ಶಿವಮೊಗ್ಗದ ಊರುಗಡೂರಿನಲ್ಲಿ ಅಪ್ರಾಪ್ತ ಬಾಲಕ ಸಂಕೇತ್ ಕೊಲೆ ಪ್ರಕರಣದ ಆಕ್ರೋಶ ಇನ್ನಷ್ಟು ತೀವ್ರಗೊಂಡಿದೆ. ಮರಣೋತ್ತರ ಪರೀಕ್ಷೆ ಮುಗಿದ ನಂತರ ಮೃತದೇಹವನ್ನು ಮನೆಯ ಕ್ರಾಸ್ ವರೆಗೆ ಮೆರವಣಿಗೆಯ ಮೂಲಕ ತರಲಾಯಿತು. ಆದರೆ ಊರುಗಡೂರಿನ ಮುಖ್ಯ ರಸ್ತೆಯಲ್ಲೇ ಮೃತದೇಹವನ್ನು ಇಟ್ಟು ನೂರಾರು ಜನರು ರಸ್ತೆ ತಡೆದು ಭರ್ಜರಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು “ಬೇಕೇ ಬೇಕು ನ್ಯಾಯ ಬೇಕು”, “ಬರಲೇಬೇಕು, ಬರಲೇಬೇಕು” ಎಂದು ಘೋಷಣೆ ಕೂಗಿದರು. ರಾಷ್ಟ್ರಭಕ್ತ ಬಳಗದ ಮುಖಂಡ ಕೆ.ಎಸ್. ಈಶ್ವರಪ್ಪ ಅವರು ಸ್ಥಳಕ್ಕೆ ಆಗಮಿಸಬೇಕು ಎಂದು ಒತ್ತಾಯಿಸಿದರು. ಜಿಲ್ಲಾಧಿಕಾರಿಗಳು ಪರಿಹಾರ ನೀಡಬೇಕು ಎಂಬ ಘೋಷಣೆಗಳೂ ಕೇಳಿ ಬಂದವು. ಊರುಗಡೂರಿನ ಮುಖ್ಯ ರಸ್ತೆಯಲ್ಲಿ ಶವವನ್ನು ಇಟ್ಟು ನಡೆದ ಈ ಪ್ರತಿಭಟನೆಯಿಂದ ಜಿಲ್ಲೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಸಂಕೇತ್ ಅವರು SSLC ವಿಶೇಷ ತರಗತಿ ಮುಗಿಸಿ ಮನೆಗೆ ಬರುತ್ತಿದ್ದಾಗ ಶಾಲಾ ಡ್ರಾಪ್ಔಟ್ ಬಾಲಕರು ಸಣ್ಣ ಜಗಳದ ಕಾರಣದಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಆದರೆ ನ್ಯಾಯಕ್ಕಾಗಿ ಆಗ್ರಹಿಸುತ್ತಿರುವ ಸ್ಥಳೀಯರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.
ರಾಜ್ಯ ಸರ್ಕಾರವು ಈಗಾಗಲೇ ಮೃತನ ಕುಟುಂಬಕ್ಕೆ ₹15 ಲಕ್ಷ ಪರಿಹಾರ ಘೋಷಿಸಿದೆ, ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ₹10 ಲಕ್ಷ ಶಿಕ್ಷಣ ಇಲಾಖೆಯಿಂದ ₹5 ಲಕ್ಷ ಜಿಲ್ಲಾಧಿಕಾರಿ ಅವರು ಇದನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಪೊಲೀಸರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು, ಜಿಲ್ಲೆಯಲ್ಲಿ ಬಂದೋಬಸ್ತ್ ಹೆಚ್ಚಿಸಲಾಗಿದೆ.
ಈ ಘಟನೆಯು ಯುವಕರಲ್ಲಿ ಜಗಳ, ಹಿಂಸಾಚಾರದ ವಿರುದ್ಧ ಜಾಗೃತಿ ಮೂಡಿಸಿದೆ. ಸ್ಥಳೀಯರು ನ್ಯಾಯಕ್ಕಾಗಿ ಧ್ವನಿ ಎತ್ತುತ್ತಿದ್ದಾರೆ.




