ಸಿನಿಮಾದ ಹೀರೋ ಆ ಚಿತ್ರದ ಕಥೆಗಷ್ಟೇ ಹೀರೋ ಆದ್ರೆ ಸಾಕೇ..? ಸಮಾಜಕ್ಕೂ ಹೀರೋ ಅನಿಸಿಕೊಳ್ಳಬೇಕಲ್ಲವೇ..? ಸದ್ಯ ರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ನಟ ದರ್ಶನ್ಗೆ ಜೀವಾವಧಿ ಅಥ್ವಾ ಕನಿಷ್ಟ 10 ವರ್ಷ ಜೈಲು ಶಿಕ್ಷೆಯಾಗೋ ಸಾಧ್ಯತೆಯಿದೆ. ಅದಕ್ಕೆ ಅವ್ರು ಮಾಡಿದ ಕರ್ಮದ ಫಲ ಅಂದ್ರೆ ತಪ್ಪಾಗಲ್ಲ. ಒಂದ್ಕಡೆ ಪ್ರದೋಶ್.. ಮತ್ತೊಂದ್ಕಡೆ ಸಾಕ್ಷ್ಯನಾಶಕ್ಕೆ ಸುಪಾರಿ ಕೊಟ್ಟ ಆ ಲೇಡಿ. ಇವ್ರಿಂದ ಡಿಬಾಸ್ ಪಾಪ-ಪುಣ್ಯಗಳ ಲೆಕ್ಕ ಉಲ್ಟಾ ಪಲ್ಟಾ ಆಗಿದೆ. ಆ ಕುರಿತ ಒಂದು ಸಂಕ್ಷಿಪ್ತ ವರದಿ ಇಲ್ಲಿದೆ ನೋಡಿ.
ಕರ್ಮ ರಿಟರ್ನ್ಸ್ ಅಂದ್ರೆ ಇದೇನಾ..?
ಒಂದ್ಕಡೆ ಪ್ರದೋಶ್..
ಮತ್ತೊಂದ್ಕಡೆ ಸಾಕ್ಷ್ಯ
ನಾಶದ ಹಿಂದಿನ ಆ ಲೇಡಿ..
ಜೀವಾವಧಿ ಆದ್ರೆ ದಾಸನಿಗೆ ಖಾಯಂ ಸೆರೆ‘ಮನೆ’
ಗ್ಯಾರಂಟಿ ನ್ಯೂಸ್ನಲ್ಲಿ ಪಾಪ-ಪುಣ್ಯಗಳ ಲೆಕ್ಕ
ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ತಮ್ಮ 57 ಸಿನಿಮಾಗಳಲ್ಲಿ ಎದುರಾಗದ ಬಿಗ್ ಚಾಲೆಂಜ್ ಈಗ ಎದುರಾಗಿದೆ. ಅದ್ರಿಂದ ತಪ್ಪಿಸಿಕೊಂಡು ಹೊರಬರೋದು ಕಷ್ಟಕಷ್ಟ ಅನಿಸ್ತಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ಖಾಕಿ ಬಲೆಗೆ ಬಿದ್ದಿರೋ ದಾಸ, ಸದ್ಯ ಕಾನೂನು, ಕೋರ್ಟ್, ಕಟ್ಟಳೆಗಳ ಪರಿಧಿಯಲ್ಲಿ ವಿಲ ವಿಲ ಒದ್ದಾಡುತ್ತಿದ್ದಾರೆ.
ಬೇಲ್ ಪಡೆದು ಹೊರಬರೋದು ದೂರದ ಮಾತು.. ಜೈಲಿಂದ ಹೊರಗೆ ಬರೋದೇ ಡೌಟು ಗುರು ಅನ್ನುವಂತಾಗಿದೆ. ಅದಕ್ಕೆ ಆತನೇ ಮಾಡಿಕೊಂಡಿರೋ ಸಾಲು ಸಾಲು ಎಡವಟ್ಟುಗಳು ಕಾರಣೀಭೂತವಾಗಿವೆ. ಮುತ್ತಿನಂತಹ ಮಡದಿ ವಿಜಯಲಕ್ಷ್ಮೀ ಇದ್ರೂ ಸಹ ಪವಿತ್ರಾ ಗೌಡ ಸಹವಾಸ ಮಾಡಿ ಪ್ರಪಾತಕ್ಕೆ ಬಿದ್ದರು. ಅದಾದ ಬಳಿಕ ಪವಿತ್ರಾಗೆ ರೇಣುಕಾಸ್ವಾಮಿ ಕೆಟ್ಟದಾಗಿ ಮೆಸೇಜ್ ಮಾಡಿದ ಅಂತ ಕಾನೂನನ್ನ ಕೈಗೆತ್ತಿಕೊಂಡು ತನಗೆ ತಾನೇ ಖೆಡ್ಡಾ ತೋಡಿಕೊಂಡರು.
ಉಗುರಲ್ಲಿ ಹೋಗೋದಕ್ಕೆ ಕೊಡಲಿ ಹೆಗಲ ಮಲೆ ಇಟ್ಟುಕೊಂಡರು ಅನ್ನುವಂತೆ.. ಸಲೀಸಾಗಿ ಬಗೆಹರಿಸಬೇಕಿದ್ದ ರೇಣುಕಾಸ್ವಾಮಿ ಕೆಟ್ಟ ಮೆಸೇಜ್ ಹಾಗೂ ಅಶ್ಲೀಲ ಫೋಟೋ ಸಂದೇಶಕ್ಕೆ ದಾಸನ ಆ್ಯಕ್ಷನ್, ಬಹುದೊಡ್ಡ ರಿಯಾಕ್ಷನ್ ಆಗಿಬಿಟ್ಟಿದೆ. ಒಂದು ಜೀವವೇ ಹೋಗಿಬಿಟ್ಟಿದೆ. ಅದೂ ಆತನಿಗೆ ಅವರೆಲ್ಲಾ ಚಿತ್ರಹಿಂಸೆ ನೀಡಿ ಸಾಯಿಸಿರೋದು ಅಚ್ಚರಿ. ಮಾಫಿ ಸಾಕ್ಷಿ ಹೇಳೋಕೆ ಮುಂದಾಗಿರೋ ಆರೋಪಿ ಪ್ರದೋಶ್ ಅರ್ಜಿ ಪ್ರಕಾರ ನೈಲಾಗ್ ಹಗ್ಗದಲ್ಲಿ ನಟ ದರ್ಶನ್ ರೇಣುಕಾಸ್ವಾಮಿಗೆ ಹಲ್ಲೆ ಮಾಡಿದ್ದಾರೆ. ಸಿಗರೇಟ್ನಿಂದ ಸ್ವಾಮಿ ಮೈ ಸುಟ್ಟಿದ್ದಾರೆ. ಬಟ್ಟೆ ಬಿಚ್ಚಿಸಿ ಗುಪ್ತಾಂಗಕ್ಕೆ ಜಾಡಿಸಿ ಒದ್ದಿದ್ದಾರೆ. ಸ್ವಾಮಿ ಎದೆ ಮೇಲೆ ಎರಡೂ ಕಾಲುಗಳನ್ನ ಇಟ್ಟು ಬಲವಾಗಿ ತುಳಿದಿದ್ದಾರೆ.
ಅಷ್ಟೆಲ್ಲಾ ಕ್ರೂರವಾಗಿ ಹಿಂಸಿಸಿದ್ರೆ ಯಾವ ವ್ಯಕ್ತಿ ತಾನೇ ಬದುಕಲು ಸಾಧ್ಯ ನೀವೇ ಹೇಳಿ. ರೇಣುಕಾಸ್ವಾಮಿ ಸತ್ತಿದ್ದು, ಅದೀಗ ದರ್ಶನ್ ಕರಿಯರ್ ಅಷ್ಟೇ ಅಲ್ಲ, ಬಾಳಿಗೇ ಉರುಳಾಗಿದೆ.
ಪ್ರದೋಶ್ ಮಾಫಿಸಾಕ್ಷಿ ಹೇಳಿಕೆ ಆ-18ರ ನಂತ್ರ ದಾಖಲು..!
ಹೈ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ದಚ್ಚುಗೆ ಅವಕಾಶ
ಪ್ರದೋಶ್ ಮಾಫಿಸಾಕ್ಷಿ ಅರ್ಜಿಯನ್ನ ಕೋರ್ಟ್ ಪುರಸ್ಕರಿಸಿತ್ತು. ಅದಕ್ಕೆ ಇತರೇ ಆರೋಪಿಗಳು ಆಕ್ಷೇಪ ವ್ಯಕ್ತಪಡಿಸುವಂತಿಲ್ಲ ಅಂತಲೂ ಹೇಳಿತ್ತು. ಆದ್ರೆ ಪ್ರದೋಶ್ ಹೇಳಿಕೆಯನ್ನ ಕೋರ್ಟ್ ದಾಖಲಿಸಿಕೊಳ್ಳದಂತೆ ಒಂದು ವಾರ ಗಡುವು ಕೇಳಿದ್ದಾರೆ ದರ್ಶನ್ ಪರ ವಕೀಲ ಹಸ್ಮತ್ ಪಾಷಾ. ಯಾಕಂದ್ರೆ ಸೆಷನ್ಸ್ ಕೊರ್ಟ್ನ ಆ ಆದೇಶ ಪ್ರಶ್ನಿಸಿ, ಹೈ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದಾರೆ.
ಮಾಫಿ ಸಾಕ್ಷಿಗೆ ಮುಂದಾಗಿರೋ ಪ್ರದೋಶ್ ಕೂಡ ಒಬ್ಬ ಆರೋಪಿಯೇ ಆಗಿರೋದ್ರಿಂದ ಆತನನ್ನ ಪ್ರಮುಖ ಸಾಕ್ಷಿಯಾಗಿ ಕನ್ಸಿಡರ್ ಮಾಡಬೇಕಾ ಅಥ್ವಾ ಬೇಡವಾ ಅನ್ನೋದು ಕೋರ್ಟ್ ನಿರ್ಧರಿಸಲಿದೆ. ಆದ್ರೆ ಪ್ರದೋಶ್ ಹೇಳಿಕೆ ಆದಷ್ಟು ಬೇಗ ದಾಖಲಿಸಲು ಪ್ರದೋಶ್ ಪರ ವಕೀಲ ದಿವಾಕರ್ ಕೋರ್ಟ್ಗೆ ಮನವಿ ಮಾಡಿದ್ದಾರೆ. ವಾದ-ಪ್ರತಿವಾದಗಳ ಬಳಿಕ ಸದ್ಯ ಕೋರ್ಟ್ ಇದೇ ಆಗಸ್ಟ್ 18ರ ತನಕ ಪ್ರದೋಶ್ ಹೇಳಿಕೆ ದಾಖಲಿಸದಂತೆ ಟೈಂ ನೀಡಿದೆ. ಅಲ್ಲದೆ ಪ್ರದೋಶ್ನ ಜೈಲಿನಲ್ಲಿ ಪ್ರತ್ಯೇಕವಾಗಿ ಇರಿಸಿ, ಹೆಚ್ಚಿನ ಭದ್ರತೆ ನೀಡುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ. ನಟ ದರ್ಶಣ್ ಜೊತೆ ಅಲ್ಲದೆ.. ಪ್ರತ್ಯೇಕ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಲು ಅವಕಾಶ ಮಾಡಿಕೊಡುವಂತೆ ಸೂಚನೆ ನೀಡಿದ್ದಾರೆ.
ರೇಣುಕಾಸ್ವಾಮಿ ಕಿಡ್ನ್ಯಾಪ್ ಸಾಕ್ಷ್ಯನಾಶದ ಹಿಂದೆ ಆ ಹೆಣ್ಣು
ಪ್ರಭಾವಿ ಮಹಿಳೆ ಯಾರು? ವಿಚಾರಣೆ ವೇಳೆ ಹೆಸ್ರು ರಿವೀಲ್
ದಾಸನಿಗೆ ಹೆಚ್ಚಿದ ಟೆನ್ಷನ್.. ಮಾತಿಲ್ಲ ಕಥೆಯಿಲ್ಲ ಬರೀ ಮೌನ
ಆರೋಪ ಸಾಬೀತಾದ್ರೆ ಜೀವಾವಧಿ/ ಕನಿಷ್ಟ 10 ವರ್ಷ ಜೈಲು
ರೇಣುಕಾಸ್ವಾಮಿ ಮರ್ಡರ್ಗೂ ಮುನ್ನ ಕಿಡ್ನ್ಯಾಪ್ ಕೇಸ್ ವಿಚಾರ ಸಾಕ್ಷ್ಯನಾಶಕ್ಕೆ ಮುಂದಾಗಿ, ಖಾಕಿ ಬಲೆಗೆ ಸಿಲುಕಿದ್ದಾರೆ ದರ್ಶನ ಹುಡುಗರು. ಡಿ ಕಂಪನಿ ಪೇಜ್ನ ಅಡ್ಮಿನ್ ಹಾಗೂ ದರ್ಶನ್ ಹುಡ್ಗ ಪುನೀತ್ ತುಮಕೂರಿನ ಬಾರ್ ಕ್ಯಾಶಿಯರ್ಗೆ ವಾಟ್ಸಾಪ್ ಕರೆ ಮೂಲಕ ಧಮ್ಕಿ ಹಾಕಿ ತಗ್ಲಾಕೊಂಡಿದ್ದರು. ಪುನೀತ್ ಜೊತೆ ಸಂಜಯನಗರದ ಬಾರ್ ಮಾಲೀಕನ ಸ್ನೇಹಿತ ಸುಹಾಸ್ ಹಾಗೂ ವೇಣು ಕೂಡ ಇದರಲ್ಲಿ ಭಾಗಿಯಾಗಿದ್ರು. ಆದ್ರೆ ಇವ್ರ ಹಿಂದೆ ಮತ್ತೊಬ್ಬ ಪ್ರಭಾವಿ ಮಹಿಳೆ ಇರೋದು ಈಗ ಬಯಲಾಗಿದೆ.
ಕಾಮಾಕ್ಷಿಪಾಳ್ಯ ಪೊಲೀಸರ ತನಿಖೆ ವೇಳೆ ಆರೋಪಿಗಳಾದ ಪುನೀತ್ ಆ ಪ್ರಭಾವಿ ಮಹಿಳೆ ಹೆಸರು ಬಾಯಿಬಿಟ್ಟಿದ್ದು, ಸದ್ಯದಲ್ಲೇ ಆಕೆ ಕೂಡ ಅರೆಸ್ಟ್ ಆಗಲಿದ್ದಾರಂತೆ. ಅಲ್ಲಿಗೆ ದಾಸನ ಜೊತೆಗೆ ಆತನ ಬೆನ್ನಿಗೆ ನಿಂತವರೂ ಜೈಲೂಟ ಸವಿಯೋಕೆ ಹೋಗೋದು ಪಕ್ಕಾ ಆಗಿದೆ.
ಹೈ ಕೋರ್ಟ್ನ ಹಿರಿಯ ವಕೀಲರಾದ ಶ್ರೀನಿವಾಸ್ ಅವರು ನಮ್ಮ ಗ್ಯಾರಂಟಿ ನ್ಯೂಸ್ ಜೊತೆ ಎಕ್ಸ್ಕ್ಲೂಸಿವ್ ಆಗಿ ಮಾತನಾಡಿದ್ದು, ದರ್ಶನ್ಗೆ ವಿಧಿಸಬಹುದಾದ ಶಿಕ್ಷೆ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ.
ಒಟ್ಟಾರೆ ದಾಸನ ಖೇಲ್ ಖತಂ ಆಗೋ ಲಕ್ಷಣ ಕಾಣ್ತಿದೆ. ಯಾಕಂದ್ರೆ ಉಪ್ಪು ತಿಂದವನು ನೀರು ಕುಡಿಯಲೇಬೇಕು. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ಅವರವರ ಕರ್ಮದ ಫಲಗಳು ಅವರಿಗೆ ಅನ್ನುವಂತೆ.. ಇಲ್ಲಿ ದರ್ಶನ್ ಇಷ್ಟು ದಿನ ಎಷ್ಟೆಲ್ಲಾ ಸಾಮಾಜಿಕ ಕಾರ್ಯಗಳನ್ನ ಮಾಡಿ ಪುಣ್ಯ ಕಟ್ಟಿಕೊಂಡಿದ್ರೋ.. ಈಗ ಈ ಪಾಪದ ಮುಂದೆ ಆ ಪುಣ್ಯ ಕಾರ್ಯಗಳು ಲೆಕ್ಕಕ್ಕಿಲ್ಲದಂತಾಗಿವೆ. ಸದ್ಯಕ್ಕಂತೂ ದಾಸ ಶಿಕ್ಷೆ ಅನುಭವಿಸದೆ ಹೊರ ಬರೋ ಯಾವುದೇ ದಾರಿ ಕಾಣುತ್ತಿಲ್ಲ ಅನ್ನೋದು ಸ್ಪಷ್ಟ.





