ಬೆಂಗಳೂರು: ಕಿರುತೆರೆ ಲೋಕವನ್ನು ಬೆಚ್ಚಿಬೀಳಿಸಿದ ನಟಿ ನಂದಿನಿ ಆತ್ಮಹತ್ಯೆ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಬೆಂಗಳೂರಿನ ಆರ್.ಆರ್.ನಗರದಲ್ಲಿ ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದ ನಟಿ ನಂದಿನಿ ಅವರ ಸಾವಿನ ಹಿಂದಿನ ಕಾರಣಗಳ ಬಗ್ಗೆ ಹಲವು ಅನುಮಾನಗಳು ಮೂಡಿದ್ದವು. ಇದೀಗ ಅವರು ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಪತ್ತೆಯಾದ ಡೈರಿಯೊಂದು ಸಾವಿನ ಸತ್ಯ ತಿಳಿಸಿದೆ.
ಕೆಂಗೇರಿ ಪೊಲೀಸರು ವಶಕ್ಕೆ ಪಡೆದಿರುವ ಡೈರಿಯಲ್ಲಿ ನಂದಿನಿ ತಮ್ಮ ಮನಸ್ಸಿನ ನೋವು, ಜೀವನದ ಬಗ್ಗೆ ಹೊಂದಿದ್ದ ಗೊಂದಲಗಳನ್ನು ಬರೆದಿಟ್ಟಿದ್ದಾರೆ ಎನ್ನಲಾಗಿದೆ. “ನನಗೆ ಸರ್ಕಾರಿ ಕೆಲಸ ಇಷ್ಟ ಇಲ್ಲ. ನನಗೆ ಆಕ್ಟಿಂಗ್ ಅಂದರೆ ತುಂಬಾ ಇಷ್ಟ. ನನ್ನ ಮನಸ್ಸಿಗೆ ಇಷ್ಟವಿಲ್ಲದ ಬದುಕನ್ನು ಬದುಕಲು ಆಗುತ್ತಿಲ್ಲ. ಅದಕ್ಕಾಗಿ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ” ಎಂದು ಡೈರಿಯಲ್ಲಿ ಉಲ್ಲೇಖಿಸಿದ್ದಾರೆ.
ನಟಿ ನಂದಿನಿ ಅವರು ಬೆಂಗಳೂರಿನ ಆರ್.ಆರ್.ನಗರದಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಮಾಹಿತಿ ಪಡೆದ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಕೆಂಗೇರಿ ಪೊಲೀಸರು ಪರಿಶೀಲನೆ ನಡೆಸಿ, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು.
ಮೂಲತಃ ಕೊಟ್ಟೂರು ನಿವಾಸಿಯಾಗಿದ್ದ ನಂದಿನಿ, ತಮ್ಮ ನಟನಾ ಕನಸುಗಳನ್ನು ಹೊತ್ತು ಬೆಂಗಳೂರಿಗೆ ಬಂದಿದ್ದರು. ಕನ್ನಡ ಮತ್ತು ತಮಿಳು ಕಿರುತೆರೆಯಲ್ಲಿ ತಮ್ಮದೇ ಆದ ಗುರುತನ್ನು ನಿರ್ಮಿಸಿಕೊಂಡಿದ್ದ ಅವರು, ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ‘ಜೀವ ಹೂವಾಗಿದೆ’, ‘ಸಂಘರ್ಷ’, ‘ನೀನಾದೆ ನಾ’, ‘ಮದುಮಗಳು’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಅವರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದರು.
ಇತ್ತೀಚೆಗೆ ತಮಿಳಿನ ಜನಪ್ರಿಯ ಧಾರಾವಾಹಿಯೊಂದರಲ್ಲಿ ದ್ವಿಪಾತ್ರದಲ್ಲಿ ನಟಿಸುತ್ತಿದ್ದ ನಂದಿನಿ, ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ನಂದಿನಿ ಕುಟುಂಬದ ಒತ್ತಡ, ಭವಿಷ್ಯದ ಬಗ್ಗೆ ಉಂಟಾಗಿದ್ದ ಗೊಂದಲ ಹಾಗೂ ತಮಗೆ ಇಷ್ಟವಿಲ್ಲದ ಜೀವನದ ದಿಕ್ಕುಗಳು ಮಾನಸಿಕವಾಗಿ ಅವರನ್ನು ಕಾಡುತ್ತಿದ್ದವು ಎನ್ನಲಾಗಿದೆ. ಸರ್ಕಾರಿ ಕೆಲಸದತ್ತ ಒಲವು ತೋರಬೇಕೆಂಬ ನಿರೀಕ್ಷೆ ಮತ್ತು ತಮ್ಮ ನಟನಾ ಆಸೆಗಳ ನಡುವೆ ಅವರು ತೀವ್ರ ಮಾನಸಿಕವಾಗಿ ನೊಂದಿದ್ದರು. ಎಂಬುದು ಡೈರಿಯಲ್ಲಿನ ಬರಹಗಳಿಂದ ತಿಳಿದುಬಂದಿದೆ. ಇನ್ನೂ ಕೆಂಗೇರಿ ಪೊಲೀಸರು ಡೈರಿಯಲ್ಲಿರುವ ಮಾಹಿತಿಯನ್ನು ಆಧರಿಸಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.





