಾಗೂ ತೋರಿಸಿರದ ರಾಯರ ಕುರಿತಾದ ಕೆಲವು ವಿಷಯಗಳು ಈ ಆಲ್ಬಂ ಸಾಂಗ್ನಲ್ಲಿರಲ್ಲಿದೆಯಂತೆ. ಈ ಕುರಿತು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ನಟ ಜಗ್ಗೇಶ್, ಮಂತ್ರಾಲಯದ ಮಾಧ್ಯಮ ಪ್ರತಿನಿಧಿ ಶ್ರೀನಿಧಿ ಕರಣಂ, ರಘು ಭಟ್, ಸುಗುಣ ರಘು ಹಾಗು ಗೀತರಚನೆಕಾರ ನಾಗಾರ್ಜುನ ಶರ್ಮ ಉಪಸ್ಥಿತರಿದ್ದರು. “ರಾಯರರೇ ನನ್ನ ಉಸಿರು” . ಎಂದ ಜಗ್ಗೇಶ್ ರಾಯರನ್ನು ನೆನೆದು ಭಾವುಕರಾದರು.

ನಾನು ದೆಹಲಿಯಲ್ಲಿದ್ದೆ. ಶ್ರೀಗಳು ಫೋನ್ ಮಾಡಿ ಈ ಪತ್ರಿಕಾಗೋಷ್ಠಿಗೆ ಹೋಗಲು ಆದೇಶಿಸಿದ್ದರು. ರಾಯರ ಕೆಲಸ ಅಂದ್ಮೇಲೆ ಆಗಲ್ಲ ಎನ್ನುವ ಮಾತೇ ಇಲ್ಲ. ಯಾಕಂದ್ರೆ ನನ್ನುಸಿರೇ ರಾಯರು ಎಂದು ಭಾವುಕರಾಗಿ ಮಾತನಾಡಿದ ಜಗ್ಗೇಶ್, ತಮಗೆ ರಾಯರ ಮೇಲೆ ಭಕ್ತಿ ಬರಲು ಕಾರಣ ನಮ್ಮ ತಾಯಿ. ಅವರು 500 ರೂಪಾಯಿ ಕೊಟ್ಟು ನನ್ನನ್ನು ಮೊದಲ ಬಾರಿಗೆ ಮಂತ್ರಾಲಯಕ್ಕೆ ಕಳುಸಿದರು. ರಾಯರಿದ್ದಾರೆ ಎಂದು ಮನದಲ್ಲಿ ಬಿತ್ತಿದ್ದರು. ಆನಂತರ ತಮ್ಮ ಜೀವನದಲ್ಲಾಗಿರುವ ರಾಯರ ಕರುಣೆಯನ್ನು ಮನದಾಳದ ಮಾತುಗಳ ಮೂಲಕ ತೆರೆದಿಟ್ಟ ಜಗ್ಗೇಶ್, “ರಾಯರ ದರ್ಶನ” ಆಲ್ಬಂ ಸಾಂಗ್ ಗೆ ಶುಭ ಕೋರಿ, ಎಲ್ಲರೂ ರಘು ಭಟ್ ಅವರ ಕಾರ್ಯಕ್ಕೆ ಪ್ರೋತ್ಸಾಹ ನೀಡಿ ಎಂದರು.
ಒಟ್ಟಾರೆ ಸದ್ಯದಲ್ಲೇ ರಾಯರ ದರ್ಶನ ಆಲ್ಬಮ್ ಗೀತೆಯಿಂದ ಗುರುರಾಯರ ಮತ್ತಷ್ಟು ವಿಶೇಷತೆಗಳ ದರ್ಶನ ಭಕ್ತರಿಗೆ ಸಿಗಲಿದೆ.





