ನವದೆಹಲಿ: ಪ್ರತಿ ತಿಂಗಳ ಆರಂಭದಂತೆ, ಮೇ 1ರಿಂದ ದೇಶದ ಹಣಕಾಸು ವ್ಯವಸ್ಥೆಯಲ್ಲಿ ಹಲವಾರು ಮಹತ್ವದ ಬದಲಾವಣೆಗಳು ಜಾರಿಗೆ ಬರಲಿವೆ. ಸಾಮಾನ್ಯ ಜನರ ದೈನಂದಿನ ವೆಚ್ಚ, ಉಳಿತಾಯ ಮತ್ತು ಬ್ಯಾಂಕಿಂಗ್ ವ್ಯವಹಾರಗಳ ಮೇಲೆ ಈ ಬದಲಾವಣೆಗಳು ನೇರ ಪರಿಣಾಮ ಬೀರಲಿವೆ.
1. ಎಲ್ಪಿಜಿ ನಿಯಮಗಳಲ್ಲಿ ಬಿಗಿ: ಇನ್ನು ಮುಂದೆ ಎಲ್ಪಿಜಿ ಸಿಲಿಂಡರ್ ಬುಕಿಂಗ್ಗೆ ನಿಯಮ ಕಠಿಣವಾಗಿದೆ. ನಗರಗಳಲ್ಲಿ 20 ದಿನಗಳು ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ 45 ದಿನಗಳ ಅವಧಿ ಮುಗಿದ ನಂತರವೇ ಮರು ಬುಕಿಂಗ್ ಸಾಧ್ಯ. ಸಿಲಿಂಡರ್ ಪಡೆಯಲು ಕೇವಲ ರಶೀದಿ ಸಾಕಾಗದು. ನೋಂದಾಯಿತ ಮೊಬೈಲ್ಗೆ ಬರುವ ಒಟಿಪಿ ಕಡ್ಡಾಯ.
ಉಜ್ವಲ ಯೋಜನೆಯಡಿ ಸಿಲಿಂಡರ್ ಪಡೆಯುವವರು ಬಯೋಮೆಟ್ರಿಕ್ ದೃಢೀಕರಣ ಮಾಡಿಸಬೇಕು. ಮನೆಯಲ್ಲಿ ಪೈಪ್ ಗ್ಯಾಸ್ (PNG) ಇದ್ದರೆ ಹೊಸ ಎಲ್ಪಿಜಿ ಸಂಪರ್ಕ ಸಿಗುವುದಿಲ್ಲ, ಬದಲಿಗೆ ಅವರು ಕಡ್ಡಾಯವಾಗಿ ಪಿಎನ್ಜಿಗೆ ಮಾರ್ಪಡಬೇಕಾಗುತ್ತದೆ. ಮಾಸಿಕ ದರ ಪರಿಷ್ಕರಣೆಯಂತೆ ಎಲ್ಪಿಜಿ ದರ ತುಟ್ಟಿಯಾಗುವ ಸಾಧ್ಯತೆಯೂ ಇದೆ.
2. ಎಟಿಎಂ ವಹಿವಾಟು ಶುಲ್ಕ ಏರಿಕೆ: ಬ್ಯಾಂಕ್ಗಳು ತಿಂಗಳಿಗೆ ನೀಡುವ ಉಚಿತ ಎಟಿಎಂ ವಹಿವಾಟುಗಳ ಮಿತಿ ತಗ್ಗಿಸಲು ಅಥವಾ ಮಿತಿ ಮೀರಿದ ಪ್ರತಿ ವಹಿವಾಟಿಗೆ ₹21ರ ಬದಲು ₹23 ಶುಲ್ಕ ವಿಧಿಸಲು ಯೋಜಿಸಿವೆ. ಇದು ಸಣ್ಣ ಪಟ್ಟಣಗಳ ಗ್ರಾಹಕರಿಗೆ ಹೆಚ್ಚಿನ ಹೊರೆಯಾಗಲಿದೆ.
3. ಯುಪಿಐ ಪಾವತಿಯಲ್ಲಿ ಹೊಸ ಭದ್ರತೆ: ಎನ್ಪಿಸಿಐ ಸುರಕ್ಷತೆಗಾಗಿ ಹೊಸ ಫ್ರಾಡ್ ಮ್ಯಾನೇಜ್ಮೆಂಟ್ ಸಿಸ್ಟಮ್ ಜಾರಿಗೆ ತರುತ್ತಿದೆ. ₹2,000 ಮೇಲ್ಪಟ್ಟ ವಹಿವಾಟಿಗೆ ಕೆಲವು ಆ್ಯಪ್ಗಳಲ್ಲಿ ಸಣ್ಣ ಶುಲ್ಕ ಅನ್ವಯವಾಗಬಹುದು. ಫೋನ್ ಬದಲಾಯಿಸಿದರೆ ಯುಪಿಐ ಸಕ್ರಿಯಗೊಳಿಸಲು ಹೆಚ್ಚುವರಿ ಭದ್ರತಾ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ.
4. ಕ್ರೆಡಿಟ್ ಕಾರ್ಡ್ ಬಿಲ್ಲಿಂಗ್ ಸೈಕಲ್ ಹಾಗೂ ದಂಡ: ಆರ್ಬಿಐ ನಿಯಮದಂತೆ, ಗ್ರಾಹಕರು ತಮ್ಮ ಇಚ್ಛೆಯಂತೆ ಬಿಲ್ಲಿಂಗ್ ಸೈಕಲ್ ಅನ್ನು ಒಮ್ಮೆ ಬದಲಾಯಿಸಿಕೊಳ್ಳಬಹುದು. ಆದರೆ ಪಾವತಿ ವಿಳಂಬವಾದರೆ, ಲೇಟ್ ಪೇಮೆಂಟ್ ಶುಲ್ಕವನ್ನು 15-20% ರಷ್ಟು ಬ್ಯಾಂಕ್ಗಳು ಹೆಚ್ಚಿಸಲಿವೆ. ಇದು ಕ್ರೆಡಿಟ್ ಸ್ಕೋರ್ ಮೇಲೂ ಪರಿಣಾಮ ಬೀರುತ್ತದೆ.
5. ಇಂಧನ ಬೆಲೆ ಸ್ಥಿರತೆ ಮತ್ತು ಏರಿಕೆ ಸಾಧ್ಯತೆ: ಚುನಾವಣೆ ಬಳಿಕ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗುವ ವದಂತಿಗಳಿವೆ. ಸರ್ಕಾರಿ ಕಂಪನಿಗಳು ಸದ್ಯಕ್ಕೆ ಸ್ಥಿರತೆ ಕಾಯ್ದುಕೊಂಡರೂ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಬ್ಯಾರೆಲ್ಗೆ $110 ದಾಟಿರುವುದರಿಂದ, ಮೇ ತಿಂಗಳಲ್ಲಿ ಸಣ್ಣ ಪ್ರಮಾಣದ ದೈನಂದಿನ ದರ ವ್ಯತ್ಯಾಸ ಶುರುವಾಗಬಹುದು.
6. ವಿಮಾ ಪ್ರೀಮಿಯಂ ದರ ಏರಿಕೆ: ಹೊಸ ಹಣಕಾಸು ವರ್ಷದಲ್ಲಿ ವಿಮಾ ಕಂಪನಿಗಳಿಗೆ ದರ ಪರಿಷ್ಕರಿಸಲು ಐಆರ್ಡಿಎಐ ಅನುಮತಿ ನೀಡಿದೆ. ಥರ್ಡ್ ಪಾರ್ಟಿ (ಮೋಟಾರ್) ಮತ್ತು ಟರ್ಮ್ ಇನ್ಶೂರೆನ್ಸ್ ಪ್ರೀಮಿಯಂಗಳು ಶೇ. 5-10 ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.
7. ಉಳಿತಾಯ ಖಾತೆ ಬಡ್ಡಿ & ಮಿನಿಮಮ್ ಬ್ಯಾಲೆನ್ಸ್: ಆ್ಯಕ್ಸಿಸ್, ಎಚ್ಡಿಎಫ್ ಸೇರಿದಂತೆ ಖಾಸಗಿ ಬ್ಯಾಂಕ್ಗಳು ಕನಿಷ್ಠ ಮೊತ್ತದ ಮಿತಿ ಮತ್ತು ಬಡ್ಡಿ ದರ ಮರುಹೊಂದಿಸುತ್ತಿವೆ. ಹೆಚ್ಚು ಹಣ ಉಳಿಸುವವರಿಗೆ ಸ್ವಲ್ಪ ಲಾಭವಾದರೆ, ಕನಿಷ್ಠ ಮೊತ್ತ ಕಾಯ್ದುಕೊಳ್ಳದವರಿಗೆ ದಂಡ ಹೆಚ್ಚಾಗಲಿದೆ.
8. ಕಡ್ಡಾಯ ಕೆವೈಸಿ: ಸೆಬಿ ನಿಯಮದಂತೆ, ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಿರುವ ಕೆವೈಸಿ ಮೇ 1ರೊಳಗೆ ಪೂರ್ಣಗೊಳಿಸದಿದ್ದರೆ ಮ್ಯೂಚುವಲ್ ಫಂಡ್ನ ಎಸ್ಐಪಿ ಕಂತು ಕಟ್ ಆಗುವುದಿಲ್ಲ; ಹಣ ಹಿಂಪಡೆಯಲೂ ಸಾಧ್ಯವಿಲ್ಲ.
9. ಆದಾಯ ತೆರಿಗೆ ಸುಲಭ ಫೈಲಿಂಗ್: ಹೊಸ ಇ-ಫೈಲಿಂಗ್ ಪೋರ್ಟಲ್ನಲ್ಲಿ ತೆರಿಗೆ ವಿನಾಯಿತಿ ಪಡೆಯಲು ಹೂಡಿಕೆ ದಾಖಲೆಗಳನ್ನು ಅಪ್ಲೋಡ್ ಮಾಡುವ ಸೌಲಭ್ಯ ಸಿಗಲಿದೆ. ಇದರಿಂದ ರಿಫಂಡ್ ಪ್ರಕ್ರಿಯೆ ವೇಗವಾಗಲಿದೆ.
10. ಡಿಜಿಟಲ್ ಲೋನ್ ವಂಚನೆ ತಡೆಗೆ ಹೆಜ್ಜೆ: ಆ್ಯಪ್ಗಳ ಮೂಲಕ ಸಾಲ ನೀಡುವಾಗ ಗ್ರಾಹಕರಿಗೆ ಕೀ ಫ್ಯಾಕ್ಟ್ ಸ್ಟೇಟ್ಮೆಂಟ್ (ಕೆಎಫ್ಎಸ್) ನೀಡುವುದು ಆರ್ಬಿಐ ಕಡ್ಡಾಯಗೊಳಿಸಿದೆ. ಇದರಲ್ಲಿ ಅಸಲು, ಬಡ್ಡಿ, ಗುಪ್ತ ಶುಲ್ಕಗಳ ಸಂಪೂರ್ಣ ಮಾಹಿತಿ ಇರಲಿದೆ. ಇದರಿಂದ ಸಾಲಗಾರರು ವಂಚನೆಗೆ ಒಳಗಾಗದೆ ತಪ್ಪಿಸಬಹುದು.





