ಎಂಪುರಾನ್.. ಮಾರ್ಚ್ 27ರಂದು ವಿಶ್ವದಾದ್ಯಂತ ತೆರೆಕಂಡ ಮಲಯಾಳಂನ ಪ್ಯಾನ್ ಇಂಡಿಯಾ ಎಂಟರ್ ಟೈನರ್. ಪೃಥ್ವಿರಾಜ್ ಸುಕುಮಾರನ್ ನಟಿಸಿ, ನಿರ್ದೇಶಿಸಿರೋ ಎಂಪುರಾನ್ ಚಿತ್ರದಲ್ಲಿ ಸೂಪರ್ ಸ್ಟಾರ್ ಮೋಹನ್ ಲಾಲ್ ಲೀಡ್ ನಲ್ಲಿ ಬಣ್ಣ ಹಚ್ಚಿದ್ದರು. ಮಲಯಾಳಂ ಜೊತೆ ಹಿಂದಿ, ತೆಲುಗು, ತಮಿಳು ಹಾಗೂ ಕನ್ನಡದಲ್ಲೂ ರಿಲೀಸ್ ಮಾಡಿದ ಚಿತ್ರತಂಡ, ಅದಕ್ಕಾಗಿ ದೇಶಾದ್ಯಂತ ಭರ್ಜರಿ ಪ್ರಮೋಷನ್ಸ್ ಕೂಡ ಮಾಡಿತ್ತು. ಪ್ರೈವೇಟ್ ಜೆಟ್ ಮೂಲಕ ದೇಶದ ಪ್ರಮುಖ ನಗರಗಳಲ್ಲಿ ನಟಿ ಮಂಜು ವಾರಿಯರ್, ಟೊವಿನೋ ಥಾಮಸ್ ಸಮೇತ ಪೃಥ್ವಿರಾಜ್ ಹಾಗೂ ಮೋಹನ್ ಲಾಲ್ ಸಿನಿಮಾದ ಪ್ರಚಾರ ಕಾರ್ಯಗಳನ್ನ ದೊಡ್ಡ ಮಟ್ಟದಲ್ಲಿ ಕೈಗೊಂಡಿದ್ದರು.
ಆದ್ರೆ ಈ ಎಂಪುರಾನ್ ಸಿನಿಮಾನ ಸಲುವಾಗಿ ಮೋಹನ್ ಲಾಲ್ ಒಂದಲ್ಲ ಎರಡೆರಡು ಬಾರಿ ಜನರ ಬಳಿ ಕ್ಷಮೆ ಕೋರುವಂತಾಗಿದೆ. ಹೌದು.. ರಿಲೀಸ್ ಗೂ ಮುನ್ನ ಮಮ್ಮುಟ್ಟಿಗಾಗಿ ಶಬರಿಮಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದ ಕಾರಣಕ್ಕೆ ಅದು ಬಹಿರಂಗವಾಗಿ ಸೋಶಿಯಲ್ ಮೀಡಿಯಾದಲ್ಲಿ ಜನ ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಒಮ್ಮೆ ತಮಿಳುನಾಡಿನಲ್ಲಿ ಕ್ಷಮೆ ಕೇಳಿದ್ರು. ಇದೀಗ ಸಿನಿಮಾ ರಿಲೀಸ್ ಆದ ಬಳಿಕವೂ ಮಗದೊಮ್ಮೆ ಕ್ಷಮೆ ಕೋರುವ ಪರಿಸ್ಥಿತಿ ಬಂದಿದೆ. ಅದಕ್ಕೆ ಮೋಹನ್ ಲಾಲ್ ಕ್ಷಮೆ ಯಾಚಿಸಿದ್ದಾರೆ ಕೂಡ.
ಯೆಸ್.. ಎಂಪುರಾನ್ ಸಿನಿಮಾ ರಾಜಕಾರಣದ ಅತೀವ ಸೂಕ್ಷ್ಮ ವಿಚಾರಗಳನ್ನ ಕೆದಕುವ ಕಾರ್ಯ ಮಾಡಿದೆ. ಅದರಲ್ಲೂ ಗುಜರಾತ್ ನಲ್ಲಿ ನಡೆದಿದ್ದ ಐತಿಹಾಸಿಕ ಗೋಧ್ರಾ ಹತ್ಯಾಕಾಂಡ ವಿಚಾರದಲ್ಲಿ ಸಾಕಷ್ಟು ಎಡವಟ್ಟುಗಳನ್ನ ಮಾಡಿ ತೆರೆ ಮೇಲೆ ಬಿಂಬಿಸಿದೆ. ಇದಕ್ಕಾಗಿ ಚಿತ್ರತಂಡಕ್ಕೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಹಾಗೂ ವೀಕ್ಷಕರು ಬಿಸಿ ಮುಟ್ಟಿಸುವ ಕಾರ್ಯ ಮಾಡಿದ್ರು.
ಸಿನಿಮಾ ಮೇಲೆ ಅತೀವ ನಿರೀಕ್ಷೆ ಇಟ್ಕೊಂಡಿದ್ದ ಪ್ರೇಕ್ಷಕರಿಗೆ ಚಿತ್ರ ವೀಕ್ಷಿಸಿದ ಬಳಿಕ, ಸಾಕಷ್ಟು ವಿಷಯಗಳನ್ನ ಉದ್ದೇಶಪೂರ್ವಕವಾಗಿ ಮಾಡಿದಂತೆ ಅನಿಸಿದೆ. ಹಾಗಾಗಿ ಸಿನಿಮಾನ ನೋಡಲ್ಲ ಅಂತ ಒಂದು ಅಲೆ ಎದ್ದಿದೆ. ಅಲ್ಲದೆ, ಕಲೆಕ್ಷನ್ ಕೂಡ ಡ್ರಾಪ್ ಆಗಿದೆ. ನಿರೀಕ್ಷೆ ಹುಸಿ ಮಾಡಿದ ತಂಡದ ಮೇಲೆ ಚಿತ್ರಪ್ರೇಮಿಗಳು ಅಸಮಾಧಾನಗೊಂಡಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ಬಳಿಕ ಖುದ್ದು ಚಿತ್ರದ ನಾಯಕನಟ ಮೋಹನ್ ಲಾಲ್ ಪ್ರೇಕ್ಷಕರ ಬಳಿ ಕ್ಷಮೆ ಯಾಚಿಸಿದ್ದಾರೆ.
ಅಷ್ಟೇ ಅಲ್ಲ, ಎಂಪುರಾನ್ ಸಿನಿಮಾದಲ್ಲಿ ಸುಮಾರು 17 ಕಡೆ ಒಂದಷ್ಟು ದೃಶ್ಯಗಳನ್ನ ಕಟ್ ಮಾಡಿ, ಇದೇ ಏಪ್ರಿಲ್ 2ರಿಂದ ನ್ಯೂ ವರ್ಷನ್ ಸಿನಿಮಾನ ಥಿಯೇಟರ್ ನಲ್ಲಿ ಅಪ್ ಲೋಡ್ ಮಾಡಲಾಗುವುದು ಎಂದಿದ್ದಾರೆ. ಸಿನಿಮಾನ ಎಂಟರ್ ಟೈನ್ಮೆಂಟ್ ಆ್ಯಂಗಲ್ ನಲ್ಲಿ ನೋಡೋರಿಗೆ ಮ್ಯಾಜಿಕ್ ಗಳಿಂದ ಮಾಡಿದ್ರೆ ಸಾಕಾಗ್ತಿತ್ತು. ಆದ್ರೆ ಐತಿಹಾಸಿಕ ಘಟನೆಗಳನ್ನ ಇಟ್ಕೊಂಡು ಚಿತ್ರ ಕಟ್ಟುವಾಗ ಸತ್ಯಾಂಶಗಳನ್ನೇ ಪ್ರಸ್ತುತ ಪಡಿಸಬೇಕಾಗುತ್ತೆ. ಆ ವಿಷಯದಲ್ಲಿ ಟೀಂ ಎಂಪುರಾನ್ ಎಡವಿದೆ. ಸೋ.. ಆಗಿರೋ ತಪ್ಪನ್ನ ತಿದ್ದಿಕೊಳ್ಳೋಕೆ ಮುಂದಾಗಿದ್ದು, ಏಪ್ರಿಲ್ 2ರಿಂದ ಬದಲಾದ ಸಿನಿಮಾ ಕಾಣಸಿಗಲಿದೆ. ಅದನ್ನ ಜನ ಹೇಗೆ ಸ್ವೀಕರಿಸುತ್ತಾರೆ ಅನ್ನೋದು ನಿರೀಕ್ಷಿಸಬೇಕಿದೆ.