‘ಬಿಗ್ಬಾಸ್ ಕನ್ನಡ ಸೀಸನ್ 13’ ಈಗಾಗಲೇ ಆರಂಭವಾಗಿದ್ದು, ಗ್ರ್ಯಾಂಡ್ ಓಪನಿಂಗ್ನ ಶೂಟಿಂಗ್ ಜಾಲಿವುಡ್ ಸ್ಟುಡಿಯೋದಲ್ಲಿ ಭರದಿಂದ ಸಾಗುತ್ತಿದೆ. ಈ ಬಾರಿ ಯಾರೆಲ್ಲಾ ಸ್ಪರ್ಧಿಗಳಾಗಿ ಬಿಗ್ಬಾಸ್ ಮನೆ ಪ್ರವೇಶಿಸಲಿದ್ದಾರೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಹೆಚ್ಚಾಗಿರುವ ನಡುವೆಯೇ, ಕಲರ್ಸ್ ಕನ್ನಡ ವಾಹಿನಿ ಒಂದೊಂದೇ ಪ್ರೋಮೋಗಳನ್ನು ಬಿಡುಗಡೆ ಮಾಡುವ ಮೂಲಕ ಸ್ಪರ್ಧಿಗಳ ಬಗ್ಗೆ ಸುಳಿವು ನೀಡುತ್ತಿದೆ. ಇದೀಗ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಓಂ ಪ್ರಕಾಶ್ ರಾವ್ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವುದು ವಿಶೇಷ ಗಮನ ಸೆಳೆದಿದೆ.
ಈಗಾಗಲೇ ಬಿಡುಗಡೆಯಾಗಿರುವ ಪ್ರೋಮೋವೊಂದರಲ್ಲಿ ನಟಿಯರಾದ ಸಂಗೀತಾ ಭಟ್ ಮತ್ತು ಕಾವ್ಯಾ ಗೌಡ ಬಿಗ್ಬಾಸ್ ಮನೆ ಪ್ರವೇಶಿಸಿರುವ ದೃಶ್ಯಗಳನ್ನು ಹಂಚಿಕೊಳ್ಳಲಾಗಿತ್ತು. ಇದೀಗ ಮತ್ತೊಂದು ಪ್ರೋಮೋ ಮೂಲಕ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ ಎಂಟ್ರಿಯನ್ನು ವಾಹಿನಿ ಬಹಿರಂಗಪಡಿಸಿದೆ. ಸಿನಿಮಾ ಕ್ಷೇತ್ರದಲ್ಲಿ ಹಲವು ವರ್ಷಗಳ ಅನುಭವ ಹೊಂದಿರುವ ಓಂ ಪ್ರಕಾಶ್ ರಾವ್ ಈ ಬಾರಿ ಸ್ಪರ್ಧಿಯಾಗಿ ಬಿಗ್ಬಾಸ್ ಮನೆಯೊಳಗೆ ಕಾಲಿಟ್ಟಿದ್ದಾರೆ.
ಅಂದಹಾಗೆ, ಬಿಗ್ಬಾಸ್ ಮನೆಗೆ ಓಂ ಪ್ರಕಾಶ್ ರಾವ್ ಅವರದ್ದು ಇದು ಮೊದಲ ಪ್ರವೇಶವಲ್ಲ. ಈ ಹಿಂದೆ ‘ಬಿಗ್ಬಾಸ್ ಕನ್ನಡ ಸೀಸನ್ 4’ರಲ್ಲಿಯೂ ಅವರು ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ಆಗ ಅವರು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆ ಪ್ರವೇಶಿಸಿದ್ದರು. ಆದರೆ ಆರೋಗ್ಯ ಸಮಸ್ಯೆಯಿಂದಾಗಿ ಹೆಚ್ಚು ದಿನಗಳ ಕಾಲ ಬಿಗ್ಬಾಸ್ ಮನೆಯಲ್ಲಿ ಉಳಿಯಲು ಸಾಧ್ಯವಾಗಿರಲಿಲ್ಲ. ಅವರಿಗೆ ತೀವ್ರ ಕಾಲು ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆರೋಗ್ಯದ ಕಾರಣ ನೀಡಿ ಶೋನಿಂದ ಹೊರಬಂದಿದ್ದರು. ಇದೀಗ ಹಲವು ವರ್ಷಗಳ ಬಳಿಕ ಅವರು ಮತ್ತೊಮ್ಮೆ ಬಿಗ್ಬಾಸ್ ಮನೆಗೆ ಮರಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಓಂ ಪ್ರಕಾಶ್ ರಾವ್ ಅವರು ವಿವಿಧ ರಿಯಾಲಿಟಿ ಶೋಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ‘ಕ್ವಾಟ್ಲೆ ಕಿಚನ್’ ಕಾರ್ಯಕ್ರಮದಲ್ಲಿಯೂ ಅವರು ಭಾಗವಹಿಸಿದ್ದರು. ಇದೀಗ ಮತ್ತೊಮ್ಮೆ ಕಿರುತೆರೆಯಲ್ಲಿ ತಮ್ಮದೇ ಆದ ಶೈಲಿಯಲ್ಲಿ ಗಮನ ಸೆಳೆಯಲು ಬಿಗ್ಬಾಸ್ ವೇದಿಕೆಗೆ ಬಂದಿದ್ದಾರೆ.
ಬಿಗ್ಬಾಸ್ ಮನೆಗೆ ಓಂ ಪ್ರಕಾಶ್ ರಾವ್ ಅವರನ್ನು ಸ್ವಾಗತಿಸಿದ ನಿರೂಪಕ ಕಿಚ್ಚ ಸುದೀಪ್, ನಿರ್ದೇಶಕರಿಗೆ ಸಂಬಂಧಿಸಿದ ಹಳೆಯ ವಿಡಿಯೋವೊಂದನ್ನು ಪ್ರದರ್ಶಿಸಿದರು. ಆ ವಿಡಿಯೋದಲ್ಲಿ ಓಂ ಪ್ರಕಾಶ್ ರಾವ್ ಟೆನ್ಷನ್ನಲ್ಲಿದ್ದಾಗ ಪದೇಪದೆ ತಲೆ ಕೆರೆದುಕೊಳ್ಳುತ್ತಿರುವ ದೃಶ್ಯ ಕಂಡುಬಂತು. ಇದನ್ನು ನೋಡಿದ ಅವರು, ‘ಹಾಗೆ ತಲೆ ಕೆರೆದುಕೊಂಡರೆ ನನಗೆ ಸಮಾಧಾನ ಎನಿಸುತ್ತದೆ’ ಎಂದು ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದರು.
ಇದಕ್ಕೆ ಸುದೀಪ್ ಅವರು, ‘ನೀವು ಬಿಗ್ಬಾಸ್ನಲ್ಲಿ ಇರುವಷ್ಟು ದಿನ ಎಷ್ಟು ಬಾರಿ ಬೀಪ್ ಹಾಕಬೇಕಾಗುತ್ತದೆಯೋ?’ ಎಂದು ಹಾಸ್ಯಮಯವಾಗಿ ಪ್ರಶ್ನಿಸಿದರು. ಅದಕ್ಕೆ ಓಂ ಪ್ರಕಾಶ್ ರಾವ್ ಕೂಡ ತಮ್ಮ ಮಾತಿನ ಶೈಲಿಯಲ್ಲಿ, ವಾಹಿನಿಯವರು ತಮ್ಮ ಮಾತುಗಳಿಗೆ ಬೀಪ್ ಹಾಕದೆ ಜನರಿಗೆ ಕೇಳಲು ಬಿಟ್ಟರೆ ಅನುಕೂಲವಾಗುತ್ತದೆ ಎಂದು ತಮಾಷೆಯಾಗಿ ಉತ್ತರಿಸಿದರು. ಅವರ ಮಾತಿಗೆ ಸುದೀಪ್ ನಕ್ಕರು.
ಕನ್ನಡ ಚಿತ್ರರಂಗದಲ್ಲಿ ಓಂ ಪ್ರಕಾಶ್ ರಾವ್ ಅವರಿಗೆ ವಿಶೇಷ ಸ್ಥಾನವಿದೆ. ದರ್ಶನ್, ಸುದೀಪ್, ಶಿವರಾಜ್ಕುಮಾರ್ ಸೇರಿದಂತೆ ಹಲವು ಸ್ಟಾರ್ ನಟರೊಂದಿಗೆ ಅವರು ಕೆಲಸ ಮಾಡಿದ್ದಾರೆ. ಹಲವು ಯಶಸ್ವಿ ಸಿನಿಮಾಗಳನ್ನು ನಿರ್ದೇಶಿಸಿರುವ ಅವರು ಚಿತ್ರರಂಗದ ಒಳಹೊರಗನ್ನು ಹತ್ತಿರದಿಂದ ಕಂಡಿರುವ ಅನುಭವಿ. ಹೀಗಾಗಿ ಬಿಗ್ಬಾಸ್ ಮನೆಯಲ್ಲಿ ಸಿನಿಮಾ ಕ್ಷೇತ್ರದ ಹಲವು ಆಸಕ್ತಿದಾಯಕ ವಿಚಾರಗಳು, ಅನುಭವಗಳು ಮತ್ತು ತಮ್ಮ ನೇರ ಮಾತುಗಳ ಮೂಲಕ ಅವರು ಪ್ರೇಕ್ಷಕರಿಗೆ ಮನರಂಜನೆ ನೀಡುವ ಸಾಧ್ಯತೆ ಹೆಚ್ಚಿದೆ.
ಎರಡನೇ ಬಾರಿ ಬಿಗ್ಬಾಸ್ ಮನೆ ಪ್ರವೇಶಿಸಿರುವ ಓಂ ಪ್ರಕಾಶ್ ರಾವ್ ಈ ಬಾರಿ ಎಷ್ಟು ದಿನ ಉಳಿಯುತ್ತಾರೆ, ಮನೆಯೊಳಗಿನ ಸ್ಪರ್ಧಿಗಳೊಂದಿಗೆ ಹೇಗೆ ಹೊಂದಿಕೊಳ್ಳುತ್ತಾರೆ ಹಾಗೂ ಅವರ ನೇರ ಮಾತುಗಳು ಯಾವ ರೀತಿಯ ಚರ್ಚೆಗೆ ಕಾರಣವಾಗುತ್ತವೆ ಎಂಬುದು ಮುಂದಿನ ದಿನಗಳಲ್ಲಿ ಕುತೂಹಲ ಮೂಡಿಸಿದೆ.





