ಅಮೆರಿಕದ ಮ್ಯಾಸಚೂಸೆಟ್ಸ್ನಲ್ಲಿ ಭಾರತೀಯ ಮೂಲದ 17 ವರ್ಷದ ಬಾಲಕನೊಬ್ಬ ತನ್ನ ತಾಯಿ ಹಾಗೂ ಕಿರಿಯ ಸಹೋದರನನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ.
ಮ್ಯಾಸಚೂಸೆಟ್ಸ್ನ ಆಕ್ಟನ್ನಲ್ಲಿರುವ ಕುಟುಂಬದ ಮನೆಯಲ್ಲಿ ಆಗಸ್ಟ್ 11ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ. ಆರೋಪಿ ಅರ್ಜುನ್ ಅರವಿಂದ್ ತನ್ನ ತಾಯಿ ಸುಧಾ ವೆಂಕಟೇಶನ್ (45) ಹಾಗೂ 14 ವರ್ಷದ ಸಹೋದರ ಸಿದ್ಧಾರ್ಥ್ ಅರವಿಂದ್ ಅವರನ್ನು ಹತ್ಯೆ ಮಾಡಿದ ಆರೋಪ ಎದುರಿಸುತ್ತಿದ್ದಾನೆ. ಪ್ರಕರಣದಲ್ಲಿ ಆತನ ವಿರುದ್ಧ ಎರಡು ಕೊಲೆ ಆರೋಪಗಳು ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ.
ಘಟನೆ ನಡೆದ ದಿನ ಸಂಜೆ 6.30ರ ಬಳಿಕ ಅರ್ಜುನ್ನ ತಂದೆ ಪೊಲೀಸರಿಗೆ ಕರೆ ಮಾಡಿ, ಪತ್ನಿ ಹಾಗೂ ಮಕ್ಕಳನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಮಾಹಿತಿ ನೀಡಿದ್ದರು. ಕುಟುಂಬಕ್ಕೆ ಬರಬೇಕಿದ್ದ ಟ್ಯೂಟರ್ ಕೂಡ ಅವರನ್ನು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ಮಾಹಿತಿ ಆಧರಿಸಿ ಪೊಲೀಸರು ಮನೆಗೆ ತೆರಳಿ ಪರಿಶೀಲಿಸಿದಾಗ, ಸಿದ್ಧಾರ್ಥ್ ಮೊದಲ ಮಹಡಿಯಲ್ಲಿ ಹಾಗೂ ಸುಧಾ ಮನೆಯ ನೆಲಮಾಳಿಗೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಇಬ್ಬರ ದೇಹದಲ್ಲೂ ಗಾಯಗಳ ಗುರುತುಗಳು ಕಂಡುಬಂದಿವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಆದರೆ ಸಾವಿಗೆ ನಿಖರ ಕಾರಣವೇನು, ಯಾವ ರೀತಿಯಲ್ಲಿ ಹತ್ಯೆ ನಡೆದಿದೆ ಮತ್ತು ಯಾವ ಆಯುಧ ಬಳಸಲಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಕುರಿತು ವೈದ್ಯಕೀಯ ಹಾಗೂ ವಿಧಿವಿಜ್ಞಾನ ಪರೀಕ್ಷೆಗಳ ವರದಿಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ.
ಪೊಲೀಸರು ಮನೆಗೆ ಆಗಮಿಸಿದ ವೇಳೆ ಅರ್ಜುನ್ ತನ್ನ ತಾಯಿಯ ಕಾರಿನಲ್ಲಿ ಸ್ಥಳದಿಂದ ತೆರಳಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಆರಂಭಿಕ ಹುಡುಕಾಟದಲ್ಲಿ ಆತ ಪತ್ತೆಯಾಗದ ಹಿನ್ನೆಲೆ ಸ್ಥಳೀಯ ಪೊಲೀಸರು ಇತರ ಕಾನೂನು ಜಾರಿ ಸಂಸ್ಥೆಗಳ ನೆರವು ಪಡೆದು ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿದರು.
ಬುಧವಾರ ಬೆಳಗ್ಗೆ ಮ್ಯಾಸಚೂಸೆಟ್ಸ್ನ ವೇಲ್ಯಾಂಡ್ನಲ್ಲಿ ಸ್ಥಳೀಯ ಪೊಲೀಸರು ಪಾರ್ಕಿಂಗ್ ಸ್ಥಳವೊಂದರಲ್ಲಿ ಅರ್ಜುನ್ನ ತಾಯಿಗೆ ಸೇರಿದ ಕಾರು ಪತ್ತೆಯಾಗಿದೆ. ಕಾರಿನೊಳಗಿದ್ದ ಅರ್ಜುನ್ನನ್ನು ಯಾವುದೇ ಪ್ರತಿರೋಧವಿಲ್ಲದೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ChatGPTನಲ್ಲಿ ಹುಡುಕಾಟ ನಡೆಸಿದ್ದ ಆರೋಪ
ಪ್ರಕರಣದ ತನಿಖೆಯ ವೇಳೆ ಅರ್ಜುನ್ನ ಆನ್ಲೈನ್ ಚಟುವಟಿಕೆಗಳ ಬಗ್ಗೆಯೂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ತನಿಖಾಧಿಕಾರಿಗಳ ಪ್ರಕಾರ, ಕುಟುಂಬದ ಸದಸ್ಯರನ್ನು ಹತ್ಯೆ ಮಾಡುವ ಕುರಿತು ಸೈದ್ಧಾಂತಿಕ ವಿಚಾರಗಳು ಅಥವಾ ‘ಕೊಲೆ ಕಲ್ಪನೆ’ಗಳಿಗೆ ಸಂಬಂಧಿಸಿದ ವಿಷಯಗಳನ್ನು ಆತ ಇಂಟರ್ನೆಟ್ ಹಾಗೂ ChatGPTನಲ್ಲಿ ಹುಡುಕಾಟ ನಡೆಸಿದ್ದಾನೆ ಎನ್ನಲಾಗಿದೆ.
ಅರ್ಜುನ್ ವಿರುದ್ಧ ಕೊಲೆ ಆರೋಪಗಳ ಜತೆಗೆ ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ತಲಾ ಎರಡು ಪ್ರಕರಣಗಳು, ವಾಹನವನ್ನು ಅನುಮತಿಯಿಲ್ಲದೆ ಬಳಸಿದ ಆರೋಪ ಹಾಗೂ ಮೋಟಾರು ವಾಹನ ಕಳವು ಆರೋಪಗಳನ್ನೂ ದಾಖಲಿಸಲಾಗಿದೆ.
ಅರ್ಜುನ್ನನ್ನು ಮೊದಲು ಬಾಲಾಪರಾಧ ನ್ಯಾಯಾಲಯದ ಮುಂದೆ ಹಾಜರುಪಡಿಸುವ ನಿರೀಕ್ಷೆಯಿದೆ. ಆದರೆ ಕೊಲೆ ಪ್ರಕರಣಗಳ ವಿಚಾರಣೆ ನಡೆಸುವ ಅಧಿಕಾರ ಬಾಲಾಪರಾಧ ನ್ಯಾಯಾಲಯಕ್ಕೆ ಇಲ್ಲದ ಕಾರಣ, ಮುಂದಿನ ಹಂತದಲ್ಲಿ ಕೊಲೆ ಮತ್ತು ಸಂಬಂಧಿತ ಆರೋಪಗಳ ವಿಚಾರಣೆಗಾಗಿ ಆತನನ್ನು ಜಿಲ್ಲಾ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ.
ಸುಧಾ ವೆಂಕಟೇಶನ್ ಮತ್ತು ಸಿದ್ಧಾರ್ಥ್ ಅರವಿಂದ್ ಅವರ ಸಾವಿನ ಕುರಿತು ತನಿಖೆ ಮುಂದುವರಿದಿದೆ.





