ಇಸ್ಲಾಮಾಬಾದ್ : ಭಾರತದ ನಿಖರ ಮಿಸೈಲ್ ದಾಳಿಯಿಂದ ಪಾಕಿಸ್ತಾನ ಆತಂಕಕ್ಕೆ ಒಳಗಾಗಿದೆ. ಭಾರತದ ಸೇನೆ ಉಗ್ರರ ತಾಣಗಳ ಮೇಲೆ ನಡೆಸಿದ ಆಕಸ್ಮಿಕ ದಾಳಿಯಿಂದ ಪಾಕಿಸ್ತಾನದ ರಕ್ಷಣಾ ವ್ಯವಸ್ಥೆಯೇ ಕಂಗಾಲಾಗಿದೆ. ಕಳೆದ ಕೆಲವು ದಿನಗಳಿಂದ ಗಡಿಯಲ್ಲಿ ರೇಡಾರ್, ಶಸ್ತ್ರಾಸ್ತ್ರ ಮತ್ತು ಫಿರಂಗಿಗಳನ್ನು ರವಾನಿಸಿದ್ದ ಪಾಕಿಸ್ತಾನಕ್ಕೆ ಭಾರತದ ಈ ದಾಳಿ ಆಘಾತವನ್ನುಂಟು ಮಾಡಿದೆ. ಈ ದಾಳಿಯಿಂದ ಒಂಬತ್ತು ಉಗ್ರರ ತಾಣಗಳು, ಒಂದು ಮಸೀದಿ ಧ್ವಂಸಗೊಂಡಿವೆ. ಈ ಘಟನೆಯಿಂದ ಪಾಕಿಸ್ತಾನದ ಸೈನ್ಯಕ್ಕೆ ಯಾವುದೇ ಮಾಹಿತಿಯಿಲ್ಲದೆ ಭಾರತ ತನ್ನ ಗುರಿಯನ್ನು ನಿಖರವಾಗಿ ತಲುಪಿದೆ.
ಭಾರತದ ಈ ದಾಳಿಯಿಂದ ಪಾಕಿಸ್ತಾನದ ರಕ್ಷಣಾ ಸಚಿವ ಆಸಿಫ್ ಖವಾಜಾ ಅವರ ವರಸೆ ಸಂಪೂರ್ಣ ಬದಲಾಗಿದೆ. ಇದಕ್ಕೂ ಮುನ್ನ ಭಾರತದ ವಿರುದ್ಧ ಬೆದರಿಕೆಯ ಹೇಳಿಕೆಗಳನ್ನು ನೀಡುತ್ತಿದ್ದ ಖವಾಜಾ, “ಭಾರತವನ್ನು ಸರ್ವನಾಶ ಮಾಡುತ್ತೇವೆ, ಸಿಂಧೂ ನದಿಯ ನೀರನ್ನು ನಿಲ್ಲಿಸುತ್ತೇವೆ, ಜಗತ್ತನ್ನೇ ಮುಗಿಸುವ ಶಕ್ತಿ ನಮ್ಮದು” ಎಂದು ಘೋಷಿಸಿದ್ದರು. ಆದರೆ, ಭಾರತದ ಒಂದೇ ದಾಳಿಯಿಂದ ಈಗ ಶಾಂತಿಯ ಮಾತುಗಳನ್ನಾಡಿದ್ದಾರೆ. ಬ್ಲೂಮ್ಬರ್ಗ್ ಟಿವಿಯೊಂದಿಗೆ ಮಾತನಾಡಿದ ಖವಾಜಾ, “ಯುದ್ಧಕ್ಕಿಂತ ಶಾಂತಿಯೇ ಮುಖ್ಯ. ಭಾರತ ಈ ಉದ್ವಿಘ್ನತೆಯಿಂದ ಹಿಂದೆ ಸರಿದರೆ, ನಾವು ಕೂಡ ಶಾಂತಿಯ ಹಾದಿಯನ್ನು ಆಯ್ಕೆ ಮಾಡುತ್ತೇವೆ” ಎಂದಿದ್ದಾರೆ.
ಭಾರತದ ಆಪರೇಶನ್ ಸಿಂಧೂರ್: ಉಗ್ರರ ತಾಣ ಧ್ವಂಸ
ಭಾರತದ ಸೇನೆ ‘ಆಪರೇಶನ್ ಸಿಂಧೂರ್’ ಎಂಬ ಹೆಸರಿನಲ್ಲಿ ಈ ದಾಳಿಯನ್ನು ನಡೆಸಿದೆ. ಈ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮಾತ್ರವಲ್ಲ, ಪಾಕಿಸ್ತಾನದ ಒಳನಾಡಿನ ಉಗ್ರರ ಕ್ಯಾಂಪ್ಗಳನ್ನೂ ಗುರಿಯಾಗಿಸಲಾಗಿದೆ. ಈ ದಾಳಿಯಿಂದ ಪಾಕಿಸ್ತಾನದ ಗುಪ್ತಚರ ವ್ಯವಸ್ಥೆ, ರೇಡಾರ್ ಮತ್ತು ಮಿಲಿಟರಿ ಭದ್ರತೆಯ ದುರ್ಬಲತೆ ಬಯಲಾಗಿದೆ. ಭಾರತದ ಮೋಸ್ಟ್ ವಾಂಟೆಡ್ ಉಗ್ರರ ಮೇಲೆ ಇಂತಹದ್ದೇ ನಿಖರ ದಾಳಿಗಳು ಮುಂದುವರಿಯಬಹುದು ಎಂಬ ಆತಂಕ ಈಗ ಪಾಕಿಸ್ತಾನದಲ್ಲಿ ಹೆಚ್ಚಾಗಿದೆ.
ಈ ದಾಳಿಯಿಂದ ಪಾಕಿಸ್ತಾನದ ರಕ್ಷಣಾ ಸಚಿವ ಆಸಿಫ್ ಖವಾಜಾ ಅವರ ಹಿಂದಿನ ಧೋರಣೆಯಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದೆ. ಇಷ್ಟು ದಿನ ನ್ಯೂಕ್ಲಿಯರ್ ದಾಳಿಯ ಬೆದರಿಕೆಯನ್ನು ಹಾಕುತ್ತಿದ್ದ ಖವಾಜಾ, ಈಗ “ಭಾರತ ಸಂಘರ್ಷವನ್ನು ತಪ್ಪಿಸಿದರೆ, ಸಮಸ್ಯೆಯ ಪರಿಹಾರಕ್ಕೆ ಸಿದ್ಧರಿದ್ದೇವೆ” ಎಂದು ಹೇಳಿದ್ದಾರೆ. ಕಳೆದ ಎರಡು ವಾರಗಳಿಂದ ಗಡಿಯಲ್ಲಿ ಉದ್ವಿಘ್ನ ಪರಿಸ್ಥಿತಿಯಿದ್ದರೂ, ಪಾಕಿಸ್ತಾನ ಶಾಂತಿಯನ್ನೇ ಕಾಯ್ದುಕೊಂಡು ಬಂದಿದೆ ಎಂದು ಅವರು ತಿಳಿಸಿದ್ದಾರೆ.
ಪಾಕಿಸ್ತಾನದ ರಕ್ಷಣಾ ಸಚಿವ ಆಸಿಫ್ ಖವಾಜಾ, ಭಾರತದೊಂದಿಗಿನ ರಾಜತಾಂತ್ರಿಕ ಮಾತುಕತೆ ಕುರಿತು ಯಾವುದೇ ಸ್ಪಷ್ಟ ಮಾಹಿತಿಯಿಲ್ಲ ಎಂದಿದ್ದಾರೆ. ಆದರೆ, ಭಾರತ ಈ ಉದ್ವಿಘ್ನತೆಯಿಂದ ಹಿಂದೆ ಸರಿದರೆ, ಪಾಕಿಸ್ತಾನ ಶಾಂತಿಯ ಹಾದಿಯಲ್ಲಿ ಮುಂದುವರಿಯಲು ಸಿದ್ಧವಾಗಿದೆ ಎಂದು ಹೇಳಿದ್ದಾರೆ..





