ಧಾರ್ಮಿಕ ಅಸಹಿಷ್ಣುತೆ ಬಗ್ಗೆ ಮಾತನಾಡಿ ಒಮ್ಮೆ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ರು ಬಾಲಿವುಡ್ ನಟ ಆಮೀರ್ ಖಾನ್. ಇದೀಗ ಬಹುಭಾಷಾ ನಟ ಪ್ರಕಾಶ್ ರೈ, ಅಸಹಿಷ್ಣುತೆ ಬಗ್ಗೆ ಮಾತನಾಡಿದ್ದಾರೆ. ಅದೂ ಪಾಕ್ ನಟನ ಸಿನಿಮಾದ ವಿಚಾರವಾಗಿ ಅನ್ನೋದು ಶಾಕಿಂಗ್ ನ್ಯೂಸ್.
ಜಸ್ಟ್ ಆಸ್ಕಿಂಗ್ ಹೆಸರಲ್ಲಿ ಸಾಕಷ್ಟು ವಿಷಯಗಳನ್ನ ಪ್ರಶ್ನಿಸುವ ಮನೋಭಾವ ಹೊಂದಿರೋ ಮಾಜಿ ರಾಜಕಾರಣಿ, ಬಹುಭಾಷಾ ನಟ ಪ್ರಕಾಶ್ ರೈ, ಇದೀಗ ಅಸಹಿಷ್ಣುತೆ ಕುರಿತು ಮಾತನಾಡಿದ್ದಾರೆ. ಈ ಮೂಲಕ ಪಾಕಿಸ್ತಾನ್ ಆ್ಯಕ್ಟರ್ ಫವಾದ್ ಖಾನ್ ಪರ ಬ್ಯಾಟ್ ಮಾಡಿದ್ದಾರೆ ನಮ್ಮ ಕನ್ನಡದ ಪ್ರಕಾಶ್ ರೈ.
ಇತ್ತೀಚೆಗೆ ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿ ಸಾಕಷ್ಟು ಪ್ರತಿಕೂಲ ಪರಿಣಾಮಗಳನ್ನು ಬೀರಿದೆ. ನಮ್ಮ ಭಾರತ ಸರ್ಕಾರ ಈಗಾಗ್ಲೇ ಪಾಕಿಸ್ತಾನದ ಮೇಲೆ ರಾಜತಾಂತ್ರಿಕ ಯುದ್ಧ ಸಾರಿದೆ. ಅಲ್ಲದೆ, ಇಂಡಿಯಾದಲ್ಲಿರೋ ಪಾಕ್ ಕಲಾವಿದರಿಗೂ ಸಂಕಷ್ಟ ಶುರುವಾಗಿದೆ. ಅವರ ಸಿನಿಮಾಗಳನ್ನ ರಿಲೀಸ್ ಮಾಡುವಂತಿಲ್ಲ ಎಂದಿದೆ. ಅವರ ಹಾಡುಗಳು, ಅಕೌಂಟ್ಗಳು ಎಲ್ಲವೂ ಡಿಲೀಟ್ ಆಗಿವೆ.
ಸದ್ಯ ಪಾಕ್ ಕಲಾವಿದ ಫವಾದ್ ಖಾನ್ ನಟನೆಯ ಅಬಿರ್ ಗುಲಾಲ್ ಸಿನಿಮಾ ರಿಲೀಸ್ ಆಗದಂತೆ ನಿಷೇಧಿಸಲ್ಪಟ್ಟಿದೆ. ಈ ಕುರಿತು ಕಿಡಿ ಕಾರಿರುವ ನಟ ಪ್ರಕಾಶ್ ರೈ, ಪಾಡ್ಕಾಸ್ಟ್ ಸಂದರ್ಶನವೊಂದರಲ್ಲಿ ತಮ್ಮ ನಿಲುವು, ಧೋರಣೆ ಹಾಗೂ ಅಭಿಪ್ರಾಯಗಳನ್ನು ಹೊರಹಾಕಿದ್ದಾರೆ. ಚಲನಚಿತ್ರಗಳನ್ನು ನಿಷೇಧಿಸುವ ಪ್ರವೃತ್ತಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜಕೀಯ ಒತ್ತಡದಿಂದ ಉತ್ತೇಜಿಸಲ್ಪಟ್ಟ ಇಂತಹ ಸೆನ್ಸಾರ್ಶಿಪ್, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ ಎಂದಿದ್ದಾರೆ.
ದೀಪಿಕಾ ಪಡುಕೋಣೆಯ ಪದ್ಮಾವತ್, ಶಾರೂಖ್ ಖಾನ್ರ ಪಠಾಣ್ ಹಾಗೂ ಮೋಹನ್ಲಾಲ್ ನಟನೆಯ ಎಂಪುರಾನ್ಗೂ ಹೀಗೆಯೇ ಆಗಿತ್ತು. ಆ ಸಾಲಿಗೆ ಇದೀಗ ಫವಾದ್ ಖಾನ್ರ ಅಬಿರ್ ಗುಲಾಲ್ ಸೇರ್ಪಡೆ ಆಗ್ತಿದೆ. ಮಕ್ಕಳ ಮೇಲಿನ ದೌರ್ಜನ್ಯ ಅಥ್ವಾ ಅಶ್ಲೀಲತೆಯನ್ನು ಉತ್ತೇಜಿಸದ ಸಿನಿಮಾಗಳನ್ನ ಬ್ಯಾನ್ ಮಾಡೋದನ್ನ ನಾನು ವಿರೋಧಿಸುತ್ತೇನೆ. ನಾನು ಯಾವುದೇ ಸಿನಿಮಾವನ್ನು ನಿಷೇಧಿಸುವುದರ ಪರವಾಗಿಲ್ಲ ಎಂದಿದ್ದಾರೆ.
ಅಂದಹಾಗೆ ಪ್ರಕಾಶ್ ರೈ ವಿರೋಧ ಸಿನಿಮಾಗಳ ಬ್ಯಾನ್ ವಿಚಾರ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ವಿಚಾರವಾಗಿದೆ. ಆದ್ರೆ ಸೋಶಿಯಲ್ ಮೀಡಿಯಾದಲ್ಲಿ ಪಾಕ್ ಕಲಾವಿದನ ಪರ ನಿಂತ ಪ್ರಕಾಶ್ ರೈ, ದೇಶ ವಿರೋಧಿಗಳ ಬೆನ್ನಿಗೆ ನಿಂತ ನಟ ಅಂತೆಲ್ಲಾ ಕಾಲೆಳೆಯುತ್ತಿದ್ದಾರೆ. ಯಾರೇನೇ ಅಂದ್ರೂ ಪ್ರಶ್ನಿಸುವುದು ನನ್ನ ಹಕ್ಕು, ನಾನು ಪ್ರಶ್ನಿಸಿಯೇ ಪ್ರಶ್ನಿಸುತ್ತೇನೆ ಅಂತ ತಮ್ಮ ನಿಲುವುಗಳನ್ನ ಮಾತ್ರ ಬದಲಾಯಿಸಲ್ಲ ರೈ.