ಬೆಂಗಳೂರು : ಕನ್ನಡ ಚಿತ್ರರಂಗದ ಸ್ಟಾರ್ ನಟರಾದ ದರ್ಶನ್ ಮತ್ತು ಕಿಚ್ಚ ಸುದೀಪ್ ಅಭಿಮಾನಿಗಳ ನಡುವಿನ ‘ಫ್ಯಾನ್ಸ್ ವಾರ್’ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದೀಗ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲ ಸಂದೇಶಗಳು ಹಾಗೂ ಅವಾಚ್ಯ ಕಮೆಂಟ್ಗಳು ಬರಲು ಶುರುವಾಗಿದೆ. ಈ ಹಿನ್ನೆಲೆ ವಿಜಯಲಕ್ಷ್ಮಿ ಅವರು ಬೆಂಗಳೂರು ನಗರ ಪೊಲೀಸ್ ಕಮಿಷನರ್ರಿಗೆ ಅಧಿಕೃತ ದೂರು ಸಲ್ಲಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪಗಳು, ಅವಾಚ್ಯ ಭಾಷೆಯ ಬಳಕೆ, ಬೆದರಿಕೆ ಸಂದೇಶಗಳು ಹೆಚ್ಚಾಗುತ್ತಿವೆ.
ನಟ ಸುದೀಪ್ ಅವರು ಇತ್ತೀಚೆಗೆ ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ, “ನಾವು ಡಿಸೆಂಬರ್ 25ಕ್ಕೆ ಜೋರಾಗಿ ಬಾಗಿಲು ತಟ್ಟುತ್ತಿದ್ದೇವೆ. ಹೊರಗಡೆ ಒಂದು ಪಡೆ ಯುದ್ಧಕ್ಕೆ ಸಿದ್ಧವಾಗಿದೆ. ನಾವೂ ಸಿದ್ಧವಾಗಿದ್ದೇವೆ” ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಇದಕ್ಕೂ ಮುನ್ನ ಐದು ತಿಂಗಳ ಹಿಂದೆಯೇ ‘ಮಾರ್ಕ್’ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿತ್ತು. ಆದರೆ ಇತ್ತೀಚಿನ ಹೇಳಿಕೆಗಳ ನಂತರ ಸುದೀಪ್ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ಸಂಘರ್ಷ ತೀವ್ರಗೊಂಡಿದೆ. ಫೇಸ್ಬುಕ್, ಎಕ್ಸ್ (ಟ್ವಿಟರ್), ಇನ್ಸ್ಟಾಗ್ರಾಮ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ನಿಂದನೆ, ಅವಾಚ್ಯ ಪದಗಳ ಬಳಕೆ, ಬೆದರಿಕೆ ಕಾಮೆಂಟ್ಗಳು ನಿರಂತರವಾಗಿ ನಡೆಯುತ್ತಿವೆ.
ಈ ನಡುವೆ ‘ಡೆವಿಲ್’ ಚಿತ್ರದ ಪ್ರದರ್ಶನದ ಹಿನ್ನೆಲೆ ದಾವಣಗೆರೆಗೆ ಭೇಟಿ ನೀಡಿದ್ದ ವಿಜಯಲಕ್ಷ್ಮಿ, ಮಾಧ್ಯಮಗಳೊಂದಿಗೆ ಮಾತನಾಡಿ ಪರೋಕ್ಷವಾಗಿ ಸುದೀಪ್ಗೆ ಟಾಂಗ್ ನೀಡಿದ್ದರು ಎಂಬ ಚರ್ಚೆ ಶುರುವಾಗಿದೆ. “ದರ್ಶನ್ ಜೈಲಿನಲ್ಲಿ ಇದ್ದಾಗ ಕೆಲವರು ಅವರ ಬಗ್ಗೆ, ಅವರ ಅಭಿಮಾನಿಗಳ ಬಗ್ಗೆ ಹೊರಗಡೆ ಮಾತನಾಡುತ್ತಾರೆ. ಟಿವಿ ಸಂದರ್ಶನಗಳಲ್ಲಿ, ಸ್ಟೇಜ್ ಮೇಲೆ ಹೇಳಿಕೆ ಕೊಡುತ್ತಾರೆ. ಆದರೆ ದರ್ಶನ್ ಇದ್ದಾಗ ಅವರು ಎಲ್ಲಿದ್ದಾರೆ ಎನ್ನುವುದೇ ಗೊತ್ತಾಗುವುದಿಲ್ಲ” ಎಂದು ವಿಜಯಲಕ್ಷ್ಮಿ ಹೇಳಿದ್ದರು.
“ದರ್ಶನ್ ಇಂತಹ ಟೀಕೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅಭಿಮಾನಿಗಳೂ ಕೂಡ ಇಂತಹ ಮಾತುಗಳಿಗೆ ಬೇಜಾರು ಮಾಡಿಕೊಳ್ಳಬಾರದು” ಎಂದು ಅಭಿಮಾನಿಗಳಿಗೆ ವಿಜಯಲಕ್ಷ್ಮಿ ಸಂದೇಶ ನೀಡಿದ್ದರು. ಈ ಹೇಳಿಕೆಗಳ ಬಳಿಕ ಫ್ಯಾನ್ಸ್ ವಾರ್ ಇನ್ನಷ್ಟು ಹೆಚ್ಚಾಗಿದ್ದು, ಕೆಲ ದುಷ್ಕರ್ಮಿಗಳು ವಿಜಯಲಕ್ಷ್ಮಿಯನ್ನು ಗುರಿಯಾಗಿಸಿಕೊಂಡು ಅಶ್ಲೀಲ ಸಂದೇಶಗಳನ್ನು ಕಳುಹಿಸಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆ ವಿಜಯಲಕ್ಷ್ಮಿ ಅವರು ಪೊಲೀಸ್ ಕಮಿಷನರ್ಗೆ ದೂರು ನೀಡಿದ್ದಾರೆ.





