ತುಮಕೂರು: ಕೇತುಗ್ರಸ್ತ ಚಂದ್ರಗ್ರಹಣದ ಹಿನ್ನಲೆಯಲ್ಲಿ ತುಮಕೂರು ತಾಲ್ಲೂಕಿನ ಐತಿಹಾಸಿಕ ದೇವರಾಯನದುರ್ಗದ ಶ್ರೀ ಭೋಗಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದ ಮುಖ್ಯ ದ್ವಾರವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಜಾತ್ರಾ ಮಹೋತ್ಸವದ ಸಂಭ್ರಮದ ನಡುವೆಯೇ ಗ್ರಹಣದ ಗೋಚರಿಸುವುದರಿಂದ ದೇವಸ್ಥಾನ ಆಡಳಿತ ಮಂಡಳಿ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ.
ದೇವರಾಯನದುರ್ಗದ ಗುಡ್ಡದ ಮೇಲಿರುವ ಶ್ರೀ ಭೋಗಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯಕ್ಕೆ ಜಾತ್ರೆ ಸಂದರ್ಭಗಳಲ್ಲಿ ಸಾವಿರಾರು ಭಕ್ತರು ಆಗಮಿಸುತ್ತಾರೆ. ಈ ಬಾರಿ ಕೂಡ ಜಾತ್ರಾ ಮಹೋತ್ಸವದ ಅಂಗವಾಗಿ ಅದ್ದೂರಿಯಾಗಿ ರಥೋತ್ಸವ ನೆರವೇರಿತು.
ಆದರೆ, ಇಂದು ಕೇತುಗ್ರಸ್ತ ಚಂದ್ರಗ್ರಹಣ ಇರುವ ಹಿನ್ನೆಲೆ ರಥೋತ್ಸವದ ಬಳಿಕ ದೇವಾಲಯವನ್ನು ಬಂದ್ ಮಾಡುವ ನಿರ್ಧಾರ ಕೈಗೊಳ್ಳಲಾಯಿತು. ಗ್ರಹಣದ ಸಮಯದಲ್ಲಿ ದೇವಾಲಯದ ಒಳಭಾಗದ ಮೇಲೆ ಯಾವುದೇ ಪ್ರಭಾವ ಬೀಳದಂತೆ ಸಂಪ್ರದಾಯಬದ್ಧವಾಗಿ ದರ್ಬೆ ಇಟ್ಟು ದ್ವಾರಗಳನ್ನು ಮುಚ್ಚಲಾಗಿದೆ. ಹಿಂದು ಸಂಪ್ರದಾಯದ ಪ್ರಕಾರ ಗ್ರಹಣ ಕಾಲದಲ್ಲಿ ದೇವಾಲಯಗಳನ್ನು ಮುಚ್ಚುವುದು, ನೈವೇದ್ಯ-ಪೂಜೆಗಳನ್ನು ನಿಲ್ಲಿಸುವುದು ಸಾಮಾನ್ಯ ಆಚರಣೆ.
ಗ್ರಹಣ ಆರಂಭವಾಗುವ ಕೆಲವೇ ಕ್ಷಣಗಳ ಮುನ್ನ ಭಕ್ತರಿಗೆ ದರ್ಶನವನ್ನು ನಿಲ್ಲಿಸಿ, ದೇವಾಲಯದ ದ್ವಾರಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಯಿತು. ಜಾತ್ರೆ ಹಿನ್ನಲೆಯಲ್ಲಿ ದೂರದ ಊರುಗಳಿಂದ ಬಂದಿದ್ದ ಭಕ್ತರು ಕೆಲಕಾಲ ನಿರಾಸೆಯನ್ನೂ ವ್ಯಕ್ತಪಡಿಸಿದರು. ಆಡಳಿತ ಮಂಡಳಿ ಭಕ್ತರಿಗೆ ಗ್ರಹಣ ಮುಗಿದ ಬಳಿಕ ಮತ್ತೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಸ್ಪಷ್ಟಪಡಿಸಿದೆ.
ಗ್ರಹಣ ಮುಗಿದ ನಂತರ ವಿಶೇಷ ಶುದ್ಧೀಕರಣ ಮಾಡಲಾಗುತ್ತದೆ. ದೇವಾಲಯದ ಆವರಣ, ಗರ್ಭಗುಡಿ ಹಾಗೂ ದೇವರ ಮೂರ್ತಿಗಳಿಗೆ ತೀರ್ಥ ಸ್ನಾನ ಮತ್ತು ಪುನಃ ಪೂಜೆ ನೆರವೇರಿಸಲಾಗುತ್ತದೆ. ಈ ಶುದ್ಧೀಕರಣ ಪ್ರಕ್ರಿಯೆ ರಾತ್ರಿ 8:30ಕ್ಕೆ ಪೂರ್ಣಗೊಳ್ಳಲಿದ್ದು, ಬಳಿಕ ಭಕ್ತಾದಿಗಳಿಗೆ ಮತ್ತೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.




