ನವದೆಹಲಿ (ನ.5): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹರಿಯಾಣ ಚುನಾವಣೆಯ ಮತದಾರರ ಪಟ್ಟಿಯಲ್ಲಿ “ಮತಗಳ್ಳತನ” ನಡೆದಿವೆ ಎಂದು ಆರೋಪಿಸಿದ್ದಾರೆ. ಬುಧವಾರ ನವದೆಹಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, “ಒಬ್ಬ ಬ್ರೆಜಿಲ್ ಮೂಲದ ಮಾಡೆಲ್ ಹರಿಯಾಣದ 10 ಮತಗಟ್ಟೆಗಳಲ್ಲಿ 22 ಬಾರಿ ಮತದಾರರಾಗಿ ನೋಂದಾಯಿಸಿಕೊಂಡಿದ್ದಾಳೆ” ಎಂದು ಆರೋಪ ಮಾಡಿದರು.
“ಈ ಮಹಿಳೆ ಯಾರು? ಆಕೆಯ ಹೆಸರೇನು? ಆಕೆ ಬ್ರೆಜಿಲ್ನವಳು, ಆದರೆ ಹರಿಯಾಣದಲ್ಲಿ ಸೀಮಾ, ಸ್ವೀಟಿ, ಸರಸ್ವತಿ, ರಶ್ಮಿ, ವಿಲ್ಮಾ ಎಂಬ ಹಲವು ಹೆಸರಿನಲ್ಲಿ ಮತದಾರಳಾಗಿ ದಾಖಲಾಗಿದ್ದಾಳೆ. ಒಂದೇ ವ್ಯಕ್ತಿ 10 ಬೂತ್ಗಳಲ್ಲಿ 22 ಬಾರಿ ನೋಂದಾಯಿಸಿಕೊಂಡಿರುವುದು ಹೇಗೆ ಸಾಧ್ಯ?” ಎಂದು ರಾಹುಲ್ ಪ್ರಶ್ನಿಸಿದರು.
“ನಕಲಿ ಮತಗಳು ಮತ್ತು ಅಂಚೆ ಮತಪತ್ರಗಳ ದುರ್ಬಳಕೆ ಮೂಲಕ ಬಿಜೆಪಿ ತನ್ನ ಗೆಲುವು ಖಚಿತಪಡಿಸಿಕೊಂಡಿದೆ. ಇದು ಭಾರತದ ಚುನಾವಣಾ ವ್ಯವಸ್ಥೆಯ ನಂಬಿಕೆಯನ್ನು ಹಾಳು ಮಾಡುವಂತಹ ಮಹಾ ಪಿತೂರಿ,” ಎಂದು ಗಾಂಧಿ ಹೇಳಿದರು.
25 ಲಕ್ಷ ಮತಗಳ ಕಳ್ಳತನದ ಆರೋಪ
ರಾಹುಲ್ ಗಾಂಧಿಯವರ ಪ್ರಕಾರ, ಹರಿಯಾಣದಲ್ಲಿ ನಡೆದ 2024ರ ಚುನಾವಣೆಯಲ್ಲಿ ಸುಮಾರು 25 ಲಕ್ಷ ಮತಗಳು ಕಳುವಾಗಿವೆ.
ಅಂಕಿ-ಅಂಶಗಳ ಪ್ರಕಾರ
-
5.21 ಲಕ್ಷ ನಕಲಿ ಮತದಾರರು
-
93,174 ಅಮಾನ್ಯ ಮತದಾರರು
-
19.26 ಲಕ್ಷ ಬಲ್ಕ್ ವೋಟರ್ಸ್ (ಒಟ್ಟಾಗಿ ಮತ ಹಾಕಿದವರು)
“ಹರಿಯಾಣದ ಮತದಾರರ ಪಟ್ಟಿಯಲ್ಲಿ ಎಂಟು ಜನರಲ್ಲಿ ಒಬ್ಬರು ನಕಲಿ ಮತದಾರರಾಗಿದ್ದಾರೆ. ಈ ಅಂಕಿ-ಅಂಶಗಳು ಕೇವಲ ಒಂದು ಜಿಲ್ಲೆ ಅಥವಾ ಕ್ಷೇತ್ರದ ವಿಷಯವಲ್ಲ, ಇಡೀ ರಾಜ್ಯದ ಮಟ್ಟದಲ್ಲಿ ನಡೆಯುತ್ತಿರುವ ರಾಜಕೀಯ ಯಂತ್ರದ ಭಾಗವಾಗಿದೆ” ಎಂದು ರಾಹುಲ್ ಆರೋಪಿಸಿದರು.
ಅವರು, ಈ ವಿಷಯಕ್ಕೆ “ಎಚ್ ಫೈಲ್ಸ್ (H-Files)” ಎಂಬ ಹೆಸರನ್ನು ನೀಡಿದ್ದು, “ಈ ಫೈಲ್ನಲ್ಲಿ ಮತದಾರರ ಪಟ್ಟಿಯ ಹಗರಣದ ಸಂಪೂರ್ಣ ಪುರಾವೆಗಳಿವೆ. ಇದು ಕೇವಲ ಹರಿಯಾಣದಲ್ಲಲ್ಲ, ರಾಷ್ಟ್ರಮಟ್ಟದಲ್ಲಿಯೂ ನಡೆಯುತ್ತಿವೆ ಎಂದರು.
“ಕಾಂಗ್ರೆಸ್ ಪಕ್ಷದ ಭರ್ಜರಿ ಗೆಲುವನ್ನು ಸೋಲಾಗಿ ಪರಿವರ್ತಿಸಲು ಚುನಾವಣಾ ಆಯೋಗ ಮತ್ತು ಬಿಜೆಪಿ ಪಿತೂರಿ ನಡೆಸುತ್ತಿವೆ,” ಎಂದು ರಾಹುಲ್ ಗಾಂಧಿ ಆರೋಪಿಸಿದರು. “ಈ ಹಗರಣ ಭಾರತದ ಯುವಜನತೆ, ವಿಶೇಷವಾಗಿ ಜೆನ್ಜೀ ಪೀಳಿಗೆ, ಗಂಭೀರವಾಗಿ ಅರ್ಥಮಾಡಿಕೊಳ್ಳಬೇಕಾದ ವಿಷಯ. ಇದು ನಿಮ್ಮ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ನೇರವಾಗಿ ಸಂಬಂಧಪಟ್ಟಿದೆ,” ಎಂದು ಅವರು ಎಚ್ಚರಿಸಿದರು.
“ನಾನು ಚುನಾವಣಾ ಆಯೋಗವನ್ನು ನೇರವಾಗಿ ಪ್ರಶ್ನಿಸುತ್ತಿದ್ದೇನೆ. ನಾವು 100% ಪುರಾವೆಗಳೊಂದಿಗೆ ಮಾತನಾಡುತ್ತಿದ್ದೇವೆ. ಕಾಂಗ್ರೆಸ್ ಪಕ್ಷದ ಗೆಲುವನ್ನು ಸೋಲಾಗಿ ತಿರುಗಿಸಲು ಯೋಜಿತ ಕೃತ್ಯ ನಡೆದಿದೆ,” ಎಂದು ಸ್ಪಷ್ಟವಾಗಿ ಹೇಳಿದರು.
ಚುನಾವಣಾ ಆಯೋಗದ ಪ್ರತಿಕ್ರಿಯೆ
ರಾಹುಲ್ ಗಾಂಧಿಯ ಆರೋಪಗಳಿಗೆ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ. “ಯಾರಾದರೂ 10 ಬೂತ್ಗಳಲ್ಲಿ 22 ಬಾರಿ ಮತಚಲಾವಣೆ ಮಾಡಿದ್ದಾರೆ ಎಂದರೆ, ಆ ಸಂದರ್ಭದಲ್ಲಿ ಕಾಂಗ್ರೆಸ್ನ ಮತಗಟ್ಟೆ ಏಜೆಂಟರು ಏಕೆ ಆಕ್ಷೇಪಣೆ ವ್ಯಕ್ತಪಡಿಸಲಿಲ್ಲ?” ಎಂದು ಆಯೋಗ ಪ್ರಶ್ನಿಸಿದೆ.
ಆಯೋಗದ ಒಳಗಿನವರ ಪ್ರಕಾರ, “ಮತದಾರರ ಪಟ್ಟಿಯನ್ನು ಅಂತಿಮಗೊಳಿಸುವ ಮೊದಲು ಎಲ್ಲಾ ರಾಜಕೀಯ ಪಕ್ಷಗಳಿಗೂ ಅದರ ಪ್ರತಿಗಳನ್ನು ಹಂಚಲಾಗುತ್ತದೆ. ಯಾವುದೇ ನಕಲಿ ನೋಂದಣಿಗಳ ವಿರುದ್ಧ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಹೀಗಿರುವಾಗ ಈಗ ಏಕೆ ಆಕ್ಷೇಪಣೆ?” ಎಂದು ಪ್ರತಿಪ್ರಶ್ನೆ ಮಾಡಿದೆ.





