ಬೆಳಗಾವಿಯ ಪ್ರಭು ಯತ್ನಟ್ಟಿಯವರು ತಮ್ಮ ಪಿ.ಆರ್. ಅಸೋಸಿಯೇಟ್ಸ್ ಸಂಸ್ಥೆಯಿಂದ ನಿರ್ಮಿಸಿ, ಬರಗೂರು ರಾಮಚಂದ್ರಪ್ಪನವರು ನಿರ್ದೇಶಿಸಿರುವ `ಮಹಾಕವಿ’ ಕನ್ನಡ ಚಿತ್ರವು ಹಾಲಿವುಡ್ ಗೋಲ್ಡನ್ ಏಜ್ ಅಂತರರಾಷ್ಟ್ರೀಯ ಚಿತ್ರೋತ್ಸವದ ಸ್ಪರ್ಧಾ ವಿಭಾಗಕ್ಕೆ ಪ್ರವೇಶ ಪಡೆದಿದೆ. ಈ ಸ್ಪರ್ಧೆಯಲ್ಲಿ ಈಗ ಸೆಮಿಫೈನಲ್ ಹಂತಕ್ಕೆ ಆಯ್ಕೆಯಾಗಿದೆ.
`ಮಹಾಕವಿ’ ಚಿತ್ರವು ಹತ್ತನೇ ಶತಮಾನದ ಕನ್ನಡದ ಆದಿಕವಿ ಪಂಪ ರಚಿಸಿರುವ ಕಾವ್ಯಗಳನ್ನು ಆಧರಿಸಿ, ಕವಿಯ ಆಶಯಗಳನ್ನು ಅಭಿವ್ಯಕ್ತಿಸಿರುವ ಚಿತ್ರವಾಗಿದೆ. ಪಂಪಕವಿಯು ಕನ್ನಡ ಸಾಹಿತ್ಯದಲ್ಲಿ ಮೊಟ್ಟಮೊದಲು ಜಾತಿ ವ್ಯವಸ್ಥೆಯನ್ನು ವಿರೋಧಿಸಿದ್ದಲ್ಲದೆ ಪರ್ಯಾಯ ಪರಿಕಲ್ಪನೆಯನ್ನು ಕೂಡ ನೀಡಿದ್ದು ಚರಿತ್ರಾರ್ಹ ಸಂಗತಿಯಾಗಿದೆ.
ರಾಜಪ್ರಭುತ್ವದ ಆಶ್ರಯದಲ್ಲಿದ್ದು ಕೂಡ ತನ್ನ ಸೃಜನಶೀಲ ಸ್ವಾತಂತ್ರ್ಯವನ್ನು ಬಿಟ್ಟುಕೊಡದ ಅಭಿವ್ಯಕ್ತಿ ವಿಧಾನವನ್ನು ಮೊಟ್ಟ ಮೊದಲಿಗೆ ನೀಡಿದ ಕೀರ್ತಿಯೂ ಪಂಪ ಕವಿಗೆ ಸಲ್ಲಬೇಕು. ಪ್ರಭುತ್ವದ ಎದುರು ಪ್ರತಿನಾಯಕತ್ವದ ಪರಿಕಲ್ಪನೆಗೂ ಕಾರಣವಾದ ಪಂಪ ಕವಿಯ ಈ ಎಲ್ಲ ಆಶಯಗಳನ್ನು `ಮಹಾಕವಿ’ ಕನ್ನಡ ಚಿತ್ರವು ಪ್ರತಿನಿಧಿಸುತ್ತದೆ.
ಪಂಪ ಕವಿಯ ಪಾತ್ರವನ್ನು ಬಹುಭಾಷಾ ಕಲಾವಿದರಾದ ಕನ್ನಡದ ಕಿಶೋರ್ ನಿರ್ವಹಿಸಿದ್ದು ತಾರಾಗಣದಲ್ಲಿ ಸುಂದರರಾಜ್, ಅನುಷಾರೈ, ಕುಮಾರ್ ಗೋವಿಂದ್, ಪ್ರಮೀಳಾ ಜೋಷಾಯ್, ಶೀಲಾ, ಆಕಾಂಕ್ಷ್ ಬರಗೂರ್, ಸುಂದರರಾಜ ಅರಸು, ಹನುಮಂತೇಗೌಡ, ರಾಘವ್, ರಾಜಪ್ಪ ದಳವಾಯಿ, ಶಾಂತರಾಜ್, ಬಾಲಕೃಷ್ಣ ಬರಗೂರು, ಚಲಪತಿ ಮುಂತಾದವರು ಇದ್ದಾರೆ.
ಸುರೇಶ್ ಅರಸು ಸಂಕಲನ, ನಾಗರಾಜ ಆದವಾನಿ ಛಾಯಗ್ರಹಣ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ, ತ್ರಿಭುವನ್ ನೃತ್ಯ ಸಂಯೋಜನೆ, ಹೊಸ್ಮನೆ ಮೂರ್ತಿ ಕಲಾ ವಿನ್ಯಾಸ, ನಟ್ರಾಜ್ ಶಿವು ಮತ್ತು ಪ್ರವೀಣ್ ಸಹನಿರ್ದೇಶನವಿರುವ `ಮಹಾಕವಿ’ ಚಿತ್ರಕ್ಕೆ ಬರಗೂರು ರಾಮಚಂದ್ರಪ್ಪನವರು ಚಿತ್ರಕತೆ, ಸಂಭಾಷಣೆ, ಗೀತೆರಚನೆಯೊಂದಿಗೆ ನಿರ್ದೇಶನ ಮಾಡಿದ್ದಾರೆ





