ಆಂಧ್ರಪ್ರದೇಶ: ಸಾಲದ ಬಾಧೆ ಮತ್ತು ಬಡತನದ ಕ್ರೂರ ಮುಖವೊಂದು ನಂದ್ಯಾಲ್ ಜಿಲ್ಲೆಯ ಉಯ್ಯಾಲವಾಡ ಗ್ರಾಮದಲ್ಲಿ ಅನಾವರಣಗೊಂಡಿದೆ. ಆರ್ಥಿಕ ಸಂಕಷ್ಟಕ್ಕೆ ಹೆದರಿದ ವ್ಯಕ್ತಿಯೊಬ್ಬ ತನ್ನ ಮೂವರು ಮಕ್ಕಳನ್ನು ಕೊಲೆ ಮಾಡಿ, ತಾನು ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರ ಪ್ರದೇಶದ ನಂದ್ಯಾಲ್ ಜಿಲ್ಲೆಯ ಉಯ್ಯಾಲವಾಡ ಗ್ರಾಮದಲ್ಲಿ ನಡೆದಿದೆ.
ಸರಣಿ ಆತ್ಮಹತ್ಯೆಯಿಂದ ಕಂಗಾಲಾದ ಕುಟುಂಬ:
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಈ ಘಟನೆಗೆ ಸಂಬಂಧಿಸಿದಂತೆ ಇದೇ ವರ್ಷದ ಆಗಸ್ಟ್ ತಿಂಗಳಿನಲ್ಲಿ ಆ ವ್ಯಕ್ತಿಯ ಪತ್ನಿ ಕೂಡ ಇದೇ ರೀತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಪತ್ನಿಯ ನಿಧನದ ನಂತರ ಪತಿ ತೀವ್ರವಾಗಿ ನೊಂದಿದ್ದರು ಜೊತೆಗೆ ಆರ್ಥಿಕ ಸಮಸ್ಯೆಯೂ ಇತ್ತು ಹೀಗಾಗಿ ಪತಿ ತನ್ನ ಮಕ್ಕಳನ್ನು ಕೊಂದು ತಾನೂ ನೇನಿಗೆ ಶಾರಣಾಗಿದ್ದಾನೆ.
ಮೃತಪಟ್ಟ ಮಕ್ಕಳ ಸಾವಿಗೆ ನಿಖರವಾದ ಕಾರಣವೇನೆಂಬುದು ಇನ್ನೂ ದೃಢಪಟ್ಟಿಲ್ಲ. ಮಕ್ಕಳಿಗೆ ವಿಷ ನೀಡಲಾಗಿದೆಯೇ ಅಥವಾ ಬೇರೆ ಯಾವುದಾದರೂ ರೀತಿಯಲ್ಲಿ ಕೊಲೆ ಮಾಡಲಾಗಿದೆಯೇ ಎಂಬುದರ ಬಗ್ಗೆ ಮರಣೋತ್ತರ ಪರೀಕ್ಷೆಯ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ತಂದೆಯ ಜೊತೆಯಲ್ಲೇ ಬೆಳೆಯಬೇಕಿದ್ದ ಎಳೆಯ ಕಂದಮ್ಮಗಳು ತಂದೆಯ ಕೈಯಿಂದಲೇ ಬಲಿಯಾಗಿರುವುದು ಇಡೀ ಗ್ರಾಮದಲ್ಲಿ ಆಶ್ಚರ್ಯಕ್ಕೆ ಕಾರಣವಾಗಿದೆ.
ಪೊಲೀಸ್ ತನಿಖೆ ಮತ್ತು ಪ್ರಾಥಮಿಕ ವರದಿ:
ಪ್ರಾಥಮಿಕ ತನಿಖೆಯ ಪ್ರಕಾರ, ಕುಟುಂಬವು ಎದುರಿಸುತ್ತಿದ್ದ ತೀವ್ರ ಹಣಕಾಸಿನ ತೊಂದರೆಯೇ ಈ ಘಟನೆಗೆ ಪ್ರಮುಖ ಕಾರಣವೆಂದು ತಿಳಿದುಬಂದಿದೆ. ಆಗಸ್ಟ್ನಲ್ಲಿ ಪತ್ನಿ ಕಳೆದುಕೊಂಡ ನಂತರ ತಂದೆ ಮಾನಸಿಕವಾಗಿ ತೀವ್ರವಾಗಿ ನೋಂದಿದ್ದರು. ಹೀಗಾಗಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಆದರೂ, ಘಟನೆಯ ಹಿಂದೆ ಬೇರೆ ಯಾವುದಾದರೂ ಕಾರಣಗಳಿವೆಯೇ ಎಂದು ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ವರದಕ್ಷಿಣೆಗಾಗಿ ಪತ್ನಿಗೆ ವಿವಸ್ತ್ರಗೊಳಿಸಿ ಚಿತ್ರಹಿಂಸೆ!
ಚಿಕ್ಕಮಗಳೂರು: ಪ್ರೀತಿಸಿ ಮದುವೆಯಾದ ಪತಿಯೇ ವರದಕ್ಷಿಣೆಗಾಗಿ ಹೆಂಡತಿಯನ್ನು ವಿವಸ್ತ್ರಗೊಳಿಸಿ, ಅಮಾನುಷವಾಗಿ ಥಳಿಸಿರುವ ದಾರುಣ ಘಟನೆ ಜಿಲ್ಲೆಯ ತರಿಕೆರೆ ತಾಲೂಕಿನ ನಂದಿಹೊಸಳ್ಳಿಯಲ್ಲಿ ನಡೆದಿದೆ.
ನಂದಿಹೊಸಳ್ಳಿಯ ತಿಮ್ಮಪ್ಪ ಮತ್ತು ತಾರಾ 2014ರಲ್ಲಿ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ಹತ್ತು ವರ್ಷಗಳ ಸಂಸಾರದಲ್ಲಿ ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆರಂಭದಲ್ಲಿ ಅನ್ಯೋನ್ಯವಾಗಿದ್ದ ದಂಪತಿಗಳ ನಡುವೆ ಇತ್ತೀಚೆಗೆ ವರದಕ್ಷಿಣೆ ವಿಚಾರಕ್ಕೆ ತೀವ್ರ ಗಲಾಟೆಯಾಗಿತ್ತಿತ್ತು ಎಂದು ತಿಳಿದುಬಂದಿದೆ. ಪತಿ ತಿಮ್ಮಪ್ಪ ಪದೇ ಪದೇ ತವರಿನಿಂದ ಹಣ ತರುವಂತೆ ಪತ್ನಿ ತಾರಾಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಲು ಆರಂಭಿಸಿದ್ದಾನೆ.
ವರದಕ್ಷಿಣೆ ಕಿರುಕುಳದ ಜೊತೆಗೆ ನೀನು ನನಗೆ ಬೇಡ, ನಾನು ಎರಡನೇ ಮದುವೆಯಾಗುತ್ತೇನೆ ಎಂದು ಕೂಗಾಡಿದ ತಿಮ್ಮಪ್ಪ, ತಾರಾ ಅವರನ್ನು ಬಲವಂತವಾಗಿ ವಿವಸ್ತ್ರಗೊಳಿಸಿ ಮನಬಂದಂತೆ ಥಳಿಸಿದ್ದಾನೆ. ಬಾಯಿಗೆ ಬಂದಂತೆ ನಿಂದಿಸಿ, ಮೃಗೀಯವಾಗಿ ವರ್ತಿಸಿದ್ದಾನೆ. ಪತಿಯ ಈ ಪೈಶಾಚಿಕ ಕೃತ್ಯಕ್ಕೆ ಬೆಚ್ಚಿಬಿದ್ದ ತಾರಾ, ಜೀವ ಉಳಿಸಿಕೊಳ್ಳಲು ಮನೆಯ ಹಿಂಬಾಗಿಲಿನಿಂದ ಬೆತ್ತಲೆಯಾಗಿಯೇ ಓಡಿಹೋಗಿ ನೆರೆಹೊರೆಯವರ ಸಹಾಯದಿಂದ ತನ್ನನ್ನು ರಕ್ಷಿಸಿಕೊಂಡಿದ್ದಾರೆ ತಿಳಿದುಬಂದಿದೆ.
ಪತಿಯ ಚಿತ್ರಹಿಂಸೆಯಿಂದ ನೊಂದ ತಾರಾ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವ ಪೊಲೀಸರು, ಮುಖ್ಯ ಆರೋಪಿ ತಿಮ್ಮಪ್ಪ, ಆತನ ತಂದೆ ಸೇರಿದಂತೆ ಒಟ್ಟು ಎಂಟು ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಸದ್ಯ ಆರೋಪಿಗಳಿಗಾಗಿ ಶೋಧಕಾರ್ಯ ನಡೆಯುತ್ತಿದೆ.





