ರಾಜ್ಯದಲ್ಲಿ ಈಗಾಗಲೇ ಎಲ್ಲ ವಸ್ತುಗಳ ದರ ಗಗನಕ್ಕೇರಿದೆ. ಇಂತಹ ಸಂದರ್ಭದಲ್ಲಿ ಕರ್ನಾಟಕ ಸರ್ಕಾರವು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಎರಡು ರೂಪಾಯಿ ಹೆಚ್ಚಿಸಿದ್ದು, ಲಾರಿ ಮಾಲೀಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ದರ ಏರಿಕೆಯನ್ನು ಖಂಡಿಸಿ, ಲಾರಿ ಮಾಲೀಕರ ಸಂಘವು ಏಪ್ರಿಲ್ 14, 2025ರ ಮಧ್ಯರಾತ್ರಿಯಿಂದ ರಾಜ್ಯವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಈ ಪ್ರತಿಭಟನೆಯಿಂದ ದಿನಬಳಕೆಯ ಅಗತ್ಯ ವಸ್ತುಗಳ ಸರಬರಾಜಿನ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ತಿಳಿದುಬಂದಿದೆ.
ಕರ್ನಾಟಕ ಸರ್ಕಾರವು ಡೀಸೆಲ್ ಬೆಲೆಯನ್ನು ಎರಡು ರೂಪಾಯಿ ಹೆಚ್ಚಿಸಿ ಆದೇಶ ಹೊರಡಿಸಿದೆ. ಈ ನಿರ್ಧಾರಕ್ಕೆ ಲಾರಿ ಮಾಲೀಕರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈಗಾಗಲೇ ಕೇಂದ್ರ ಸರ್ಕಾರದ ಟೋಲ್ ದರ ಏರಿಕೆಯಿಂದ ಹೊರೆ ಎದುರಿಸುತ್ತಿರುವಾಗ ರಾಜ್ಯ ಸರ್ಕಾರದ ಈ ಕ್ರಮವು ತಮಗೆ ಆರ್ಥಿಕ ಸಂಕಷ್ಟವನ್ನು ತಂದೊಡ್ಡಿದೆ ಎಂದು ಆರೋಪಿಸಿದೆ. ಲಾರಿ ಮಾಲೀಕರು ಪ್ರತಿ ತಿಂಗಳು ಸಾವಿರಾರು ರೂಪಾಯಿ ಹೆಚ್ಚುವರಿ ಖರ್ಚು ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಅವರು ದೂರಿದ್ದಾರೆ.
ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ಅವರು ಮಾತನಾಡಿ, “ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಎರಡನೇ ಬಾರಿಗೆ ಡೀಸೆಲ್ ದರ ಹೆಚ್ಚಿಸಿದೆ. ಕಳೆದ ವರ್ಷ ಜೂನ್ 15 ರಂದು 3 ರೂಪಾಯಿ ಮತ್ತು ಈ ವರ್ಷ ಏಪ್ರಿಲ್ 1 ರಂದು 2 ರೂಪಾಯಿ ಏರಿಕೆ ಮಾಡಲಾಗಿದೆ. ಇದರಿಂದ ಲಾರಿ ಮಾಲೀಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದಲ್ಲಿ ಸುಮಾರು 6 ಲಕ್ಷ ಲಾರಿಗಳಿದ್ದು, ಎಲ್ಲವನ್ನೂ ಟೋಲ್ ಮತ್ತು ಹೆದ್ದಾರಿಗಳಲ್ಲಿ ನಿಲ್ಲಿಸಿ ಮುಷ್ಕರ ಮಾಡಲಿದ್ದೇವೆ. ಪೆಟ್ರೋಲ್ ಮತ್ತು ಡೀಸೆಲ್ ಬಂಕ್ಗಳೂ ಬಂದ್ ಆಗಲಿವೆ,” ಎಂದು ತಿಳಿಸಿದರು. ಡೀಸೆಲ್ ದರ ಇಳಿಕೆಗೆ ಸರ್ಕಾರಕ್ಕೆ ಗಡುವು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದರು.
ಏಪ್ರಿಲ್ 14 ರಿಂದ ಆರಂಭವಾಗುವ ಈ ಮುಷ್ಕರದಿಂದ ಅಕ್ಕಿ, ಬೇಳೆ ಸೇರಿದಂತೆ ದೈನಂದಿನ ಅಗತ್ಯ ವಸ್ತುಗಳ ಸರಬರಾಜು ಸ್ಥಗಿತಗೊಳ್ಳಲಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುವ ಸಾಧ್ಯತೆ ಇದೆ. “ಸರ್ಕಾರ ತಕ್ಷಣ ಡೀಸೆಲ್ ದರ ಇಳಿಸದಿದ್ದರೆ ಲಾರಿ ಮಾಲೀಕರ ಮುಷ್ಕರಕ್ಕೆ ನಾವು ಬೆಂಬಲ ನೀಡುತ್ತೇವೆ,” ಎಂದು ಹೊಲ್ಸೇಲ್ ವ್ಯಾಪಾರಿ ರವಿ ಕುಮಾರ್ ಹೇಳಿದರು.
ಲಾರಿ ಮಾಲೀಕರ ಸಂಘದ ಮುಷ್ಕರಕ್ಕೆ ಏರ್ಪೋರ್ಟ್ ಟ್ಯಾಕ್ಸಿ ಡ್ರೈವರ್ಸ್ ಯೂನಿಯನ್ ಕೂಡ ಬೆಂಬಲ ಸೂಚಿಸಿದೆ. ಏಪ್ರಿಲ್ 15 ರಂದು ಟ್ಯಾಕ್ಸಿಗಳನ್ನು ರಸ್ತೆಗೆ ಇಳಿಸದಿರಲು ನಿರ್ಧರಿಸಿದ್ದು, ಅನಿರ್ದಿಷ್ಟಾವಧಿ ಮುಷ್ಕರಕ್ಕೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಬಂದ್ ಆಗಿಲಿದೆ ಅಗತ್ಯ ಸೌಲಭ್ಯ ಸರಬರಾಜು
- ಏರ್ ಪೋರ್ಟ್ ಟ್ಯಾಕ್ಸಿ ಬಂದ್
- ಜಲ್ಲಿ ಕಲ್ಲು, ಮರಳು ಲಾರಿ ಬಂದ್
- ಗೂಡ್ಸ್ ವಾಹನಗಳು ಬಂದ್
- 5 ಲಕ್ಷ ಲಾರಿ ಬಂದ್
- ಅಕ್ಕಿ ಲೊಡ್, ಗೂಡ್ಸ್, ಪೆಟ್ರೋಲ್ ಡಿಸೇಲ್ ಲಾರಿ ಬಂದ್
- ಚಾಲಕರ ಸಂಘದಿಂದ ಬಂದ್
- ಹೊರ ರಾಜ್ಯದಿಂದಲೂ ವಾಹನ ಬರುವುದಿಲ್ಲ





