ಕನ್ನಡದ ಬಹುತೇಕ ಪ್ರತಿಭಾವಂತ ನಟರು ಈಗಾಗಲೇ ಪರಭಾಷೆಯ ಚಿತ್ರರಂಗದಲ್ಲಿ ಗಟ್ಟಿ ನೆಲೆ ಕಂಡಿದ್ದಾರೆ. ಒಂದಷ್ಟು ಮಂದಿ ಈಗಷ್ಟೇ ಛಾಪು ಮೂಡಿಸುತ್ತಿದ್ದಾರೆ. ಈಗ ಆ ಸಾಲಿಗೆ ಕನ್ನಡದ ಮತ್ತೊಬ್ಬ ಯುವ ನಟ ಪ್ರಭಾಕರ್ ಬೋರೇಗೌಡ ಕೂಡ ಭವ್ಯ ಭರವಸೆಯೊಂದಿಗೆ ತಮಿಳು ಚಿತ್ರರಂಗಕ್ಕೆ ಎಂಟ್ರಿಯಾಗಿದ್ದಾರೆ. ಹೌದು, ಪ್ರಭಾಕರ್ ಕನ್ನಡದ ಕಿರುತೆರೆಯಲ್ಲಿ ಮಿಂಚಿದವರು. ಕಳೆದ ಎರಡು ದಶಕಗಳಿಂದಲೂ ಪ್ರಭಾಕರ್ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಹಲವು ಸಿನಿಮಾಗಳಲ್ಲೂ ಅವರು ನೆಗೆಟಿವ್ ರೋಲ್ ಮೂಲಕ ಗಮನಸೆಳೆದಿದ್ದಾರೆ. ಈಗ ತಮಿಳಿನ ಅಕ್ಯೂಸ್ಡ್ ಸಿನಿಮಾ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಪ್ರಭಾಕರ್ ಅಭಿನಯದ ಅಕ್ಯೂಸ್ಡ್ (Accused) ಸಿನಿಮಾವನ್ನು ಪ್ರಭು ಶ್ರೀನಿವಾಸ್ ನಿರ್ದೇಶಿಸಿದ್ದು, ಚಿತ್ರದಲ್ಲಿ ಉದಯ, ಯೋಗಿಬಾಬು, ಅಜ್ಮಲ್, ಜಾನ್ವಿಕ ಇತರರು ನಟಿಸಿದ್ದಾರೆ. ಈ ಚಿತ್ರದಲ್ಲಿ ಪ್ರಭಾಕರ್ ಅವರದು ಖಳನಟನ ಪಾತ್ರ. ಇಡೀ ಸಿನಿಮಾದ ಮೇನ್ ವಿಲನ್ ಆಗಿ ನಟಿಸಿರುವ ಪ್ರಭಾಕರ್ ಅವರಿಗೆ ಈ ಸಿನಿಮಾದ ಮೇಲೆ ನಂಬಿಕೆ ಇದೆ. ಆಗಸ್ಟ್ ೧ಕ್ಕೆ ಈ ಸಿನಿಮಾ ವರ್ಲ್ಡ್ ವೈಡ್ ರಿಲೀಸ್ ಆಗುತ್ತಿದೆ. ಈಗಾಗಲೇ ಸಿನಿಮಾದ ಟ್ರೇಲರ್ ಗೆ ಸಾಕಷ್ಟು ಮೆಚ್ಚುಗೆ ಸಿಕ್ಕಿದ್ದು, ಪ್ರಭಾಕರ್ ಅವರಿಗೂ ಚಿತ್ರ ಹೆಸರು ತಂದುಕೊಡುತ್ತೆ ಎಂಬ ವಿಶ್ವಾಸವಿದೆ.
ಪ್ರಭಾಕರ್ ಅವರು ಕಳೆದ ಎರಡು ದಶಕಕ್ಕೂ ಹೆಚ್ಚು ಕಾಲ ಬಣ್ಣದ ಲೋಕದಲ್ಲಿದ್ದವರು. ಮೂಲತಃ ಮಂಡ್ಯದವರಾದ ಪ್ರಭಾಕರ್ ಚಿಕ್ಕಂದಿನಲ್ಲೇ ಕಲೆಯ ಮೇಲೆ ಪ್ರೀತಿ ಹೊಂದಿದವರು. ಎಂಜಿನಿಯರಿಂಗ್ ಮುಗಿಸಿ, ಬೆಂಗಳೂರಿಗೆ ಬಂದ ಪ್ರಭಾಕರ್ ಅಭಿನಯ ತರಂಗದಲ್ಲಿ ರಂಗಭೂಮಿಯ ತಾಲೀಮು ನಡೆಸಿ, ಹಲವಾರು ನಾಟಕ ಮಾಡಿ ಸೈ ಎನಿಸಿಕೊಂಡವರು. ನಂತರ ಕಿರುತೆರೆಗೆ ಕಾಲಿಟ್ಟ ಪ್ರಭಾಕರ್, ಸುಮಾರು ಐದು ಸಾವಿರಕ್ಕೂ ಹೆಚ್ಚು ಎಪಿಸೋಡ್ ಗಳಲ್ಲಿ ಕಾಣಿಸಿಕೊಂಡು ಮನೆಮಾತಾದವರು.
“ಕಪಿಚೇಷ್ಟೇ”, “ಕುಂಕುಮ ಭಾಗ್ಯ”, “ಸೌಂದರ್ಯ ಲಹರಿ” , “ಮಾಂಗಲ್ಯ”, “ಪುಣ್ಯಕೋಟಿ” ಸೀರಿಯಲ್ಸ್ ಮಾಡಿದೆ. “ಪುಣ್ಯಕೋಟಿ” ಧಾರಾವಾಹಿ ಬರೋಬ್ಬರಿ ಎರಡು ಸಾವಿರ ಎಪಿಸೋಡು ಮೂಡಿಬಂತು. “ಬದುಕು” ಸೀರಿಯಲ್ ಕೂಡ ಹೊಸ ಬದುಕು ಕಟ್ಟಿಕೊಟ್ಟಿತು. ಇದು ೬ ವರ್ಷಗಳ ಕಾಲ ಪ್ರಸಾರವಾಯ್ತು. “ಮನೆಯೊಂದು ಮೂರು ಬಾಗಿಲು” ಧಾರಾವಾಹಿಯಲ್ಲಿ ನೆಗೆಟಿವ್ ರೋಲ್ ಮಾಡಿದೆ. ಪುಣ್ಯಕೋಟಿ ಸೀರಿಯಲ್ ಗೆ ಎ.ಜಿ.ಶೇಷಾದ್ರಿ ಅವರು ಇವರನ್ನ ಹೀರೋ ಮಾಡಿದ್ರು. ಅಲ್ಲಿಂದ ಬಹುತೇಕ ಹೀರೋ ಪಾತ್ರಗಳಲ್ಲೇ ಕಾಣಿಸಿಕೊಂಡ ಪ್ರಭಾಕರ್ ಅವರ ಕೈಯಲ್ಲಿ ಸಾಕಷ್ಟು ಸೀರಿಯಲ್ ಗಳಿದ್ದವು. ಒಂದು ಕಡೆ ಸೀರಿಯಲ್ಸ್ ನಲ್ಲಿ ಬಿಜಿ. ಇನ್ನೊಂದು ಕಡೆ ಅವರದೇ ಆದ ಒಂದು ಬಿಜಿನೆಸ್ ರನ್ ಮಾಡುತ್ತಿದ್ದ ಅವರಿಗೆ ಸೀರಿಯಲ್ಸ್ ಸಾಕು ಅನಿಸಿ ಸಿನಿಮಾ ಕಡೆ ಮುಖ ಮಾಡಿದರು.
ಮೆಲ್ಲನೆ ಸಿನಿಮಾ ಅವಕಾಶಗಳು ಅವರನ್ನು ಹುಡುಕಿ ಬಂದವು. “ಕರಿಯ 2 ” ಸಿನಿಮಾದಲ್ಲಿ ವಿಲನ್ ಆಗಿ ನಟಿಸುವ ಮೂಲಕ ಸಿನಿಮಾಗೆ ಎಂಟ್ರಿಕೊಟ್ಟರು. ಸಂಚಾರಿ ವಿಜಯ್ ಅವರ ಜೊತೆ “ಅಹಂ ಬ್ರಹ್ಮಾಸಿ” ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದರು. ಅವರಿಗೆ ಬಹುತೇಕ ನೆಗೆಟಿವ್ ರೋಲ್ ಗಳೇ ಹೆಚ್ಚು ಹುಡುಕಿ ಬಂದವು. ಅವರಿಗೆ ಈಗಲೂ ನೆಗೆಟಿವ್ ರೋಲ್ ಮಾಡುವುದೆಂದರೆ ಪ್ರೀತಿ. ಇತ್ತೀಚೆಗೆ ತೆರೆಕಂಡ “ರುದ್ರ ಗರುಡ ಪುರಾಣ” ಸಿನಿಮಾದಲ್ಲೂ ನೆಗೆಟಿವ್ ರೋಲ್ ಮಾಡಿ ಸೈ ಎನಿಸಿಕೊಂಡರು. ಸದ್ಯ ಬಿಡುಗಡೆ ಆಗಬೇಕಿರುವ ಕೆಲ ಸಿನಿಮಾಗಳಿವೆ.
ಅಲ್ಲೂ ನೆಗೆಟಿವ್ ರೋಲ್ ಗಳಲ್ಲೇ ಕಾಣಿಸಿಕೊಂಡಿದ್ದಾರೆ. ಪ್ರಭಾಕರ್ ಅವರಿಗೆ ನೆಗೆಟಿವ್ ರೋಲ್ ಅಂದರೆ ಅಚ್ಚುಮೆಚ್ಚು.
ಸದ್ಯ ಅವರ ಕೆರಿಯರ್ ನ ಮತ್ತೊಂದು ಹೊಸ ಮಜಲು ಅಂದರೆ ಅದು ತಮಿಳಿನ ಅಕ್ಯೂಸ್ಡ್ ಸಿನಿಮಾ. ಇದರಲ್ಲಿ ಅವರೇ ಮೇನ್ ವಿಲನ್. ಚಿತ್ರದ ಕಂಟೆಂಟ್ ಹೊಸದಾಗಿದೆ. ಹಾಗಾಗಿ ಅವರಿಗೆ ಆ ಚಿತ್ರದ ಮೇಲೆ ನಂಬಿಕೆ ಮತ್ತು ಭರವಸೆ ಇದೆಯಂತೆ. ಆಗಸ್ಟ್ ೧ಕ್ಕೆ ವರ್ಲ್ಡ್ ವೈಡ್ ರಿಲೀಸ್ ಆಗುತ್ತಿರುವ ಸಿನಿಮಾದಲ್ಲಿ ಫುಲ್ ಆಕ್ಷನ್ ಇದೆ. ಅವರಿಗೆ ಹಿರಿಯ ಕಲಾವಿದರು, ತಾಂತ್ರಿಕ ವರ್ಗದವರ ಕೆಲಸ ಮಾಡಿದ ತೃಪ್ತಿ ಇದೆ.
ಈಗಾಗಲೇ ಸಿನಿಮಾದ ಟ್ರೇಲರ್ ನೋಡಿದವರು ಮೆಚ್ಚಿದ್ದಾರೆ. ಸದ್ಯ ತಮಿಳಿನಲ್ಲಿ ಸೌಂಡ್ ಮಾಡುತ್ತಿರುವ ಈ ಸಿನಿಮಾ ನೋಡಿರುವ ಒಂದಷ್ಟು ನಿರ್ದೇಶಕರು, ಪ್ರಭಾಕರ್ ಅವರ ನಟನೆ ನೋಡಿ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಅಲ್ಲಿನ ನಿರ್ದೇಶಕರು ಒಂದಷ್ಟು ಕಥೆಗಳನ್ನು ಹೇಳುತ್ತಿದ್ದಾರೆ. ಕಾಲಿವುಡ್ ನಲ್ಲಿ ನೆಲೆಯೂರುವ ನಂಬಿಕೆ ಅವರಿಗಿದೆ. ಅದೇನೆ ಇರಲಿ, ಕನ್ನಡದ ಬಹುತೇಕ ನಟರು ಪರಭಾಷೆಯತ್ತ ಮುಖ ಮಾಡಿ ಗೆಲುವು ಕಂಡಿದ್ದಾರೆ. ಪ್ರಭಾಕರ್ ಕೂಡ ಆ ನಿರೀಕ್ಷೆಯಲ್ಲಿದ್ದಾರೆ.