ನವದೆಹಲಿ: ಬಾಲಿವುಡ್ನ ಖ್ಯಾತ ಹಾಸ್ಯ ನಟ ರಾಜಪಾಲ್ ಯಾದವ್ ಅವರು ಚೆಕ್ ಬೌನ್ಸ್ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ನಿಂದ ಯಾವುದೇ ರಿಲೀಫ್ ದೊರಕದ ಹಿನ್ನೆಲೆ ದೆಹಲಿಯ ತಿಹಾರ್ ಜೈಲಿಗೆ ಶರಣಾಗಿದ್ದಾರೆ. ಮುರಳಿ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ಈ ಪ್ರಕರಣ ದಾಖಲಾಗಿದ್ದು, ಹಲವು ವರ್ಷಗಳಿಂದ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಯುತ್ತಿತ್ತು. ಪ್ರಕರಣದ ಇತಿಹಾಸವನ್ನು ಗಮನಿಸಿದ ಹೈಕೋರ್ಟ್, ನಟನಿಗೆ ಮತ್ತಷ್ಟು ಅವಕಾಶ ನೀಡಲು ನಿರಾಕರಿಸಿದೆ.
ಗುರುವಾರ ಸಂಜೆ ಸುಮಾರು ನಾಲ್ಕು ಗಂಟೆಯ ವೇಳೆಗೆ ರಾಜಪಾಲ್ ಯಾದವ್ ತಿಹಾರ್ ಜೈಲಿಗೆ ಆಗಮಿಸಿ ಜೈಲು ಅಧಿಕಾರಿಗಳ ಎದುರು ಶರಣಾಗಿದ್ದಾರೆ. ಬಳಿಕ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಅವರನ್ನು ಜೈಲಿನಲ್ಲಿ ಇರಿಸಲಾಗಿದೆ.
ಮುರಳಿ ಪ್ರಾಜೆಕ್ಟ್ಸ್ ಸಂಸ್ಥೆ ಸಲ್ಲಿಸಿದ ದೂರಿನ ಪ್ರಕಾರ, ರಾಜಪಾಲ್ ಯಾದವ್ ಹಾಗೂ ಅವರ ಪತ್ನಿ ನೀಡಿದ್ದ ಚೆಕ್ ಬೌನ್ಸ್ ಆಗಿತ್ತು. ಈ ಹಿನ್ನೆಲೆಯಲ್ಲಿ 2018ರಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ನಟ ಹಾಗೂ ಅವರ ಪತ್ನಿಯನ್ನು ಅಪರಾಧಿಗಳೆಂದು ಘೋಷಿಸಿತ್ತು. ಈ ತೀರ್ಪನ್ನು 2019ರಲ್ಲಿ ಸೆಷನ್ ಕೋರ್ಟ್ ಸಹ ಎತ್ತಿ ಹಿಡಿದಿತ್ತು. ಬಳಿಕ ರಾಜಪಾಲ್ ಯಾದವ್ ಈ ತೀರ್ಪನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಹೈಕೋರ್ಟ್ನಲ್ಲಿ ವಿಚಾರಣೆ ವೇಳೆ, ಪ್ರಕರಣವನ್ನು ಪರಸ್ಪರ ಸಮಾಧಾನದಿಂದ (ಸೆಟಲ್ಮೆಂಟ್) ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ನಟ ಪರ ವಕೀಲರು ಹೇಳಿದ್ದರು. ಈ ಹಿನ್ನೆಲೆಯಲ್ಲಿ 2024ರಲ್ಲಿ ದೆಹಲಿ ಹೈಕೋರ್ಟ್ ರಾಜಪಾಲ್ ಯಾದವ್ ಅವರಿಗೆ ತಾತ್ಕಾಲಿಕ ರಿಲೀಫ್ ನೀಡಿತ್ತು. ಆದರೆ, ನ್ಯಾಯಾಲಯ ನೀಡಿದ್ದ ಕಾಲಾವಕಾಶದೊಳಗೆ ಹಣವನ್ನು ಮರಳಿ ಪಾವತಿಸಲಾಗಿಲ್ಲ ಎಂಬುದು ದಾಖಲೆಗಳಿಂದ ಸ್ಪಷ್ಟವಾಗಿದೆ.
ಇತ್ತೀಚೆಗೆ ನಡೆದ ವಿಚಾರಣೆಯಲ್ಲಿ ನಟ ಪರ ವಕೀಲರು ಇನ್ನೂ ಕೆಲ ವಾರಗಳ ಕಾಲಾವಕಾಶ ನೀಡಿದರೆ ಹಣ ಹೊಂದಿಸಿ ಪಾವತಿಸುವ ಪ್ರಯತ್ನ ಮಾಡುವುದಾಗಿ ಕೋರ್ಟ್ಗೆ ಮನವಿ ಮಾಡಿದರು. ಆದರೆ ಈ ಮನವಿಯನ್ನು ತಿರಸ್ಕರಿಸಿದ ದೆಹಲಿ ಹೈಕೋರ್ಟ್, ಪ್ರಕರಣದಲ್ಲಿ ನಿರಂತರ ವಿಳಂಬ ಹಾಗೂ ಭರವಸೆಗಳ ನಡುವೆಯೂ ಯಾವುದೇ ಪ್ರಗತಿ ಕಾಣಿಸದಿರುವುದನ್ನು ಉಲ್ಲೇಖಿಸಿತು.
ನ್ಯಾಯಾಲಯ ತನ್ನ ಆದೇಶದಲ್ಲಿ, “ಯಾವುದೇ ವ್ಯಕ್ತಿ ನಿರ್ದಿಷ್ಟ ಹಿನ್ನೆಲೆ, ವೃತ್ತಿ ಅಥವಾ ಉದ್ಯಮಕ್ಕೆ ಸೇರಿದವನು ಎಂಬ ಕಾರಣಕ್ಕಾಗಿ ಈ ನ್ಯಾಯಾಲಯವು ಅವರಿಗೆ ವಿಶೇಷ ಅವಕಾಶ ನೀಡುತ್ತದೆ ಎಂದು ನಿರೀಕ್ಷಿಸಬಾರದು. ಕಾನೂನಿನ ಮುಂದೆ ಎಲ್ಲರೂ ಸಮಾನರು. ಒಂದೇ ತಪ್ಪು ಮರುಮರು ನಡೆಯುತ್ತಿದ್ದರೆ ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ” ಎಂದು ಕಠಿಣವಾಗಿ ಹೇಳಿದೆ.
ಈ ಹಿನ್ನೆಲೆಯಲ್ಲಿ ಬುಧವಾರ ಸಂಜೆ ನಾಲ್ಕು ಗಂಟೆಯೊಳಗೆ ಶರಣಾಗುವಂತೆ ಹೈಕೋರ್ಟ್ ರಾಜಪಾಲ್ ಯಾದವ್ ಅವರಿಗೆ ಸೂಚನೆ ನೀಡಿತ್ತು. ಕೋರ್ಟ್ ಆದೇಶದಂತೆ ನಟ ನಿಗದಿತ ಸಮಯದಲ್ಲಿ ತಿಹಾರ್ ಜೈಲಿಗೆ ಹಾಜರಾಗಿ ಶರಣಾಗಿದ್ದಾರೆ.





