ಆಕ್ಸಿಡೆಂಟ್ ಆಗಿ ಅಧಿಕಾರ ಸಿಕ್ಕು, ಜನಪ್ರಿಯತೆ ಪಡೆದು, ಶ್ರೀಮಂತರಾಗಿದವರಿದ್ದಾರೆ. ಅಂತಹ ಸಾಲಲ್ಲಿ ನಿಲ್ತಾರೆ ಶಶಾಂಕ್ ಸಿಂಗ್. ವಯಸ್ಸು ಜಸ್ಟ್ 33 ವರ್ಷ. ಈತ ಎಷ್ಟು ಅದೃಷ್ಟವಂತ ಎಂದರೆ, ಪಂಜಾಬ್ ಕಿಂಗ್ಸ್ ಶಶಾಂಕ್ ಸಿಂಗ್ ಅವರನ್ನ ಐಪಿಎಲ್ ಹರಾಜಿನಲ್ಲಿ ಖರೀದಿಸಿದಾಗ, ಪಂಜಾಬ್ ಮ್ಯಾನೇಜ್ಮೆಂಟಿನವರ ಕಣ್ಣಲ್ಲಿದ್ದ ಶಶಾಂಕ್ ಬೇರೆ. ಈ ಶಶಾಂಕ್ ಸಿಂಗ್ ಅಲ್ಲ. ಒಂದೇ ಹೆಸರಿದ್ದ ಕಾರಣಕ್ಕೆ, ಶಶಾಂಕ್ ಸಿಂಗ್ ಪಂಜಾಬ್ ತಂಡಕ್ಕೆ ಆಕ್ಸಿಡೆಂಟ್ ಆಗಿ ಸೆಲೆಕ್ಟ್ ಆದರು.
ಹೆಸರಿನ ಗೊಂದಲದಿಂದ ಪಂಜಾಬ್ ತಂಡ ಸೇರಿದ್ದರು..!
ಅಂದಹಾಗೆ ಈ ಶಶಾಂಕ್ ಸಿಂಗ್ ಅನ್ನೋ ಕ್ರಿಕೆಟ್ ಪ್ರತಿಭೆಯನ್ನ ಶೋಧಿಸಿದ್ದು ಕೂಡಾ ಮುಂಬೈ ಇಂಡಿಯನ್ಸ್. ಆದರೆ ಐಪಿಎಲ್ ಜರ್ನಿ ಶುರುವಾಗಿದ್ದು ಮಾತ್ರ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ. ಆನಂತರ ರಾಜಸ್ತಾನ್ ರಾಯಲ್ಸ್, ಸನ್ ರೈಸರ್ಸ್ ಹೈದರಾಬಾದಿಗೆ ಸೆಲೆಕ್ಟ್ ಆದರೂ, ತಂಡದಲ್ಲಿ ಆಡುವುದಕ್ಕೆ ಒಳ್ಳೆಯ ಅವಕಾಶ ಸಿಗಲಿಲ್ಲ. ಇಷ್ಟೆಲ್ಲ ಆಗಿ 2024ರಲ್ಲಿ ಪಂಜಾಬ್ ತಂಡ ಇವರನ್ನ ಹೆಸರು ಕನ್ ಫ್ಯೂಸ್ ಮಾಡ್ಕೊಂಡು 20 ಲಕ್ಷಕ್ಕೆ ಖರೀದಿ ಮಾಡ್ತು. ಹಾಗೆ 20 ಲಕ್ಷಕ್ಕೆ ಖರೀದಿ ಮಾಡಿದ ಆಟಗಾರ.. 2025ರ ಐಪಿಎಲ್ ಹೊತ್ತಿಗೆ ಮೂರೂವರೆ ಕೋಟಿ ಬೆಲೆ ಬಾಳುವ ಆಟಗಾರನಾಗಿದ್ದ. ಗುಜರಾತ್ ವಿರುದ್ಧ ಇನ್ನೇನು ಸೋತೇ ಬಿಟ್ಟಿತು ಎಂದುಕೊಂಡಿದ್ದ ಪಂಜಾಬ್ ತಂಡವನ್ನ 29 ಬಾಲುಗಳಲ್ಲಿ 61 ರನ್ ಹೊಡೆದು ಗೆಲ್ಲಿಸಿದ್ದ ಆಟಗಾರನನ್ನು ಪಂಜಾಬ್ ತಂಡದ ಪ್ರೀತಿ ಜಿಂಟಾ ಬಿಟ್ಟು ಕೊಡಲಿಲ್ಲ.
ಈಗ ನೋಡಿದ್ರೆ ಪಂಜಾಬ್ ತಂಡಕ್ಕೆ ಕೇವಲ 16 ಬಾಲುಗಳಲ್ಲಿ 44 ರನ್ ಸಿಡಿಸಿದ ಶಶಾಂಕ್ ಸಿಂಗ್, ತಂಡವನ್ನು ಗೆಲ್ಲಿಸಿಕೊಟ್ಟಿದ್ದಾರೆ. ಅದೃಷ್ಟ ಒಂದ್ಸಲ ಬಾಗಿಲು ತಟ್ಟುತ್ತೆ. ಹಾಗೆ ಬಾಗಿಲು ತಟ್ಟುವ ಅದೃಷ್ಟವನ್ನ ಎರಡೂ ಕೈಗಳಲ್ಲಿ ಬಾಚಿಕೊಳ್ಳೋಕೆ ಪ್ರತಿಭೆ ಮತ್ತು ಪರಿಶ್ರಮ ಎರಡೂ ಬೇಕು. ಆ ಎರಡೂ ಇದ್ದ ಶಶಾಂಕ್ ಸಿಂಗ್, ಈಗ ಪಂಜಾಬ್ ತಂಡದ ಮ್ಯಾಚ್ ವಿನ್ನರ್.
ಬ್ರಿಯಾನ್ ಲಾರಾ ಅವರು ಕೊಟ್ಟ ಟಿಪ್ಸ್ ಇಟ್ಟುಕೊಂಡು ಸನ್ ರೈಸರ್ಸ್ ತಂಡದಲ್ಲಿ 6 ಬಾಲಿಗೆ 25 ರನ್ ಹೊಡೆದಿದ್ದ ಶಶಾಂಕ್, ಅಬ್ಬರದ ಬ್ಯಾಟಿಂಗಿಗೆ ಹೆಸರುವಾಸಿ.
ಚೆನ್ನಾಗಿ ಆಡಿದ್ರೂ ತಂಡದಲ್ಲಿ ಸ್ಥಾನ ಸಿಗದೇ ಇದ್ದಾಗ ಟೆನ್ಷನ್ ಆಗ್ತಿದ್ದ ಶಶಾಂಕ್ಗೆ ನೆರವು ನೀಡಿದ್ದು ಯೋಗ. ಯೋಗ ಮಾಡುತ್ತಿದ್ದಾಗ ಇಡೀ ಮೈದಾನ ಕಣ್ಣ ಮುಂದೆ ದೃಶ್ಯ ರೂಪದಲ್ಲಿ ನಿಲ್ಲುತ್ತಿತ್ತು. ಸನ್ನಿವೇಶಗಳನ್ನು ವಿಷ್ಯುಯಲೈಸ್ ಮಾಡಿಕೊಳ್ಳುತ್ತಿದ್ದೆ ಎನ್ನುವ ಶಶಾಂಕ್ ಅವರಿಗೆ ಎಂತಹ ಸನ್ನಿವೇಶದಲ್ಲೂ ಮೆಂಟಲಿ ಕೂಲ್ ಆಗಿರುವುದು ಹೇಗೆ ಅನ್ನೋದನ್ನ ಕಲಿಸಿಕೊಟ್ಟಿದ್ದು ಕೂಡಾ ಯೋಗ.
ಶಶಾಂಕ್, ಗುಜರಾತ್ ಟೈಟನ್ಸ್ ವಿರುದ್ಧ ಬ್ಯಾಟಿಂಗ್ ಮಾಡುವುದಕ್ಕೆ ಕ್ರೀಸಿಗಿಳಿದಾಗ ಎದುರಿಸಿದ್ದು ರಶೀದ್ ಖಾನ್, ಮಹಮ್ಮದ್ ಸಿರಾಜ್ ಎಂಬ ದೈತ್ಯರನ್ನ. ಆದರೆ ಕೊನೆಯ ಓವರುಗಳಲ್ಲಿ ರಶೀದ್ ಖಾನ್ ಬೌಲಿಂಗಿನಲ್ಲಿ 18 ರನ್ ಮತ್ತು ಸಿರಾಜ್ ಬೌಲಿಂಗಲ್ಲಿ 23 ರನ್ ಚಚ್ಚಿದ ಶಶಾಂಕ್ ಸಿಂಗ್, ದಿಗ್ಗಜರ ಬೌಲಿಂಗ್ನ್ನು ಪುಡಿ ಪುಡಿ ಮಾಡಿದ್ರು.
ಶಶಾಂಕ್ ಸಿಂಗ್ ಹಾಗೆ ಅಬ್ಬರಿಸುತ್ತಿರುವಾಗ ಮತ್ತೊಂದು ಕಡೆ ಕ್ಯಾಪ್ಟನ್ ಶ್ರೇಯಸ್ 97 ರನ್ ಗಳಿಸಿ ಆಡುತ್ತಿದ್ದರು. ಆದರೆ ನಾಯಕನ ಮನೋಭಾವ ಪ್ರದರ್ಶಿಸಿದ ಶ್ರೇಯಸ್ ಅಯ್ಯರ್, ನನ್ನ ಸೆಂಚುರಿ ಕಡೆ ಗಮನ ಕೊಡಬೇಡ, ಚಚ್ಚು ಅಂತಾ ಸಿಗ್ನಲ್ ಕೊಟ್ಟರಂತೆ. ಅಯ್ಯರ್ಗೆ ಶತಕ ಸಿಗಲಿಲ್ಲ. ಆದರೆ, ಶಶಾಂಕ್ ಆರ್ಭಟದಿಂದಾಗಿ ಪಂಜಾಬ್ ತಂಡಕ್ಕೆ 11 ರನ್ಗಳ ಭರ್ಜರಿ ಗೆಲುವು ಸಿಕ್ಕಿತು.