ಶ್ರೀನಗರ/ಉರಿ, ಮಾರ್ಚ್ 15: ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್ (Uri Sector) ನಲ್ಲಿ ಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಪಾಕಿಸ್ತಾನಿ ಭಯೋತ್ಪಾದಕನೊಬ್ಬನನ್ನು ಹತ್ಯೆ ಮಾಡಲಾಗಿದೆ. ಗಡಿಯಲ್ಲಿ ಒಳನುಸುಳುವಿಕೆ ಪ್ರಯತ್ನದ ಕುರಿತು ಪೊಲೀಸರಿಗೆ ದೊರಕಿದ ಖಚಿತ ಗುಪ್ತಚರ ಮಾಹಿತಿಯ ಆಧಾರದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಡಿಭಾಗದಲ್ಲಿ ಒಳನುಸುಳಲು ಪ್ರಯತ್ನಿಸಿದ ಈ ಉಗ್ರನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದು, ಸ್ಥಳದಿಂದ ಹಲವು ಶಸ್ತ್ರಾಸ್ತ್ರಗಳು ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಭದ್ರತಾ ಸಂಸ್ಥೆಗಳಿಗೆ ದೊರೆತ ನಿಖರ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಈ ಕಾರ್ಯಾಚರಣೆ ನಡೆಸಲಾಗಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರಿಂದ ಒಳನುಸುಳುವಿಕೆ ಯತ್ನದ ಬಗ್ಗೆ ವಿಶೇಷ ಮಾಹಿತಿ ಲಭಿಸಿದ್ದ ಹಿನ್ನೆಲೆಯಲ್ಲಿ ಭಾರತೀಯ ಸೇನೆ ತಕ್ಷಣವೇ ಎಚ್ಚರಗೊಂಡು ಕಾರ್ಯಾಚರಣೆಯನ್ನು ಆರಂಭಿಸಿತು. ಮಾರ್ಚ್ 14 ಮತ್ತು 15ರ ಮಧ್ಯರಾತ್ರಿ ಉರಿ ಸೆಕ್ಟರ್ನ ಬುಚಾರ್ ಪ್ರದೇಶದಲ್ಲಿ ಈ ಜಂಟಿ ಕಾರ್ಯಾಚರಣೆ ಆರಂಭಗೊಂಡಿತು ಎಂದು ಸೇನೆ ತಿಳಿಸಿದೆ.
ಗುಪ್ತಚರ ಮಾಹಿತಿಯ ಪ್ರಕಾರ ಕೆಲ ಉಗ್ರರು ಗಡಿಯನ್ನು ದಾಟಿ ಭಾರತದೊಳಗೆ ಪ್ರವೇಶಿಸಲು ಯತ್ನಿಸುತ್ತಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಸೇನೆ ಹಾಗೂ ಪೊಲೀಸರು ಆ ಪ್ರದೇಶದಲ್ಲಿ ಹೊಂಚುಹಾಕಿದ್ದರು. ಕಾರ್ಯಾಚರಣೆಯ ವೇಳೆ ಸೈನಿಕರು ಪೊದೆಯೊಂದರ ಬಳಿ ಅನುಮಾನಾಸ್ಪದ ಚಲನವಲನವನ್ನು ಗಮನಿಸಿದರು.
ಈ ವೇಳೆ ಭದ್ರತಾ ಪಡೆಗಳು ತಮ್ಮ ಹೊಂಚುದಾಳಿ ಸ್ಥಾನವನ್ನು ಮರುಹೊಂದಿಸಿ ಶಂಕಿತನನ್ನು ನಿಲ್ಲಿಸಲು ಹಾಗೂ ಪ್ರಶ್ನಿಸಲು ಪ್ರಯತ್ನಿಸಿದರು. ಆದರೆ ಆ ವ್ಯಕ್ತಿ ತಕ್ಷಣವೇ ಭದ್ರತಾ ಪಡೆಗಳ ಮೇಲೆ ವಿವೇಚನಾರಹಿತವಾಗಿ ಗುಂಡು ಹಾರಿಸಲು ಪ್ರಾರಂಭಿಸಿದನು. ಇದರಿಂದ ಪರಿಸ್ಥಿತಿ ತೀವ್ರಗೊಂಡಿದ್ದು, ಬಳಿಕ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಪಾಕಿಸ್ತಾನಿ ಭಯೋತ್ಪಾದಕನನ್ನು ಸೇನೆ ಹೊಡೆದುರುಳಿಸಿದೆ.
ಎನ್ಕೌಂಟರ್ ಬಳಿಕ ಸ್ಥಳವನ್ನು ಸಂಪೂರ್ಣವಾಗಿ ಪರಿಶೀಲಿಸಿದ ಭದ್ರತಾ ಪಡೆಗಳು ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿವೆ. ಘಟನಾ ಸ್ಥಳದಿಂದ ಒಂದು ಎಕೆ ರೈಫಲ್, ಪಿಸ್ತೂಲ್ಗಳು ಹಾಗೂ ಹೆಚ್ಚಿನ ಪ್ರಮಾಣದ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





