ಮಂಡ್ಯ: ಕೃಷ್ಣರಾಜಸಾಗರ (ಕೆಆರ್ಎಸ್) ಅಣೆಕಟ್ಟು ಪ್ರದೇಶದಲ್ಲಿ ನಡೆಯುತ್ತಿರುವ ಕಾವೇರಿ ಆರತಿ ಮಹೋತ್ಸವ ನಾಲ್ಕನೇ ದಿನವೂ ಭಕ್ತಿ ಭಾವದಿಂದ ಕೂಡಿತ್ತು. ಗಂಗಾರತಿಯ ಮಾದರಿಯಲ್ಲಿ ನಡೆಯುತ್ತಿರುವ ಈ ವಿಶೇಷ ಆರತಿ ಕಾರ್ಯಕ್ರಮವನ್ನು ವೀಕ್ಷಿಸಲು ಸಾವಿರಾರು ಭಕ್ತರು ಆಗಮಿಸಿದ್ದರು.
ಕೆಆರ್ಎಸ್ನಲ್ಲಿ ನಡೆದ ವೇದಿಕೆ ಕಾರ್ಯಕ್ರಮದ ಮೂಲಕ ದಿನದ ಕಾರ್ಯಕ್ರಮಗಳು ಆರಂಭವಾದವು. ಈ ಸಂದರ್ಭದಲ್ಲಿ ಸುತ್ತೂರು ದೇಶಿಕೇಂದ್ರ ಸ್ವಾಮಿಜಿ ಮತ್ತು ಸಿದ್ದಲಿಂಗ ಸ್ವಾಮೀಜಿ ವೇದಿಕೆಗೆ ಆಗಮಿಸಿದ್ದರು. ಜಿಲ್ಲಾಡಳಿತದ ಪರವಾಗಿ ಸುತ್ತೂರು ಶ್ರೀ ಮಠದ ದೇಶಿಕೇಂದ್ರ ಸ್ವಾಮಿಜಿಗಳನ್ನು ಸನ್ಮಾನ ಮಾಡಿ ಗೌರವಿಸಲಾಯಿತು. ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಅವರು ನೀಡಿರುವ ಅಮೂಲ್ಯ ಕೊಡುಗೆಗಳನ್ನು ಈ ಸನ್ಮಾನದ ಮೂಲಕ ಗುರುತಿಸಲಾಯಿತು.
ವೇದಿಕೆ ಕಾರ್ಯಕ್ರಮದ ನಂತರ ಕಾವೇರಿ ನದಿ ತಟದಲ್ಲಿ ,ಕಾವೇರಿ ಆರತಿ ನಡೆಯಿತು. ಈ ಆರತಿಯನ್ನು ಸ್ಥಳೀಯ ವೈದಿಕ ಅರ್ಚಕರು ಮತ್ತು ವಾರಣಾಸಿಯಿಂದ ವಿಶೇಷವಾಗಿ ಆಹ್ವಾನಿಸಲಾದ ತಂಡವು ಒಟ್ಟಿಗೆ ನಡೆಸಿದರು. ಉತ್ತರ ಭಾರತದ ಗಂಗಾ ಆರತಿಯನ್ನು ಅನುಸರಿಸಿ ಅದೇ ಶ್ರದ್ಧೆ ಮತ್ತು ವೈಭವದಿಂದ ಕಾವೇರಿ ದೇವಿಗೆ ಈ ಆರತಿ ಮಾಡಲಾಯಿತು.
ಕಾವೇರಿ ಆರತಿಯ ನಂತರ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಗಾಯಕ ರಾಜೇಶ್ ಕೃಷ್ಣನ್ ಮನಮೋಹಕ ಗಾಯನಗಳ ಮೂಲಕ ಜನರನ್ನ ರಂಜಿಸಿದರು. ಪ್ರಭಕ್ತಿ ಗೀತೆಗಳಿಂದ ಹಿಡಿದು ಜನಪದ ಗೀತೆಗಳವರೆಗಿನ ಅವರ ಹಾಡುಗಳು, ಕಾರ್ಯಕ್ರಮದ ವಾತಾವರಣವನ್ನು ಇನ್ನಷ್ಟು ಉತ್ಸಾಹಭರಿತಗೊಳಿಸಿದವು.





