ಕ್ಯಾನ್ಸರ್ ಗೆದ್ದು ಬಂದ ಕರುನಾಡ ಚಕ್ರವರ್ತಿ ಡಾ. ಶಿವರಾಜ್ಕುಮಾರ್, ಮತ್ತಷ್ಟು ಯಂಗ್ ಅಂಡ್ ಎನರ್ಜಿಟಿಕ್ ಆಗಿ ಕೆಲಸ ಮಾಡ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ತೊಡಗಿಸಿಕೊಳ್ತಿದ್ದಾರೆ. ಬರೀ ನಟನೆ ಅಷ್ಟೇ ಅಲ್ಲ, ನಿರ್ಮಾಣದಲ್ಲೂ ಬ್ಯುಸಿ ಆಗ್ತಿದ್ದಾರೆ. ಇದೀಗ ಶಿವಣ್ಣನ ಮನಸ್ಸಿಗೆ ಹತ್ತಿರವಾಗಿರೋ ‘ಎ ಫಾರ್ ಆನಂದ್’ ಸಿನಿಮಾ ಸೆಟ್ಟೇರಿದೆ.
ಸನ್ ಆಫ್ ಬಂಗಾರದ ಮನುಷ್ಯ ಡಾ ಶಿವರಾಜ್ಕುಮಾರ್ ಭಿನ್ನ ಅಲೆಯ ಸಿನಿಮಾಗಳನ್ನ ಮಾಡೋದ್ರಲ್ಲಿ ಎತ್ತಿದ ಕೈ. ಅದರಲ್ಲೂ ಕ್ಯಾನ್ಸರ್ ಗೆದ್ದು ಬಂದ ಬಳಿಕ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿದ್ದಾರೆ ಲಿವಿಂಗ್ ಲೆಜೆಂಡ್. ಶಿವಣ್ಣ 131 ಸಿನಿಮಾದ ಶೂಟಿಂಗ್ ಇತ್ತೀಚೆಗೆ ಕಿಕ್ಸ್ಟಾರ್ಟ್ ಆಗಿದ್ದು ಹೊತ್ತೇಯಿದೆ. ಅದರ ಬೆನ್ನಲ್ಲೇ ಹೈದ್ರಾಬಾದ್ಗೆ ತೆರಳಿ ರಾಮ್ ಚರಣ್ ಜೊತೆ ಪೆದ್ದಿ ಸಿನಿಮಾದಲ್ಲಿ ನಟಿಸಿ ಬಂದರು. ಸದ್ಯ ತಲೈವಾ ರಜನೀಕಾಂತ್ರ ಜೈಲರ್-2ಗೆ ಚೆನ್ನೈಗೆ ಹಾರೋಕೆ ಮುನ್ನ ಮತ್ತೊಂದು ಸ್ವೀಟ್ ನ್ಯೂಸ್ ಕೊಟ್ಟಿದ್ದಾರೆ.
ಈ ಹಿಂದೆ ಅ ಅಂದ್ರೆ ಅಪ್ಪು, ಅರಸು ಅಂತಿತ್ತು ಸ್ಯಾಂಡಲ್ವುಡ್. ಇದೀಗ A ಫಾರ್ ಆನಂದ್ ಅಂತ ಹೇಳೋಕೆ ಬರ್ತಿದ್ದಾರೆ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್. ಹೌದು.. ಗೀತಾ ಪಿಕ್ಚರ್ಸ್ ಹೋಮ್ ಬ್ಯಾನರ್ನಡಿ ಗೀತಾ ಶಿವರಾಜ್ಕುಮಾರ್ ವೇದ ಹಾಗೂ ಭೈರತಿ ರಣಗಲ್ ಸಿನಿಮಾಗಳನ್ನ ನಿರ್ಮಾಣ ಮಾಡಿದ್ರು. ಇದೀಗ ಅವೆರಡರ ನಂತ್ರ ಹ್ಯಾಟ್ರಿಕ್ ಹೀರೋ ಜೊತೆ ಹ್ಯಾಟ್ರಿಕ್ ಹಿಟ್ ಕೊಡೋಕೆ ಗೀತಕ್ಕ ಸಜ್ಜಾಗಿದ್ದು, ಎ ಫಾರ್ ಆನಂದ್ ಸಿನಿಮಾ ಶುಭಾರಂಭ ಮಾಡಿದ್ದಾರೆ.
ಇಂದು ಬಂಡೆ ಮಹಾಂಕಾಳಿ ಆಲಯದಲ್ಲಿ ಮುಹೂರ್ತ ಕಂಡ ಈ ಸಿನಿಮಾ, ಅಕ್ಟೋಬರ್ ಅಥ್ವಾ ನವೆಂಬರ್ನಿಂದ ಶೂಟಿಂಗ್ ಆರಂಭಿಸಲಿದೆಯಂತೆ. ಈ ಹಿಂದೆ ಘೋಸ್ಟ್ ಸಿನಿಮಾನ ಶಿವಣ್ಣಗೆ ನಿರ್ದೇಶಿಸಿದ್ದ ಶ್ರೀನಿ ಅವರು ಎ ಫಾರ್ ಆನಂದ್ಗೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಘೋಸ್ಟ್ ಸಿನಿಮಾದಲ್ಲಿ ಶಿವಣ್ಣನನ್ನ ಹೈ ವೋಲ್ಟೇಜ್ ಮಾಸ್ ಎಲಿಮೆಂಟ್ಸ್ನೊಂದಿಗೆ ತೋರಿಸಿದ್ದ ಶ್ರೀನಿ, ಈ ಬಾರಿ ಹಂಡ್ರೆಡ್ ಪರ್ಸೆಂಟ್ ಕ್ಲಾಸ್ ಆಗಿ ಪ್ರೆಸೆಂಟ್ ಮಾಡೋಕೆ ಹೊರಟಿದ್ದಾರೆ.
ಗೀತಕ್ಕ ಕೊಟ್ಟ ಒಂದೇ ಒಂದು ಐಡಿಯಾ ಈಗ ಗೀತಾ ಪಿಕ್ಚರ್ಸ್ ಮೂಲಕವೇ ಸಿನಿಮಾ ರೂಪ ಪಡೀತಿದೆ. ಒಂದಷ್ಟು ಮಕ್ಕಳು ಹಾಗೂ ಸ್ಕೂಲ್ ಸೆಟಪ್ನಲ್ಲೇ ಸಿನಿಮಾದ ಮುಹೂರ್ತ ಪೂಜೆ ಹಾಗೂ ಸುದ್ದಿಗೋಷ್ಠಿ ನಡೆದದ್ದು ಇಂಟರೆಸ್ಟಿಂಗ್. ಶಿವಣ್ಣ ಇಲ್ಲಿ ಸ್ಪೋರ್ಟ್ಸ್ ಟೀಚರ್ ಆಗಿ ಮಿಂಚಲಿದ್ದು, ಈ ಹಿಂದಿನ ಆರ್ಯನ್, ದ್ರೋಣ ಸಿನಿಮಾಗಳನ್ನ ನೆನಪಿಸೋ ಸಾಧ್ಯತೆಯಿದೆ. ಈ ಚಿತ್ರದಲ್ಲಿ ಮೈಸೂರಿನ ಶಕ್ತಿಧಾಮದ ಮಕ್ಕಳು ಹಾಗೂ ದೊಡ್ಮನೆಗೆ ಅವಿನಾಭಾವ ನಂಟಿದೆ ಅನ್ನೋದನ್ನ ಪರೋಕ್ಷವಾಗಿ ತೋರಿಸಲಾಗ್ತಿದೆ. ಅಲ್ಲದೆ, ಎಜುಕೇಷನ್ ಮಾಫಿಯಾ ಬಗ್ಗೆಯೂ ಅನಾವರಣ ಮಾಡಲಿದೆಯಂತೆ.
ಒಂದೊಳ್ಳೆ ಫ್ಯಾಮಿಲಿ ಎಂಟರ್ಟೈನರ್ ಕೊಡೋ ಧಾವಂತದಲ್ಲಿರೋ ಶ್ರೀನಿ, ಮಿಸ್ಟರಿ ಲೊಕೇಷನ್ಸ್ನ ತಲಾಷ್ನಲ್ಲಿದ್ದಾರಂತೆ. ಸಕಲೇಶಪುರದ ಸುತ್ತಮುತ್ತ ಈಗಾಗ್ಲೇ ಒಂದಷ್ಟು ಲೊಕೇಷನ್ಸ್ ಹಂಟ್ ಮಾಡಿದ್ದು, ಅಲ್ಲೇ ಬಹುತೇಕ ಚಿತ್ರಿಸೋ ಯೋಜನೆಯಲ್ಲಿದ್ದಾರೆ.
ಇನ್ನು A ಫಾರ್ ಆನಂದ್ ಚಿತ್ರಕ್ಕೆ ಶಿವಣ್ಣನ ಪುತ್ರಿ ನಿರ್ಮಾಪಕಿ ನಿವೇದಿತಾ ಶಿವರಾಜ್ಕುಮಾರ್, ಸಂಗೀತ ಸಂಯೋಜಕ ವಾಸುಕಿ ವೈಭವ್ ಸೇರಿದಂತೆ ಸಾಕಷ್ಟು ಮಂದಿ ಹಿತೈಷಿಗಳು ಬಂದು ಶುಭ ಕೋರಿದರು. ಶ್ರೀನಿ ನಟ ಹಾಗೂ ತಂತ್ರಜ್ಞ ಎರಡೂ ಆಗಿರೋದ್ರಿಂದ ಈ ಸಿನಿಮಾ ಜನ ಮೆಚ್ಚುವ ಚಿತ್ರವಾಗಿ ಹೊರಹೊಮ್ಮುವ ಭರವಸೆ ಇದೆ.