ತುಮಕೂರು: ಮಧ್ಯಾಹ್ನದ ಬಿಸಿಯೂಟದ ಸಮಯದಲ್ಲಿ ಶಿಕ್ಷಕರ ನಿರ್ಲಕ್ಷ್ಯದಿಂದಾಗಿ ಒಂದನೇ ತರಗತಿಯ ಪುಟಾಣಿ ವಿದ್ಯಾರ್ಥಿನಿ ತನ್ನ ಬಲಗೈಯ ಎರಡು ಬೆರಳುಗಳನ್ನು ಕಳೆದುಕೊಂಡಿರುವ ಘಟನೆ ತುಮಕೂರು ಗ್ರಾಮಾಂತರದ ಗೂಳೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಘಟನೆ ನಡೆದಿದ್ದು ಹೇಗೆ ?
ಫೆಬ್ರವರಿ 9ರಂದು ಮಧ್ಯಾಹ್ನ ಸುಮಾರು ಒಂದು ಗಂಟೆಯ ಸುಮಾರಿಗೆ ಶಾಲೆಯಲ್ಲಿ ಬಿಸಿಯೂಟ ವಿತರಿಸಲಾಗುತ್ತಿತ್ತು. ಒಂದನೇ ತರಗತಿಯ ವಿದ್ಯಾರ್ಥಿನಿ ಚಿನ್ಮಯಿದೇವಿ ಊಟಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದಳು. ಈ ವೇಳೆ ಆಕೆ ಪಕ್ಕದಲ್ಲಿದ್ದ ಮೂರನೇ ತರಗತಿಯ ಕೊಠಡಿಯ ಬಾಗಿಲಿಗೆ ಕೈ ಇಟ್ಟುಕೊಂಡಿದ್ದಳು. ಅದೇ ಸಮಯದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಅಚಾನಕ್ಕಾಗಿ ಬಾಗಿಲನ್ನು ಜೋರಾಗಿ ತಳ್ಳಿದ ಪರಿಣಾಮ, ಬಾಗಿಲಿನ ಸಂದಿನಲ್ಲಿ ಸಿಲುಕಿ ಚಿನ್ಮಯಿದೇವಿಯ ಬಲಗೈಯ ಎರಡು ಬೆರಳುಗಳು ಕಟ್ ಆಗಿವೆ.
ಘಟನೆ ನಡೆದ ತಕ್ಷಣ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸುವ ಬದಲು ಶಿಕ್ಷಕರು, ಗಾಯಗೊಂಡ ಜಾಗಕ್ಕೆ ನೀರು ಸುರಿದು ಸ್ವಚ್ಚ ಮಾಡಿದ್ದಾರೆ . ಬಳಿಕ ರಕ್ತ ನಿಲ್ಲಿಸಲು ಬಾಲಕಿ ಬೆರಳಿಗೆ ಬ್ಯಾಂಡೇಜ್ ಹಾಕಿ ಸುಮ್ಮನಾಗಿದ್ದಾರೆ. ಶಿಕ್ಷಕರ ಬೇಜವಾಬ್ದಾರಿತನಕ್ಕೆ ಕುಟುಂಬಸ್ಥರು ಆಕ್ರೋಶಗೊಂಡಿದ್ದಾರೆ. ಇಷ್ಟೇ ಅಲ್ಲದೇ ಬಾಲಕಿಯ ಪೋಷಕರು ಗಾರೆ ಕೆಲಸ ಮಾಡುವವರಾಗಿದ್ದು, ಅವರಿಗೆ ವಿಷಯ ಮುಟ್ಟಿಸಿದಾಗ ಶಿಕ್ಷಕರು ನಿರ್ಲಕ್ಷ್ಯದಿಂದ ವರ್ತಿಸಿದ್ದಾರೆ. ಚಿಕಿತ್ಸೆಗಾಗಿ ಕೇವಲ 2000 ರೂಪಾಯಿಗಳನ್ನು ಫೋನ್ ಪೇ (PhonePe) ಮೂಲಕ ಕಳುಹಿಸಿ ಕೈತೊಳೆದುಕೊಳ್ಳಲು ಯತ್ನಿಸಿದ್ದಾರೆ ಎನ್ನಲಾಗಿದೆ.
ಬೆರಳುಗಳನ್ನು ಹುಡುಕಿಕೊಡದ ಶಿಕ್ಷಕರು
ಪೋಷಕರು ಮಗಳನ್ನು ತಕ್ಷಣ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಾಗ, ವೈದ್ಯರು ಕಟ್ ಆಗಿರುವ ಬೆರಳುಗಳನ್ನು ತಕ್ಷಣ ತಂದರೆ ಶಸ್ತ್ರಚಿಕಿತ್ಸೆಯ ಮೂಲಕ ಮರುಜೋಡಣೆ ಮಾಡಬಹುದು ಎಂದು ತಿಳಿಸಿದ್ದರು. ಆದರೆ ಪೋಷಕರು ಶಾಲೆಗೆ ಬಂದು ಬೆರಳುಗಳಿಗಾಗಿ ಹುಡುಕಾಡಿದಾಗ ಶಿಕ್ಷಕರು ಬೆರಳುಗಳು ಅಲ್ಲಿ ಸಿಗುತ್ತಿಲ್ಲ ಎಂದು ಉದಾಸೀನವಾಗಿ ಹೇಳಿದ್ದಾರೆ.
ಪೊಲೀಸ್ ದೂರು
ಬಾಲಕಿಯ ತಾಯಿ ಅಂಬಿಕಾ ಅವರು ನೀಡಿದ ದೂರಿನ ಮೇರೆಗೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಇಓ (BEO) ಹನುಮಂತಪ್ಪ, ಮುಖ್ಯ ಶಿಕ್ಷಕ ನಾಗೇಶ್, ಶಿಕ್ಷಕಿ ರೇಣುಕಮ್ಮ ಮತ್ತು ಸಿಆರ್ಪಿ ವೆಂಕಟೇಶ್ ವಿರುದ್ಧ ಎಫ್ಐಆರ್ (FIR) ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. “ನನ್ನ ಮಗಳಿಗೆ ನ್ಯಾಯ ಸಿಗಬೇಕು ಮತ್ತು ತಪ್ಪಿತಸ್ಥ ಶಿಕ್ಷಕರಿಗೆ ಕಠಿಣ ಶಿಕ್ಷೆಯಾಗಬೇಕು” ಎಂದು ನೊಂದ ತಾಯಿ ಕಣ್ಣೀರಿಡುತ್ತಾ ಆಗ್ರಹಿಸಿದ್ದಾರೆ.





