ಬೆಂಗಳೂರು: “ಮುನಿರತ್ನ ನಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮುಂದುವರೆಸಿದರೆ, ಆತನ ವಿರುದ್ಧ ಇರುವ ಸತ್ಯದ ದಾಖಲೆಗಳನ್ನು ರಾಜರಾಜೇಶ್ವರಿ ನಗರ ಕ್ಷೇತ್ರದ ಮನೆ ಮನೆಗೆ ಹಂಚಬೇಕಾಗುತ್ತದೆ” ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಎಚ್ಚರಿಕೆ ನೀಡಿದ್ದಾರೆ.
ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. “ಆತನ ನಿಜ ಮುಖವನ್ನು ಬಹಿರಂಗಪಡಿಸಲು ನಾವು ತಯಾರಾಗಿದ್ದೇವೆ. ಒಕ್ಕಲಿಗರ ಹೆಣ್ಣು ಮಕ್ಕಳನ್ನು ಮಂಚಕ್ಕೆ ಕರೆಯುವಷ್ಟು ಕೆಳಮಟ್ಟದ ನಡೆ ಇವನು ತೋರಿಸಿದ್ದಾನೆ. ದಲಿತರನ್ನು ಮತದಾನದ ರಾಜಕೀಯಕ್ಕಾಗಿ ಬಳಸಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾನೆ” ಎಂದು ಅವರು ಆರೋಪಿಸಿದರು.
ಮುನಿರತ್ನ ವಿರುದ್ಧ ತಾವು ಹಲವಾರು ದಾಖಲೆಗಳನ್ನು ಹೊಂದಿರುವುದಾಗಿ ತಿಳಿಸಿರುವ ಸುರೇಶ್, “ಬಿಬಿಎಂಪಿ ಬೆಂಕಿ ಹಗರಣ, ಕಾಂಪೌಂಡ್ ವಾಲ್ ಬಿದ್ದು ವಿದ್ಯಾರ್ಥಿನಿ ಸಾವು, ಹಳೆಯ ಅತ್ಯಾಚಾರ ಆರೋಪಗಳು ಸೇರಿದಂತೆ ಹಲವು ವಿಷಯಗಳಲ್ಲಿ ಆತನ ಪಾತ್ರವಿದೆ” ಎಂದು ಹೇಳಿದರು.
ವಿಧಾನಸೌಧದಲ್ಲೇ ಅತ್ಯಾಚಾರ ಆರೋಪ ಎದುರಿಸುತ್ತಿರುವ ವ್ಯಕ್ತಿಯನ್ನು ಪಕ್ಷದಲ್ಲಿ ಉಳಿಸಿಕೊಳ್ಳುವುದು ನಾಚಿಕೆಯ ವಿಷಯ ಎಂದು ಅವರು ಪ್ರಶ್ನಿಸಿದರು. “ಅವನು ಬೋರ್ವೆಲ್ ಹಗರಣ, 250 ಕೋಟಿ ಡಾಂಬಾರ್ ಅಕ್ರಮ ಬಿಲ್, ವೋಟರ್ ಐಡಿ ಲಂಚ ಪ್ರಕರಣಗಳಲ್ಲಿ ಕೂಡ ಭಾಗಿಯಾಗಿದ್ದಾನೆ” ಎಂದು ಹೇಳಿದರು.
“ಮುನಿರತ್ನ ಈಡಿಗೆ ದೂರು ನೀಡಿದರೂ ನಾವು ಹೆದರುವುದಿಲ್ಲ. ನಾನಾ ಕಾನೂನು ಉಲ್ಲಂಘನೆಗಳನ್ನು ಮಾಡಿದವನು ನಮ್ಮ ಮೇಲೆ ಆರೋಪ ಮಾಡುವ ಹಕ್ಕಿಲ್ಲ” ಎಂದು ಡಿ.ಕೆ. ಸುರೇಶ್ ತಮ್ಮ ವಾಗ್ದಾಳಿಗೆ ತೆರೆ ನೀಡಿದರು.





