ಚಿಕ್ಕಣ್ಣ.. ಸ್ಯಾಂಡಲ್ವುಡ್ ಕಂಡ ಅತ್ಯದ್ಭುತ ಹಾಸ್ಯ ಕಲಾವಿದ. ಇಲ್ಲಿಯ ತನಕ ಒಂಟಿಯಾಗಿದ್ದ ಈ ‘ನೂರು ಸಿನಿಮಾಗಳ ಸರದಾರ’ ಇದೀಗ ಜಂಟಿಯಾಗೋ ಮೂಲಕ ನೂತನ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಚಂದನವನದ ತಾರೆಯರು, ರಾಜಕಾರಣಿಗಳ ಶುಭಾಶಯಗಳಿಂದ ಚಿಕ್ಕು ಜೀವನ ಪಾವನ ಆಗಿದೆ.
ಚಿಕ್ಕಣ್ಣ ಲೈಫ್ ಪಾವನ.. ಉಪಾಧ್ಯಕ್ಷ ಬಾಳಿಗೆ ಬಂದಾಯ್ತು ವೈಫ್
ಚಿಕ್ಕು weds ಪಾವನಾ.. ಉದ್ಯಮಿ ಕೈ ಹಿಡಿದ ಕಾಮಿಡಿ ಸ್ಟಾರ್..!
ಮೈಸೂರಿನ ಸ್ಪೆಕ್ಟ್ರಾ ಕನ್ವೆನ್ಷನ್ ಸೆಂಟರ್ನಲ್ಲಿ ಚಿಕ್ಕು ಕಲ್ಯಾಣೋತ್ಸವ
ಮಹದೇವಪುರ ಮಹಾಲಕ್ಷ್ಮೀ ಈಗ ಲಕ್ಷ್ಮೀಪುತ್ರನ ಬಾಳ ಸಂಗಾತಿ
ಅಂತೂ ಇಂತೂ ಸ್ಯಾಂಡಲ್ವುಡ್ ಉಪಾಧ್ಯಕ್ಷ ಚಿಕ್ಕಣ್ಣಗೆ ಕೊನೆಗೂ ಮದುವೆ ನಡೆದೇ ಹೋಯ್ತು. ಅದೆಷ್ಟು ಬಾರಿ ಅವರ ಹೆಸರು ಅದೆಷ್ಟೊಂದು ಮಂದಿ ಜೊತೆ ಥಳುಕು ಹಾಕಿಕೊಂಡಿತ್ತೋ ಗೊತ್ತಿಲ್ಲ. ಅವ್ರೊಟ್ಟಿಗೆ ಮದ್ವೆಯಂತೆ.. ಇವ್ರೊಟ್ಟಿಗೆ ಮದ್ವೆಯಂತೆ ಅಂತೆಲ್ಲಾ ಸೋಶಿಯಲ್ ಮೀಡಿಯಾ ತುಂಬಾ ಗುಲ್ಲಾಗಿತ್ತು. ಆದ್ರೆ ಗಾಸಿಪ್ ಆದವ್ರಿಗೆಲ್ಲಾ ಮದ್ವೆ ಆಗಿ ಹೋಯ್ತು. ಈಗ ಚಿಕ್ಕಣ್ಣಗೂ ಕಲ್ಯಾಣವಾಗಿದೆ. ಆ ಮೂಲಕ ಚಿಕ್ಕಣ್ಣ ಬಾಳು ಅಕ್ಷರಶಃ ಪಾವನ ಆಗಿದೆ.
ಎರಡು ದಿನಗಳಿಂದ ಅರಮನೆ ನಗರಿ ಮೈಸೂರಿನ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್ನಲ್ಲಿ ನಡೆದ ಅದ್ಧೂರಿ, ಅರ್ಥಪೂರ್ಣ ಹಾಗೂ ಅವಿಸ್ಮರಣೀಯ ಕಲ್ಯಾಣೋತ್ಸವದಲ್ಲಿ ಉದ್ಯಮಿ ಪಾವನಾ ಕೈ ಹಿಡಿದಿದ್ದಾರೆ ನಟ ಚಿಕ್ಕಣ್ಣ. ಮಹದೇವಪುರದ ಮಹಾಲಕ್ಷ್ಮೀ ಈಗ ಲಕ್ಷ್ಮೀಪುತ್ರನ ಬಾಳ ಸಂಗಾತಿ ಆಗೋ ಮೂಲಕ ಒಂಟಿ ಲೈಫ್ಗೆ ಗುಡ್ ಬೈ ಹೇಳಿದ್ದಾರೆ ಕನ್ನಡದ ಅದ್ಭುತ ನಟ ಚಿಕ್ಕಣ್ಣ.
ಆಗಸ್ಟ್ 29ರಂದು ಅದ್ಧೂರಿ ಆರತಕ್ಷತೆ.. ಆ-30ಕ್ಕೆ ಮುಹೂರ್ತ
ಹಳದಿ, ಮೆಹಂದಿ & ಬಳೆ ಶಾಸ್ತ್ರಗಳ ಜೊತೆ ಸಂಗೀತ್ ಜೋರು
ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್ ಚಿಕ್ಕಣ್ಣ ಹಾಗೂ ಉದ್ಯಮಿ ಪಾವನಾ ಗೌಡ ಅವರ ಕಲ್ಯಾಣೋತ್ಸವ ಮೈಸೂರಿನಲ್ಲಿ ಎರಡು ದಿನಗಳ ಕಾಲ ನಡೆದಿದ್ದು, ವಕ್ಕಲಿಗರ ಸಂಪ್ರದಾಯದಂತೆ ಎಲ್ಲಾ ಶಾಸ್ತ್ರೋಕ್ತವಾಗಿಯೇ ನೆರವೇರಿತು. ಆಗಸ್ಟ್ 29ರ ಶನಿವಾರ ಸಂಜೆ ಆರತಕ್ಷತಾ ಮಹೋತ್ಸವ ಹಾಗೂ ಆಗಸ್ಟ್ 30 ಭಾನುವಾರದ ಬೆಳಗ್ಗೆ ಶುಭ ಮುಹೂರ್ತದಲ್ಲಿ ಮಾಂಗಲ್ಯ ಧಾರಣೆ ನಡೆಯಿತು.
ಅದಕ್ಕೂ ಮುನ್ನ ನಟ ಚಿಕ್ಕಣ್ಣ ಹಾಗೂ ಪಾವನಾ ಗೌಡ ಅವರ ಹಳದಿ, ಮೆಹಂದಿ, ಬಳೆ ಶಾಸ್ತ್ರಗಳು ಕೂಡ ಕಲರ್ಫುಲ್ ಆಗಿ ನಡೆದದ್ದು ವಿಶೇಷ. ಅದರಲ್ಲಿ ಬರೀ ಕುಟುಂಬಸ್ಥರು, ಬಂಧು ಬಳಗ ಅಷ್ಟೇ ಅಲ್ಲದೆ, ಚಿಕ್ಕಣ್ಣ-ಪಾವನಾ ಆಪ್ತ ಗೆಳೆಯ, ಗೆಳತಿಯರು, ಚಿತ್ರರಂಗದ ಮಂದಿ ಕೂಡ ಭಾಗಿಯಾಗಿದ್ದು ಮತ್ತೊಂದು ವಿಶೇಷ. ಚಿಕ್ಕಣ್ಣ ಪಂಜೆ, ಸೂಟ್ ಸೇರಿದಂತೆ ಸಾಂಪ್ರದಾಯಿಕ ಹಾಗೂ ವೆಸ್ಟ್ರನ್ ಸ್ಟೈಲ್ ಎರಡರಲ್ಲೂ ಮಿಂಚಿದ್ರು. ಇನ್ನೂ ಪಾವನಾ ಅಂತೂ ಮಹಾಲಕ್ಷ್ಮೀಯಂತೆ ಫಳ ಫಳ ಹೊಳೆಯುತ್ತಿದ್ದರು. ಯಾವ ನಟಿಗೂ ಕಮ್ಮಿ ಇಲ್ಲದಷ್ಟು ಅಂದ ಚೆಂದದ ರೂಪವತಿ ಪಾವನಾ ಅನ್ನೋದಕ್ಕೆ ಈ ದೃಶ್ಯಗಳೇ ಸಾಕ್ಷಿ.
ಚಿಕ್ಕಣ್ಣ ಮದ್ವೆಗೆ ತಾರಾ ಮೆರುಗು.. ರಂಗೇರಿದ ಕಲ್ಯಾಣ ಮಂಟಪ
ಸ್ಟಾರ್ಸ್ ಜೊತೆ ರಾಜಕಾರಣಿಗಳು ವಿಶ್.. ಚಿಕ್ಕು ದಿಲ್ಖುಷ್..!!
ಹಣ, ಆಸ್ತಿ ಜೊತೆ ಚಿತ್ರರಂಗದ ಅಭಿಮಾನ ಸಂಪಾದಿಸಿದ ಚಿಕ್ಕಣ್ಣ
ಚಂದನವನದ ತಾರೆಯರ ಜೊತೆ ಅಭಿಮಾನಿಗಳೂ ಶುಭಾಶಯ
2011ರ ಕಿರಾತಕ ಚಿತ್ರದಿಂದ ಬಣ್ಣದ ಲೋಕಕ್ಕೆ ಕಾಲಿಟ್ಟ ಚಿಕ್ಕಣ್ಣ.. ಇಲ್ಲಿಯ ತನಕ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೀರೋ ಆಗಿಯೂ ಕಮಾಲ್ ಮಾಡ್ತಿದ್ದಾರೆ. ಬಹುತೇಕ ಎಲ್ಲಾ ಸ್ಟಾರ್ಸ್ ಜೊತೆ ತೆರೆ ಹಂಚಿಕೊಂಡಿರೋ ಚಿಕ್ಕಣ್ಣ, ಹಣ, ಆಸ್ತಿ, ಅಂತಸ್ತು ಜೊತೆಗೆ ಚಿತ್ರರಂಗದ ಅಭಿಮಾನ ಕೂಡ ಸಂಪಾದಿಸಿದ್ದಾರೆ. ಅಷ್ಟೇ ಅಲ್ಲ.. ಚಿಕ್ಕಣ್ಣನಿಗೆ ಅವ್ರದ್ದೇ ಆದ ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ. ಸದ್ಯ ಚಿಕ್ಕು ಮದ್ವೆಗೆ ನಮ್ಮ ಸ್ಯಾಂಡಲ್ವುಡ್ನ ಹಿರಿಯ ಹಾಗೂ ಕಿರಿಯ ಕಲಾವಿದರುಗಳ ಜೊತೆ ಅಭಿಮಾನಿಗಳೂ ಸಹ ಪ್ರೀತಿಯಿಂದ ಬಂದು ವಿಶ್ ಮಾಡಿ ಹೋಗಿರೋದು ಖುಷಿಯ ವಿಚಾರ.
ನಟ ಡಾಲಿ ಧನಂಜಯ, ಧನ್ವೀರ್ ಗೌಡ, ಅಭಿಷೇಕ್ ಅಂಬರೀಶ್, ಕೋಮಲ್, ಹಿರಿಯನಟಿ ತಾರಾ, ಗಾಯಕ ವಿಜಯ್ ಪ್ರಕಾಶ್, ರಂಗಾಯಣ ರಘು, ಅದಿತಿ ಪ್ರಭುದೇವ, ಮೇಘನಾ ಗಾಂವ್ಕರ್, ಪುಷ್ಪ ಫೇಮ್ ತೆಲುಗು ಆ್ಯಕ್ಟರ್ ಸುನಿಲ್, ಮಂಡ್ಯ ರಮೇಶ್, ಪ್ರಥಮ್, ಅನುಷಾ ರೈ, ವಂದಿತಾ ಗೌಡ, ಮುಖ್ಯಮಂತ್ರಿ ಚಂದ್ರು, ಅರುಣ್ ಸಾಗರ್, ರೋರಿಂಗ್ ಸ್ಟಾರ್ ಶ್ರೀಮುರಳಿ, ಕುರಿ ಪ್ರತಾಪ್, ಹಂಸಲೇಖ, ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ, ಧರ್ಮಣ್ಣ.. ಹೀಗೆ ಸಾಕಷ್ಟು ಮಂದಿ ಚಿತ್ರರಂಗದ ತಾರೆಯರು ಚಿಕ್ಕಣ್ಣ ಕಲ್ಯಾಣಕ್ಕೆ ತಾರಾ ಮೆರುಗು ನೀಡಿದ್ರು. ತುಂಬು ಹೃದಯದಿಂದ ನೂತನ ದಂಪತಿಗೆ ಹರಿಸಿ, ಹಾರೈಸಿದ್ರು. ವಿಶೇಷ ಗಿಫ್ಟ್ಗಳನ್ನ ಕೂಡ ನೀಡಿದ್ರು.
ಬರೀ ಚಿತ್ರರಂಗದವರಷ್ಟೇ ಅಲ್ಲ.. ರಾಜಕಾರಣಿಗಳು ಕೂಡ ಬಂದು ಚಿಕ್ಕಣ್ಣನ ಹೊಸ ಬಾಳಿಗೆ ಶುಭ ಕೋರಿದ್ರು. ಪಿಸಿ ಮೋಹನ್, ನಲಪಾಡ್, ವಿ ಸೋಮಣ್ಣ, ಜಿಟಿ ದೇವೇಗೌಡ ಸೇರಿದಂತೆ ಸಾಕಷ್ಟು ಮಂದಿ ರಾಜಕೀಯ ಗಣ್ಯರು ವಧು-ವರರನ್ನ ಆಶೀರ್ವದಿಸಿದ್ರು.
ಗಾರೆ ಕೆಲಸ ಮಾಡ್ತಿದ್ದ ಚಿಕ್ಕಣ್ಣ ತಾರೆಯಾಗಿ ರೋಲ್ ಮಾಡೆಲ್
ಕಾಮಿಡಿ ಶೋಗಳ ಕಲಾವಿದ.. ಸದ್ಯ 100 ಸಿನಿಮಾಗಳ ಸರದಾರ
ಚಿಕ್ಕಣ್ಣ ಟ್ಯಾಲೆಂಟ್ ನೋಡಿ ಕಿರಾತಕ ಚಿತ್ರದಲ್ಲಿ ಯಶ್ ಆಫರ್
ಉಪಾಧ್ಯಕ್ಷ ಆಯ್ತು.. ಜೋಡೆತ್ತು, ಲಕ್ಷ್ಮೀಪುತ್ರ ರಿಲೀಸ್ಗೆ ಸಜ್ಜು
ಮೈಸೂರಿನ ಸಮೀಪದಲ್ಲಿರೋ ಬಲ್ಲಹಳ್ಳಿಯ ಮೂಲದ ಚಿಕ್ಕಣ್ಣ ರಾತ್ರೋ ರಾತ್ರಿ ಸ್ಟಾರ್ ಆದವ್ರಲ್ಲ. ಅದರ ಹಿಂದೆ ಸಾಕಷ್ಟು ಶ್ರಮವಿದೆ. ಒಂದು ಕಾಲದಲ್ಲಿ ಗಾರೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಚಿಕ್ಕು, ಇಂದು ದೊಡ್ಡ ಸ್ಟಾರ್. ಆಲ್ಮೋಸ್ಟ್ ಆಲ್ ಎಲ್ಲಾ ಸ್ಟಾರ್ಸ್ ಜೊತೆ ತೆರೆ ಹಂಚಿಕೊಂಡಿರೋ ಅದ್ಭುತ ಕಲಾವಿದ. ಹೆಚ್ಚೂ ಕಡಿಮೆ 100 ಸಿನಿಮಾಗಳಲ್ಲಿ ನಟಿಸಿರೋ ಚಿಕ್ಕಣ್ಣನನ್ನ ಅವ್ರಲ್ಲಿರೋ ಟ್ಯಾಲೆಂಟ್ ಗುರ್ತಿಸಿ, ಸಿನಿಮಾರಂಗಕ್ಕೆ ಕರೆತಂದಿದ್ದೇ ರಾಕಿಂಗ್ ಸ್ಟಾರ್ ಯಶ್ ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ.
ಮೈಸೂರಲ್ಲಿ ಸ್ಟ್ಯಾಂಡಪ್ ಕಾಮಿಡಿ ಶೋಗಳನ್ನ ಮಾಡ್ತಾ, ಉದಯ ಟಿವಿ, ಕಾಮಿಡಿ ಕಿಲಾಡಿಗಳು ಮೂಲಕ ಕನ್ನಡಿಗರ ದಿಲ್ ದೋಚಿದ ಚಿಕ್ಕಣ್ಣನಲ್ಲಿರೋ ಪ್ರತಿಭೆ ರಾಕಿಭಾಯ್ ಯಶ್ ಕಣ್ಣಿಗೆ ಬಿತ್ತು. ಕೂಡಲೇ ಅವ್ರನ್ನ ತಮ್ಮ ಕಿರಾತಕ ಚಿತ್ರಕ್ಕಾಗಿ ಕರೆತಂದರು. ಇಂದಿಗೂ ಆ ಸಿನಿಮಾ.. ಆ ಕಾಂಬೋ ಎವರ್ಗ್ರೀನ್. ಅಂದಿನಿಂದ ಚಿಕ್ಕು ಹಿಂದಿರುಗಿ ನೋಡಿದ ನಿದರ್ಶನವೇ ಇಲ್ಲ.
ಅಷ್ಟೇ ಅಲ್ಲ.. ಚಿಕ್ಕಣ್ಣ ಈಗ ಸ್ಯಾಂಡಲ್ವುಡ್ನ ಹೀರೋ ಕೂಡ ಹೌದು. ಉಪಾಧ್ಯಕ್ಷ ಅನ್ನೋ ಚೊಚ್ಚಲ ಚಿತ್ರದಲ್ಲೇ ಬ್ಲಾಕ್ ಬಸ್ಟರ್ ಹೀರೋ ಅನಿಸಿಕೊಂಡರು. ಇದೀಗ ಜೋಡೆತ್ತು, ಲಕ್ಷ್ಮೀಪುತ್ರ ಅನ್ನೋ ಎರಡೆರಡು ಚಿತ್ರಗಳಲ್ಲಿ ನಾಯಕನಟರಾಗಿ ಬಣ್ಣ ಹಚ್ಚಿದ್ದು, ಎರಡೂ ಚಿತ್ರ ಬಿಡುಗಡೆಗೆ ತಯಾರಾಗ್ತಿವೆ. ಇದೀಗ ಚಿಕ್ಕು ಬಾಳಿಗೆ ರಿಯಲ್ ಹೀರೋಯಿನ್ ಕೂಡ ಬಂದಿದ್ದು, ಪಾವನಾ ಎಂಟ್ರಿಯಿಂದ ಚಿಕ್ಕಣ್ಣನ ಪರ್ಸನಲ್ & ಪ್ರೊಫೆಷನಲ್ ಲೈಫ್ ಮತ್ತಷ್ಟು ಮಗದಷ್ಟು ಕಲರ್ಫುಲ್ ಆಗಲಿದೆ.





