ಹುಬ್ಬಳ್ಳಿ: ವಿವಾಹ ವಾರ್ಷಿಕೋತ್ಸವವೆಂದರೆ ಕುಟುಂಬದವರೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸುವುದು ಸಾಮಾನ್ಯ. ಆದರೆ ಅದನ್ನು ಸಮಾಜಮುಖಿ ಕಾರ್ಯದ ಮೂಲಕ ಅರ್ಥಪೂರ್ಣವಾಗಿಸಿ, ನಿರಾಶ್ರಿತರ ಮುಖದಲ್ಲಿ ನಗು ಮೂಡಿಸಿ ಆಚರಿಸಿದಾಗ ಅದು ಮಾದರಿಯ ಸಂಭ್ರಮವಾಗುತ್ತದೆ. ಇಂತಹ ವಿಶಿಷ್ಟ ಕಾರ್ಯದ ಮೂಲಕ ಸ್ವರ್ಣ ಗ್ರೂಪ್ ಆಫ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ, ಖ್ಯಾತ ಉದ್ಯಮಿ ಹಾಗೂ ಸಮಾಜಸೇವಕ ಡಾ. ವಿ.ಎಸ್.ವಿ ಪ್ರಸಾದ್ ಮತ್ತು ಅವರ ಧರ್ಮಪತ್ನಿ ಅನುಷಾ ಚಿಗುರುಪಾಟಿ ತಮ್ಮ 36ನೇ ವಿವಾಹ ವಾರ್ಷಿಕೋತ್ಸವವನ್ನು ವಿಶೇಷವಾಗಿ ಆಚರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಸ್ವಾಮಿ ವಿವೇಕಾನಂದ ರಕ್ತದಾನ ಫೌಂಡೇಶನ್ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಾಸಕ ಮಹೇಶ್ ಟೆಂಗಿನಕಾಯಿ ಭಾಗಿಯಾಗಿ ದಂಪತಿಗೆ ಶುಭ ಹಾರೈಸಿದರು. ಕಾರ್ಯಕ್ರಮದ ಮೊದಲಿಗೆ ಹುಬ್ಬಳ್ಳಿಯ ನವನಗರದ ಕ್ಯಾನ್ಸರ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿ, ಅವರ ಆರೋಗ್ಯ ವಿಚಾರಿಸಿ ವೈದ್ಯಕೀಯ ತಪಾಸಣೆ ನಡೆಸಿಸಲಾಯಿತು. ರೋಗಿಗಳೊಂದಿಗೆ ಕೆಲ ಹೊತ್ತು ಮಾತನಾಡಿ ಧೈರ್ಯ ತುಂಬಿದ ದಂಪತಿಯ ಮಾನವೀಯತೆ ಎಲ್ಲರ ಮನಸ್ಸು ಮುಟ್ಟಿತು.
ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ವಿ.ಎಸ್.ವಿ ಪ್ರಸಾದ್ ಅವರು, ಸ್ವಾಮಿ ವಿವೇಕಾನಂದ ರಕ್ತದಾನ ಫೌಂಡೇಶನ್ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕ್ಯಾನ್ಸರ್ ರೋಗಿಗಳಿಗೆ ಹಣ್ಣು ಹಂಪಲು , ಕನ್ನಡಕ ಹಾಗೂ ನಿರಾಶ್ರಿತ ರೋಗಿಗಳ ವೈದ್ಯಕೀಯ ತಪಾಸಣೆ ಮಾಡುವ ಮೂಲಕ ನಮ್ಮ ವಿವಾಹ ವಾರ್ಷಿಕೋತ್ಸವವನ್ನು ಅರ್ಥಪೂರ್ಣವಾಗಿ ದೇವರ ಮಕ್ಕಳೊಂದಿಗೆ ಆಚರಿಸುವ ಮೂಲಕ ನಮ್ಮ ಮನಸ್ಸಿಗೆ ಅಪಾರ ಸಂತೋಷ ತಂದಿದೆ. ಈ ಕಾರ್ಯಕ್ರಮ ಆಯೋಜನೆ ಮಾಡಿದ ವಿವೇಕಾನಂದ ಫೌಂಡೇಶನ್ನ ಎಲ್ಲರಿಗ ಅಭಿನಂದನೆ ತಿಳಿಸಿದರು. ಮುಂದಿನ ದಿನಗಳಲ್ಲಿ ಸಮಾಜಕ್ಕೆ ನೆರವಾಗುವ ಕ್ಷಣಗಳೇ ಬದುಕಿನ ನಿಜವಾದ ಸಂಭ್ರಮ. ಬರುವ ದಿನಗಳಲ್ಲೂ ಇದೇ ರೀತಿಯ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತೇವೆ ಎಂದು ಹೇಳಿದರು.
ನಂತರ ರಾಯಾಪುರದ ನಿರಾಶ್ರಿತರ ಕೇಂದ್ರದಲ್ಲಿ ದೇವರ ಮಕ್ಕಳೊಂದಿಗೆ ಸರಳವಾಗಿ ಕೇಕ್ ಕತ್ತರಿಸಿ ವಾರ್ಷಿಕೋತ್ಸವ ಆಚರಿಸಲಾಯಿತು. ಸಂಭ್ರಮದ ನಡುವೆ ಮಕ್ಕಳಿಗೆ ಆರೋಗ್ಯ ತಪಾಸಣೆ ನಡೆಸಿ, ದೃಷ್ಟಿದೋಷ ಹೊಂದಿದ್ದವರಿಗೆ ಉಚಿತ ಕನ್ನಡಕ ವಿತರಿಸಲಾಯಿತು. ಅಲ್ಲದೆ, ಸಮಾಜಮುಖಿ ಕಾರ್ಯಗಳಿಗೆ ಉತ್ತೇಜನವಾಗಿ ಸ್ವಾಮಿ ವಿವೇಕಾನಂದ ರಕ್ತದಾನ ಫೌಂಡೇಶನ್ಗೆ 2 ಲಕ್ಷ ರೂಪಾಯಿಯ ಚೆಕ್ನ್ನು ದಂಪತಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಮಹೇಶ್ ಟೆಂಗಿನಕಾಯಿ, ಡಾ. ವಿಎಸ್ವಿ ಪ್ರಸಾದ್ ಅವರು ಕೇವಲ ಯಶಸ್ವಿ ಉದ್ಯಮಿಯಲ್ಲ, ಸಮಾಜದ ನೋವನ್ನು ಅರಿತು ಸ್ಪಂದಿಸುವ ಅಪರೂಪದ ಹೃದಯವಂತರು. ಉದ್ಯಮದ ಜೊತೆ ಸಮಾಜಸೇವೆಗೂ ಆದ್ಯತೆ ನೀಡುತ್ತಾ ನಿರಂತರ ಸೇವಾ ಕಾರ್ಯಗಳಲ್ಲಿ ತೊಡಗಿರುವುದು ಶ್ಲಾಘನೀಯ. ವಿವಾಹ ವಾರ್ಷಿಕೋತ್ಸವವನ್ನು ನಿರಾಶ್ರಿತರೊಂದಿಗೆ ಆಚರಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಇಂತಹ ಕಾರ್ಯಗಳು ಇತರರಿಗೂ ಪ್ರೇರಣೆಯಾಗಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಿರಾಶ್ರಿತರ ಮುಖದಲ್ಲಿ ಕಂಡ ಸಂತಸವೇ ಈ ಸಂಭ್ರಮದ ಯಶಸ್ಸಿಗೆ ಸಾಕ್ಷಿಯಾಯಿತು. ಸಹಾಯದ ಸ್ಪರ್ಶವೇ ಜೀವನದಲ್ಲಿ ದೊಡ್ಡ ಉಡುಗೊರೆ ಎಂಬುದನ್ನು ಈ ದಂಪತಿ ಮತ್ತೊಮ್ಮೆ ಸಾಬೀತುಪಡಿಸಿದರು.





