ನವದೆಹಲಿ: ಉತ್ತರ ಭಾರತವನ್ನು ಆವರಿಸಿರುವ ದಟ್ಟ ಮಂಜು ಮತ್ತು ಹೊಗೆಯ ಪರಿಣಾಮ ಸೋಮವಾರ (ಡಿಸೆಂಬರ್ 15) ಬೆಳಿಗ್ಗೆ ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ವಿಮಾನ ಸಂಚಾರ ಅಸ್ತವ್ಯಸ್ತಗೊಂಡಿವೆ.
ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು 75ಕ್ಕೂ ಹೆಚ್ಚು ವಿಮಾನಗಳು ವಿಳಂಬ, ರದ್ದತಿ ಮತ್ತು ತಿರುವುಗಳನ್ನು ಎದುರಿಸಿವೆ. ಈ ಹವಾಮಾನ ವೈಪರೀತ್ಯವು ಚಳಿಗಾಲದ ಮೊದಲ ದೊಡ್ಡ ಮಂಜಿನ ಅಲೆಯಾಗಿದ್ದು, ಪ್ರಯಾಣಿಕರಿಗೆ ತೊಂದರೆಯನ್ನುಂಟುಮಾಡಿದೆ.
ಬೆಳಗಿನ ಜಾವದಿಂದಲೇ ದೆಹಲಿಯಲ್ಲಿ ಮಂಜು ದಟ್ಟವಾಗಿ ಆವರಿಸಿಕೊಂಡಿದೆ. ಈ ಹವಾಮಾನ ವೈಪರೀತ್ಯದಿಂದಾಗಿ ವಿಮಾನಗಳ ಟೇಕಾಫ್ ಮತ್ತು ಲ್ಯಾಂಡಿಂಗ್ ಪ್ರಕ್ರಿಯೆಗಳು ನಿಧಾನಗತಿಯಲ್ಲಿ ನಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಪರಿಣಾಮವಾಗಿ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಕಾಯುವಂತಾಯಿತು.
ಮಾಹಿತಿಯ ಪ್ರಕಾರ, ದೆಹಲಿ ವಿಮಾನ ನಿಲ್ದಾಣದಲ್ಲಿ ಮಾತ್ರವೇ ಸುಮಾರು 75ಕ್ಕೂ ಹೆಚ್ಚು ವಿಮಾನಗಳ ಮೇಲೆ ಪರಿಣಾಮ ಬೀರಿದೆ. ಇದರಲ್ಲಿ ಸುಮಾರು 40ಕ್ಕೂ ಹೆಚ್ಚು ವಿಮಾನಗಳು ರದ್ದುಗೊಂಡಿದ್ದು, ನಾಲ್ಕು ವಿಮಾನಗಳನ್ನು ಪರ್ಯಾಯ ವಿಮಾನ ನಿಲ್ದಾಣಗಳಿಗೆ ತಿರುಗಿಸಲಾಗಿದೆ. ಉಳಿದ ವಿಮಾನಗಳು ಹಲವು ಗಂಟೆಗಳ ನಂತರ ತಮಮ್ ಕಾರ್ಯಾಚರಣೆ ಮುಂದುವರೆಸಿವೆ. ದೆಹಲಿಯಿಂದ ಹೊರಡುವ ಹಾಗೂ ದೆಹಲಿಗೆ ಆಗಮಿಸುವ ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳಲ್ಲಿ ವ್ಯತ್ಯಯ ಉಂಟಾಗಿವೆ.
ವಿಮಾನಯಾನ ಸಂಸ್ಥೆಗಳು ಸುರಕ್ಷತೆಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿರುವುದರಿಂದ, ಹವಾಮಾನ ಸ್ಥಿತಿ ಸುಧಾರಿಸುವವರೆಗೆ ನಿರ್ಗಮನ ಮತ್ತು ಆಗಮನ ವೇಳಾಪಟ್ಟಿಗಳನ್ನು ಬದಲಾಯಿಸಬೇಕಾಯಿತು.
ರಾಷ್ಟ್ರೀಯ ರಾಜಧಾನಿ ಪ್ರದೇಶದ (NCR) ಗಾಜಿಯಾಬಾದ್, ಗುರುಗ್ರಾಮ, ನೋಯ್ಡಾ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿಯೂ ಮಂಜಿನ ಪ್ರಭಾವ ತೀವ್ರವಾಗಿತ್ತು. ಹವಾಮಾನ ಇಲಾಖೆ ಮುಂದಿನ ಕೆಲ ದಿನಗಳ ಕಾಲ ಉತ್ತರ ಭಾರತದಲ್ಲಿ ಮಂಜಿನ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ.
ಈ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ಸಚಿವಾಲಯವು ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ವಿಮಾನ ನಿಲ್ದಾಣಗಳಿಗೆ ಭಾರೀ ಮಂಜು ಮುಸುಕಿನ ಎಚ್ಚರಿಕೆ (Fog Alert) ಹೊರಡಿಸಿದೆ. ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಹೊರಡುವ ಮೊದಲು ತಮ್ಮ ವಿಮಾನದ ಸಂಚಾರಕ್ಕೆ ಸಂಬಂಧಿತ ವಿಮಾನಯಾನ ಸಂಸ್ಥೆ ಅಥವಾ ವಿಮಾನ ನಿಲ್ದಾಣದ ಅಧಿಕೃತ ವೆಬ್ಸೈಟ್ ಮೂಲಕ ಪರಿಶೀಲಿಸಬೇಕು ಎಂದು ಸಲಹೆ ನೀಡಲಾಗಿದೆ. ಜೊತೆಗೆ, ಹೆಚ್ಚುವರಿ ಪ್ರಯಾಣ ಸಮಯವನ್ನು ಗಮನದಲ್ಲಿಟ್ಟು ಮುಂಚಿತವಾಗಿಯೇ ವಿಮಾನ ನಿಲ್ದಾಣಕ್ಕೆ ಆಗಮಿಸುವಂತೆ ಸೂಚಿಸಲಾಗಿದೆ.





