ಮಠದ ಸ್ವಾಮೀಜಿಯಾದ ಅಡವಿಸಿದ್ದರಾಮ ಸ್ವಾಮೀಜಿ ಮಹಿಳೆಯೊಬ್ಬರೊಂದಿಗೆ ರಾತ್ರಿ ವೇಳೆ ತಮ್ಮ ಕೊಠಡಿಯಲ್ಲಿ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಶಿವಾಪೂರ ಗ್ರಾಮದ ಅಡವಿ ಸಿದ್ದೇಶ್ವರ ಮಠದಲ್ಲಿ ನಡೆದ ಈ ಘಟನೆಯೊಂದು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಈ ಘಟನೆಯಿಂದ ಕುಪಿತರಾದ ಗ್ರಾಮಸ್ಥರು ಸ್ವಾಮೀಜಿಯನ್ನು ಮಠದಿಂದ ಹೊರಹಾಕಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದು, ಮಹಿಳೆ ಮತ್ತು ಆಕೆಯ ಮಗಳನ್ನು ಸಾಂತ್ವಾನ ಕೇಂದ್ರಕ್ಕೆ ಕಳುಹಿಸಿದ್ದಾರೆ.
ಬಿಜಾಪುರ ಜಿಲ್ಲೆಯ ತಾಳಿಕೋಟೆಯ ಮೂಲದ ಮಹಿಳೆಯೊಬ್ಬರು ತಮ್ಮ ಮಗಳೊಂದಿಗೆ ಶಿವಾಪೂರದ ಅಡವಿ ಸಿದ್ದೇಶ್ವರ ಮಠಕ್ಕೆ ಆಗಮಿಸಿದ್ದರು. ರಾತ್ರಿ 10 ಗಂಟೆ ಸುಮಾರಿಗೆ ಸ್ಥಳೀಯ ಕೆಲವರು ಸ್ವಾಮೀಜಿಯ ಕೊಠಡಿಯಲ್ಲಿ ಆ ಮಹಿಳೆ ಇರುವುದನ್ನು ಗಮನಿಸಿ, ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಸ್ವಾಮೀಜಿಯನ್ನು ಮಹಿಳೆಯೊಂದಿಗೆ ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ಘಟನೆಯಿಂದ ಗ್ರಾಮದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸ್ವಾಮೀಜಿಯ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಲಾಗಿದೆ.
ಗ್ರಾಮಸ್ಥರು ಸ್ವಾಮೀಜಿಯನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ. “ರಾತ್ರಿ ವೇಳೆ ಮಠದಲ್ಲಿ ಯಾರೂ ಇಲ್ಲದಿರುವಾಗ ಮಹಿಳೆ ನಿಮ್ಮ ಕೊಠಡಿಯಲ್ಲಿ ಏಕೆ ಇದ್ದಾರೆ?” ಎಂದು ಕೇಳಿದಾಗ, ಸ್ವಾಮೀಜಿ ಸಮರ್ಥನೆಯ ಪ್ರಯತ್ನ ಮಾಡಿದ್ದಾರೆ. “ರಾತ್ರಿಯಾಗಿರುವುದರಿಂದ ಊರಿಗೆ ಹೋಗಲು ಸಾಧ್ಯವಾಗದೆ ಇಲ್ಲೇ ಉಳಿದುಕೊಂಡಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ,” ಎಂದು ವಾದಿಸಿದ್ದಾರೆ. ಆದರೆ, ಗ್ರಾಮಸ್ಥರು ಒಪ್ಪಿರಲಿಲ್ಲ. ಸ್ವಾಮೀಜಿಯ ವಿರುದ್ಧ ಈಗಾಗಲೇ ಅಕ್ರಮ ಸಂಬಂಧದ ಆರೋಪಗಳು ಕೇಳಿಬಂದಿದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ.
ಗ್ರಾಮಸ್ಥರು ಸ್ವಾಮೀಜಿಯನ್ನು ಮಠದಿಂದ ತಕ್ಷಣವೇ ಹೊರಹಾಕಿದ್ದಾರೆ. ಘಟನೆಯ ಕುರಿತು ಪೊಲೀಸರಿಗೆ ದೂರು ನೀಡಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಹಿಳೆ ಮತ್ತು ಆಕೆಯ ಮಗಳನ್ನು ಸಾಂತ್ವಾನ ಕೇಂದ್ರಕ್ಕೆ ಕಳುಹಿಸಿದ್ದಾರೆ. ಸ್ವಾಮೀಜಿಯನ್ನು ಗ್ರಾಮಸ್ಥರ ಒತ್ತಾಯದ ಮೇರೆಗೆ ಮಠದಿಂದ ದೂರವಿಡಲಾಗಿದೆ. ಪೊಲೀಸರು ಈಗ ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ.