ಕನಕಪುರ: ಉದ್ಯಮಿ ಸಿ.ಜೆ. ರಾಯ್ ಅವರ ಆತ್ಮಹತ್ಯೆ ಪ್ರಕರಣದ ಕುರಿತು ರಾಜ್ಯ ಸರ್ಕಾರ ಗಂಭೀರವಾಗಿ ನಡೆದುಕೊಂಡಿದ್ದು, ಈ ಸಾವಿನ ಹಿಂದಿರುವ ಸತ್ಯಾಂಶವನ್ನು ಜನತೆಗೆ ತಿಳಿಸಲು ಉನ್ನತ ಮಟ್ಟದ ತನಿಖೆ ನಡೆಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಉದ್ಯಮಿ ಸಿ.ಜೆ. ರಾಯ್ ಅವರು ಐಟಿ ಇಲಾಖೆ ಅಧಿಕಾರಿಗಳ ಪರಿಶೀಲನೆಯ ಸಂದರ್ಭದಲ್ಲಿ ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ. ಐದು ನಿಮಿಷ ಸಮಯ ಕೊಡಿ ಎಂದು ಹೇಳಿ ಒಳಗೆ ಹೋಗಿದ್ದಾರೆ. ಆದರೆ ಆ ನಂತರ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಅತ್ಯಂತ ದುಃಖಕರ ಸಂಗತಿ. ಈ ಪ್ರಕರಣದ ಬಗ್ಗೆ ಯಾವುದೇ ಗೊಂದಲ ಉಳಿಯಬಾರದು. ಹೀಗಾಗಿ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಿ ಸತ್ಯಾಂಶವನ್ನು ಜನತೆಗೆ ತಿಳಿಸುವ ಕೆಲಸ ಮಾಡುತ್ತದೆ” ಎಂದು ತಿಳಿಸಿದರು.
ಸಿ.ಜೆ. ರಾಯ್ ಅವರು ಸಮಾಜದಲ್ಲಿ ಒಳ್ಳೆಯ ಉದ್ಯಮಿಯಾಗಿ ಗುರುತಿಸಿಕೊಂಡಿದ್ದ ವ್ಯಕ್ತಿ. ಅವರ ಬಗ್ಗೆ ಉತ್ತಮ ಅಭಿಪ್ರಾಯವಿತ್ತು. ಇಂತಹ ಘಟನೆ ನಡೆಯಬಾರದಿತ್ತು ಎಂದು ಡಿಸಿಎಂ ವಿಷಾದ ವ್ಯಕ್ತಪಡಿಸಿದರು. “ಒಬ್ಬ ಉದ್ಯಮಿ ಈ ಮಟ್ಟಕ್ಕೆ ಹೋಗುವ ಪರಿಸ್ಥಿತಿ ನಿರ್ಮಾಣವಾದರೆ, ಅದರ ಹಿಂದೆ ಏನಿದೆ ಎಂಬುದನ್ನು ಗಂಭೀರವಾಗಿ ಪರಿಶೀಲಿಸಲೇಬೇಕು” ಎಂದು ಹೇಳಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐಟಿ ಇಲಾಖೆ ಅಧಿಕಾರಿಗಳ ತಂಡ ಕೇರಳದಿಂದ ಬಂದಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಘಟನೆಯ ಕುರಿತು ಕೇಂದ್ರ ಸರ್ಕಾರದ ಗಮನಕ್ಕೂ ವಿಚಾರ ಹೋಗಿದ್ದು, ದೆಹಲಿಯಿಂದ ವರದಿ ಕೇಳಲಾಗಿದೆ ಎಂಬ ಮಾಹಿತಿಯೂ ಇದೆ.
ಐಟಿ ಇಲಾಖೆ ವಿಚಾರ ರಾಜಕೀಯವಾಗಿ ಸೂಕ್ಷ್ಮ ವಿಷಯವಾಗಿರುವುದರಿಂದ ಈ ಬಗ್ಗೆ ಮಾತನಾಡುವುದು ಕೆಲವೊಮ್ಮೆ ರಾಜಕೀಯ ಬಣ್ಣ ಪಡೆಯುತ್ತದೆ ಎಂದು ಡಿಕೆ ಶಿವಕುಮಾರ್ ಅಭಿಪ್ರಾಯಪಟ್ಟರು. “ಐಟಿ ಬಗ್ಗೆ ಮಾತನಾಡಿದರೆ ರಾಜಕೀಯ ಆಗುತ್ತದೆ. ಆದರೆ ಇಲ್ಲಿ ಮಾನವೀಯ ದೃಷ್ಟಿಯಿಂದ ನೋಡಬೇಕು. ಯಾರ ಮೇಲಾದರೂ ಅನಗತ್ಯ ಕಿರುಕುಳ ನಡೆದಿದ್ದರೆ ಅದು ಖಂಡನೀಯ. ಈ ರೀತಿಯ ನಡೆ ಸರಿಯಲ್ಲ” ಎಂದು ಅವರು ಹೇಳಿದರು.
ರಾಜ್ಯ ಸರ್ಕಾರ ಯಾವುದೇ ರೀತಿಯ ಒತ್ತಡಕ್ಕೆ ಒಳಗಾಗದೆ, ಸಂಪೂರ್ಣ ಪಾರದರ್ಶಕವಾಗಿ ತನಿಖೆ ನಡೆಸಲಿದೆ ಎಂಬ ಭರವಸೆಯನ್ನು ಡಿಸಿಎಂ ನೀಡಿದರು. “ಯಾರೇ ಆಗಿರಲಿ, ತಪ್ಪಿದ್ದರೆ ಅದು ಹೊರಬರಬೇಕು. ತಪ್ಪಿಲ್ಲದಿದ್ದರೆ ಅವರ ಮಾನ ಹಾನಿಯಾಗಬಾರದು. ಸತ್ಯವೇ ಅಂತಿಮ” ಎಂದು ಹೇಳಿದರು.





