ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
ಕನ್ನಡ ಸಿನಿಮಾದ ಇತಿಹಾಸದಲ್ಲಿ ಕೆಲ ಸಿನಿಮಾಗಳು ಕಾಲ ಬದಲಾದರೂ ಕ್ರೇಜ್ ಮಾತ್ರ ಕಡಿಮೆಯಾಗುವುದಿಲ್ಲ. ಅಂತಹ ಸಿನಿಮಾಗಳಲ್ಲಿ ಒಂದು ಸಾಹಸಸಿಂಹ ಡಾ. ವಿಷ್ಣುವರ್ಧನ್ ಅಭಿನಯದ ಕೋಟಿಗೊಬ್ಬ. ಸ್ಟೈಲ್, ಡೈಲಾಗ್ ಮತ್ತು ಮ್ಯಾನರಿಸಂ ಮೂಲಕ ಅಭಿಮಾನಿಗಳ ಹೃದಯ ಗೆದ್ದ ಈ ಸಿನಿಮಾ 25 ವರ್ಷಗಳನ್ನು ಪೂರೈಸಿ ಬೆಳ್ಳಿ ಮಹೋತ್ಸವದ ಸಂಭ್ರಮದಲ್ಲಿದೆ.
ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಗರ್ಜನೆಗೆ ಕಾಲವೇ ಸಾಕ್ಷಿ ಕನ್ನಡ ಸಿನಿರಂಗದಲ್ಲಿ ಸ್ಟೈಲ್, ಸ್ವಾಗ್ ಮತ್ತು ಮ್ಯಾನರಿಸಂಗೆ ಹೊಸ ಅರ್ಥ ಕೊಟ್ಟ ಸಿನಿಮಾ ಎಂದರೆ ಕೋಟಿಗೊಬ್ಬ. ತೆರೆಗೆ ಬಂದ ಕ್ಷಣದಿಂದಲೇ ಅಭಿಮಾನಿಗಳ ಹೃದಯದಲ್ಲಿ ಸಿಂಹಾಸನ ಗಿಟ್ಟಿಸಿಕೊಂಡ ಈ ಚಿತ್ರ ಈಗ 25 ವರ್ಷಗಳನ್ನು ಪೂರೈಸಿ ಬೆಳ್ಳಿ ಮಹೋತ್ಸವದ ಸಂಭ್ರಮದಲ್ಲಿದೆ. ಎರಡು ದಶಕಗಳಾದರೂ ಈ ಚಿತ್ರದ ಕ್ರೇಜ್ ಮಾತ್ರ ಇಂದಿಗೂ ಕಡಿಮೆಯಾಗಿಲ್ಲ ಅನ್ನೋದೇ ವಿಶೇಷ.
ವಿಷ್ಣುದಾದಾ ಕೋಟಿಗೊಬ್ಬನಿಗೆ ಬೆಳ್ಳಿ ಮಹೋತ್ಸವ.. ಯಾರೆಲ್ಲಾ ಬರ್ತಾರೆ..?!
ಟೌನ್ ಹಾಲ್ನಲ್ಲಿ ಮಾರ್ಚ್ 8ರಂದು ಕೋಟಿಗೊಬ್ಬ 25ನೇ ವರ್ಷಾಚರಣೆ
ಭಾರತಿ, ಗಣೇಶ್, ದೇವರಾಜ್, ಉಪೇಂದ್ರ ಸಾಕ್ಷಿಯಾಗಿ ಕೋಟಿಗೊಬ್ಬ ಸಂಭ್ರಮ.
ಆಕ್ಷನ್, ಸೆಂಟಿಮೆಂಟ್ ಮತ್ತು ಮಾಸ್ ಎಲಿಮೆಂಟ್ಸ್ಗಳ ಅದ್ಭುತ ಮಿಶ್ರಣವಾಗಿದ್ದ ಕೋಟಿಗೊಬ್ಬ ಬಿಡುಗಡೆಯಾದಾಗಲೇ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಸದ್ದು ಮಾಡಿತ್ತು. ಸಾಹಸಸಿಂಹ ವಿಷ್ಣುವರ್ಧನ್ ಅವರ ಸ್ಟೈಲಿಷ್ ಪಾತ್ರ, ಪವರ್ಫುಲ್ ಡೈಲಾಗ್ಗಳು ಹಾಗೂ ಕಥೆಯ ತಿರುವುಗಳು ಆ ಕಾಲದ ಪ್ರೇಕ್ಷಕರಿಗೆ ಹೊಸ ಅನುಭವ ನೀಡಿದ್ದವು. ಇದೇ ಕಾರಣಕ್ಕೆ ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಒಂದು ವಿಭಿನ್ನ ಬೆಂಚ್ ಮಾರ್ಕ್ ಮೂಡಿಸಿತು.
ಸಿನಿಮಾದ ಕಥೆ ಮಾತ್ರವಲ್ಲ, ವಿಷ್ಣುವರ್ಧನ್ ಅವರ ಪರದೆ ಮೇಲಿನ ಪ್ರೆಸೆನ್ಸ್ ಈ ಚಿತ್ರವನ್ನು ಮತ್ತೊಂದು ಮಟ್ಟಕ್ಕೆ ತೆಗೆದುಕೊಂಡಿತ್ತು. ಅವರ ಪ್ರತಿಯೊಂದು ಡೈಲಾಗ್, ಪ್ರತಿಯೊಂದು ಸ್ಟೆಪ್ ಅಭಿಮಾನಿಗಳಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಇಂದಿಗೂ ಟಿವಿಯಲ್ಲಿ ಈ ಸಿನಿಮಾ ಪ್ರಸಾರವಾದರೆ ಕುಟುಂಬ ಸಮೇತ ಕೂತು ನೋಡೋ ಕ್ರೇಜ್ ಮುಂದುವರಿದಿದೆ.
25 ವರ್ಷಗಳ ನಂತರವೂ ಕಡಿಮೆಯಾಗದ ಕೋಟಿಗೊಬ್ಬ ಕ್ರೇಜ್
ಬಾಕ್ಸ್ಆಫೀಸ್ನಲ್ಲಿ ಇತಿಹಾಸ ನಿರ್ಮಿಸಿದ ಕೋಟಿಗೊಬ್ಬ; 12 ಕೋಟಿ ಕಲೆಕ್ಷನ್
ಈ ಸೂಪರ್ ಹಿಟ್ ಸಿನಿಮಾವನ್ನು ಖ್ಯಾತ ನಿರ್ದೇಶಕ ನಾಗಣ್ಣ ನಿರ್ದೇಶಿಸಿದ್ದು, ಡಿ. ಕಮಲಾಕರ್ ನಿರ್ಮಾಣ ಮಾಡಿದ್ದಾರೆ. ತಮಿಳಿನ ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ಬಾಷಾ ಚಿತ್ರದ ಕಥೆಯಿಂದ ಪ್ರೇರಿತವಾಗಿ ಈ ಚಿತ್ರವನ್ನು ಕನ್ನಡದಲ್ಲಿ ರಿಮೇಕ್ ಮಾಡಲಾಗಿತ್ತು. 2001ರ ನವೆಂಬರ್ 16ರಂದು ಬಿಡುಗಡೆಯಾದ ಕೋಟಿಗೊಬ್ಬ 12ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿ 30ವಾರಗಳ ಪ್ರದರ್ಶನ ಕಂಡಿತ್ತು. ಸಿನಿಮಾದಲ್ಲಿ ವಿಷ್ಣುವರ್ಧನ್ ಜೊತೆ ಪ್ರಿಯಾಂಕಾ ಉಪೇಂದ್ರ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಜೊತೆಗೆ ಅವಿನಾಶ್, ದೇವರಾಜ್, ರಮೇಶ್ ಭಟ್, ಅಭಿಜಿತ್, ರಾಜೇಶ್ ಹಾಗೂ ಆಶಿಷ್ ವಿದ್ಯಾರ್ತಿ ಮುಂತಾದ ಪ್ರಮುಖ ನಟರು ತಮ್ಮ ಪಾತ್ರಗಳ ಮೂಲಕ ಸಿನಿಮಾಗೆ ಮತ್ತಷ್ಟು ಬಲ ನೀಡಿದ್ದರು.
ಈ ಅಪರೂಪದ ಸಾಧನೆಯನ್ನು ಆಚರಿಸಲು ಮಾರ್ಚ್ 8ರಂದು ಬೆಳಿಗ್ಗೆ 10 ಗಂಟೆಗೆ ಟೌನ್ ಹಾಲ್ನಲ್ಲಿ 25ನೇ ವರ್ಷದ ಬೆಳ್ಳಿ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ. ಪದ್ಮಶ್ರೀ ಡಾ. ಭಾರತಿ ವಿಷ್ಣುವರ್ಧನ್, ಗೋಲ್ಡನ್ ಸ್ಟಾರ್ ಗಣೇಶ್, ನಟ ದೇವರಾಜ್, ನಟ ಉಪೇಂದ್ರ ಹಾಗು ನಟಿ ಪ್ರಿಯಾಂಕಾ ಉಪೇಂದ್ರ ಜೊತೆಗೆ ಮಾಜಿ ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕನ್ನಡ ಸಿನಿಪ್ರೇಮಿಗಳಿಗಿದು ಒಂದು ವಿಶೇಷ ಕ್ಷಣ. ಸಾಹಸಸಿಂಹ ವಿಷ್ಣುವರ್ಧನ್ ಅವರ ನೆನಪುಗಳನ್ನು ಮತ್ತೆ ಜೀವಂತಗೊಳಿಸುವ ಈ ಸಂಭ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ. ಕೋಟಿಗೊಬ್ಬ ಕೇವಲ ಒಂದು ಸಿನಿಮಾ ಅಲ್ಲ, ಅದು ಕನ್ನಡ ಸಿನಿರಂಗದ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿರುವ ಒಂದು ಅಧ್ಯಾಯ.





