ದುನಿಯಾ ವಿಜಯ್ ಸಿನಿ ಕರಿಯರ್ಗೊಂದು ಮೈಲಿಗಲ್ಲು ಸಿನಿಮಾ ಕೊಟ್ಟ ಲ್ಯಾಂಡ್ಲಾರ್ಡ್ ಡೈರೆಕ್ಟರ್ ಜಡೇಶ್ಗೆ ವಿಜಯದ ಅಪ್ಪುಗೆ ಸಿಕ್ಕಿದೆ. ಅಷ್ಟೇ ಅಲ್ಲ.. ಸ್ವತಃ ಸಿಎಂ ಸಿದ್ದರಾಮಯ್ಯನವರೇ ಸಿನಿಮಾ ನೋಡ್ತೀನಿ. ಇಂತಹ ಚಿತ್ರಗಳ ಅವಶ್ಯಕತೆ ಸಮಾಜಕ್ಕಿದೆ ಅಂತ ಚಿತ್ರತಂಡವನ್ನ ಬೆನ್ನು ತಟ್ಟಿದ್ದಾರೆ.

ಸಿನಿಮಾ ಅಂದ್ರೆ ಮನರಂಜನೆ. ಆದ್ರೆ ಸಿನಿಮಾ ನಮ್ಮ ಸಮಾಜದ ಅಂಕು ಡೊಂಕುಗಳನ್ನ ತಿದ್ದುವ ಮಾಧ್ಯಮವೂ ಹೌದು. ನಟಸಾರ್ವಭೌಮ ಡಾ. ರಾಜ್ಕುಮಾರ್ ಕಾಲದಲ್ಲಿ ಸಾಮಾಜಿಕ ಕಳಕಳಿಯ ಚಿತ್ರಗಳಿಗೆ ಪಾರವೇ ಇರಲಿಲ್ಲ. ಆದ್ರೀಗ ಹೊಡಿ, ಬಡಿ, ಕಡಿ ಅನ್ನೋ ಬಗೆಯ ಕ್ರೌರ್ಯ ಹಾಗೂ ಹಿಂಸಾತ್ಮಕ ಚಿತ್ರಗಳದ್ದೇ ಅಬ್ಬರ, ಆಡಂಬರ. ಅಂತಹ ಚಿತ್ರಗಳ ನಡುವೆ ದುನಿಯಾ ವಿಜಯ್, ರಚಿತಾ ರಾಮ್, ರಾಜ್ ಬಿ ಶೆಟ್ಟಿ ಅವರ ಲ್ಯಾಂಡ್ಲಾರ್ಡ್ ಸಿನಿಮಾ ಬಹಳ ವಿಶಿಷ್ಠವಾಗಿ, ವಿಭಿನ್ನವಾಗಿ ಕಾಣ್ತಿದ್ದು, ಎಲ್ಲರ ಹುಬ್ಬೇರಿಸುತ್ತಿದೆ.
ಮೈಲಿಗಲ್ಲು ಚಿತ್ರ ಕೊಟ್ಟ ಡೈರೆಕ್ಟರ್ಗೆ ‘ವಿಜಯ’ದ ಅಪ್ಪುಗೆ
ಲ್ಯಾಂಡ್ಲಾರ್ಡ್ಗೆ CM ಬೆಂಬಲ.. ಟೀಂಗೆ ಆನೆ ಬಲ..!!
80ರ ದಶಕದಲ್ಲಿನ ಸಾಮಾಜಿಕ ಅಸಮಾನತೆ, ಶೋಷಣೆ, ಸಂವಿಧಾನ, ಕಾನೂನು ಕಟ್ಟಲೆಗಳ ಕುರಿತ ಸಿನಿಮಾ ಲ್ಯಾಂಡ್ಲಾರ್ಡ್. ಜಡೇಶ್ ನಿರ್ದೇಶನದ ಹಾಗೂ ಸಾರಥಿ ಪೀಲಂಸ್ ನಿರ್ಮಾಣದ ಈ ಚಿತ್ರ ನಿನ್ನೆಯಷ್ಟೇ ತೆರೆಕಂಡಿದ್ದು, ಎಲ್ಲೆಡೆ ಹೌಸ್ಫುಲ್ ಪ್ರದರ್ಶನದ ಜೊತೆ, ಒಳ್ಳೆಯ ಪ್ರಶಂಸೆ, ಪ್ರತಿಕ್ರಿಯೆಗಳನ್ನ ಪಡೆದುಕೊಳ್ತಿದೆ. ಸದಾ ಅಂಬೇಡ್ಕರ್ ಹಾಗೂ ಸಂವಿಧಾನದ ಮೌಲ್ಯಗಳ ಬಗ್ಗೆ ಅಪಾರ ಗೌರವ, ಅಭಿಮಾನ ಇಟ್ಕೊಂಡು, ಅವುಗಳ ಪಾಲನೆಯಲ್ಲಿ ಸಾಗ್ತಿರೋ ನಟ ದುನಿಯಾ ವಿಜಯ್ ಅವ್ರ ಸ್ಟಾರ್ ವ್ಯಾಲ್ಯೂ ಹೆಚ್ಚಿಸಿದೆ ಈ ಲ್ಯಾಂಡ್ಲಾರ್ಡ್. ಇಂತಹ ಮೈಲಿಗಲ್ಲು ಚಿತ್ರ ನೀಡಿದ ನಿರ್ದೇಶಕರಿಗೆ ವಿಜಯ್ ಅವರು ವಿಜಯದ ಪ್ರೀತಿಯ ಅಪ್ಪುಗೆ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರನ್ನ ಕೂಡ ಭೇಟಿ ಮಾಡಿರೋ ಚಿತ್ರತಂಡ, ಅವರನ್ನ ಲ್ಯಾಂಡ್ಲಾರ್ಡ್ ಸಿನಿಮಾ ನೋಡಲು ಪ್ರೀತಿಯ ಆಮಂತ್ರಣ ನೀಡಿದೆ. ಸದ್ಯದಲ್ಲೇ ಸಿನಿಮಾ ನೋಡೇ ನೋಡ್ತೀನಿ ಎಂದ ಸಿಎಂ ಸಿದ್ದು, ಇಂತಹ ಸಿನಿಮಾಗಳ ಅಗತ್ಯತೆ ಪ್ರಸ್ತುತ ಸಮಾಜಕ್ಕಿದೆ ಅಂತ ನಟ ದುನಿಯಾ ವಿಜಯ್ ಹಾಗೂ ಡೈರೆಕ್ಟರ್ ಜಡೇಶ್ ಕೆ ಹಂಪಿಯನ್ನ ಪ್ರಶಂಸಿಸಿದ್ದಾರೆ.
ಸಂವಿಧಾನದ ಮಹತ್ವ ಸಾರುವ ಹಳ್ಳಿ ಸೊಗಡಿದ ಸಿನಿಮಾ
ಕರ್ನಾಟಕದಲ್ಲಿ ಚಿತ್ರಕ್ಕೆ ಟ್ಯಾಕ್ಸ್ ಫ್ರೀ ಮಾಡುತ್ತಾ ಸರ್ಕಾರ..?
ಅಷ್ಟೇ ಅಲ್ಲ, ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಡಾ. ಹೆಚ್. ಸಿ ಮಹದೇವಪ್ಪ ಅವರನ್ನ ಕೂಡ ಭೇಟಿ ಆಗಿರೋ ದುನಿಯಾ ವಿಜಯ್, ಲ್ಯಾಂಡ್ಲಾರ್ಡ್ ಚಿತ್ರ ವೀಕ್ಷಣೆಗೆ ಆಹ್ವಾನ ನೀಡಿದ್ರು. ಈ ಸಿನಿಮಾ ಸಮಾಜದ ಕೈಗನ್ನಡಿ ಆಗಿದ್ದು, ಇಂತಹ ಪ್ರಯೋಗಾತ್ಮಕ ಚಿತ್ರಗಳು ಸಮಾಜ ಹಾಗೂ ವ್ಯವಸ್ಥೆಯ ಕಣ್ಣು ತೆರೆಸುವ ಕಾರ್ಯ ಮಾಡಲಿವೆ. ಹಾಗಾಗಿ ಇದಕ್ಕೆ ಕರ್ನಾಟಕದಲ್ಲಿ ಟ್ಯಾಕ್ಸ್ ಫ್ರೀ ಮಾಡುವ ವಿಚಾರ ಕೂಡ ಚರ್ಚೆ ಆಗ್ತಿದ್ದು, ಸದ್ಯದಲ್ಲೇ ಚಿತ್ರತಂಡಕ್ಕೆ ರಾಜ್ಯ ಸರ್ಕಾರ ಟ್ಯಾಕ್ಸ್ ಫ್ರೀ ಮಾಡಿದ್ರೆ, ಮತ್ತಷ್ಟು, ಮಗದಷ್ಟು ಜನರನ್ನ ತಲುಪುವಲ್ಲಿ ಯಶಸ್ವಿಯಾಗಲಿದೆ.





