ಚಿಕ್ಕಬಳ್ಳಾಪುರ: ಶಾಪಿಂಗ್ಗೆ ತೆರಳಿದ್ದ ವೇಳೆ ನಾಲ್ಕು ವರ್ಷದ ಬಾಲಕಿ ಆಟವಾಡುತ್ತಾ ಅಂಗಡಿಯ ಮೊದಲ ಮಹಡಿಯ ಗ್ರಿಲ್ನಿಂದ ಆಯತಪ್ಪಿ ಕೆಳಗೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಈ ಘಟನೆ ನಗರದ ಪಿಳ್ಳಪ್ಪ ಕಾಂಪ್ಲೆಕ್ಸ್ನಲ್ಲಿರುವ ಖಾಸಗಿ ಬಟ್ಟೆ ಅಂಗಡಿಯಲ್ಲಿ ನಡೆದಿದ್ದು, ಬಾಲಕಿಗೆ ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗಾಯಗೊಂಡಿರುವ ಬಾಲಕಿಯನ್ನು ಚಿಕ್ಕಬಳ್ಳಾಪುರ ತಾಲೂಕಿನ ಗೊಲ್ಲರದೊಡ್ಡಿ ಗ್ರಾಮದ ನಾರಾಯಣಸ್ವಾಮಿ ಮತ್ತು ಮಧು ದಂಪತಿಯ ಪುತ್ರಿ ಗಗನ ಸಿಂಧು (4) ಎಂದು ಗುರುತಿಸಲಾಗಿದೆ. ಕುಟುಂಬವು ಮಗುವಿಗೆ ಹೊಸ ಬಟ್ಟೆ ಖರೀದಿಸಲು ನಗರದಲ್ಲಿರುವ ಅಂಗಡಿಗೆ ಬಂದಿತ್ತು. ಇದೇ ವೇಳೆ ಈ ದುರ್ಘಟನೆ ಸಂಭವಿಸಿದೆ.
ಮಾಹಿತಿಯ ಪ್ರಕಾರ, ಪೋಷಕರು ಬಟ್ಟೆ ಖರೀದಿ ಮಾಡುವಲ್ಲಿ ನಿರತರಾಗಿದ್ದ ವೇಳೆ ಬಾಲಕಿ ಅಂಗಡಿಯೊಳಗೆ ಆಟವಾಡುತ್ತಾ ಹೊರಭಾಗದಲ್ಲಿದ್ದ ಕಬ್ಬಿಣದ ಗ್ರಿಲ್ ಬಳಿ ತೆರಳಿದ್ದಾಳೆ. ಅಲ್ಲಿಂದ ಗ್ರಿಲ್ ಏರಿ ಆಟವಾಡಲು ಆರಂಭಿಸಿದ್ದಾಳೆ. ಇದನ್ನು ಗಮನಿಸಿದ ತಾಯಿ ಎರಡು-ಮೂರು ಬಾರಿ ಮಗುವನ್ನು ಅಲ್ಲಿಂದ ಕರೆದುಕೊಂಡು ಬಂದು ಸುರಕ್ಷಿತ ಸ್ಥಳದಲ್ಲಿ ಇರಿಸಿದ್ದರು. ಆದರೆ ಕೆಲವೇ ಕ್ಷಣಗಳ ಬಳಿಕ ಬಾಲಕಿ ಮತ್ತೆ ಗ್ರಿಲ್ ಬಳಿ ತೆರಳಿ ಆಟವಾಡಲು ಆರಂಭಿಸಿದ್ದಾಳೆ.
ಈ ವೇಳೆ ಏಕಾಏಕಿ ಆಯತಪ್ಪಿ ಬಾಲಕಿ ಮೊದಲ ಮಹಡಿಯಿಂದ ಕೆಳಗೆ ಬಿದ್ದಿದ್ದಾಳೆ. ಘಟನೆಯ ಶಬ್ದ ಕೇಳಿ ಸ್ಥಳದಲ್ಲಿದ್ದವರು ಮತ್ತು ಅಂಗಡಿ ಸಿಬ್ಬಂದಿ ತಕ್ಷಣವೇ ಬಾಲಕಿಯ ನೆರವಿಗೆ ಧಾವಿಸಿದ್ದಾರೆ. ಗಾಯಗೊಂಡಿದ್ದ ಬಾಲಕಿಯನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದ ಕಾರಣ ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದೆ. ವೈದ್ಯರ ಪ್ರಕಾರ ಬಾಲಕಿಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ.
ಘಟನೆ ಕುರಿತು ಮಾತನಾಡಿದ ಅಂಗಡಿ ಮಾಲೀಕರಾದ ನಾರಾಯಣಸಿಂಗ್ ಹಾಗೂ ರೋಹಿತ್, “ಮಗು ಹಲವು ಬಾರಿ ಅಂಗಡಿಯ ಹೊರಭಾಗಕ್ಕೆ ಹೋಗಿತ್ತು. ತಾಯಿ ಎರಡು-ಮೂರು ಬಾರಿ ಮಗುವನ್ನು ಒಳಗೆ ಕರೆದುಕೊಂಡು ಬಂದಿದ್ದರು. ಆದರೂ ಮತ್ತೆ ಗ್ರಿಲ್ ಬಳಿ ಹೋಗಿ ಆಟವಾಡಿದ ವೇಳೆ ಈ ಅವಘಡ ಸಂಭವಿಸಿದೆ. ಘಟನೆ ನಡೆದ ತಕ್ಷಣ ನಾವು ಕೂಡಲೇ ಮಗುವನ್ನು ಆಸ್ಪತ್ರೆಗೆ ಕಳುಹಿಸಲು ಸಹಕರಿಸಿದ್ದೇವೆ” ಎಂದು ತಿಳಿಸಿದ್ದಾರೆ.





