ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಚೂನಮ್ಮ ದೇವಿಯ ದೇವಸ್ಥಾನದ ಪೂಜಾರಿಯೊಬ್ಬ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಕಾಮಿಸಿ ನಿರಂತರವಾಗಿ ಕಾಡುತ್ತಿದ್ದ. ಇದಕ್ಕೆ ಸಹಿಸಲಾರದೆ ಸಂತ್ರಸ್ತೆಯ 17 ವರ್ಷದ ತಮ್ಮ ರೊಚ್ಚಿಗೆದ್ದು, ಪೂಜಾರಿಯನ್ನೇ ಭೀಕರವಾಗಿ ಹತ್ಯೆ ಮಾಡಿದ್ದಾನೆ.
ಕೊಲೆಯಾದವನನ್ನು ರಾಜಾಪುರ ಗ್ರಾಮದ ನಿವಾಸಿ ಮಂಜುನಾಥ ಸುಭಾಷ್ ಎಣ್ಣಿ (23) ಎಂದು ಗುರುತಿಸಲಾಗಿದೆ. ಆತ ಕಳೆದ ಹಲವು ವರ್ಷಗಳಿಂದ ಯುವತಿಯನ್ನು ಹಿಂಬಾಲಿಸುತ್ತಿದ್ದ. ಯುವತಿಯ ತಮ್ಮ ಹಲವು ಬಾರಿ “ಅಕ್ಕನ ಉಸಾಬರಿಗೆ ಬರಬೇಡ” ಎಂದು ಎಚ್ಚರಿಕೆ ನೀಡಿದ್ದರೂ, ಮಂಜುನಾಥ ಎಚ್ಚರಿಕೆಯನ್ನು ಲೆಕ್ಕಿಸದೆ ಕಾಡುವುದನ್ನು ಮುಂದುವರಿಸಿದ್ದ ಎನ್ನಲಾಗಿದೆ.
ಬುಧವಾರ ಬೆಳಿಗ್ಗೆ ದೇವಾಲಯಕ್ಕೆ ಪೂಜೆಗೆ ಬಂದಿದ್ದ ಮಂಜುನಾಥನನ್ನು ದೇವಸ್ಥಾನದಲ್ಲಿ ಏಕಾಂತವಾಗಿರುವುದನ್ನು ಗಮನಿಸಿದ ಅಪ್ರಾಪ್ತ ಬಾಲಕ, ಹಾರೆಯಿಂದ ಆತನ ಮೇಲೆ ದಾಳಿ ನಡೆಸಿದ್ದಾನೆ. ಬೆನ್ನಿಗೆ ಬಲವಾಗಿ ಹೊಡೆದ ಪರಿಣಾಮ ಮಂಜುನಾಥ ಗಂಭೀರ ಗಾಯಗೊಂಡು, ತೀವ್ರ ರಕ್ತಸ್ರಾವದಿಂದ ದೇವಸ್ಥಾನ ಆವರಣದಲ್ಲೇ ಪ್ರಾಣ ಬಿಟ್ಟಿದ್ದಾನೆ.
ಘಟನೆಯ ಬಳಿಕ ಘಟಪ್ರಭಾ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರ ಮಾಹಿತಿಯ ಆಧಾರದ ಮೇಲೆ ಆರೋಪಿಯಾದ ಅಪ್ರಾಪ್ತ ಬಾಲಕನನ್ನು ಬಂಧಿಸಲಾಗಿದೆ. ಪೊಲೀಸರು ಪ್ರಕರಣದ ತನಿಖೆಯನ್ನು ಆರಂಭಿಸಿದ್ದಾರೆ.
ಈ ಘಟನೆ ರಾಜಾಪುರ ಗ್ರಾಮದಾದ್ಯಂತ ಆತಂಕ ಮತ್ತು ಚರ್ಚೆಗೆ ಕಾರಣವಾಗಿದೆ. ಅಪ್ರಾಪ್ತರ ವಿರುದ್ಧದ ಅಪರಾಧಗಳು ಮತ್ತು ಕುಟುಂಬದ ರಕ್ಷಣೆಯ ಬಗ್ಗೆ ಗಂಭೀರ ಚಿಂತನೆಗೆ ಇದು ಕಾರಣವಾಗಿದೆ.





