ಬೆಂಗಳೂರು: ಒಂದು ರೂಪಾಯಿಗೆ ಒಂದು ಲೀಟರ್ ಹಾಲು ನೀಡುವ ಆಫರ್ ಘೋಷಿಸಿರುವ ಫ್ಲಿಪ್ಕಾರ್ಟ್ (Flipkart) ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಾಂಪಿಟೇಷನ್ ಕಮಿಷನ್ ಆಫ್ ಇಂಡಿಯಾ(Competition Commission of India)ಗೆ ದೂರು ನೀಡಲಾಗಿದೆ ಎಂದು ಡಿ.ಕೆ.ಸುರೇಶ್ ತಿಳಿಸಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇ-ಮೇಲ್ ಮೂಲಕ ಪತ್ರ ಬರೆಯಲಾಗುವುದು ಎಂದು ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಡಿ.ಕೆ.ಸುರೇಶ್, ಫ್ಲಿಪ್ಕಾರ್ಟ್ ಸಂಸ್ಥೆಯ ಈ ಕ್ರಮವನ್ನು ತೀವ್ರವಾಗಿ ಖಂಡಿಸಿದರು. “ಹಣ ಮಾಡುವ ಭರದಲ್ಲಿ ಫ್ಲಿಪ್ಕಾರ್ಟ್ ಸಂಸ್ಥೆ ಒಂದು ರೂಪಾಯಿಗೆ ಒಂದು ಲೀಟರ್ ಹಾಲು ನೀಡಲು ಮುಂದಾಗಿದೆ. ಇದು ರೈತ ಸಮುದಾಯವನ್ನು ಧ್ವಂಸ ಮಾಡುವಂತಹ ಕೃತ್ಯವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಇಡೀ ದೇಶದಾದ್ಯಂತ ದಂಗೆ ಮಾಡಬೇಕಾದ ಪರಿಸ್ಥಿತಿ ಉಂಟಾಗಲಿದೆ” ಎಂದು ಎಚ್ಚರಿಸಿದರು.
ಸ್ಪರ್ಧಾ ಆಯೋಗಕ್ಕೆ ದೂರು
ಡಿ.ಕೆ.ಸುರೇಶ್ ಅವರು ಕಾಂಪಿಟೇಷನ್ ಕಮಿಷನ್ ಆಫ್ ಇಂಡಿಯಾ (CCI) ದೆಹಲಿ ಕಚೇರಿಗೆ ಸೆಕ್ಷನ್ 19/1 ಎ ಅಡಿಯಲ್ಲಿ ದೂರು ಸಲ್ಲಿಸುವುದಾಗಿ ತಿಳಿಸಿದರು. “ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ನಡೆಸುತ್ತಿರುವ ಈ ಸ್ಪರ್ಧೆಯಿಂದ ರೈತರಿಗೆ ಹೊಡೆತ ಬೀಳುತ್ತದೆ. ಇದಕ್ಕಾಗಿ ಸುಮಾರು 2 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಸಾರ್ವಜನಿಕರ ಶೇರಿನ ಹಣವನ್ನು ಬಳಸಿ ಹೀಗೆ ದುರ್ಬಳಕೆ ಮಾಡಿಕೊಳ್ಳುವುದು ಸೂಕ್ತವಲ್ಲ” ಎಂದರು.
ಪ್ರಧಾನಿಗೆ ಪತ್ರ
ಇದೇ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇ-ಮೇಲ್ ಮೂಲಕ ಪತ್ರ ಬರೆದು ಮನವಿ ಸಲ್ಲಿಸುವುದಾಗಿ ಡಿ.ಕೆ.ಸುರೇಶ್ ಹೇಳಿದರು. “ಸ್ವಾತಂತ್ರ್ಯ ಪೂರ್ವದಿಂದಲೂ ಇರುವ ಹಾಲು ಒಕ್ಕೂಟ ಸಂಸ್ಥೆಗಳನ್ನು ನಾಶ ಮಾಡುವ ಪ್ರಕ್ರಿಯೆ ಇದಾಗಿದೆ. ಎಂಎನ್ ಸಿಗಳು ರೈತರ ಹಿತವನ್ನು ಹಾಳು ಮಾಡುವ ಕೆಲಸ ಮಾಡುತ್ತಿವೆ” ಎಂದು ಆರೋಪಿಸಿದರು.
ಫ್ಲಿಪ್ಕಾರ್ಟ್ ಸಂಸ್ಥೆಗೆ ಡಿ.ಕೆ.ಸುರೇಶ್ ಪ್ರಶ್ನೆಗಳನ್ನು ಮುಂದಿಟ್ಟಿದ್ದು, “ಕಡಿಮೆ ದರಕ್ಕೆ ಎಷ್ಟು ದಿನ ಹಾಲು ನೀಡುತ್ತಾರೆ ಎಂದು ಜಾಹಿರಾತಿನಲ್ಲಿ ತಿಳಿಸಬೇಕು. ರೈತರಿಗೆ ನಾವು 38 ರಿಂದ 40 ರೂಪಾಯಿ ಪಾವತಿ ಮಾಡುತ್ತಿದ್ದೇವೆ. ಇವರು ಒಂದು ರೂಪಾಯಿಗೆ ಕೊಡಲು ಹೇಗೆ ಸಾಧ್ಯ? ಯಾರಿಂದ ಖರೀದಿ ಮಾಡುತ್ತಿದ್ದಾರೆ? ಎಲ್ಲಿಂದ ಹಾಲು ಬರುತ್ತಿದೆ? ಎಂಬುದನ್ನು ತಿಳಿಸಬೇಕು” ಎಂದು ಆಗ್ರಹಿಸಿದರು.
ಹಾಲಿನ ಗುಣಮಟ್ಟ ಪರಿಶೀಲನೆ
ಫ್ಲಿಪ್ಕಾರ್ಟ್ ಮಾರಾಟ ಮಾಡುತ್ತಿರುವ ಹಾಲಿನ ಗುಣಮಟ್ಟ ಪರಿಶೀಲಿಸಲು ಸ್ಯಾಂಪಲ್ ತರಿಸಿ ಲ್ಯಾಬ್ನಲ್ಲಿ ಪರೀಕ್ಷೆ ನಡೆಸುವುದಾಗಿ ಡಿ.ಕೆ.ಸುರೇಶ್ ತಿಳಿಸಿದರು. “ಅವರು ಹಾಲಿನ ಪೌಡರ್ ಬೆರೆಸುತ್ತಿದ್ದಾರಾ ಎಂಬುದನ್ನು ಪರಿಶೀಲಿಸಲು ಸ್ಯಾಂಪಲ್ ತರಿಸುತ್ತಿದ್ದೇನೆ. ಲ್ಯಾಬ್ನಲ್ಲಿ ಪರಿಶೀಲನೆ ಮಾಡಲು ಸೂಚಿಸಿದ್ದೇನೆ” ಎಂದರು.





