ಕನ್ನಡ ಚಿತ್ರರಂಗದ ದಿಕ್ಕನ್ನು ಬದಲಿಸಿ, ಅದಕ್ಕೊಂದು ಹೊಸ ಆಯಾಮ ಕೊಟ್ಟು, ಟ್ರೆಂಡ್ ಸೆಟ್ಟರ್ ಅನಿಸಿಕೊಂಡ ಗರಿಮೆ ಕ್ರೇಜಿಸ್ಟಾರ್ ರವಿಚಂದ್ರನ್ಗೆ ಸಲ್ಲುತ್ತೆ. ಶಾಂತಿ ಕ್ರಾಂತಿ ಅನ್ನೋ ಪ್ಯಾನ್ ಇಂಡಿಯಾ ಸಿನಿಮಾದ ಬಳಿಕ ಹಳ್ಳಿಮೇಷ್ಟ್ರು ಆಗಿ ಎಲ್ಲರ ದಿಲ್ ದೋಚಿದ ರವಿಚಂದ್ರನ್ ಮೇಲೆ ಅತ್ಯಾಚಾರ ಆರೋಪ ಕೇಳಿ ಬರುತ್ತೆ. ಚಿತ್ರದ ನಾಯಕನಟಿಯೇ ಅಂಥದ್ದೊಂದು ವಿವಾದಕ್ಕೆ ನಾಂದಿ ಹಾಡ್ತಾರೆ. ಆದ್ರೀಗ ಬರೋಬ್ಬರಿ 34 ವರ್ಷಗಳ ನಂತ್ರ ಬೇಷರತ್ ಕ್ಷಮೆ ಯಾಚಿಸಿದ್ದಾರೆ ನಟಿ ಬಿಂದಿಯಾ. ಕಣ್ಣೀರು ಹಾಕುತ್ತಾ, ಕ್ರೇಜಿಸ್ಟಾರ್ನ ಅವಕಾಶಕ್ಕಾಗಿ ಗೋಗರೆಯುತ್ತಿದ್ದಾರೆ. ಹಳ್ಳಿಮೇಷ್ಟ್ರು ಕಾಂಟ್ರವರ್ಸಿ ಕುರಿತ ಕಂಪ್ಲೀಟ್ ಕಥೆ ಇಲ್ಲಿದೆ.
- ರವಿಚಂದ್ರನ್ ವಿರುದ್ಧ ಅತ್ಯಾಚಾರ ಆರೋಪ.. ನಟಿ ಕಣ್ಣೀರು
- ಮಾನನಷ್ಟ ಮೊಕದ್ದಮೆ.. ಕೋರ್ಟ್ ಮೆಟ್ಟಿಲೇರಿದ್ದ ಹಳ್ಳಿಮೇಷ್ಟ್ರು
- 34 ವರ್ಷ ಬಳಿಕ ಮುಂಬೈ ನಟಿ ಬಿಂದಿಯಾ ಬಹಿರಂಗ ಕ್ಷಮೆ
- ಅಂದು ತಪ್ಪು ಮಾಡಿ.. ಇಂದು ಗೋಗರೆಯುತ್ತಿರೋ ನಾಯಕಿ
ಬಣ್ಣದ ಲೋಕ ಅಂದ್ಮೇಲೆ ಅಲ್ಲಿ ಅವಮಾನ, ಅಪಮಾನಗಳು ಸರ್ವೇ ಸಾಮಾನ್ಯ. ವಿವಾದಗಳು ಕೂಡ ಬೋನಸ್ ಆಗಿ ಇದ್ದೇ ಇರುತ್ತವೆ. ನಿಂದನೆಗಳು, ಮಾನ ಹಾನಿ ಆಗುವ ವಿಚಾರಗಳಿಗಂತೂ ಕೊರತೆಯೇ ಇರಲ್ಲ. ಬಹುತೇಕ ಸಿನಿಮಾಗಳು ಇವುಗಳ ಹೊರತಾಗಿ ರೂಪುಗೊಳ್ಳೋದು ವಿರಳ. ಆದ್ರೆ ಕನ್ನಡ ಚಿತ್ರರಂಗಕ್ಕೆ 80, 90ರ ದಶಕದಲ್ಲಿ ಹೊಸ ಆಯಾಮ ಕೊಟ್ಟು, ಅದು ಸಾಗುತ್ತಿದ್ದ ದಿಕ್ಕನ್ನೇ ಬದಲಿಸಿದ ಗರಿಮೆ, ಹಿರಿಮೆ ಕ್ರೇಜಿಸ್ಟಾರ್ ರವಿಚಂದ್ರನ್ಗಿದೆ.
70ರ ದಶಕದಲ್ಲೇ ಕನ್ನಡ ಫಿಲ್ಮ್ ಚೇಂಬರ್ನ ಅಧ್ಯಕ್ಷರಾಗಿದ್ದ ಖ್ಯಾತ ನಿರ್ಮಾಪಕ ಎನ್ ವೀರಸ್ವಾಮಿ, ತಮ್ಮ ಶ್ರೀ ಈಶ್ವರಿ ಪ್ರೊಡಕ್ಷನ್ಸ್ ಬ್ಯಾನರ್ನಡಿ ಸಾಕಷ್ಟು ಸಿನಿಮಾಗಳನ್ನ ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿದ್ರು. ಆ ಲೆಗಸಿಯನ್ನ ಮುಂದುವರೆಸಿದ್ದೇ ಅವ್ರ ಮಗ ರವಿಚಂದ್ರನ್. ನಟ, ನಿರ್ದೇಶಕ, ನಿರ್ಮಾಪಕ, ಬರಹಗಾರ, ಸಂಗೀತ ಸಂಯೋಜಕ.. ಹೀಗೆ ಚಿತ್ರರಂಗದ ಎಲ್ಲಾ ಆಯಾಮಗಳಲ್ಲಿ ಗುರ್ತಿಸಿಕೊಂಡವರು ಕ್ರೇಜಿಸ್ಟಾರ್.
ಪ್ರೇಮಲೋಕ, ರಣಧೀರ, ಅಂಜದ ಗಂಡು, ಯುದ್ಧಕಾಂಡ, ಯುಗ ಪುರುಷ, ಕಿಂದರಿ ಜೋಗಿ, ರಾಮಾಚಾರಿ ಅಂತಹ ಸಾಲು ಸಾಲು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳನ್ನ ನೀಡಿದ ರವಿಚಂದ್ರನ್, ಶಾಂತಿ ಕ್ರಾಂತಿ ಅನ್ನೋ ಪ್ಯಾನ್ ಇಂಡಿಯಾ ಸಿನಿಮಾ ಮಾಡ್ತಾರೆ. ಆ ಮಹತ್ವದ ಪ್ರಯೋಗ ಕಂಡು ಇಡೀ ಭಾರತೀಯ ಚಿತ್ರರಂಗ ನಿಬ್ಬೆರಗಾಗುತ್ತೆ. ಅದಾದ ಬಳಿಕ ಅವರು ನಟಿಸಿದ ಸಿನಿಮಾನೇ ಹಳ್ಳಿಮೇಷ್ಟ್ರು.
ಈ ಸಿನಿಮಾದ ನಾಯಕನಟಿ ಬಿಂದಿಯಾ ನಟ ರವಿಚಂದ್ರನ್ ಮೇಲೆ ಏಕ್ದಮ್ ಅತ್ಯಾಚಾರ ಆರೋಪ ಮಾಡಿ ಬಿಡ್ತಾರೆ. ಅದು ಬಹುದೊಡ್ಡ ವಿವಾದಕ್ಕೆ ನಾಂದಿ ಹಾಡಿದ್ದಲ್ಲದೆ, ಪ್ರಕರಣ ಕೋರ್ಟ್ ಮೆಟ್ಟಿಲು ಕೂಡ ಏರುತ್ತೆ. ಆರೋಪ ಮಾಡಿದ ನಟಿಯ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವ ಮೂಲಕ ಕಾನೂನು ಹೋರಾಟ ನಡೆಸ್ತಾರೆ ರವಿಮಾಮ. ಆದ್ರೀಗ ಅದೇ ನಟಿಮಣಿ ಬಿಂದಿಯಾ ಬರೋಬ್ಬರಿ 34 ವರ್ಷಗಳ ನಂತ್ರ ಹಿರಿಯ ಪತ್ರಕರ್ತ ಕಮ್ ನಿರ್ದೇಶಕ ರಘುರಾಮ್ ತಮ್ಮ ಕನಸುಗಳ ಕಾರ್ಖಾನೆ ಯೂಟ್ಯೂಬ್ ವಾಹಿನಿಗೆ ನಡೆಸಿರೋ ಸಂದರ್ಶನದಲ್ಲಿ ಕಣ್ಣೀರು ಹಾಕಿಕೊಂಡು ಕ್ಷಮೆ ಯಾಚಿಸಿದ್ದಾರೆ. ನಟ ರವಿಚಂದ್ರನ್ ಹಾಗೂ ಅವ್ರ ಅಸಂಖ್ಯಾತ ಅಭಿಮಾನಿಗಳಿಗೆ ಬೇಷರತ್ ಕ್ಷಮೆ ಕೋರಿದ್ದಾರೆ.
ನಾನು ಸೌತ್ ಸಿನಿಮಾಗಳಿಗೆ ಹೊಸಬಳಾಗಿ ಬಂದೆ. ನನ್ನನ್ನ ಹಾಗೆಯೇ ಟ್ರೀಟ್ ಮಾಡಿದ್ರು. ಆದ್ರೆ ರವಿ ಸರ್ ನನ್ನ ಬೆಂಬಲಕ್ಕೆ ನಿಂತರು. ಹೇಗೆ ನಟಿಸಬೇಕು, ಡೈಲಾಗ್ ಹೇಳಬೇಕು ಅಂತ ಹೇಳಿಕೊಟ್ರು. ನನ್ನ ನಟನೆ ಅವರಿಗೆ ಇಷ್ಟವಾಯಿತು. ಆದ್ರೆ ಕೊನೆ ಕೊನೆಗೆ ಎಲ್ಲವೂ ಸರಿ ಹೋಗಲಿಲ್ಲ. ಮ್ಯಾಗಜಿನ್ವೊಂದರಲ್ಲಿ ನಾನೇನೋ ಹೇಳಿದ್ದೆ.. ಆದ್ರೆ ಆಕೆ ಬರೆದದ್ದು ಮತ್ತೇನನ್ನೋ. ಫೈನಲಿ ದೂರು ದಾಖಲಾಯ್ತು. ತುಂಬಾ ಬೇಸರ ಆಯ್ತು ಎಂದಿದ್ದಾರೆ.
ಆ ಮ್ಯಾಗಜಿನ್ ಪತ್ರಕರ್ತೆ ಮಾಡಿದ ತಪ್ಪಿಗೆ ಅಷ್ಟು ದೊಡ್ಡ ವಿವಾದ ಆಯ್ತು. ರವಿಚಂದ್ರನ್ ಅವರಿಗೆ ಹೃದಯಪೂರ್ವಕವಾಗಿ ಕ್ಷಮೆ ಕೇಳುತ್ತೇನೆ. ಅವರು ನನಗೆ ಅಷ್ಟು ದೊಡ್ಡ ಬ್ರೇಕ್ ಕೊಟ್ಟರು. ಅಂದು ಕೇಸ್ ಆಗಿ ದೊಡ್ಡ ವಿವಾದ ಆಯ್ತು. ಆ ರೀತಿ ಆಗಬಾರದಿತ್ತು. ಇಂದಿಗೂ ರವಿ ಸರ್ ಚಿತ್ರದಲ್ಲಿ ತಾಯಿಯೋ, ಅಜ್ಜಿಯ ಪಾತ್ರವೋ ಕೊಟ್ರೆ ನಟಿಸೋಕೆ ಸಿದ್ಧ. ಸಂಭಾವನೆ ಕೂಡ ಬೇಡ. ಪ್ಲೀಸ್ ಒಂದು ಅವಕಾಶ ಕೊಡಿ ರವಿ ಸರ್ ಅಂತ ಗೋಗರೆದಿದ್ದಾರೆ.
ಆಂದಹಾಗೆ ಆ ಘಟನೆ ಬಳಿಕ ರವಿಚಂದ್ರನ್ ಬಳಿ ಮಾತನಾಡೋಕೆ ಅವಕಾಶ ಸಿಗಲೇ ಇಲ್ಲ. ಕೋರ್ಟ್ನಲ್ಲೇ ಭೇಟಿ ಆಗಿದ್ವಿ. ಆಗ ನಾನು ಬಹಳ ಚಿಕ್ಕವಳು. ಬುದ್ಧಿ ಇಲ್ಲದೆ ನಡೆದುಕೊಂಡುಬಿಟ್ಟೆ. ಪ್ರಬುದ್ಧತೆಯೇ ಇರಲಿಲ್ಲ ಎಂದಿದ್ದಾರೆ ಹಳ್ಳಿಮೇಷ್ಟ್ರು ನಾಯಕನಟಿ ಬಿಂದಿಯಾ.
ಅಂದಹಾಗೆ ನಟಿ ಬಿಂದಿಯಾ ಮಾಡಿದ್ದ ಅತ್ಯಾಚಾರ ಆರೋಪ ಕೇಸ್ನಲ್ಲಿ ರವಿಚಂದ್ರನ್ ಅವರೇ ಗೆಲ್ತಾರೆ. ಯಾಕಂದ್ರೆ ಬಿಂದಿಯಾ ಆರೋಪಕ್ಕೆ ಯಾವುದೇ ಆಧಾರ ಇರಲಿಲ್ಲ. ಕೋರ್ಟ್ನಲ್ಲಿ ಅವರನ್ನ ನೋಡಿ ಸಂಕಟವಾಯ್ತು. ಅಷ್ಟು ದೊಡ್ಡ ನಟ ಅಲ್ಲಿಗೆ ಬರುವಂತಾಯಿತು. ರವಿ ಸರ್ ನಿಜಕ್ಕೂ ಯಾವುದೇ ತಪ್ಪು ಮಾಡಿಲ್ಲ. ಅವರ ಮೇಲೆ ತಪ್ಪು ಅಭಿಪ್ರಾಯ ವ್ಯಕ್ತವಾಗುವಂತಾಯ್ತು ಅಂತ ಕಣ್ಣೀರು ಹಾಕಿದ್ದಾರೆ ಬಿಂದಿಯಾ.
- 1 ರೂಪಾಯಿ ಮಾನನಷ್ಟ.. ನಟಿಗೆ ಬುದ್ಧಿ ಕಲಿಸಿದ ಮೇಷ್ಟ್ರು..!!
- ಕೋರ್ಟ್ನಲ್ಲೇ ಕ್ಷಮೆ ಕೇಳಿದ್ದ ನಟಿ.. ಖುಲಾಸೆ ಆಗಿತ್ತು ಕೇಸ್
ತಪ್ಪೇ ಮಾಡದ ರವಿಚಂದ್ರನ್ ಮೇಲೆ ಈ ರೀತಿಯ ಮಹತ್ವದ ಆರೋಪ ಕೇಳಿಬಂದ್ರೆ ಸುಮ್ಮನಿರೋಕೆ ಸಾಧ್ಯವೇ..? ಮುಂಬೈ ಮೂಲದ ಆ ನಟಿಗೆ ಬುದ್ಧಿ ಕಲಿಸಲೇಬೇಕು ಅಂತ ಕೋರ್ಟ್ ಮೆಟ್ಟಿಲೇರಿದ್ರು ರವಿಮಾಮ. ಒಂದೇ ಒಂದು ರೂಪಾಯಿ ಮಾನನಷ್ಟ ಮೊಕದ್ದಮೆಯನ್ನ ದಾಖಲಿಸಿದ್ರು. ಅದರಂತೆ ಕೋರ್ಟ್ನಲ್ಲಿ ಬಂದು ರವಿಚಂದ್ರನ್ ತಪ್ಪು ಮಾಡಿಲ್ಲ. ನಾನೇ ಸುಳ್ಳು ಹೇಳಿದ್ದೇನೆ ಅಂತ ತಪ್ಪೊಪ್ಪಿಕೊಂಡು, ಕ್ಷಮೆ ಕೂಡ ಕೇಳಿದ್ರು ಬಿಂದಿಯಾ. ಆಗ ಆ ಮಾನನಷ್ಟ ಮೊಕದ್ದಮೆ ಕೇಸ್ ಅಂದೇ ಖುಲಾಸೆ ಕೂಡ ಆಗಿತ್ತು.
ಕಾನೂನಿನಡಿ ಕಳಂಕ ಮುಕ್ತರಾಗಿದ್ರು ಕ್ರೇಜಿಸ್ಟಾರ್. ಆದ್ರೆ ಅಂದಿನಿಂದ ಇಂದಿನ ತನಕ ಸಾಕಷ್ಟು ಮಂದಿಗೆ ರವಿಚಂದ್ರನ್ ಹಳ್ಳಿಮೇಷ್ಟ್ರು ಸಿನಿಮಾದ ಆ ವಿವಾದದ ಬಗ್ಗೆ ಸಾಕಷ್ಟು ಗೊಂದಲಗಳಿತ್ತು. ಅದಕ್ಕೀಗ ಅಧಿಕೃತವಾಗಿ ಬ್ರೇಕ್ ಬಿದ್ದಿದೆ. ಸ್ವತಃ ಬಿಂದಿಯಾನೇ ಬಹಿರಂಗವಾಗಿ ತಮ್ಮ ತಪ್ಪನ ಒಪ್ಪಿಕೊಂಡಿದ್ದಾರೆ. ಕ್ಷಮೆ ಕೇಳಿದ್ದಾರೆ. ಟ್ರೆಂಡ್ ಸೆಟ್ಟರ್ ರವಿಮಾಮ ಲೆಜೆಂಡ್ ಹಾಗೂ ಜೆಮ್ ಆಫ್ ಎ ಪರ್ಸನ್ ಅನ್ನೋದು ಪ್ರೂವ್ ಆಗಿದೆ. ಇದು ಕನ್ನಡಿಗರಾದ ನಾವು ನಿಜಕ್ಕೂ ಹೆಮ್ಮೆ ಪಡುವ ವಿಷಯ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್




