ಕನ್ನಡದ ಹೆಸರಾಂತ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12ರ ವಿಜೇತ ಗಿಲ್ಲಿ ನಟ ಅವರು ತಮ್ಮ ಸರಳತೆ, ಮಾತಿನ ಮ್ಯಾಜಿಕ್ ಮತ್ತು ಸಹಜ ವ್ಯಕ್ತಿತ್ವದ ಮೂಲಕ ರಾಜ್ಯ ಮಾತ್ರವಲ್ಲದೆ ದೇಶ-ವಿದೇಶದಲ್ಲೂ ಅಪಾರ ಅಭಿಮಾನ ಗಳಿಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯೊಳಗಿನ ಅವರ ಪ್ರಾಮಾಣಿಕ ನಡೆ, ನೇರ ಮಾತು ಮತ್ತು ಮಾನವೀಯ ಸ್ಪರ್ಶವು ಕೋಟ್ಯಾಂತರ ಪ್ರೇಕ್ಷಕರ ಮನಸ್ಸನ್ನು ಗೆದ್ದಿದೆ. ಈ ಸಾಧನೆಯ ನಂತರ, ಗಿಲ್ಲಿ ನಟರಿಗೆ ಅಭಿನಂದನೆಗಳ ಸುರಿಮಳೆ ಹರಿದು ಬರುತ್ತಿದ್ದು, ರಾಜಕೀಯ ಹಾಗೂ ಕಲಾವಿದರ ವಲಯದಿಂದ ಅನೇಕ ಗಣ್ಯರು ಭೇಟಿ ನೀಡಿ ಶುಭ ಹಾರೈಸುತ್ತಿದ್ದಾರೆ.
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ್, ಸೇರಿದಂತೆ ಹಲವಾರು ಪ್ರಮುಖ ನಾಯಕರು ಗಿಲ್ಲಿ ನಟರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದರು. ಇದೀಗ ಮಾಜಿ ಸಚಿವ ಹಾಗೂ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರು ತಮ್ಮ ನಿವಾಸದಲ್ಲಿ ಗಿಲ್ಲಿ ನಟರನ್ನು ಆತ್ಮೀಯವಾಗಿ ಆಹ್ವಾನಿಸಿ, ವಿಶೇಷವಾಗಿ ಸನ್ಮಾನಿಸಿ ಗೌರವಿಸಿದ್ದಾರೆ.
ಜನಾರ್ದನ ರೆಡ್ಡಿ ಅವರು ತಮ್ಮ ಧರ್ಮಪತ್ನಿ ಲಕ್ಷ್ಮಿ ಅರುಣ ಅವರೊಂದಿಗೆ ಗಿಲ್ಲಿ ನಟರನ್ನು ಸ್ವಾಗತಿಸಿ, ಸನ್ಮಾನ ಸಮಾರಂಭ ನಡೆಸಿದರು. ಈ ವೇಳೆ, “ಕನ್ನಡದ ಹೆಸರಾಂತ ರಿಯಾಲಿಟಿ ಶೋ ಬಿಗ್ ಬಾಸ್ 12ರ ವಿಜೇತ ಗಿಲ್ಲಿ ನಟ ಅವರು ತಮ್ಮ ಮಾತಿನ ಶಕ್ತಿ ಹಾಗೂ ಸರಳ ನಡವಳಿಕೆಯಿಂದ ನಾಡಿನ ಜನರ ಹೃದಯ ಗೆದ್ದಿದ್ದಾರೆ. ಅವರ ಮುಂದಿನ ಕಲಾಜೀವನವು ಯಶಸ್ಸಿನಿಂದ ಕೂಡಿರಲಿ” ಎಂದು ಹಾರೈಸಿದರು.
ಸನ್ಮಾನದ ವೇಳೆ ಜನಾರ್ದನ ರೆಡ್ಡಿ ಅವರು, ಗಿಲ್ಲಿ ನಟರ ವ್ಯಕ್ತಿತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, “ಇಂದಿನ ಯುವಜನತೆಗೆ ಗಿಲ್ಲಿ ನಟ ಅವರು ಒಳ್ಳೆಯ ಮಾದರಿ. ಶ್ರಮ, ಸಹನೆ ಹಾಗೂ ನಂಬಿಕೆಯೊಂದಿಗೆ ಮುನ್ನಡೆದರೆ ಯಶಸ್ಸು ಸಾಧ್ಯ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ” ಎಂದು ಹೇಳಿದರು.
ಬಿಗ್ ಬಾಸ್ ಸೀಸನ್ 12ರ ಗೆಲುವಿನ ಬಳಿಕ ಗಿಲ್ಲಿ ನಟ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿದ್ದು, ಅವರ ಪ್ರತಿಯೊಂದು ಹೆಜ್ಜೆಯೂ ಸುದ್ದಿಯಾಗುತ್ತಿದೆ. ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಳೆಗರೆದಿದ್ದು, ಅವರ ಮುಂದಿನ ಸಿನಿಮಾ ಹಾಗೂ ಟಿವಿ ಪ್ರಾಜೆಕ್ಟ್ಗಳ ಬಗ್ಗೆ ಕಾತರದಿಂದ ನಿರೀಕ್ಷಿಸುತ್ತಿದ್ದಾರೆ.





