ಬೆಂಗಳೂರು: ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಡವಳಿಕೆ ಮತ್ತು ಕದನ ವಿರಾಮದ ನಿರ್ಧಾರದ ಕುರಿತು ತೀವ್ರ ಟೀಕೆಗಳನ್ನು ಮಾಡಿದ್ದಾರೆ. ಕಳೆದ 22 ದಿನಗಳಲ್ಲಿ ದೇಶದಲ್ಲಿ ನಡೆದ ಘಟನೆಗಳು ಜನರ ಮುಂದಿವೆ ಎಂದು ಸಚಿವ ಲಾಡ್ ಹೇಳಿದ್ದಾರೆ.
ಭಾರತೀಯ ಸೇನೆಯು ದೇಶದ ಹಿತವನ್ನು ಕಾಪಾಡಿದ್ದು, ಪಾಕಿಸ್ತಾನದ ವಿರುದ್ಧ ಮೇಲುಗೈ ಸಾಧಿಸಿದೆ ಎಂದು ಶ್ಲಾಘಿಸಿದ ಅವರು, ಸೇನೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಆದರೆ, ಕದನ ವಿರಾಮದ ನಿರ್ಧಾರ ಮತ್ತು ಪ್ರಧಾನಿಯವರ ಕೆಲವು ಕ್ರಮಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.
ಪಾಕಿಸ್ತಾನದವರು ಸಂಪರ್ಕ ಮಾಡಿದ ಕಾರಣಕ್ಕೆ ಕದನ ವಿರಾಮ ಘೋಷಿಸಲಾಯಿತು ಎಂದು ಪ್ರಧಾನಿ ತಮ್ಮ ಭಾಷಣದಲ್ಲಿ ಹೇಳಿಕೊಂಡಿದ್ದಾರೆ. ಆದರೆ, ಕದನ ವಿರಾಮದ ನಂತರವೂ ಪಾಕಿಸ್ತಾನ ದಾಳಿಗಳನ್ನು ಮುಂದುವರೆಸಿದೆ. ಈ ಸಂದರ್ಭದಲ್ಲಿ ದೇಶದ ಜನತೆಯ ಬೆಂಬಲ ಸರ್ಕಾರಕ್ಕೆ ಇದ್ದರೂ, ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯಬೇಕೆಂಬ ನಿರೀಕ್ಷೆ ಜನರಲ್ಲಿತ್ತು. ಆದರೆ, ಯಾವ ಆಧಾರದ ಮೇಲೆ ಕದನ ವಿರಾಮ ಮಾಡಲಾಯಿತು ಎಂಬುದಕ್ಕೆ ಸ್ಪಷ್ಟ ಉತ್ತರವಿಲ್ಲ ಎಂದು ಸಚಿವ ಸಂತೋಷ್ ಲಾಡ್ ಆರೋಪಿಸಿದ್ದಾರೆ.
ಪ್ರಧಾನಿ ಮೋದಿ ಅವರು ಸರ್ವಪಕ್ಷದ ಸಭೆಗೆ ಗೈರಾಗಿದ್ದಾರೆ ಮತ್ತು ಸಂಸತ್ತಿಗೂ ಆಗಮಿಸುತ್ತಿಲ್ಲ ಎಂದು ಲಾಡ್ ಟೀಕಿಸಿದ್ದಾರೆ. “ನಾನೇ ಸುಪ್ರೀಂ, ಯಾವ ಸಭೆಗೂ ಭಾಗಿಯಾಗುವುದಿಲ್ಲ ಎಂಬ ಸಂದೇಶವನ್ನು ಮೋದಿ ಕೊಡುತ್ತಿದ್ದಾರೆಯೇ?” ಎಂದು ಅವರು ಪ್ರಶ್ನಿಸಿದ್ದಾರೆ. ಅಲ್ಲದೆ, ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು “ವ್ಯಾಪಾರಕ್ಕಾಗಿ ಯುದ್ಧ ನಿಲ್ಲಿಸಿದ್ದೇನೆ” ಎಂದು ಹೇಳಿರುವಂತೆ, ಮೋದಿಯವರ ಕದನ ವಿರಾಮದ ನಿರ್ಧಾರವೂ ವ್ಯಾಪಾರಕ್ಕಾಗಿಯೇ ಆಗಿರಬಹುದೇ ಎಂದು ಲಾಡ್ ಕಿಡಿಕಾರಿದ್ದಾರೆ.
ಬಿಜೆಪಿಯವರು ತಿರಂಗಾ ಯಾತ್ರೆ ಬೇಡ, ಟ್ರಂಪ್ ಯಾತ್ರೆ ಮಾಡಲಿ” ಎಂದು ವ್ಯಂಗ್ಯವಾಡಿದ ಅವರು, ಟ್ರಂಪ್ ಅವರ ಭಾವಚಿತ್ರವನ್ನು ಹಾಕಿಕೊಂಡು ಯಾತ್ರೆ ಮಾಡಲಿ ಎಂದು ಕೈ ಮುಗಿದು ಮನವಿ ಮಾಡಿದ್ದಾರೆ.
ಲಾಡ್ ಅವರು ಮೋದಿಯವರ 11 ವರ್ಷದ ಆಡಳಿತವನ್ನು ಸರ್ವಾಧಿಕಾರಿ ಧೋರಣೆ ಎಂದು ಕರೆದಿದ್ದಾರೆ. “ಪಂಚಾಯತಿಯಿಂದ ಸಂಸತ್ತಿನವರೆಗೆ ಎಲ್ಲೆಡೆ ಮೋದಿಯವರೇ ಕಾಣುತ್ತಾರೆ. ಎಲ್ಲವೂ ಅವರ ಕ್ಯಾಮರಾ, ಅವರ ಮಾತು. ಈ ಯುದ್ಧವನ್ನು ಪಬ್ಲಿಸಿಟಿಗಾಗಿ ಮಾಡಲಾಯಿತೇ?” ಎಂದು ಅವರು ಆಕ್ಷೇಪಿಸಿದ್ದಾರೆ. ಪೆಹಲ್ಗಾಮ್ನಲ್ಲಿ ನಡೆದ ದಾಳಿಯ ವಿಚಾರದಲ್ಲಿ ಭದ್ರತಾ ವೈಫಲ್ಯವಾಗಿದೆ ಎಂದು ಆರೋಪಿಸಿರುವ ಲಾಡ್, ಈ ಬಗ್ಗೆ ಪ್ರಧಾನಿ ಮಾತನಾಡಬೇಕು ಎಂದು ಒತ್ತಾಯಿಸಿದ್ದಾರೆ.