ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ಆಕ್ಸಿಯಂ-4 (Axiom-4) ಮಿಷನ್ನ ನಾಲ್ವರು ಗಗನಯಾತ್ರಿಗಳು ಸುರಕ್ಷಿತವಾಗಿ ಭೂಮಿಗೆ ವಾಪಸಾಗಿದ್ದಾರೆ. ಜೂನ್ 25ರಂದು ಆಂತರಿಕ ಗಗನ ನಿಲ್ದಾಣಕ್ಕೆ (ISS) ತೆರಳಿದ್ದ ಈ ತಂಡ, ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಕ್ಯಾಲಿಫೋರ್ನಿಯಾದ ಕರಾವಳಿಯಲ್ಲಿ ಸ್ಪ್ಲ್ಯಾಶ್ಡೌನ್ ಆಗಿದೆ. ಶುಭಾಂಶು ಶುಕ್ಲಾ, ಅಮೆರಿಕದ ಪೆಗ್ಗಿ ವಿಟ್ಸನ್, ಪೋಲೆಂಡ್ನ ಉಜಾಂನ್ಸಿ ಮತ್ತು ಹಂಗೇರಿಯ ಟಿಬೊರ್ ಕಾಪುಗೆ ಅವರು ಆಕ್ಸಿಯೋಂ-4 ಮಿಷನ್ (Axiom-4) ಭಾಗವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ತೆರಳಿದ್ದರು. ಈಗ ಯಶಸ್ವಿಯಾಗಿ ಭೂಮಿಗೆ ಮರಳಿದೆ.
ಸ್ಪ್ಲ್ಯಾಶ್ಡೌನ್ ಬಳಿಕ, ಗಗನಯಾತ್ರಿಗಳು ಭೂಮಿಯ ಗುರುತ್ವಾಕರ್ಷಣೆಗೆ ಹೊಂದಿಕೊಳ್ಳಲು 7 ದಿನಗಳ ಪುನಶ್ಚೇತನ ಕಾರ್ಯಕ್ರಮಕ್ಕೆ ಒಳಪಡಲಿದ್ದಾರೆ. ಈ ಕಾರ್ಯಕ್ರಮವು ದೇಹವನ್ನು ಭೂಮಿಯ ವಾತಾವರಣಕ್ಕೆ ಸರಿಹೊಂದಿಸಲು ಸಹಾಯ ಮಾಡುತ್ತದೆ. ಈ ಮಿಷನ್ ಭಾರತದ ಬಾಹ್ಯಾಕಾಶ ಚರಿತ್ರೆಯಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ. ಶುಭಾಂಶು ಶುಕ್ಲಾ, ತಮ್ಮ ಯಾನದ ಸಂದರ್ಭದಲ್ಲಿ ಭಾರತವನ್ನು “ಸಾರೆ ಜಹಾಂ ಸೆ ಅಚ್ಛಾ” ಎಂದು ಬಣ್ಣಿಸಿದ್ದರು.
ಶುಭಾಂಶು ಶುಕ್ಲಾ ಭಾರತದ ಪರವಾಗಿ ಒಟ್ಟು 7 ವೈಜ್ಞಾನಿಕ ಪ್ರಯೋಗಗಳನ್ನು ISSನಲ್ಲಿ ನಡೆಸಿದ್ದಾರೆ. ಈ ಪೈಕಿ 4 ಪ್ರಯೋಗಗಳು ಕರ್ನಾಟಕದ ಸಂಸ್ಥೆಗಳಿಂದ ರೂಪಿತವಾಗಿದ್ದವು. ಇದರ ಜೊತೆಗೆ ದೆಹಲಿಯ 2 ಪ್ರಯೋಗಗಳು ಮತ್ತು ಕೇರಳದ 1 ಪ್ರಯೋಗವನ್ನು ಶುಕ್ಲಾ ಯಶಸ್ವಿಯಾಗಿ ನಡೆಸಿದ್ದಾರೆ. ಈ ಪ್ರಯೋಗಗಳು ಬಾಹ್ಯಾಕಾಶದಲ್ಲಿ ವಿವಿಧ ವೈಜ್ಞಾನಿಕ ಅಧ್ಯಯನಗಳಿಗೆ ಸಂಬಂಧಿಸಿವೆ.
ಪ್ರಯೋಗಗಳ ವಿವರ
-
ಕಾಳುಗಳ ಮೊಳಕೆ: ಧಾರವಾಡದ ಕೃಷಿ ವಿಶ್ವವಿದ್ಯಾಲಯ ಮತ್ತು ಐಐಟಿ ಧಾರವಾಡದಿಂದ ಕಾಳುಗಳು ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಮೊಳಕೆಯೊಡೆಯುವ ಬಗ್ಗೆ ಅಧ್ಯಯನ.
-
ಗಗನಯಾತ್ರಿಗಳ ಮಸಲ್ ಲಾಸ್: ಬೆಂಗಳೂರಿನ ಬ್ರಿಕ್ ಇನ್ ಸ್ಟೆಮ್ ಸಂಸ್ಥೆಯಿಂದ ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳ ಸ್ನಾಯು ಕ್ಷಯದ ಬಗ್ಗೆ ಅಧ್ಯಯನ.
-
ಟಾರ್ಡಿಗ್ರೇಡ್: ಭಾರತೀಯ ವಿಜ್ಞಾನ ಸಂಸ್ಥೆ (IISC) ಬೆಂಗಳೂರಿನಿಂದ ಕಠಿಣ ಪರಿಸ್ಥಿತಿಯಲ್ಲಿ ಟಾರ್ಡಿಗ್ರೇಡ್ ಸೂಕ್ಷ್ಮಜೀವಿಗಳ ಬದುಕುಳಿಯುವಿಕೆಯ ಬಗ್ಗೆ ಅಧ್ಯಯನ.
-
ಎಲೆಕ್ಟ್ರಾನಿಕ್ ಡಿಸ್ಪ್ಲೇ: IISC ಬೆಂಗಳೂರಿನಿಂದ ಎಲೆಕ್ಟ್ರಾನಿಕ್ ಡಿಸ್ಪ್ಲೇ ತಂತ್ರಜ್ಞಾನದ ಬಗ್ಗೆ ಅಧ್ಯಯನ.
-
ಖಾದ್ಯ ಸೂಕ್ಷ್ಮ ಪಾಚಿಗಳು: ನವದೆಹಲಿಯ ICGEB ಯಿಂದ ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ 3 ಆಯ್ದ ಖಾದ್ಯ ಸೂಕ್ಷ್ಮ ಪಾಚಿಗಳ ಬೆಳವಣಿಗೆಯ ಅಧ್ಯಯನ.
-
ಸೈನೋಬ್ಯಾಕ್ಟೀರಿಯಾ: ನವದೆಹಲಿಯ ICGEB ಯಿಂದ ಬಾಹ್ಯಾಕಾಶದಲ್ಲಿ ಎರಡು ವಿಧದ ಸೈನೋಬ್ಯಾಕ್ಟೀರಿಯಾಗಳ ಬೆಳವಣಿಗೆಯ ಅಧ್ಯಯನ.
-
ಆಹಾರ ಬೆಳೆ ಬೀಜಗಳು: ಕೇರಳದ IIST ಯಿಂದ ಸೂಕ್ಷ್ಮ ಗುರುತ್ವಾಕರ್ಷಣೆಗೆ ಒಗ್ಗಿಕೊಂಡ ಅಕ್ಕಿ, ಜೋಳ, ಎಳ್ಳು, ಬದನೆಕಾಯಿ, ಮತ್ತು ಟೊಮೆಟೊ ಬೀಜಗಳ ಬಗ್ಗೆ ಅಧ್ಯಯನ.
ಶುಭಾಂಶು ಶುಕ್ಲಾ ಅವರ ಈ ಮಿಷನ್ ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಕರ್ನಾಟಕದ ಸಂಸ್ಥೆಗಳ 4 ಪ್ರಯೋಗಗಳು ಯಶಸ್ವಿಯಾಗಿರುವುದು ರಾಜ್ಯಕ್ಕೆ ಗರ್ವದ ಕ್ಷಣವಾಗಿದೆ. ಈ ಯಶಸ್ಸು ಭಾರತದ ವೈಜ್ಞಾನಿಕ ಸಾಮರ್ಥ್ಯವನ್ನು ವಿಶ್ವದ ಮುಂದೆ ಪ್ರದರ್ಶಿಸಿದೆ.





