ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕಟಪಾಡಿ ಮಟ್ಟು ಗ್ರಾಮದ ಯುವಕ ಶಾಂತನು ಶೆಟ್ಟಿಗಾರ್ ಅವರಿಗೆ ಭರ್ಜರಿ ಅದೃಷ್ಟ. ಅಬುದಾಬಿಯ ಬಿಗ್ ಟಿಕೆಟ್ ಲಕ್ಕಿ ಡ್ರಾದಲ್ಲಿ 20 ಮಿಲಿಯನ್ (ಭಾರತೀಯ ರೂಪಾಯಿಯಲ್ಲಿ ಸುಮಾರು 49 ಕೋಟಿ ರೂಪಾಯಿ) ಜಾಕ್ಪಾಟ್ ಗೆದ್ದಿದ್ದಾರೆ. ಕೇವಲ ಒಂದು ತಿಂಗಳ ಹಿಂದಷ್ಟೇ ಹೆಣ್ಣು ಮಗುವಿನ ತಂದೆಯಾದ ಅವರಿಗೆ ಈ ದೊಡ್ಡ ಬಹುಮಾನ ಬಂದಿರುವುದು ಕುಟುಂಬಕ್ಕೆ ದ್ವಿಗುಣ ಸಂತೋಷ ತಂದಿದೆ. ಮನೆಯವರು ಇದನ್ನು “ಮಗಳು ತಂದ ಸೌಭಾಗ್ಯ” ಎಂದೇ ಸಂಭ್ರಮಿಸುತ್ತಿದ್ದಾರೆ.
ಹೆಣ್ಣು ಮಗು ಹುಟ್ಟಿದ ಬಳಿಕ ಲಾಟರಿ ಜಾಕ್ಪಾಟ್
ಶಾಂತನು ಶೆಟ್ಟಿಗಾರ್ (ವಯಸ್ಸು ಸುಮಾರು 33-34) ಓಮನ್ನ ಮಸ್ಕತ್ನಲ್ಲಿ ಚಿಲ್ಲರೆ ವ್ಯಾಪಾರ ಕ್ಷೇತ್ರದ ಸೇಲ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಡಿಸೆಂಬರ್ 27, 2025ರಂದು ಅವರ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆಯ ನಂತರ ಪತ್ನಿ ಸದ್ಯ ತೀರ್ಥಹಳ್ಳಿಯ ತವರು ಮನೆಯಲ್ಲಿದ್ದಾರೆ. ಮಗು ಹುಟ್ಟಿದ ಕೆಲವೇ ವಾರಗಳಲ್ಲಿ ಫೆಬ್ರವರಿ 3, 2026ರ ಬಿಗ್ ಟಿಕೆಟ್ ಸರಣಿ 283 ಡ್ರಾದಲ್ಲಿ ಟಿಕೆಟ್ ಸಂಖ್ಯೆ 305810 ಗೆ ಗ್ರ್ಯಾಂಡ್ ಪ್ರೈಜ್ ಘೋಷಣೆಯಾಗಿದೆ.
ಲೈವ್ ಡ್ರಾದ ಸಮಯದಲ್ಲಿ ಶಾಂತನುಗೆ ಫೋನ್ ಮಾಡಿದಾಗ ಮೊದಲು ನಂಬಲಾಗಲಿಲ್ಲ. “ಓ ಮೈ ಗಾಡ್, ಸೀರಿಯಸ್ಲಿ?” ಎಂದು ಅವರು ಪ್ರತಿಕ್ರಿಯಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ನಂತರ ಸಂತೋಷಕ್ಕೆ ಗಡಿಯೇ ಇಲ್ಲ.
ಗೆಳೆಯನ ಜೊತೆಗೂಡಿ ಟಿಕೆಟ್ ಖರೀದಿ
ಶಾಂತನು ಆಗಾಗ ಲಾಟರಿ ಟಿಕೆಟ್ ಖರೀದಿಸುತ್ತಿದ್ದರು. ಈ ಬಾರಿ ಬಿಗ್ ಟಿಕೆಟ್ ಲಕ್ಕಿ ಡ್ರಾದಲ್ಲಿ ಪಾಲ್ಗೊಳ್ಳಲು ತೀರ್ಮಾನಿಸಿ, ತಮ್ಮ ಸ್ನೇಹಿತನೊಂದಿಗೆ ಹಣ ಹೂಡಿಕೆ ಮಾಡಿ ಟಿಕೆಟ್ ಖರೀದಿಸಿದ್ದರು. ಟಿಕೆಟ್ ಬೆಲೆ 500 ದಿರ್ಹಂ (ಭಾರತೀಯ ಮೌಲ್ಯದಲ್ಲಿ ಸುಮಾರು 12,000 ರೂ.) ಆಗಿತ್ತು. ಜನವರಿ 20, 2026ರಂದು ಖರೀದಿಸಿದ ಈ ಟಿಕೆಟ್ಗೆ ಈಗ 20 ಮಿಲಿಯನ್ ದಿರ್ಹಂ (ಸುಮಾರು 49 ಕೋಟಿ ರೂ.) ಬಹುಮಾನ ಲಭಿಸಿದೆ. ಗೆದ್ದ ಹಣವನ್ನು ಸ್ನೇಹಿತನೊಂದಿಗೆ ಹಂಚಿಕೊಳ್ಳುವುದಾಗಿ ಶಾಂತನು ತಿಳಿಸಿದ್ದಾರೆ.
ಕುಟುಂಬದ ಸಂಭ್ರಮ ಮತ್ತು ಭಾವನೆಗಳು :
ಮಟ್ಟು ಗ್ರಾಮದಲ್ಲಿ ಶಾಂತನು ಅವರ ತಂದೆ (ನಿವೃತ್ತ ಬ್ಯಾಂಕ್ ಉದ್ಯೋಗಿ), ತಾಯಿ ಗುಣವತಿ ಮತ್ತು ಸಹೋದರರು ಸಿಹಿ ಹಂಚಿ ಸಂತೋಷ ವ್ಯಕ್ತಪಡಿಸಿದ್ದಾರೆ. ದೊಡ್ಡಪ್ಪ ಶ್ರೀನಿವಾಸ್ ಅವರು, “ಇದು ದೈವದ ಕೃಪೆ ಮತ್ತು ಮಗುವಿನ ಅದೃಷ್ಟ. ಬಂದ ಹಣವನ್ನು ಒಳ್ಳೆಯ ಕಾರ್ಯಕ್ಕೆ ಬಳಸುವ ಶಕ್ತಿ ಭಗವಂತ ನೀಡಲಿ” ಎಂದು ಹಾರೈಸಿದ್ದಾರೆ.
ಶಾಂತನು ಇಂಜಿನಿಯರಿಂಗ್ ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟು ಡಿಪ್ಲೋಮಾ ಮುಗಿಸಿ ವಿದೇಶಕ್ಕೆ ತೆರಳಿದ್ದರು. ಕಳೆದ 8 ವರ್ಷಗಳಿಂದ ಓಮನ್ನಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ತಿಂಗಳ ಬಳಿಕ ಊರಿಗೆ ಬಂದು ಕುಟುಂಬದೊಂದಿಗೆ ಮುಂದಿನ ಯೋಜನೆಗಳ ಬಗ್ಗೆ ಚರ್ಚಿಸಲಿದ್ದಾರೆ.
ಈ ಸುದ್ದಿಯು ಉಡುಪಿ ಜಿಲ್ಲೆಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದ್ದು, “ಹೆಣ್ಣು ಮಗು ಮಹಾಲಕ್ಷ್ಮಿ” ಎಂಬ ನಂಬಿಕೆಯನ್ನು ಮತ್ತಷ್ಟು ಬಲಪಡಿಸಿದೆ.





