ಝೀರೋದಿಂದ ಹೀರೋ ಆಗಬಹುದು ಅನ್ನೋದನ್ನ ತೋರಿಸಿಕೊಟ್ಟವರಲ್ಲಿ ದುನಿಯಾ ವಿಜಯ್ ಕೂಡ ಒಬ್ಬರು. ಸಾಕಷ್ಟು ಅವಮಾನ, ಅಪಮಾನ, ವಿವಾದಗಳು, ಸಾಲು ಸಾಲು ಸಿನಿಮಾಗಳ ಸೋಲುಗಳಿಂದ ಮೈಕೊಡವಿ ಎದ್ದು ಬಂದವರು ವಿಜಯ್. ಹೆಸರಿಗೆ ತಕ್ಕನಾಗಿ ಸಲಗ, ಭೀಮ ಸಿನಿಮಾಗಳ ಬಿಗ್ಗೆಸ್ಟ್ ವಿಜಯೋತ್ಸವ ಜೊತೆ ಲ್ಯಾಂಡ್ಲಾರ್ಡ್ನಂದ ಹ್ಯಾಟ್ರಿಕ್ ಹಿಟ್ಗೆ ಸಜ್ಜಾಗಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಅವ್ರ ವಿರುದ್ಧ ಬೇಕು ಅಂತಲೇ ಒಂದು ಪಡೆ ನೆಗೆಟಿವ್ ಕ್ಯಾಂಪೇನ್ ಶುರುಮಾಡಿದೆ.
ಒಬ್ಬ ಸಾಮಾನ್ಯ ಫೈಟರ್ ಆಗಿದ್ದ ದುನಿಯಾ ವಿಜಯ್ ಕುಮಾರ್, ಇಂದು ಕನ್ನಡದ ಸೂಪರ್ ಸ್ಟಾರ್ಗಳ ಸಾಲಿನಲ್ಲಿ ನಿಂತಿರೋ ಅದ್ಭುತ ಕಲಾವಿದ. ಅಸಂಖ್ಯಾತ ಅಭಿಮಾನಿಗಳನ್ನ ಹೊಂದಿರೋ ಸ್ಟಾರ್. ಝೀರೋದಿಂದ ಕರಿಯರ್ ಶುರು ಮಾಡಿ, ಹೀರೋ ಆಗೋಕೆ ಕಲರ್ಗಿಂತ ಖದರ್ ಮುಖ್ಯ ಅನ್ನೋದನ್ನ ತೋರಿಸಿಕೊಟ್ಟವರು. ಸಾಲು ಸಾಲು ಅವಮಾನ, ಅಪಮಾನಗಳು ಎದುರಾದಾಗ ಅವುಗಳನ್ನ ಮೆಟ್ಟಿ ನಿಂತಂತಹ ಛಲದಂಕಮಲ್ಲ.
ಹ್ಯಾಟ್ರಿಕ್ ಹಿಟ್ನತ್ತ ವಿಜಯ್.. ನೆಗೆಟಿವ್ ಕ್ಯಾಂಪೇನ್ಗೆ ಒಳಸಂಚು
ಮತ್ತೆ ಮುನ್ನೆಲೆಗೆ 10 ವರ್ಷದ ಹಿಂದಿನ ‘ಮಾಸ್ತಿಗುಡಿ’ ದುರಂತ
ವೈಯಕ್ತಿಕ ಜೀವನದ ತಲ್ಲಣಗಳು, ಸಿಕ್ಕಾಪಟ್ಟೆ ವಿವಾದಗಳು, ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಸೋಲುಗಳಿಂದ ಕಂಗೆಡದೆ ಎಲ್ಲವನ್ನೂ ಎದುರಿಸಿ ನಿಂತ ಆನೇಕಲ್ಲಿನ ಕಪ್ಪು ವಜ್ರ. ಸಲಗ ಸಿನಿಮಾದಿಂದ ವಿಜಯ್ ಕುಮಾರ್ ದುನಿಯಾನೇ ಬದಲಾಗಿ ಹೋಯ್ತು. ನಟನೆ ಜೊತೆ ನಿರ್ದೇಶನಕ್ಕೂ ಕೈ ಹಾಕಿದ ವಿಜಯ್, ವಿಜಯೋತ್ಸವದ ಹಾದಿ ಹಿಡಿದರು. ಅದಾದ ಬಳಿಕ ಬಂದಂತಹ ಭೀಮ ಸಿನಿಮಾ ಸಲಗವನ್ನು ಮೀರಿದಂತಹ ಸಕ್ಸಸ್ ತಂದುಕೊಡ್ತು. ಒನ್ಸ್ ಅಗೈನ್ ಭೀಮಗೂ ಸಹ ಅವರೇ ಆ್ಯಕ್ಷನ್ ಕಟ್ ಹೇಳಿ, ಅವರೇ ಲೀಡ್ನಲ್ಲಿ ನಟಿಸಿದ್ರು.
ಬಾಲಕೃಷ್ಣ ಅಂತಹ ಲೆಜೆಂಡರಿ ಆ್ಯಕ್ಟರ್ ಟಾಲಿವುಡ್ಗೆ ರೆಡ್ ಕಾರ್ಪೆಟ್ ಹಾಸಿ ವೀರಸಿಂಹಾರೆಡ್ಡಿ ಸಿನಿಮಾಗೆ ವಿಜಯ್ ಅವ್ರನ್ನ ವೆಲ್ಕಮ್ ಮಾಡಿದ್ರು. ಸದ್ಯ ಲೇಡಿ ಸೂಪರ್ ಸ್ಟಾರ್ ನಯನತಾರಾ ಜೊತೆ ಮೂಕುತಿ ಅಮ್ಮನ್-2 ಅನ್ನೋ ತಮಿಳು ಸಿನಿಮಾ, ವಿಜಯ್ ಸೇತುಪತಿ ಜೊತೆ ಪೂರಿ ಜಗನ್ನಾಥ್ ನಿರ್ದೇಶನದ ತೆಲುಗು ಸಿನಿಮಾವೊಂದರಲ್ಲಿ ಬ್ಯುಸಿ ಆಗಿದ್ದಾರೆ ವಿಜಯ್. ಹಾಗಂತ ಕನ್ನಡ ಮರೆತಿಲ್ಲ. ಲ್ಯಾಂಡ್ಲಾರ್ಡ್ ಸಿನಿಮಾ ಇದೇ ಜನವರಿ 23ಕ್ಕೆ ರಿಲೀಸ್ಗೆ ತಯಾರಿದೆ. ಹಿರಿಮಗಳು ರಿತನ್ಯಾರನ್ನ ಅದೇ ಚಿತ್ರದಲ್ಲಿ ಇಂಟ್ರಡ್ಯೂಸ್ ಮಾಡಿಸ್ತಿದ್ದಾರೆ. ಕಿರಿ ಮಗಳು ಮೋನಿಷಾನ ಕೂಡ ತಮ್ಮದೇ ನಿರ್ದೇಶನದ ಸಿಟಿಲೈಟ್ಸ್ ಚಿತ್ರದಿಂದ ಬೆಳ್ಳಿಪರದೆಗೆ ಪರಿಚಯಿಸ್ತಿದ್ದಾರೆ.
ಲ್ಯಾಂಡ್ಲಾರ್ಡ್ ಹಂಡ್ರೆಡ್ ಪರ್ಸೆಂಟ್ ಶೂರ್ ಶಾಟ್ ಮೂವಿ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಸಲಗ, ಭೀಮ ಬಳಿಕ ಕನ್ನಡದಲ್ಲಿ ಹ್ಯಾಟ್ರಿಕ್ ಹಿಟ್ ಹೊಡೆಯೋಕೆ ತುದಿಗಾಲಲ್ಲಿ ನಿಂತಿದ್ದಾರೆ ವಿಜಯ್. ಆದ್ರೀಗ ಸೋಶಿಯಲ್ ಮೀಡಿಯಾದಲ್ಲಿ ಕೆಲ ಕಿಡಿಗೇಡಿಗಳು ವಿಜಯ್ ವಿರುದ್ಧ ನೆಗೆಟಿವ್ ಕ್ಯಾಂಪೇನ್ ಶುರು ಮಾಡಿದ್ದಾರೆ. 10 ವರ್ಷಗಳ ಹಿಂದೆ ನಡೆದ ಮಾಸ್ತಿಗುಡಿ ದುರಂತವನ್ನ ಇದೀಗ ಬೇಕು ಅಂತಲೇ ಮುನ್ನೆಲೆಗೆ ತರ್ತಿದ್ದಾರೆ. ಬಹುತೇಕ ಟ್ರೋಲ್ & ಮೀಮ್ಸ್ ಪೇಜ್ಗಳಲ್ಲಿ ವಿಜಯ್ಗೆ ಅಪವಿಜಯ ತರುವಂತಹ ನೆಗೆಟಿವ್ ಪೋಸ್ಟ್ಗಳು ಬಿತ್ತರವಾಗ್ತಿವೆ.
ಸಲಗ, ಭೀಮ ಬ್ಲಾಕ್ಬಸ್ಟರ್.. ಲ್ಯಾಂಡ್ಲಾರ್ಡ್ಗೆ ದಿನಗಣನೆ
ಮೈ ಕೊಡವಿ ಎದ್ದು ಬಂದ ಸ್ಟಾರ್.. ಕುಗ್ಗಿಸೋಕೆ ದೊಡ್ಡ ಷಡ್ಯಂತ್ರ
ಯಾವುದೋ ಒಂದು ಪಡೆ ಬೇಕು ಅಂತಲೇ ವ್ಯವಸ್ಥಿತವಾಗಿ ಸಂಚು ರೂಪಿಸಿ, ವಿಜಯ್ ಕರಿಯರ್ಗೆ ಕಪ್ಪು ಮಸಿ ಬಳಿಯೋಕೆ ಈ ತರಹದ ಕ್ಯಾಂಪೇನ್ ಶುರುವಿಟ್ಟಿದೆ. ಆದ್ರೆ ಹತ್ತು ವರ್ಷಗಳ ಹಿಂದೆಯೇ ಇಂಥದ್ದನ್ನ ಮೆಟ್ಟಿ, ಸಲಗ, ಭೀಮನಂತೆ ನೆಲೆಯೂರಿರೋ ವಿಜಯ್ ಇಂತಹ ಸಣ್ಣಪುಟ್ಟ ಪೋಸ್ಟ್ಗಳಿಗೆ ಹೆದರುತ್ತಾರೆಯೇ..? ನೋ ವೇ. ಚಾನ್ಸೇ ಇಲ್ಲ.
ಅನಿಲ್ ಹಾಗೂ ಉದಯ್ ಚಾಪರ್ನಿಂದ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಮುಳುಗಿ ಸಾವನ್ನಪ್ಪಿದ್ದು ನಿಜಕ್ಕೂ ಬಹುದೊಡ್ಡ ದುರಂತವೇ ಸರಿ. ಅದಕ್ಕೆ ನಿಜಕ್ಕೂ ತಪ್ಪು ಮಾಡಿದವರು ಕಂಡಿತ ಪಶ್ಚಾತ್ತಾಪ ಪಡ್ತಿದ್ದಾರೆ. ಅವರ ಉಸಿರು ಇರೋವರೆಗೂ ಆ ಪಾಪಪ್ರಜ್ಞೆ ಅವ್ರನ್ನ ಕಾಡಲಿದೆ. ಅವರ ಕುಟುಂಬಗಳಿಗೆ ಮಾಡಬೇಕಾದ ನೆರವು ಕೂಡ ತಂಡ ಮಾಡಿದೆ. ಆದ್ರೀಗ ಲ್ಯಾಂಡ್ಲಾರ್ಡ್ ಸಿನಿಮಾ ರಿಲೀಸ್ ವೇಳೆ ಹೀಗೆ ನಗೆಟಿವ್ ಆಗಿ ಪೋಸ್ಟ್ಗಳನ್ನ ಹಾಕಿ, ಬೇಕು ಅಂತ ಕುಗ್ಗಿಸೋಕೆ ಮುಂದಾಗುವ ಪ್ರವೃತ್ತಿ ಒಳ್ಳೆಯ ಬೆಳವಣಿಗೆ ಅಂತೂ ಅಲ್ಲವೇ ಅಲ್ಲ. ಸಾಧ್ಯವಾದರೆ ಬೆನ್ನು ತಟ್ಟಿ. ಆದ್ರೆ ಎಂದಿಗೂ ಯಾರ ಕಾಲನ್ನೂ ಎಳೆಯಬೇಡಿ. ಎಲ್ಲಕ್ಕೂ ಕಾಲವೇ ಉತ್ತರಿಸಲಿದೆ.





