ಕಬಾಲಿ ಡೈರೆಕ್ಟರ್ ಪಾ ರಂಜಿತ್ ವೇಟ್ಟುವಂ ಅನ್ನೋ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್ವೊಂದಕ್ಕೆ ಕೈ ಹಾಕಿದ್ದಾರೆ. ಅದ್ರ ಇಂಟ್ರಡಕ್ಷನ್ ಟೀಸರ್ ಲಾಂಚ್ ಆಗಿದ್ದು, ಕನ್ನಡದ ವರ್ಷನ್ ವೇಟ್ಟುವಂ ವರ್ಲ್ಡ್ನ ಬಾದ್ಷಾ ಕಿಚ್ಚ ಸುದೀಪ್, ತಮ್ಮ ವಾಯ್ಸ್ ಮೂಲಕ ಪರಿಚಯಿಸಿರೋದು ಇಂಟರೆಸ್ಟಿಂಗ್. ಇಷ್ಟಕ್ಕೂ ಏನು ಈ ಸಿನಿಮಾದ ಕಥೆ..? ಯಾವ ಕಾಲಘಟ್ಟದ್ದು..? ಯಾರೆಲ್ಲಾ ನಟಿಸ್ತಿದ್ದಾರೆ..? ಯಾವ ಸ್ಕೇಲ್ ಸಿನಿಮಾ ಅನ್ನೋ ಕ್ಯೂರಿಯಾಸಿಟಿಗೆ ಇಲ್ಲಿದೆ ಉತ್ತರ.
ಪಾ ರಂಜಿತ್ ವೇಟ್ಟುವಂ ವರ್ಲ್ಡ್ಗೆ ಕಿಚ್ಚ ಸುದೀಪ್ ಇಂಟ್ರಡಕ್ಷನ್
ಕಾಲಜ್ಞಾನದ ಪ್ರಳಯಾತ್ಮಕ ಕಥಾನಕಕ್ಕೆ ಕಿಚ್ಚನ ಖಡಕ್ ವಾಯ್ಸ್
ಕಾಲ್ಪನಿಕ ಜಗತ್ತಲ್ಲಿ ನೂರಾರು ಕಲಾವಿದರು ಸಾವಿರಾರು ತಂತ್ರಜ್ಞರು
ಚಿತ್ರದಲ್ಲಿ ಸಾಂಪ್ರದಾಯಿಕ ಅಡಿಮುರೈ & ಮಲ್ಲಕಂಬ ಬೇಸ್ಡ್ ಫೈಟ್ಸ್
ಪಾ ರಂಜಿತ್.. ತಮಿಳು ಚಿತ್ರರಂಗದ ಸೆನ್ಸೇಷನಲ್ ಡೈರೆಕ್ಟರ್. ತಮ್ಮ ಸಿನಿಮಾಗಳ ಮೂಲಕವೇ ಸಮಾಜದ ಅಂಕುಡೊಂಕುಗಳನ್ನ ತಿದ್ದುವಂತಹ ರೆವೆಲ್ಯೂಷನರಿ ಡೈರೆಕ್ಟರ್. ತಾನು ಮಾಡುವ ಸಿನಿಮಾಗಳ ಸಂಖ್ಯೆಗಿಂತ.. ಕ್ವಾಲಿಟಿ ಹಾಗೂ ಕಂಟೆಂಟ್ನಿಂದಲೇ ಚಿತ್ರಪ್ರೇಮಿಗಳ ಗಮನ ಸೆಳೆದವರು. ಕಬಾಲಿ, ಕಾಲಾ, ಸಾರ್ಪಟ್ಟ ಪರಂಬರೈ, ತಂಗಲಾನ್ ಸಿನಿಮಾಗಳ ನಂತ್ರ ಇದೀಗ ಮತ್ತೊಂದು ಮೆಗಾ ಪ್ರಾಜೆಕ್ಟ್ಗೆ ಕೈ ಹಾಕಿದ್ದಾರೆ. ಅದೇ ವೇಟ್ಟುವಂ. ದಿ ವರ್ಲ್ಡ್ ಆಫ್ ವೇಟ್ಟುವಂ.
ಅಂದಹಾಗೆ ಇದೊಂದು ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಅಪೋಕ್ಯಾಲಿಪ್ಟಿಕ್ ಆ್ಯಕ್ಷನ್ ಚೆಂಚರ್ ಆಗಲಿದೆ. ಅಂದ್ರೆ ಕಾಲಜ್ಞಾನದ ಪ್ರಳಯಾತ್ಮಕ ವಿಷಯಗಳನ್ನ ಪೊಳಗೊಂಡಿರೋ ಸಿನಿಮಾ. ವೇಟ್ಟುವಂ ಚಿತ್ರ ಒಂದು ಕಾಲ್ಪನಿಕ ಕಥೆ ಆದ್ರೂ ಸಹ, ಅಲ್ಲಿನ ಕಂಟೆಂಟ್ ಮಾತ್ರ ಮೂರು ಪರಂಪರೆಗಳಿಗೆ ಕನೆಕ್ಟ್ ಆಗಲಿದೆ. ಟೈಟಲ್ ಹಾಗೂ ಒನ್ ಲೈನ್ ಕಥೆಯಿಂದಲೇ ಸಿನಿಪ್ರಿಯರಲ್ಲಿ ಭಾರಿ ಕುತೂಹಲ ಮೂಡಿಸಿದ್ದಾರೆ ಪಾ ರಂಜಿತ್. ನೀಲಂ ಪ್ರೊಡಕ್ಷನ್ಸ್ ಹಾಗೂ ಲರ್ನ್ & ಟೀಚ್ ಪ್ರೊಡಕ್ಷನ್ ಸಂಸ್ಥೆಗಳು ಜಂಟಿಯಾಗಿ ಈ ಚಿತ್ರವನ್ನ ನಿರ್ಮಾಣ ಮಾಡ್ತಿದ್ದು, ವೇಟ್ಟುವಂ ಜಗತ್ತನ್ನ ಪರಿಚಯಿಸೋ ಥ್ರಿಲ್ಲಿಂಗ್ ವಿಡಿಯೋ ಬಿಡುಗಡೆಯಾಗಿದೆ. ಜೊತೆಗೆ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಕೂಡ ಅನಾವರಣಗೊಂಡಿದೆ.
ಈ ವರ್ಲ್ಡ್ ಆಫ್ ವೇಟ್ಟುವಂ ಸಿನಿಮಾದ ಪರಿಚಯಾತ್ಮಕ ವಿಡಿಯೋ ಬರೋಬ್ಬರಿ ಐದು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಿದೆ. ಬಹುಭಾಷಾ ಸೂಪರ್ ಸ್ಟಾರ್ಗಳ ಧ್ವನಿಯ ಸಾಥ್ ಈ ವಿಡಿಯೋಗೆ ಸಿಕ್ಕಿರೋದು ಹೈಲೈಟ್. ಕನ್ನಡದ ಆವೃತ್ತಿಗೆ ಅಭಿನಯ ಚಕ್ರವರ್ತಿ ಬಾದ್ಷಾ ಕಿಚ್ಚ ಸುದೀಪ್ ವಾಯ್ಸ್ ನೀಡಿರುವುದು ವಿಶೇಷ. ಉಳಿದಂತೆ ಹಿಂದಿ ಆವೃತ್ತಿಗೆ ಪ್ರತಿಭಾವಂತ ನಟ ಪಂಕಜ್ ತ್ರಿಪಾಠಿ, ತೆಲುಗಿಗೆ ರಾಣಾ ದಗ್ಗುಬಾಟಿ, ಮಲಯಾಳಂಗೆ ಸೌಬಿನ್ ಶಾಹಿರ್ ಹಾಗೂ ತಮಿಳು ಆವೃತ್ತಿಗೆ ಸ್ವತಃ ನಿರ್ದೇಶಕ ಪಾ. ರಂಜಿತ್ ಅವ್ರೇ ಖಡಕ್ ಧ್ವನಿ ನೀಡುವ ಮೂಲಕ ಚಿತ್ರದ ಗಾಂಭೀರ್ಯದ ಜೊತೆ ಕೌತುಕತೆ ಹೆಚ್ಚಿಸಿದ್ದಾರೆ.
ಅಪೋಕ್ಯಾಲಿಪ್ಟಿಕ್ ಅನ್ನೋ ವಿಶಿಷ್ಟ ಕಲ್ಪನೆಯ ಹಿನ್ನೆಲೆಯಲ್ಲಿ ಈ ಚಿತ್ರದ ಕಥಾಹಂದರ ಸಾಗಲಿದೆ. ವಿವಿಧ ಪ್ರಬಲ ಗುಂಪುಗಳ ನಡುವಿನ ಪವರ್ ಪ್ಲೇ.. ಅಂದ್ರೆ ಅಧಿಕಾರದ ಸ್ಪರ್ಧೆ, ಭೀಕರ ಸಂಘರ್ಷ ಹಾಗೂ ಅನಿರೀಕ್ಷಿತ ತಿರುವುಗಳ ಸುತ್ತ ಹೆಣೆಯಲಾಗಿದೆ ಈ ಕಥೆ. ಅದ್ಭುತ ದೃಶ್ಯ ವೈಭವ ಹಾಗೂ ಮೈನವಿರೇಳಿಸೋ ಅಂತಹ ಹೈ-ವೋಲ್ಟೇಜ್ ಆ್ಯಕ್ಷನ್ ಸನ್ನಿವೇಶಗಳನ್ನ ಇದು ಒಳಗೊಂಡಿದೆ. ಭಾರತೀಯ ಸಾಂಪ್ರದಾಯಿಕ ಸಮರ ಕಲೆಗಳಾದ ಅಡಿಮುರೈ ಹಾಗೂ ಮಲ್ಲಕಂಬ ಕೌಶಲಗಳನ್ನು ಆಧರಿಸಿ ಸಾಹಸ ದೃಶ್ಯಗಳನ್ನು ವಿನ್ಯಾಸಗೊಳಿಸಲಾಗಿದೆ. ಅಂದಹಾಗೆ ಈ ಚಿತ್ರದಲ್ಲಿನ ಪ್ರಮುಖ ಕಲಾವಿದರೆಲ್ಲರೂ ಈ ಕಲೆಗಳಲ್ಲಿ ವಿಶೇಷ ತರಬೇತಿ ಪಡೆದು, ನೈಜವಾಗಿ ಆ್ಯಕ್ಷನ್ ಸೀಕ್ವೆನ್ಸ್ ಮಾಡಿದ್ದಾರೆ.
ಚಿತ್ರದ ಲೀಡ್ನಲ್ಲಿ ಆರ್ಯ ನಟಿಸುತ್ತಿದ್ದು, ಶಾರ್ಟ್ ಹೇರ್ ಹಾಗೂ ಮೊನಚಾದ ಮೀಸೆಯಿಂದ ಭಗತ್ ಸಿಂಗ್ನಷ್ಟೇ ಪವರ್ಫುಲ್ ಆಗಿ ವೇಟ್ಟುವಂ ಬೇಟೆಗಾರನಂತೆ ಕಾಣಸಿಗುತ್ತಾರೆ. ಅಲ್ಲದೆ, ದಿನೇಶ್, ಶಬೀರ್, ಶೋಭಿತಾ ಧುಲಿಪಾಲ ಹಾಗೂ ಕಲೈಯರಸನ್ ಮುಂತಾದ ಸೌತ್ನ ಪ್ರತಿಭಾವಂತ ಕಲಾವಿದರ ದಂಡಿದೆ. ಬಹು ದೊಡ್ಡ ಕ್ಯಾನ್ವಾಸ್ನಲ್ಲಿ ಅದ್ಧೂರಿಯಾಗಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಎಸ್. ಎಸ್. ಮೂರ್ತಿ ಆರ್ಟ್ ವರ್ಕ್, ರೂಪೇಶ್ ಶಾಜಿ ಸಿನಿಮಾಟೋಗ್ರಫಿ, ಸೆಲ್ವ ಆರ್ ಕೆ ಎಡಿಟಿಂಗ್, ದಿಲೀಪ್ ಸುಬ್ಬರಾಯನ್ ಸ್ಟಂಟ್ಸ್ ಹಾಗೂ ಖ್ಯಾತ ಮ್ಯೂಸಿಕ್ ಕಂಪೋಸರ್ ಜಿ. ವಿ. ಪ್ರಕಾಶ್ ಕುಮಾರ್ ಸಂಗೀತ ಸಂಯೋಜನೆ ಇರಲಿದೆ. ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಈ ಸಿನಿಮಾ ಬೆಳ್ಳಿಪರದೆ ಬೆಳಗಲಿದ್ದು, ಈ ಬಾರಿ ಪಾ ರಂಜಿತ್ ಚಿತ್ರಪ್ರೇಮಿಗಳಿಗೆ ಬಿಗ್ ಸರ್ಪ್ರೈಸ್ ಅಂತೂ ಕೊಡೋದು ಗ್ಯಾರಂಟಿ.





