ಭಾರತೀಯ ಸಂಗೀತ ಲೋಕದಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿದ ಗಾಯಕ ಅರಿಜಿತ್ ಸಿಂಗ್ ಅವರು ಹಿನ್ನೆಲೆ ಗಾಯನ (Playback Singing)ದಿಂದ ನಿವೃತ್ತಿಯಾಗುವುದಾಗಿ ಘೋಷಿಸಿದ್ದಾರೆ. ತಮ್ಮ ಅಭಿಮಾನಿಗಳಿಗೆ ಅಚ್ಚರಿಯ ಜೊತೆಗೆ ಭಾವುಕ ಕ್ಷಣಗಳನ್ನು ನೀಡಿದ್ದಾರೆ. ಈ ಮಹತ್ವದ ನಿರ್ಧಾರವನ್ನು ಅವರು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ..
ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಬರೆದುಕೊಂಡಿರುವ ಅರಿಜಿತ್ ಸಿಂಗ್ ಅವರು, “ನಮಸ್ಕಾರ, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಇಷ್ಟು ವರ್ಷಗಳ ಕಾಲ ನನ್ನ ಸಂಗೀತಕ್ಕೆ ನೀಡಿದ ಅಪಾರ ಪ್ರೀತಿ ಮತ್ತು ಬೆಂಬಲಕ್ಕಾಗಿ ಹೃದಯಪೂರ್ವಕ ಧನ್ಯವಾದಗಳು. ಇನ್ನು ಮುಂದೆ ನಾನು ಹಿನ್ನೆಲೆ ಗಾಯಕನಾಗಿ ಯಾವುದೇ ಹೊಸ ಯೋಜನೆಗಳನ್ನು ಸ್ವೀಕರಿಸುವುದಿಲ್ಲ ಎಂಬುದನ್ನು ಸಂತೋಷದಿಂದ ಹಂಚಿಕೊಳ್ಳುತ್ತಿದ್ದೇನೆ. ಇದು ನನ್ನ ಜೀವನದ ಅದ್ಭುತ ಪ್ರಯಾಣವಾಗಿತ್ತು. ದೇವರು ನನಗೆ ಅಪಾರ ಕೃಪೆ ತೋರಿಸಿದ್ದಾನೆ” ಎಂದು ಬರೆದಿದ್ದಾರೆ.
ಅರಿಜಿತ್ ಸಿಂಗ್ ಅವರ ಈ ಘೋಷಣೆ ಭಾರತೀಯ ಸಿನಿ ಸಂಗೀತ ಲೋಕದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಕಳೆದ ದಶಕದಿಂದ ಬಾಲಿವುಡ್ ಸಂಗೀತಕ್ಕೆ ಹೊಸ ಉಸಿರನ್ನು ನೀಡಿದ ಅರಿಜಿತ್ ಸಿಂಗ್, ತಮ್ಮ ವಿಭಿನ್ನ ಶೈಲಿ, ಭಾವಪೂರ್ಣ ಗಾಯನ ಹಾಗೂ ಆಳವಾದ ಅಭಿವ್ಯಕ್ತಿಯ ಮೂಲಕ ಕೋಟ್ಯಂತರ ಹೃದಯಗಳನ್ನು ಗೆದ್ದಿದ್ದಾರೆ. “ತುಮ್ಹೀ ಹೋ”, “ಚನ್ನಾ ಮೆರೆಯಾ”, “ರಾಬ್ತಾ”, “ಫಿರ್ ಲೆ ಆಯಾ ದಿಲ್”, “ಆಗರ ತುಮ್ ಸಾಥ್ ಹೋ” ಮುಂತಾದ ಅನೇಕ ಸೂಪರ್ ಹಿಟ್ ಹಾಡುಗಳು ಅವರ ಧ್ವನಿಯ ಮಾಯೆಯನ್ನು ಸಾಬೀತುಪಡಿಸುತ್ತವೆ.
ತಮ್ಮ ನಿವೃತ್ತಿ ಘೋಷಣೆಯಲ್ಲಿ, ಭವಿಷ್ಯದ ಯೋಜನೆಗಳ ಕುರಿತು ಕೂಡ ಅವರು ಸೂಚನೆ ನೀಡಿದ್ದಾರೆ. “ನಾನು ಸಂಗೀತದ ಶಾಶ್ವತ ವಿದ್ಯಾರ್ಥಿ. ಮುಂದಿನ ದಿನಗಳಲ್ಲಿ ಸಣ್ಣ ಕಲಾವಿದನಾಗಿ ಇನ್ನಷ್ಟು ಕಲಿಯಲು ಬಯಸುತ್ತೇನೆ. ನನ್ನದೇ ಆದ ಸಂಗೀತ ರಚನೆ ಮತ್ತು ವೈಯಕ್ತಿಕ ಸಂಗೀತ ನಿರ್ದೇಶನದತ್ತ ಹೆಚ್ಚಿನ ಗಮನ ಹರಿಸಲು ಇಚ್ಛಿಸುತ್ತೇನೆ. ಇನ್ನೂ ಕೆಲವು ಬಾಕಿ ಇರುವ ಬದ್ಧತೆಗಳನ್ನು ಪೂರ್ಣಗೊಳಿಸಬೇಕಿದೆ. ಆದ್ದರಿಂದ ಈ ವರ್ಷ ಕೆಲ ಹೊಸ ಹಾಡುಗಳ ಬಿಡುಗಡೆಯನ್ನು ನೀವು ಕಾಣಬಹುದು” ಎಂದು ತಿಳಿಸಿದ್ದಾರೆ.
ಅರಿಜಿತ್ ಸಿಂಗ್ ಅವರ ಈ ನಿರ್ಧಾರಕ್ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಹಲವರು “ನಿಮ್ಮ ಧ್ವನಿ ನಮ್ಮ ಜೀವನದ ಭಾಗ”, “ಪ್ಲೇಬ್ಯಾಕ್ ಇಲ್ಲದೆ ಬಾಲಿವುಡ್ ಅಪೂರ್ಣ” ಎಂದು ಭಾವುಕ ಸಂದೇಶಗಳನ್ನು ಹಂಚಿಕೊಂಡಿದ್ದಾರೆ. ಇನ್ನೊಂದೆಡೆ, ಸಂಗೀತ ಕ್ಷೇತ್ರದ ಗಣ್ಯರೂ ಕೂಡ ಅವರ ಈ ಪ್ರಯಾಣವನ್ನು ಶ್ಲಾಘಿಸಿ, ಮುಂದಿನ ಹಂತಕ್ಕೆ ಶುಭಾಶಯ ಕೋರಿದ್ದಾರೆ.
ಸಂಗೀತ ರಿಯಾಲಿಟಿ ಶೋ ಮೂಲಕ ತಮ್ಮ ಪಯಣ ಆರಂಭಿಸಿದ ಅರಿಜಿತ್ ಸಿಂಗ್, ತಮ್ಮ ಶ್ರಮ, ಸಾಧನೆ ಮತ್ತು ಪ್ರತಿಭೆಯ ಮೂಲಕ ದೇಶದ ಅಗ್ರಗಣ್ಯ ಗಾಯಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಕೇವಲ ಬಾಲಿವುಡ್ ಮಾತ್ರವಲ್ಲದೆ, ದಕ್ಷಿಣ ಭಾರತದ ಭಾಷೆಗಳಲ್ಲೂ ಹಾಡಿ ಅಪಾರ ಜನಪ್ರಿಯತೆ ಗಳಿಸಿದ್ದಾರೆ.





