ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಐಪಿಎಲ್ 2025ರಲ್ಲಿ ಚೊಚ್ಚಲ ಕಪ್ ಗೆದ್ದು ಕೋಟ್ಯಾಂತರ ಅಭಿಮಾನಿಗಳ 18 ವರ್ಷಗಳ ಕನಸನ್ನು ನನಸಾಗಿಸಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದು ಐತಿಹಾಸಿಕ ಗೆಲುವು ಸಾಧಿಸಿದ ಆರ್ಸಿಬಿ ತಂಡ ಇಂದು ಬೆಂಗಳೂರಿಗೆ ಆಗಮಿಸಿ ಭವ್ಯ ವಿಜಯಯಾತ್ರೆಯನ್ನು ನಡೆಸಲಿದೆ. ಕೊಹ್ಲಿ ಬಾಯ್ಸ್ನ ಈ ರ್ಯಾಲಿಯನ್ನು ಕಾಣಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಆರ್ಸಿಬಿ ತಂಡವು ಇಂದು ಮಧ್ಯಾಹ್ನ 1:00 ಗಂಟೆಗೆ ವಿಶೇಷ ವಿಮಾನದ ಮೂಲಕ ಬೆಂಗಳೂರಿನ ಎಚ್ಎಎಲ್ ಏರ್ಪೋರ್ಟ್ಗೆ ಆಗಮಿಸಲಿದೆ. ನಂತರ ತಾಜ್ವೆಸ್ಟೆಂಡ್ ಹೊಟೇಲ್ನಲ್ಲಿ ಕೆಲಹೊತ್ತು ವಿಶ್ರಾಂತಿ ಪಡೆದ ಬಳಿಕ, ಮಧ್ಯಾಹ್ನ 3:00 ಗಂಟೆಗೆ ವಿಧಾನಸೌಧದಲ್ಲಿ ಸರ್ಕಾರದಿಂದ ಅಭಿನಂದನೆ ಸ್ವೀಕರಿಸಲಿದೆ. ಮಧ್ಯಾಹ್ನ 3:30ಕ್ಕೆ ವಿಧಾನಸೌಧದಿಂದ ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ಭವ್ಯ ವಿಜಯಯಾತ್ರೆ ರ್ಯಾಲಿ ನಡೆಯಲಿದೆ. ಈ ರ್ಯಾಲಿಯು ಬೆಂಗಳೂರಿನ ಪ್ರಮುಖ ರಸ್ತೆಗಳ ಮೂಲಕ ನಡೆಯಲಿದ್ದು, ಸಾವಿರಾರು ಅಭಿಮಾನಿಗಳು ಭಾಗವಹಿಸುವ ನಿರೀಕ್ಷೆಯಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿಯ ಗೆಲುವಿನ ಸಂಭ್ರಮಾಚರಣೆಗೆ ಸಕಲ ಸಿದ್ಧತೆ ಮಾಡಲಾಗಿದೆ. 38,000 ಆಸನ ಸಾಮರ್ಥ್ಯದ ಕ್ರೀಡಾಂಗಣದಲ್ಲಿ ಅಭಿಮಾನಿಗಳಿಗೆ ಉಚಿತ ಪ್ರವೇಶದ ಸಾಧ್ಯತೆ ಇದೆ. ಆರ್ಸಿಬಿ ತಂಡದ ಆಟಗಾರರನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಈಗಾಗಲೇ ಸಜ್ಜಾಗಿದ್ದಾರೆ. ಈ ಐತಿಹಾಸಿಕ ಕ್ಷಣವನ್ನು ಆಚರಿಸಲು ಕ್ರೀಡಾಂಗಣವು ಕೆಂಪು-ಚಿನ್ನದ ಬಣ್ಣದಿಂದ ಕಂಗೊಳಿಸಲಿದೆ.
ವಿಜಯಯಾತ್ರೆಯು ವಿಜೃಂಭಣೆಯಿಂದ ನಡೆಯಲು ಮತ್ತು ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಬಿಗಿ ಭದ್ರತೆಯ ವ್ಯವಸ್ಥೆ ಮಾಡಲಾಗಿದೆ. 3 ಡಿಸಿಪಿಗಳು, 9 ಎಸಿಪಿಗಳು, 12 ಇನ್ಸ್ಪೆಕ್ಟರ್ಗಳು, ಮತ್ತು ಸಂಚಾರಿ ಪೊಲೀಸರನ್ನು ನಿಯೋಜಿಸಲಾಗಿದೆ. ಸಿಟಿಒ ಜಂಕ್ಷನ್ ಮತ್ತು ಕಾಫಿ ಕೊಡು ಜಂಕ್ಷನ್ನಲ್ಲಿ ಬ್ಯಾರಿಕೇಡ್ಗಳನ್ನು ಹಾಕಲಾಗುವುದು. ಸಾವಿರಾರು ಜನರು ಸೇರುವ ನಿರೀಕ್ಷೆಯಿರುವುದರಿಂದ, ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಆರ್ಸಿಬಿಯ ಈ ಚೊಚ್ಚಲ ಕಪ್ ಗೆಲುವು ಕನ್ನಡಿಗರಿಗೆ ಒಂದು ಭಾವನಾತ್ಮಕ ಕ್ಷಣವಾಗಿದೆ. 18 ವರ್ಷಗಳ ಕಾಯುವಿಕೆಯ ನಂತರ, ಕೊಹ್ಲಿ ಬಾಯ್ಸ್ನ ಈ ಗೆಲುವು ಕರ್ನಾಟಕದ ಕ್ರಿಕೆಟ್ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿಯಲಿದೆ. ಕಪ್ ಜೊತೆ ಬೆಂಗಳೂರಿಗೆ ಆಗಮಿಸುವ ಆರ್ಸಿಬಿಯ ರಣಬೇಟೆಗಾರರನ್ನು ಸ್ವಾಗತಿಸಲು ಇಡೀ ಕರುನಾಡು ಸಜ್ಜಾಗಿದೆ.